Homeಅಂಕಣಗಳುಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ನೀಲಿಗಿರಿ ಬೆಟ್ಟಗಳಿಗೆ ಹೆಸರು ತಂದಿದ್ದು ಅಲ್ಲಿನ ನೀಲಗಿರಿ ಮರಗಳಲ್ಲ, ಬದಲಾಗಿ ತಮಿಳು ಮತ್ತು ಮಲಯಾಳಂನಲ್ಲಿ ’ನೀಲ ಕುರಿಂಜಿ’ ಎಂದೇ ಪ್ರಸಿದ್ಧವಾಗಿರುವ ಈ ಹೂಗಳು! ಹಿಂದೊಮ್ಮೆ ನೀಲಗಿರಿ ಶ್ರೇಣಿಯನ್ನೇ ಈ ಹೂಗಳು ನೀಲಿಮಯವಾಗಿಸುತ್ತಿದ್ದರಿಂದ ಅವುಗಳಿಗೆ ’ನೀಲಿ’ ಪದ ಅಂಟಿಕೊಂಡಿದ್ದು!

- Advertisement -
- Advertisement -

ಒಂದು ನಿಮಿಷ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನಾನು ವಿವರಿಸಲಿರುವ ದೃಶ್ಯವನ್ನು ಕಲ್ಪಿಸಿಕೊಳ್ಳಿ….

ನೀವು ಒಂದು ಬೆಟ್ಟದ ಮೇಲಿದ್ದೀರಿ. ಅಲ್ಲಿನ ತಂಪು ವಾತಾವರಣ, ಕೈಗಳಿಗೆ ಎಟುಕದೆ ತೇಲಿಹೋಗುತ್ತಿರುವ ಮೋಡಗಳು, ನಿಮ್ಮ ಸುತ್ತ ಕಂಗೊಳಿಸುತ್ತಿರುವ ನೀಲಿ ಹೂಗಳು… ಹೌದು, ನೀವು ಕಣ್ಣು ಹಾಯಿಸಿದಷ್ಟೂ ದೂರ ಹರಡಿರುವ ಲಕ್ಷಾಂತರ ನೀಲಿ ಹೂಗಳು! ಎಲ್ಲಿ ನೋಡಿದರಲ್ಲಿ ಕಂಗೊಳಿಸುತ್ತಿರುವ ನೀಲಿ ಹೂಗಳು! ಹನ್ನೆರಡು ವರ್ಷಕ್ಕೊಮ್ಮೆ ಅರಳಿ ಕಂಗಳಿಗೆ ಆನಂದ ನೀಡುವ ನೀಲಿ ಹೂಗಳು!

ನಾನು ಈ ದೃಶ್ಯವನ್ನು ಕಲ್ಪಿಸಿಕೊಂಡು ಹೇಳುತ್ತಿಲ್ಲ; ಯಾವುದೋ ಪೇಂಟಿಂಗ್ ಅಥವಾ ಯೂರೋಪಿನಲ್ಲಿ ಕಂಡದ್ದನ್ನು ವಿವರಿಸುತ್ತಿಲ್ಲ. ಬದಲಾಗಿ ನಮ್ಮ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ನೋಡಿದ್ದನ್ನು ನಿಮಗೆ ಹೇಳುತ್ತಿದ್ದೇನೆ….

ಪ್ರತಿ ವರ್ಷ ಚಿಕ್ಕಮಗಳೂರಿನಲ್ಲಿ ಸಂಘ ಪರಿವಾರದವರು ಸೃಷ್ಟಿಸುವ ರಾದ್ಧಾಂತದ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ತಂಡದ ಸದಸ್ಯೆಯಾಗಿ ಹೋಗಿದ್ದಾಗ ಅಲ್ಲಿನ ಬಾಬಾಬುಡನ್ ಗಿರಿಯಲ್ಲಿ ಕಂಡ ಅದ್ಭುತ ದೃಶ್ಯದ ಬಗ್ಗೆ ಹೇಳಬೇಕೆನಿಸುತ್ತಿದೆ.

ಸುಮಾರು 1800 ಮೀಟರ್ ಎತ್ತರದಲ್ಲಿರುವ ಬಾಬಾಬುಡನ್ ದರ್ಗಾಗೆ ಹೋಗುತ್ತಿದ್ದಾಗ ನಮ್ಮೊಂದಿಗಿದ್ದ ಕಲ್ಕುಳಿ ವಿಠ್ಠಲ ಹೆಗ್ಡೆಯವರು ದೂರದ ಬೆಟ್ಟವೊಂದರಲ್ಲಿ ಅರಳಿದ್ದ ಈ ನೀಲಿ ಹೂಗಳ ಬಗ್ಗೆ ನಮ್ಮ ಗಮನ ಸೆಳೆದರು.

ಹನ್ನೆರಡು ವರ್ಷಕ್ಕೊಮ್ಮೆ ಅರಳುವ ಈ ನೀಲಿಗಳನ್ನು (ಅವುಗಳನ್ನು ’ಕುರಿಂಜಿ’ ಎಂದು ಕರೆಯುತ್ತಾರೆಂದು ಹೆಗ್ಡೆಯವರು ವಿವರಿಸಿದರು) ಮಾನವನೊಬ್ಬ ತನ್ನ ಜೀವಿತಾವಧಿಯಲ್ಲಿ ಮೂರು ಬಾರಿ ನೋಡಿ ಆನಂದಿಸಬಹುದಷ್ಟೇ. ಈ ’ನೀಲಿ ಕುರಿಂಜಿ’ ಬಗ್ಗೆ ಇಂಟರ್‌ನೆಟ್‌ನಲ್ಲಿ ಪಡೆದ ಮಾಹಿತಿಯನ್ನೂ ನೀಡುತ್ತಿದ್ದೇನೆ. ನಮ್ಮ ನಾಡಿನ ನಿಸರ್ಗದ ಈ ಅದ್ಭುತದ ಬಗ್ಗೆ ಪತ್ರಿಕೆಗಳು ಬರೆಯದೇ ಇರುವುದು (ಪ್ರಜಾವಾಣಿ ಹೊರತಾಗಿ) ಒಂದು ಅಚ್ಚರಿಯೇ ಸರಿ!

ಒಂದು ಅಂದಾಜಿನ ಪ್ರಕಾರ ಹಿಂದೊಮ್ಮೆ ಈ ಕುರಿಂಜಿ ಹೂಗಳು ಇಡೀ ಬಾಬಾಬುಡನ್‌ಗಿರಿಯನ್ನೇ ಹನ್ನೆರಡು ವರ್ಷಕ್ಕೊಮ್ಮೆ ಆವರಿಸುತ್ತಿದ್ದವಂತೆ. ಆದರೆ ಇವತ್ತು ಗಿರಿಯಲ್ಲಿ ಕಾಫಿ ಎಸ್ಟೇಟ್‌ಗಳು ತಲೆ ಎತ್ತಿರುವುದರಿಂದ, ಅಳಿದುಳಿದ ಜಾಗಗಳಲ್ಲಿ ಮಾತ್ರ ಇವತ್ತು ’ಕುರಿಂಜಿ’ ಕಾಣಿಸಿಕೊಂಡಿದೆ.

ಅಂದಹಾಗೆ, ಈ ಕುರಿಂಜಿ ಹೂಗಳು ಪಶ್ಚಿಮಘಟ್ಟದ ಶೋಲಾ ಕಾಡುಗಳಿಗೆ ವಿಶೇಷವಾಗಿರುವುದರಿಂದ ಅವು ಕೇರಳದಿಂದ ಕರ್ನಾಟಕದವರೆಗೂ ಹಬ್ಬಿವೆ. ಆದರೆ ವ್ಯತ್ಯಾಸ ಯಾವುದೆಂದರೆ ಇವುಗಳ ಬಗ್ಗೆ ನಮ್ಮ ಜನರಲ್ಲಿ ಅಜ್ಞಾನ, ಸರ್ಕಾರದ ನಿರ್ಲಕ್ಷ್ಯ ಹೆಚ್ಚಾಗಿದ್ದರೂ, ನೆರೆಯ ಕೇರಳದಲ್ಲಿ ಈ ಕುರಿಂಜಿಗಳು ಅರಳುವ ಪ್ರದೇಶಗಳನ್ನು ಕಾಪಾಡಬೇಕೆಂದು ಕೆಲವು ದಶಕಗಳಿಂದ ಪರಿಸರವಾದಿಗಳು ಹೋರಾಡುತ್ತಿದ್ದಾರೆ.

ಕರ್ನಾಟಕಕ್ಕಿಂತಲೂ ತಮಿಳುನಾಡು ಮತ್ತು ಕೇರಳದಲ್ಲಿ ಟೀ ಮತ್ತು ಏಲಕ್ಕಿ ಎಸ್ಟೇಟ್‌ಗಳು ಹಾಗೂ ವಿದ್ಯುತ್ ಯೋಜನೆಗಳು ಈ ಕುರಿಂಜಿ ಬೆಳೆಯುವ ಪ್ರದೇಶಗಳನ್ನು ನಾಶ ಮಾಡಿವೆ. ಆದರೆ ಜಗತ್ತಿನ ಯಾವುದೇ ಭಾಗದಲ್ಲಿ ಅರಳದ ಈ ಹೂಗಳು ಭಾರತದ ಈ ಪ್ರದೇಶಗಳಲ್ಲಿ ಮಾತ್ರ, ಹೀಗೆ ಒಮ್ಮೆಲೆ ಅರಳುವುದರಿಂದ, ಅದನ್ನು ನೋಡಲೆಂದು ಪ್ರವಾಸಿಗರು ಬರುವುದರಿಂದ ಈಗ ಈ ಎರಡೂ ರಾಜ್ಯಗಳು ಎಚ್ಚೆತ್ತುಕೊಂಡು, ಕುರಿಂಜಿ ಹೂಗಳು ಅರಳುವ ಪ್ರದೇಶಗಳನ್ನು ಸುರಕ್ಷಿತ ತಾಣಗಳೆಂದು ಘೋಷಿಸಲು ಮುಂದಾಗಿವೆ.

ಇಲ್ಲೊಂದು ವಿಸ್ಮಯಕಾರಿ ವಿಷಯವನ್ನು ಹೇಳಲೇಬೇಕು. ನೀಲಿಗಿರಿ ಬೆಟ್ಟಗಳಿಗೆ ಹೆಸರು ತಂದಿದ್ದು ಅಲ್ಲಿನ ನೀಲಗಿರಿ ಮರಗಳಲ್ಲ, ಬದಲಾಗಿ ತಮಿಳು ಮತ್ತು ಮಲಯಾಳಂನಲ್ಲಿ ’ನೀಲ ಕುರಿಂಜಿ’ ಎಂದೇ ಪ್ರಸಿದ್ಧವಾಗಿರುವ ಈ ಹೂಗಳು! ಹಿಂದೊಮ್ಮೆ ನೀಲಗಿರಿ ಶ್ರೇಣಿಯನ್ನೇ ಈ ಹೂಗಳು ನೀಲಿಮಯವಾಗಿಸುತ್ತಿದ್ದರಿಂದ ಅವುಗಳಿಗೆ ’ನೀಲಿ’ ಪದ ಅಂಟಿಕೊಂಡಿದ್ದು! ಇವತ್ತು ಬಾಬಾಬುಡನ್‌ಗಿರಿಯಲ್ಲಿ ಹೇಗೆ ಈ ಕುರಿಂಜಿಗಳು ಅರಳಿದ್ದಾವೋ, ಹಾಗೆಯೇ ತಮಿಳುನಾಡಿನ ಕೊಡೈಕೆನಾಲ್ ಮತ್ತು ಕೇರಳದ ಮುನ್ನಾರ್‌ನಲ್ಲೂ ಕುರಿಂಜಿಗಳು ಅರಳಿ ಅವುಗಳನ್ನು ನೋಡಿ ಆನಂದಿಸಲು ಲಕ್ಷಾಂತರ ಪ್ರವಾಸಿಗಳು ಸೇರುತ್ತಿದ್ದಾರೆ. 1994ರಿಂದ ಈ ಹೂಗಳನ್ನು ನೋಡಲು ಕಾಯುತ್ತಿದ್ದ ಲಕ್ಷಾಂತರ ಜನ ಈಗ ಇವುಗಳನ್ನು ಕಂಡು ಆನಂದಿಸಲು ಬರುತ್ತಿರುವುದರಿಂದ ಅಲ್ಲಿನ ಹೋಟೆಲ್‌ಗಳು ಕಿಕ್ಕಿರಿದಿವೆ. ಅಷ್ಟೇ ಅಲ್ಲ, ಇದೇ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ’ಕುರಿಂಜಿ ಹಬ್ಬ’ವನ್ನು ಕೇರಳ ಸರ್ಕಾರ ಆಚರಿಸುತ್ತಿದೆ. ಆ ಎರಡೂ ರಾಜ್ಯಗಳ ಪರಿಸರವಾದಿಗಳ ಹೋರಾಟ ಮತ್ತು ಅಲ್ಲಿನ ಸರ್ಕಾರಗಳ ಒತ್ತಡದಿಂದಾಗಿಯೇ ಇದೇ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಕುರಿಂಜಿ ಹೂಗಳ ಒಂದು ಅಂಚೆ ಸ್ಟಾಂಪ್‌ಅನ್ನೂ ಬಿಡುಗಡೆಗೊಳಿಸಿತ್ತು.

ತಮಿಳುನಾಡಿನ ಜನರಿಗೂ, ಈ ನೀಲ ಕುರಿಂಜಿ ಹೂಗಳಿಗೂ ಭಾವನಾತ್ಮಕವಾದ ಸಂಬಂಧವಿರುವುದಕ್ಕೆ ಕಾರಣವೂ ಇದೆ. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಮುರುಗನ್ ದೇವನು ವಾಲಿ ಎಂಬ ದೇವತೆಯನ್ನು ಮದುವೆ ಆದಾಗ ಅವಳಿಗೆ ಈ ಕುರಿಂಜಿಗಳಿಂದ ಮಾಡಿದ್ದ ಹಾರವನ್ನು ಹಾಕಿದ್ದನಂತೆ. ಈ ಪುರಾಣ ಅಲ್ಲಿನ ಜನರ ಮೇಲೆ ಎಂಥ ಪ್ರಭಾವ ಬೀರಿದೆ ಎಂದರೆ, ಕುರಿಂಜಿ ಹೂಗಳು ಬಾಡಿ, ಅವುಗಳ ಬೀಜ ಎಲ್ಲೆಡೆ ಹರಡುವವರೆಗೂ ಜನ ಅವುಗಳನ್ನು ಮುಟ್ಟುವುದಿಲ್ಲ! ಅಷ್ಟೇ ಅಲ್ಲ, ಆ ಎರಡು ರಾಜ್ಯಗಳ ಹಲವು ಬುಡಕಟ್ಟು ಜನಾಂಗಗಳು ತಮ್ಮ ಜೀವಿತಾವಧಿಯನ್ನು ಲೆಕ್ಕ ಹಾಕುವುದೇ ಈ ಕುರಿಂಜಿಗಳು ಅರಳುವ ವರ್ಷದ ಆಧಾರದ ಮೇಲೆ!

ನಮ್ಮ ಪಶ್ಚಿಮಘಟ್ಟದ ಜೀವ ವೈವಿಧ್ಯತೆಯನ್ನು ಕಾಪಾಡಬೇಕಿದ್ದರೆ, ಆ ವೈವಿಧ್ಯತೆಯ ಅಂಗವಾಗಿರುವ ಕುರಿಂಜಿ ಹೂಗಳು ಹನ್ನೆರಡು ವರ್ಷಗಳ ನಂತರವೂ ಮತ್ತೆ ಕಾಣಿಸಿಕೊಳ್ಳಬೇಕೆಂದಿದ್ದರೆ, ನಮ್ಮ ರಾಜ್ಯದಲ್ಲೂ ಕುರಿಂಜಿ ಅರಳುವ ಪ್ರದೇಶಗಳನ್ನು ರಕ್ಷಿಸಬೇಕಿದೆ.

ಕೊನೆಯದಾಗಿ, ಈ ಹೂಗಳ ಅಂದವನ್ನು ಆನಂದಿಸಲು ಕೊಡೈಕೆನಾಲ್ ಮತ್ತು ಮುನ್ನಾರ್ ಸೂಕ್ತ ಪ್ರದೇಶಗಳು ಎಂಬ ಮಾತಿದೆಯಾದರೂ, ನಮ್ಮದೇ ಬಾಬಾಬುಡನ್ ಗಿರಿಯಲ್ಲಿ ಆನಂದಿಸುವುದು ಒಂದು ವಿಶೇಷ. ಅಂದಹಾಗೆ, ಈ ಹೂಗಳು ಇನ್ನು ಎರಡು ತಿಂಗಳು ಮಾತ್ರ ಇರುತ್ತವೆ. ಹಾಗಾಗಿ, ಗಿರಿಗಳನ್ನೇ ’ನೀಲಿ’ಯಾಗಿಸಿರುವ ಈ ಕುರಿಂಜಿಯ ಅದ್ಭುತ ನೋಡಬೇಕೆಂದಿದ್ದರೆ, ಈಗಲೇ ನೀವೂ ಹೋಗಿ ಬರುತ್ತೀರಾ…

(ಸೆಪ್ಟೆಂಬರ್ 27, 2006ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಆಯ್ದ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಓರ್ವ ಜನಪರ ನ್ಯಾಯಮೂರ್ತಿಯವರನ್ನು ಕುರಿತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಮತ ಚಲಾಯಿಸಬಹುದೇ?

0
'ಚಾಲೆಂಜ್ ವೋಟ್‌ ಮತ್ತು ಟೆಂಡರ್ಡ್‌ ವೋಟ್‌' (Challenge vote and Tender vote) ಕುರಿತು ವಿವರಿಸಿದ ಚುನಾವಣಾ ಜಾಗೃತಿಯದ್ದು ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಸಂದೇಶದಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ.. "ನೀವು ಮತಗಟ್ಟೆಗೆ...