ಒಬ್ಬ ಬಾಲಕಿಗೆ ಅನೇಕ ಬಾರಿ ಇರಿದು, ಕಲ್ಲಿನ ಚಪ್ಪಡಿಯಿಂದ ಹೊಡೆದು ಕೊಲ್ಲುತ್ತಿದ್ದರೂ ಸುತ್ತಲಿದ್ದ ಜನರು ಏನನ್ನೂ ಮಾಡದೆ ನೋಡುತ್ತಾ ನಿಂತಿದ್ದ ಘಟನೆ ಕ್ಯಾಮೆರಾದಲ್ಲಿ ವರದಿಯಾಗಿದೆ.
ಉತ್ತರ ದೆಹಲಿಯ ರೋಹಿಣಿಯಲ್ಲಿ ಇದು ವರದಿಯಾಗಿದೆ. “ಜನರು ಅಲ್ಲಿಯೇ ಹಾದು ಹೋಗುತ್ತಾರೆ, ಅದನ್ನು ನೋಡುತ್ತಿದ್ದರೂ ಘಟನೆಯನ್ನು ನಿಲ್ಲಿಸಲು ಯಾವುದೇ ಕ್ರಮ ಜರುಗಿಸಲಿಲ್ಲ” ಎಂದು ಎನ್ಡಿಟಿವಿ ವರದಿ ಮಾಡಿದೆ.
16 ವರ್ಷದ ಬಾಲಕಿ ನಡೆದು ಹೋಗುತ್ತಿದ್ದಾಗ ದಾಳಿಯಾಯಿತು. ಇದು ಉತ್ತರ ದೆಹಲಿಯ ರೋಹಿಣಿಯಲ್ಲಿ ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯಗಳು ಅಸ್ಪಷ್ಟವಾಗಿಯೂ, ಗೊಂದಲಕಾರಿಯಾಗಿಯೂ ಗೋಚರಿಸಿವೆ.
ಜನನಿಬಿಡ ಪ್ರದೇಶದಲ್ಲಿಯೇ ಆಕೆಯ ಗೆಳೆಯ ಸಾಹಿಲ್ ಕೊಂದಿದ್ದಾನೆ. ಆದರೆ ಯಾರೂ ಆಕೆಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಇಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದಿನ ದಿನ ಸಂಜೆ ಇಬ್ಬರೂ ಜಗಳವಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ ಸಾಹಿಲ್, ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪದೇ ಪದೇ ಇರಿದಿದ್ದಾನೆ. ಒಂದು ಹಂತದಲ್ಲಿ, ಚಾಕು ಸಿಕ್ಕಿಹಾಕಿಕೊಂಡಾಗ ಕೊಲೆಗಾರ ಅದನ್ನು ಮತ್ತೆ ತೆಗೆದು ಚುಚ್ಚಿದ್ದಾನೆ. ನಂತರ ಆತ ಕಲ್ಲಿನ ಚಪ್ಪಡಿ ಎತ್ತಿಕೊಂಡು ಹೋಗಿ ಆಕೆಗೆ ಪದೇ ಪದೇ ಹೊಡೆದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಸಂತ್ರಸ್ತ ಬಾಲಕಿ ತನ್ನ ಸ್ನೇಹಿತನ ಮಗನ ಹುಟ್ಟುಹಬ್ಬಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ಬಂದು ಕೃತ್ಯ ಎಸಗಲಾಗಿದೆ.
“ಬಾಲಕಿ ಮತ್ತು ಆರೋಪಿ ಇಬ್ಬರೂ ರಿಲೇಷನ್ ಶಿಪ್ನಲ್ಲಿ ಇದ್ದರು. ಆದರೆ ನಿನ್ನೆ ಇಬ್ಬರೂ ಜಗಳವಾಡಿದ್ದರು. ಇಬ್ಬರೂ ತನ್ನ ಸ್ನೇಹಿತನ ಮಗನ ಹುಟ್ಟುಹಬ್ಬಕ್ಕೆ ಹಾಜರಾಗಲು ಯೋಜಿಸಿದ್ದರು. ಆ ವ್ಯಕ್ತಿ ಆಕೆಯನ್ನು ಹಿಂಬಾಲಿಸಿ ಕೃತ್ಯ ಎಸಗಿದ್ದಾನೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್ ಭೂಷಣ್ ಶರಣ್ ಸಿಂಗ್’ ಯಾರು? ಆತನ ಹಿನ್ನಲೆ, ಪ್ರಭಾವವೇನು?
ಸ್ಥಳೀಯರಿಂದ ಮಾಹಿತಿ ಪಡೆದು ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕಿಯ ಶವ ಹಾಗೂ ಸುತ್ತ ರಕ್ತ ಮಡುಗಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸ್ ತಂಡಗಳು ಇನ್ನುಳಿದ ಹಂತಕರಿಗಾಗಿ ಶೋಧ ನಡೆಸುತ್ತಿವೆ.
ಘಟನೆಯ ಕುರಿತು ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ದೆಹಲಿ ಮಹಿಳಾ ಸಮಿತಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.
“ಅಪರಾಧವನ್ನು ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ. ಹಲವಾರು ಜನರು ಇದನ್ನು ನೋಡಿದ್ದಾರೆ, ಆದರೆ ಗಮನ ಹರಿಸಲಿಲ್ಲ. ಮಹಿಳೆಯರು ಮತ್ತು ಯುವತಿಯರಿಗೆ ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.