Homeಮುಖಪುಟಮಹಿಳೆ ಮತ್ತು ಬಿಕ್ಕಟ್ಟಿನ ಕಾಲದ ಸಂದಿಗ್ಧಗಳು! - ಮಲ್ಲಿಗೆ ಸಿರಿಮನೆ

ಮಹಿಳೆ ಮತ್ತು ಬಿಕ್ಕಟ್ಟಿನ ಕಾಲದ ಸಂದಿಗ್ಧಗಳು! – ಮಲ್ಲಿಗೆ ಸಿರಿಮನೆ

ತಾಯ್ತನದ ಸಾಕಾರ ಮೂರ್ತಿಗಳೆಂದು ವೈಭವೀಕರಿಸಲಾಗಿರುವ ಮಹಿಳೆಯರೂ ಕೂಡಾ, ‘ಅನ್ಯ’ ಸಮುದಾಯದವರೆಂದ ತಕ್ಷಣ ಎಷ್ಟು ಬೇಕಾದರೂ ಕ್ರೂರವಾಗಿ ವರ್ತಿಸುವ ಮನೋಭಾವವನ್ನೂ ಸಮರ್ಥಿಸುವ ಮಟ್ಟಕ್ಕೆ ಬಂದಿದ್ದಾರೆ?

- Advertisement -
- Advertisement -

ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಆಘಾತಕರವಾದ ಸರಣಿ ವಿದ್ಯಮಾನಗಳು ಸಂಭವಿಸಿದ್ದನ್ನು ಗಮನಿಸಿದ್ದೇವೆ. 2 ವರ್ಷಗಳ ಹಿಂದೆ ಉತ್ತರ ಪ್ರದೇಶದ ಉನ್ನಾವೋನಲ್ಲಿ, ಬಿಜೆಪಿಯ ಪ್ರಭಾವಿ ರಾಜಕಾರಣಿ ಮತ್ತು ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್, 18 ವರ್ಷದ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿದ. ಒಮ್ಮೆಯಲ್ಲ, ಹಲವು ಬಾರಿ ಆಕೆಯನ್ನು ತನ್ನ ಅಧಿಕಾರದ ಬಲದಿಂದ ಬಳಸಿಕೊಂಡ. ಈ ವಿಚಾರ ತಿಳಿದಾಗ ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದರು. ಆದರೆ, ರಾಜಕಾರಣಿಯ ಹಣ ಮತ್ತು ಅಧಿಕಾರದ ದರ್ಪದ ಮುಂದೆ ಬಡವರ ಗೋಳು ಪೊಲೀಸರ ಕಿವಿಗೆ ಹೇಗಾದರೂ ಬೀಳಲು ಸಾಧ್ಯ?

ಕೆಲವು ತಿಂಗಳುಗಳ ಕಾಲ ಪ್ರಕರಣ ಕತ್ತಲಲ್ಲೇ ಇತ್ತು. ಸಂತ್ರಸ್ತೆ, ಆಕೆಯ ತಂದೆ ಮತ್ತು ಕುಟುಂಬದ ಹೋರಾಟದ ಫಲವಾಗಿ ಹೀಗೊಂದು ಪ್ರಕರಣ ನಡೆದಿದೆಯೆಂಬುದು ಜಗಜ್ಜಾಹೀರಾದಾಗ, ದೇಶಾದ್ಯಂತ ಆರೋಪಿಯ ಮೇಲೆ ಕ್ರಮ ನಡೆದಿಲ್ಲದ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಆಗ, ಪೊಲೀಸರು ಪ್ರಕರಣ ದಾಖಲಿಸಿಕೊಂಡರು, ಆದರೆ ಬಂಧಿಸಲಿಲ್ಲ. ಇದನ್ನೂ ಯುವತಿ ಪ್ರಶ್ನಿಸಿ ಕೋರ್ಟಿನ ಮೊರೆಹೋದಾಗ ನ್ಯಾಯಾಲಯದ ಆದೇಶದಂತೆ ಆತನನ್ನು ಕೊನೆಗೂ ಬಂಧಿಸಲಾಯಿತು. ಇಷ್ಟಕ್ಕೆ, ಆಕೆಯ ಹೋರಾಟ ಯಶಸ್ವಿಯಾಯಿತೆಂದು ಭಾವಿಸಲಾಗದು. ನಿಜವಾದ ಸಂಘರ್ಷಮಯ ದಿನಗಳು ಇದರ ನಂತರ ಆರಂಭವಾದವು. ಸೆಂಗರ್‌ನ ಬಂಧನದ ಕೆಲವು ವಾರಗಳಲ್ಲಿ ಅತ್ಯಾಚಾರಕ್ಕೆ ಗುರಿಯಾಗಿದ್ದ ಯುವತಿಯ ತಂದೆ ಅನುಮಾನಾಸ್ಪದವಾಗಿ ಸಾವಿಗೀಡಾದರು. ಆಕೆಗೆ ನಿರಂತರ ಜೀವಬೆದರಿಕೆಗಳು ಬರಲಾರಂಭಿಸಿದವು. ಉತ್ತರ ಪ್ರದೇಶದ ಬಿಜೆಪಿಯ ಬೇರೆ ಬೇರೆ ಸ್ತರಗಳ ನಾಯಕರು ಆಕೆಯನ್ನು ಬೆದರಿಸುವಂತಹ ಬಹಿರಂಗ ಹೇಳಿಕೆಗಳನ್ನು ನೀಡಲಾರಂಭಿಸಿದರು.

ಇದೆಲ್ಲದರಾಚೆಗೂ, ಉನ್ನವೋ ಯುವತಿಯ ಹೋರಾಟ ಗಟ್ಟಿಯಾಗಿಯೇ ಮುಂದುವರೆದಾಗ, ಈಚೆಗೆ ಮೂರು ತಿಂಗಳುಗಳ ಹಿಂದೆ, ಕೋರ್ಟಿಗೆ ಹೋಗಿ ವಿಚಾರಣೆ ಮುಗಿಸಿ ಹಿಂತಿರುಗುತ್ತಿದ್ದ ಆಕೆಯ ಕಾರು ಭೀಕರ ಅಪಘಾತಕ್ಕೆ ಗುರಿಯಾಯಿತು. ಅದಕ್ಕೆ ಕೆಲವು ದಿನಗಳ ಹಿಂದಷ್ಟೇ ಆರೋಪಿ ಶಾಸಕ ಸೆಂಗರ್ ಈ ಪ್ರಕರಣದ ಕುರಿತು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆಕೆಗೆ ಸರಿಯಾದ ಶಾಸ್ತಿಯಾಗಲಿದೆ ಎಂಬರ್ಥ ಬರುವಂತೆ ಮಾತನಾಡಿದ್ದ. ಕಾರಿನಲ್ಲಿ ಸಂತ್ರಸ್ತೆ, ಆಕೆಯ ವಕೀಲರು ಮತ್ತು ಬಂಧುಗಳಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವೋ ಸಂತ್ರಸ್ತೆ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ, ಈ ನಡುವೆ ಆಕೆಯ ಕಾರಿಗೆ ಆದ ಅಪಘಾತ ಆಕಸ್ಮಿಕವಲ್ಲ ಎಂಬ ಖಚಿತ ಅಭಿಪ್ರಾಯ ದೇಶಾದ್ಯಂತ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯದಿಂದ ಹೊರಗಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಇದರ ಬೆನ್ನಲ್ಲೇ, ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿದ ವಿದ್ಯಮಾನ ಮತ್ತು ಅದರಿಂದಾಗಿ ಅಲ್ಲಿ ಉಂಟಾಗಿರುವ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವೂ ದೇಶದ ಸಂವೇದನಾಶೀಲರನ್ನು ಕಾಡುತ್ತಿದೆ. ಮಹಿಳೆ ಮತ್ತು ಮಕ್ಕಳ ಸ್ಥಿತಿ ಗಂಭೀರವಾಗಿರುವ ಬಗ್ಗೆ ವರದಿಗಳು ಸ್ವತಂತ್ರ ಸತ್ಯಶೋಧನಾ ತಂಡಗಳ ವರದಿಗಳಲ್ಲಿ ಕಂಡುಬರುತ್ತಿವೆ.

ಮತ್ತೊಂದೆಡೆ, ದೇಶದ ಆರ್ಥಿಕ ವ್ಯವಸ್ಥೆ ಹದಗೆಡುತ್ತಾ ಹೋಗುತ್ತಿದೆ. ಈ ವಾರದ ಅಂಕಿಅಂಶಗಳು ತೋರುತ್ತಿರುವಂತೆ ದೇಶದ ನಿರುದ್ಯೋಗದ ಪ್ರಮಾಣ ಶೇ.8.5ಕ್ಕಿಂತ ಹೆಚ್ಚಾಗಿದೆ. ಹರ್ಯಾಣದಂತಹ ರಾಜ್ಯಗಳಲ್ಲಿ ಇದು ಶೇ.25ನ್ನೂ ದಾಟಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇದು ಬೇರೆ ಬೇರೆ ರೀತಿ ಇದ್ದರೂ, ಇಡೀ ದೇಶದಲ್ಲಿ ನಿರುದ್ಯೋಗ ಅತಿ ಹೆಚ್ಚು ಕಂಡುಬರುತ್ತಿರುವ ಸಮುದಾಯವೆಂದರೆ ಅದು ಮಹಿಳಾ ಸಮುದಾಯ.

ಇದಕ್ಕೆ ಕಾರಣಗಳೂ ಸ್ಪಷ್ಟವಾಗಿವೆ. ಕಳೆದ ಎರಡು ದಶಕಗಳಲ್ಲಿ ಮಹಿಳೆಯರು ಶಿಕ್ಷಣ ಪಡೆಯುತ್ತಿರುವ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಕೆಲವು ಅತಿ ಹಿಂದುಳಿದ ಪ್ರದೇಶಗಳನ್ನು ಬಿಟ್ಟರೆ, ಉನ್ನತ ಶಿಕ್ಷಣ ಪಡೆಯುತ್ತಿರುವ ಹೆಣ್ಣುಮಕ್ಕಳ ಸಂಖ್ಯೆಯೂ ಸಾಕಷ್ಟಿದೆ. ಆದರೆ, ಮಹಿಳೆಯರಿಗೆಂದು ದೊರೆಯುತ್ತಿರುವ ಉದ್ಯೋಗಗಳ ಗುಣಮಟ್ಟ ಬಹಳ ಕಡಿಮೆ ದರ್ಜೆಯದಾಗಿದೆ. ಬಹುಪಾಲು ಅಸಂಘಟಿತ ವಲಯದ ಅಸುರಕ್ಷಿತ ಉದ್ಯೋಗಗಳೆ ಮಹಿಳೆಯರಿಗೆ ಹೆಚ್ಚಾಗಿ ದೊರಕುವಂತಹವಾಗಿವೆ. ಇನ್ನಿತರ ಉದ್ಯೋಗಗಳ ಸಂಖ್ಯೆಯೇ ಬಹಳ ಕಡಿಮೆಯಾಗಿರುವುದು ಒಂದಾದರೆ, ಅವುಗಳನ್ನು ದೊರಕಿಸಿಕೊಳ್ಳಲಾರದ ರೀತಿಯಲ್ಲಿ ಅವುಗಳ ವ್ಯೂಹರಚನೆಯಿರುತ್ತದೆಂಬುದು ಮತ್ತೊಂದು ಕಾರಣ. ಉದಾಹರಣೆಗೆ, ಸಾಮಾನ್ಯ ಕುಟುಂಬಗಳ ಅನೇಕ ಹೆಣ್ಣುಮಕ್ಕಳು ಮದುವೆಯ ನಂತರ ಸಾಫ್ಟ್ವೇರ್ ಉದ್ಯೋಗಗಳನ್ನು ತ್ಯಜಿಸುತ್ತಾರೆ; ಏಕೆಂದರೆ, ಅವುಗಳ ಕೆಲಸದ ಸಮಯ ಸಾಮಾನ್ಯ ಕುಟುಂಬಗಳ ಹೆಣ್ಣುಮಕ್ಕಳ ಬದುಕಿಗೆ ಹೊಂದುವ ಹಾಗಿರುವುದಿಲ್ಲ; ಈತನಕ ಅದರಲ್ಲಿ ಮಹಿಳಾಪರವಾದ ದೃಷ್ಟಿಯಿಂದ ಬದಲಾವಣೆ ತರುವುದು ಸಾಧ್ಯವಾಗಿಲ್ಲ.

ಇದರಾಚೆಗೂ, ಲಭ್ಯವಿರುವ ಬಹುಪಾಲು ಉದ್ಯೋಗಗಳೇ ಅಸಂಘಟಿತ ವಲಯಕ್ಕೆ ಸೇರಿದವಾಗಿದ್ದು, ಉದ್ಯೋಗಸ್ಥ ಮಹಿಳೆಯರಲ್ಲಿ ಶೇ.93ರಷ್ಟು ಇಂತಹ ಉದ್ಯೋಗಗಳಲ್ಲಿದ್ದಾರೆಂದು ಅಧ್ಯಯನಗಳು ಹೇಳುತ್ತಿವೆ. ಮನೆಕೆಲಸದ ಕಾರ್ಮಿಕರು, ಲೈಂಗಿಕ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು- ಇವೇ ಮೊದಲಾದ ಅಸಂಖ್ಯಾತ ಉದ್ಯೋಗಗಳಲ್ಲಿರುವ ಹೆಣ್ಣುಮಕ್ಕಳಿಗೆ ಉದ್ಯೋಗದ ಸ್ಥಿತಿಗತಿ ದಿನೇ ದಿನೇ ಗಂಭೀರವಾಗುತ್ತಿದೆ. ಜೊತೆಗೆ, ವಲಸೆ, ಕೌಟುಂಬಿಕ ಛಿದ್ರೀಕರಣದಂತಹ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಮಹಿಳೆಯರು ಅನೇಕ ಬಗೆಯ ಲೈಂಗಿಕ-ಕೌಟುಂಬಿಕ ಹಿಂಸಾಚಾರಗಳಗೆ ತುತ್ತಾಗುತ್ತಿರುವುದು ಹೆಚ್ಚುತ್ತಿದೆ.

ದಮನಿತ ಸಮುದಾಯಗಳ ಮಹಿಳೇಯರ ಸಮಸ್ಯೆಗಳ ಭಾರ ಇನ್ನೂ ಹೆಚ್ಚು. ಒಂದೆಡೆ ಹೆಚ್ಚುತ್ತಿರುವ ಸಾಮಾಜಿಕ ಸಂಕ್ಷೋಭೆಯಿಂದ ದಲಿತ, ಆದಿವಾಸಿ, ಮುಸ್ಲಿಂ, ದಲಿತ ಕ್ರಿಶ್ಚಿಯನ್ ಸಮುದಾಯಗಳ ಹೆಣ್ಣುಮಕ್ಕಳು ಹೆಚ್ಚೆಚ್ಚು ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ. ಮಾತ್ರವಲ್ಲ; ಆ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಆ ಸಮುದಾಯಗಳಿಗೆ ‘ಪಾಠ’ ಕಲಿಸಿ, ‘ದೇಶಭಕ್ತಿ’ ಕಲಿಸಿ, ಹದ್ದುಬಸ್ತಿನಲ್ಲಿಡಲು ಸರಿಯಾದ ಮಾರ್ಗ ಎಂಬಂತಹ ಅಮಾಣವೀಯವಾದ ಸಮರ್ಥನೆಗಳು ಜನಸಾಮಾನ್ಯರ ಮನಸ್ಸುಗಳನ್ನೂ ತಲುಪಿರುವುದನ್ನು ಕಾಣುತ್ತೇವೆ. ಕಾಶ್ಮೀರದ 8ರ ಹರೆಯದ ಅಲೆಮಾರಿ ಸಮುದಾಯದ ಮುದ್ದುಮಗುವನ್ನು ದೇವಸ್ಥಾನದಲ್ಲಿ ಕೂಡಿಹಾಕಿ ದಿನಗಟ್ಟಲೆ ಕ್ರೂರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲು ಬಿಡದೆ, ಹಿಂದೂ ಧರ್ಮದ ರಕ್ಷಕರೆಂದು ಕರೆದುಕೊಳ್ಳುವ ಸಂಘಟನೆಗಳು ಗಲಾಟೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಕಿವಿಗಪ್ಪಳಿಸಿದ್ದು ಇದೇ ವಾದ!

ಇದೇಕೆ ಸಾಮಾನ್ಯ ಜನರೂ ಕೂಡಾ ಹೀಗೆ ಜಾತಿ-ಧರ್ಮದ ಹೆಸರಿನಲ್ಲಿ ಕ್ರೂರಿಗಳಾಗುತ್ತಿದ್ದಾರೆ? ಅದರಲ್ಲೂ ತಾಯ್ತನದ ಸಾಕಾರ ಮೂರ್ತಿಗಳೆಂದು ವೈಭವೀಕರಿಸಲಾಗಿರುವ ಮಹಿಳೆಯರೂ ಕೂಡಾ, ‘ಅನ್ಯ’ ಸಮುದಾಯದವರೆಂದ ತಕ್ಷಣ ಎಷ್ಟು ಬೇಕಾದರೂ ಕ್ರೂರವಾಗಿ ವರ್ತಿಸುವ ಮನೋಭಾವವನ್ನೂ ಸಮರ್ಥಿಸುವ ಮಟ್ಟಕ್ಕೆ ಬಂದಿದ್ದಾರೆ? ಇವು ಕೆಲವು ಮೂಲಭೂತ ಪ್ರಶ್ನೆಗಳಾಗಿವೆ.

ಮುಖ್ಯವಾಗಿ, ಮಹಿಳೆಯರೂ ಕೂಡಾ ಸಮಾಜದ ಘಟಕಗಳೇ ಆಗಿದ್ದಾರೆ ಮತ್ತು ‘ಮಹಿಳೆ’ ಎಂದಾಕ್ಷಣ ಅದು ಇನ್ನಿತರ ಎಲ್ಲ ಬೆಳವಣಿಗೆಗಳಿಂದ ಬೇರ್ಪಟ್ಟ ಒಂದು ಅಸ್ಮಿತೆಯಲ್ಲ ಎಂಬುದನ್ನು ಅರಿತುಕೊಳ್ಲಬೇಕಿದೆ. ಒಬ್ಬ ಮಹಿಳೆ, ಏಕಕಾಲದಲ್ಲಿ ಮಹಿಳೆಯೆಂಬ ಗುರುತಿನ ಜೊತೆಗೆ, ತನ್ನ ಜಾತಿ, ಧರ್ಮ, ಭಾಷೆ, ಪ್ರದೇಶ, ರಾಜಕೀಯ ನಿಲುವು-ಹೀಗೆ ಅನೇಕ ಇತರ ಬಗೆಯ ಗುರುತುಗಳನ್ನೂ ಹೊಂದಿರುತ್ತಾಳೆ. ಆಯಾ ಗುರುತುಗಳ ಕಾರಣಕ್ಕೆ ನಿರ್ದಿಷ್ಟ ಅಭಿಪ್ರಾಯಗಳು ಮತ್ತು ವರ್ತನೆಗಳನ್ನು ಹೊಂದಿರುತ್ತಾರೆ. ಹಾಗೆಯೇ, ಅವರವರ ಸಾಮಾಜಿಕ ಗುರುತಿಗೆ ಅನುಗುಣವಾಗಿ ಸಮಸ್ಯೆಗಳನ್ನು ಪರಿಭಾವಿಸುವ ರೀತಿಯೂ ಬೇರೆಬೇರೆಯಾಗಿರುತ್ತದೆ. ಅದನ್ನು ಮೀರಿ, ಮಹಿಳೆಯರನ್ನು ಇಡೀ ಮಹಿಳಾ ಸಮುದಾಯದ ಎಲ್ಲ ಥರದ ಸಮಸ್ಯೆಗಳಿಗೂ ಸ್ಪಂದಿಸುವಂತಹ ರೀತಿಯಲ್ಲಿ ಮುನ್ನಡೆಸಬೇಕಾದರೆ, ಅದಕ್ಕೆ ತಕ್ಕ ವೈಚಾರಿಕ ಕ್ರಾಂತಿಯೇ ಇಂದು ಬೇಕಾಗಿದೆ.

ಇಂದಿನವರೆಗೆ ಮಹಿಳೆಯ ರಾಜಕೀಯ ಪ್ರಾತಿನಿಧ್ಯ ಮತ್ತು ಸ್ಥಾನಮಾನ, ಹೆಚ್ಚೂ ಕಡಿಮೆ ನಗಣ್ಯವೆನಿಸುವಂತಿದೆ. ಮಹಿಳೆಯರು ಬೆರಳೆಣಿಕೆಯ ಸಂಖ್ಯೆಯಲ್ಲಿ ರಾಜಕಾರಣದ ಮುಖ್ಯಧಾರೆಯಲ್ಲಿ ಕಾಣುವುದು ಮಾತ್ರವಷ್ಟೇ ಅಲ್ಲ, ಅವರ ಸಮಸ್ಯೆಗಳನ್ನು ಈ ರಾಜಕೀಯ ವ್ಯವಸ್ಥೆ ಕೈಗೆತ್ತಿಕೊಳ್ಳುವ ರೀತಿಯಲ್ಕೂ ಇದು ಕಾಣುತ್ತದೆ. ಈ ಎಲ್ಲ ಬೃಹತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇರುವುದು, ಎಲ್ಲ ಭಿನ್ನತೆಗಳ ನಡುವೆ ಸೇರುವ ಬಿಂದುಗಳನ್ನು ಮಹಿಳಾ ಸಮುದಾಯ ಗುರುತಿಸಿಕೊಳ್ಳುತ್ತಾ, ಒಗ್ಗೂಡುತ್ತಾ ಹೋಗುವುದರಲ್ಲಿ ಮಾತ್ರ. ಬೇರೆ ಬೇರೆ ಗುರುತುಗಳಿಂದ ಈ ಸಮಾಜದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಮಹಿಳೆಯರು, ತಮ್ಮ ನೆಲೆಯಿಂದ ಮಾತ್ರವಲ್ಲದೆ, ಎದುರಿರುವ ಮತ್ತೊಬ್ಬ ಮಹಿಳೆಯ ನೆಲೆಯಿಂದ ಸಮಾಜವನ್ನು ಕಾಣಲು ಸಾಧ್ಯವಾಗಬೇಕು. ಇದಕ್ಕೆ ಬೇಕಾದ ವೈಚಾರಿಕ ಎಚ್ಚರಕ್ಕೆ ಅಡಿಪಾಯ ಹಾಕುವ ಕೆಲಸ ಅತ್ಯಗತ್ಯವಾಗಿ ಈಗ ಆಗಬೇಕಾಗಿದೆ.

ಇಂತಹ ಬೃಹತ್ ಸಾಮುದಾಯಿಕ ಜಾಗೃತಿ ಅಷ್ಟು ವೇಗವಾಗಿ ಮತ್ತು ಸುಲಭವಾಗಿ ಆಗುವಂತಹ ಕೆಲಸ ಖಂಡಿತ ಅಲ್ಲ. ಆದರೆ, ಅದಕ್ಕೆ ಬೇಕಾದ ಪೂರ್ವತಯಾರಿ ಮತ್ತು ಅಡಿಪಾಯ ಹಾಕುವ ಕೆಲಸವಾಗಿ ಈಗಿನಿಂದ ನಡೆಯಬೇಕಾಗುತ್ತದೆ. ಆದ್ದರಿಂದಲೇ, ಬೇರೆ ಬೇರೆ ದಿಕ್ಕಿನಿಂದ ಮಹಿಳೆಯರ ಅನೇಕ ರೀತಿಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುವ ಎಲ್ಲ ಸಾಮಾಜಿಕ ಸಂಘಟನೆಗಳ ನಡುವಿನ ಸಮನ್ವಯ ಇಂದು ನಡೆಯಬೇಕಾದ ಬಹುಮುಖ್ಯವಾದ ಪ್ರಕ್ರಿಯೆ. ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂದಂತಹ ರೀತಿಗಳಲ್ಲಿ, ಆ ದಿಕ್ಕಿನಲ್ಲಿ ಇಡಲಾಗುತ್ತಿರುವ ಪ್ರತಿ ಹೆಜ್ಜೆಯೂ ಬಹಳ ಮಹತ್ವದ್ದು. ಈ ಬಗೆಯ ಪ್ರಯತ್ನಗಳು ಇನ್ನೂ ಹೆಚ್ಚಬೇಕು ಮತ್ತು ಗುಣಾತ್ಮಕವಾಗಿ ವಿಸ್ತರಿಸಬೇಕು. ಆ ಹೊಣೆಗಾರಿಕೆಯನ್ನು ಈ ಕಾಲಘಟ್ಟ ಸಾಮಾಜಿಕ ಅರಿವುಳ್ಳ ಪ್ರತಿಯೊಬ್ಬ ಮಹಿಳೆಯ ಹೆಗಲ ಮೇಲೂ ಹೊರೆಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...