Homeಅಂಕಣಗಳುಚುನಾವಣೆಯಲ್ಲಿ ಭಾವನಾತ್ಮಕ ವಿಷಯ - ರಹಮತ್ ತರಿಕೆರೆ

ಚುನಾವಣೆಯಲ್ಲಿ ಭಾವನಾತ್ಮಕ ವಿಷಯ – ರಹಮತ್ ತರಿಕೆರೆ

- Advertisement -
- Advertisement -

ಈ ಬಾರಿ ಮೋದಿಯವರ ಚುನಾವಣಾ ಭಾಷಣಗಳಲ್ಲಿ ಒಂದು ವಿಶೇಷತೆಯಿತ್ತು. ನಾಂದಿವಾಕ್ಯದಂತೆ, ಸ್ಥಳೀಯ ಚರಿತ್ರೆ ಪುರಾಣ ವರ್ತಮಾನದ ಸಂಗತಿಗಳನ್ನು ಅವಕ್ಕೆ ಜೋಡಿಸಲಾಗಿತ್ತು. ಅವನ್ನು ಮುರುಕು ಕನ್ನಡದಲ್ಲಿ ಹೇಳಿದ ಬಳಿಕ ಅವರು ಹಿಂದಿ ಭಾಷಣಕ್ಕೆ ಹೊರಳಿಕೊಳ್ಳುತ್ತಿದ್ದರು. ಚಿತ್ರದುರ್ಗದಲ್ಲಿ ಅವರು ‘ಆಕ್ರಮಣಕಾರರ’ ವಿರುದ್ಧ ಹೋರಾಡಿದ ವೀರಮದಕರಿ ನಾಯಕ, ಒನಕೆ ಓಬವ್ವ ಅವರಿಗೂ; ಮುರುಘಾಶರಣ ಹಾಗೂ ಮಾದಾರಚನ್ನಯ್ಯ ಸ್ವಾಮಿಗಳಿಗೂ ‘ಪ್ರಣಾಮ್ ಹೇಳಿದರು. ಉತ್ತರ ದೇಶದವರು ಕನ್ನಡದಲ್ಲಿ ಮಾತಾಡಿದ್ದಕ್ಕೊ ತಮ್ಮ ಊರಿನ/ ಸಮುದಾಯದ ದೈವ/ಸಾಂಸ್ಕೃತಿಕ ನಾಯಕರ ಹೆಸರು ಪ್ರಧಾನಿಯ ಬಾಯಿಯಿಂದ ಬಂದುದಕ್ಕೊ ಜನ ಕೇಕೆಹಾಕಿತು. ಇಲ್ಲಿ ‘ಆಕ್ರಮಣಕಾರರು’ ಎನ್ನುವುದು ಚರಿತ್ರೆಯ ಹೈದರಾಲಿಯನ್ನು ಹಾಗೂ ವರ್ತಮಾನದ ಮುಸ್ಲಿಮರನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ; ‘ಅವರ’ ಆಕ್ರಮಣಕ್ಕೆ ‘ನಾವು’ ಪ್ರತ್ಯುತ್ತರ ಕೊಟ್ಟಿದ್ದೇವೆ ಎಂಬ ದನಿಯನ್ನೂ ಹೊರಡಿಸುತ್ತದೆ. ಈ ದನಿ ಇದ್ದಕ್ಕಿದ್ದಂತೆ ಹುಟ್ಟಿದ್ದಲ್ಲ. ಇದರ ಹಿಂದೆ ‘ನಾಗರಹಾವು’ ಸಿನಿಮಾದಲ್ಲಿ ಓಬವ್ವ ಹಸಿರುಪೇಟ ಸುತ್ತಿಕೊಂಡು ದಾಟಿಬಿಟ್ಟಿದ್ದ ಮುಸ್ಲಿಂ ಸೈನಿಕರನ್ನು ಕಿಂಡಿಯೊಳಗೆ ನುಸುಳುತ್ತಿದ್ದಂತೆ ಉಗ್ರರೂಪಿಯಾಗಿ ನಿಂತು ಚಚ್ಚುತ್ತಿರುವ ದೃಶ್ಯಾವಳಿಯಿದೆ; (ಹಾಡು ‘ಕನ್ನಡನಾಡಿನ ವೀರರಮಣಿ’ಯಾದ ಅವಳನ್ನು ‘ದುರ್ಗಿ ಎಂದೂ ಕರೆಯುತ್ತದೆ.) ಸಿದ್ದರಾಮಯ್ಯ ಸರ್ಕಾರ ಟಿಪ್ಪುಜಯಂತಿಯನ್ನು ಆರಂಭಿಸಿದ ಬಳಿಕ, ಸಂಘಪರಿವಾರವು ಮಹಿಳೆಯರಿಗೆ ಓಬವ್ವನ ವೇಷತೊಡಿಸಿ ಒನಕೆ ಕೊಟ್ಟು ಮಾಡಿಸಿದ ಪ್ರತಿಭಟನಾ ಕಾರ್ಯಕ್ರಮವಿದೆ. ಚರಿತ್ರೆಯ ಘಟನೆಯನ್ನು ಭಾವನಾತ್ಮಕ ವಿಷಯವನ್ನಾಗಿ ಮಾಡಿ ವರ್ತಮಾನದ ರಾಜಕಾರಣದಲ್ಲಿ ಫಾಯದೆ ಎತ್ತುವ ಸಾಂಸ್ಕೃತಿಕ ರಾಜಕಾರಣವೆಂದರೆ ಇದುವೇ.

ಇತಿಹಾಸ ಹೊಕ್ಕರೆ ವಾಸ್ತವ ಬೇರೆಯೇ ಇದೆ. ಚಿತ್ರದುರ್ಗ ಕೆಳದಿ ಸವಣೂರು ಕರ್ನೂಲು ಮುಂತಾದ ಸ್ಥಳೀಯ ನವಾಬ-ಪಾಳೇಗಾರರನ್ನು ಕಿತ್ತುಹಾಕಿ ಹೈದರ್-ಟಿಪ್ಪು ಮೈಸೂರು ರಾಜ್ಯಕ್ಕೆ ಕೇಂದ್ರೀಕೃತ ಆಡಳಿತವನ್ನು ಒದಗಿಸಿಕೊಂಡರು. ಇವರಲ್ಲಿ ಕರ್ನೂಲು-ಸವಣೂರು ನವಾಬರು ಮುಸ್ಲಿಮರಾಗಿದ್ದರು. ಸವಣೂರಿನ ನವಾಬನಂತೂ ಟಿಪ್ಪು ತಂಗಿಯ ಗಂಡನಾಗಿದ್ದು ಅವನು ಜೀವಮಾನವಿಡೀ ಟಿಪ್ಪುವಿಗೆ ವಿರುದ್ಧವಾಗಿ ಪೇಶ್ವೆಗಳಿಗೆ ನೆರವಾದವನು. ಇದರಂತೆಯೇ ವಿಜಯನಗರದ ಅರಸರು ಇದೇ ಚಿತ್ರದುರ್ಗ ಜಿಲ್ಲೆಯ ಸಿರುಮಣನಾಯಕನನ್ನು ಹೊಸಕಿಹಾಕಿದರು. ಅವನ ದುರಂತ ಸಾವಿಗೆ ಮಿಡಿಯುತ್ತ ‘ಸಿರುಮಣನಾಯಕ ಸಾಂಗತ್ಯ ಕಾವ್ಯವೇ ಹುಟ್ಟಿತು. ಮದಕರಿಯ ಸಂಬಂಧಿಯಾದ ತರೀಕೆರೆಯ ಸರ್ಜಾ ಹನುಮಪ್ಪನಾಯಕನನ್ನು ಬ್ರಿಟಿಷರು ಹಿಡಿದು ಗಲ್ಲಿಗೇರಿಸುವಾಗ, ಮುಮ್ಮಡಿ ಕೃಷ್ಣರಾಜರ ಆಳ್ವಿಕೆಯಿತ್ತು. ಸುರಪುರದ ರಂಗಪ್ಪನಾಯಕನನ್ನು ಬ್ರಿಟಿಷರು ಮುಗಿಸುವಾಗ ನಿಜಾಂ ಆಳ್ವಿಕೆಯಿತ್ತು. ಟಿಪ್ಪು ಶಂಗೇರಿ ಮಠಕ್ಕೆ ಟಿಪ್ಪು ಅಪಾರ ಗೌರವವಿಟ್ಟುಕೊಟ್ಟಿದ್ದರೆ, ಚಿತ್ರದುರ್ಗ ಪಾಳೇಗಾರರು ಚಿತ್ರದುರ್ಗದ ಬಡೆಮಕಾನಿನ ಸೂಫಿದರ್ಗಾಕ್ಕೆ ನಡೆದುಕೊಳ್ಳುತ್ತಿದ್ದರು.
ಚರಿತ್ರೆಯಲ್ಲಿ ನಡೆದ ರಾಜ್ಯವಿಸ್ತರಣೆಯ ಎಲ್ಲ ಕಾಳಗಗಳ ಹಿಂದೆ ಪ್ರಾಂತ್ಯ ಧರ್ಮ ಜಾತಿಗಳಿಗಿಂತ ಹೆಚ್ಚಾಗಿ, ರಾಜಕೀಯ ಆರ್ಥಿಕ ಕಾರಣಗಳಿರುತ್ತವೆ. ಈಗ ಚುನಾವಣೆಯಲ್ಲಿ ಗೆದ್ದ ಶಾಸಕರು ಖರೀದಿಗೊಂಡು ಇನ್ನೊಂದು ಪಕ್ಷಕ್ಕೆ ಹೋಗುವಂತೆ ಅಥವಾ ಕಟ್ಟಾವಿರೋಧಿಗಳು ಒಗ್ಗೂಡಿ ಸರ್ಕಾರ ರಚಿಸುವಂತೆಯೇ ಅಲ್ಲೂ ಸ್ನೇಹ-ಹಗೆತನ ಸಂಭವಿಸಿವೆ. ಗಂಟುಕಟ್ಟಿದ ನೂಲುಂಡೆಯಂತೆ ಸಂಕೀರ್ಣವಾಗಿರುವ ಚರಿತ್ರೆಯಿಂದ, ತಮಗೆ ಬೇಕಾದ ಒಂದೆಳೆಯನ್ನು ಹೆಕ್ಕಿಕೊಂಡು ಮತೀಯವಾದ ಬಳಸುತ್ತದೆ. ಅದನ್ನು ಹತ್ಯಾರ ಮಾಡಿ ವರ್ತಮಾನದಲ್ಲಿರುವ ಒಂದೇ ಊರಿನ ಜನರ ಸಂಬಂಧಗಳನ್ನು ಕತ್ತರಿಸುತ್ತದೆ. ಅವರನ್ನು ಪರಸ್ಪರ ಎದುರಾಳಿಗಳಾಗಿಸುತ್ತದೆ. ಭಾವನೆಗಳನ್ನು ಮತಗಳಾಗಿಸಿ ಚುನಾವಣೆ ಗೆದ್ದು ಅಧಿಕಾರ ಹಿಡಿಯುತ್ತದೆ. ಓಟಿನ ಬೇಟೆಗಾರರಿಗೆ ಜನರ ನಿತ್ಯ ಬದುಕಿನಲ್ಲಿ ಹದಗೆಡುವ ಮನುಷ್ಯ ಸಂಬಂಧಗಳ ಪರಿವೆ ಇರುವುದಿಲ್ಲ.

ಸ್ಥಳೀಯ ದುರ್ಬಲ ದೊರೆಯನ್ನು ಸೋಲಿಸಿದ ಬಲಿಷ್ಠ ದೊರೆಗಳನ್ನೆಲ್ಲ ‘ಆಕ್ರಮಣಕಾರಿಗಳು’ ಎನ್ನುವುದಾದರೆ, ಮೋದಿ ಬಿಜಾಪುರದಲ್ಲಿ ಸಿಕಂದರ ಆದಿಲಶಾನನ್ನು ನೆನೆಯಬೇಕಿತ್ತು. ಔರಂಗಜೇಬನು ಬಿಜಾಪುರ ರಾಜ್ಯವನ್ನು ಧ್ವಂಸಗೊಳಿಸಿದಾಗ ತರುಣ ಸುಲ್ತಾನ ಸಿಕಂದರನಿಗೆ ವಿಷಪ್ರಾಶನ ಮಾಡಿಸಿದ. ಮೈಸೂರಿನ ರ್‍ಯಾಲಿಯಲ್ಲಿ ಪೇಶ್ವೆಗಳು-ಬ್ರಿಟಿಷರು- ಹೈದರಾಬಾದ್ ನವಾಬರ ಕೂಡುಯುದ್ಧದಿಂದ ಹತನಾದ ಟಿಪ್ಪುವನ್ನು ನೆನೆಯಬೇಕಿತ್ತು. ಶಿವಮೊಗ್ಗೆಯಲ್ಲಿ ಮಾತಾಡುವಾಗ ಮೈಸೂರು ಒಡೆಯರ ಆಳ್ವಿಕೆಯಲ್ಲಿ ಗಲ್ಲಿಗೇರಲ್ಪಟ್ಟ ಈಸೂರು ಹೋರಾಟಗಾರರನ್ನು ನೆನೆಯಬೇಕಿತ್ತು. ಆದರೆ ಬಲಿಷ್ಠ ಆಕ್ರಮಣಕಾರರ ಎದುರು ಸೋತು ಮಡಿದ ಇವರ ಹೆಸರು ಅವರಿಗೆ ಪ್ರಯೋಜಕವಾಗಿರಲಿಲ್ಲ.
ಮೋದಿಯವರು, ಚರಿತ್ರೆಯಿಂದ ಮಾತ್ರವಲ್ಲ, ವರ್ತಮಾನದ ಕೆಲವು ಪ್ರಕರಣಗಳನ್ನು ಪ್ರಸ್ತಾಪಿಸಿದರು. ಬೀದರಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಪ್ರಾಣಬಿಟ್ಟ ಹುಡುಗಿಗೆ ಸಂತಾಪ ಸೂಚಿಸಿದರು. ಆದರೆ ಬಿಜಾಪುರದಲ್ಲಿ ದಾನಮ್ಮನನ್ನು ಅತ್ಯಾಚಾರ ಮಾಡಿ ಕೊಂದವರನ್ನು ಖಂಡಿಸಲಿಲ್ಲ. ಯಾಕೆಂದರೆ ಬಿಜಾಪುರದಲ್ಲಿ ಆಪಾದಿತರು ಭಜರಂಗದಳದ ಹುಡುಗರಾಗಿದ್ದರು; ಬೀದರಿನಲ್ಲಿ ಹುಡುಗ ಮುಸ್ಲಿಮನಾಗಿದ್ದ. ಮೋದಿ ಚಿಕ್ಕಮಗಳೂರಿನ ರ್‍ಯಾಲಿಯಲ್ಲಿ ದತ್ತಪೀಠವನ್ನು ನೆನೆದರು. ಅದಕ್ಕೆ ಅಭೇದಗೊಂಡಿರುವ ಬಾಬಾಬುಡನಗಿರಿಯ ಸೂಫಿಸಂತನನ್ನು; ಕಲಬುರ್ಗಿಯಲ್ಲಿ ಬಂದೇನವಾಜನನ್ನು; ಕರಾವಳಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬುನಾದಿ ಹಾಕಿದ ಉಡುಪಿಯ ಹಾಜಿ ಅಬ್ದುಲ್ಲಾರನ್ನು; ಹುಬ್ಬಳ್ಳಿಯ ರ್‍ಯಾಲಿಯಲ್ಲಿ ಶಿಶುನಾಳನನ್ನು; ಬಿಜಾಪುರದಲ್ಲಿ ಗಣಪತಿ-ಸರಸ್ವತಿ ಪ್ರಾರ್ಥನೆಯಿಂದ ‘ಕಿತಾಬೆ ನವರಸ್ ಬರೆದ ಇಬ್ರಾಹಿಂ ಆದಿಲಶಾಹಿಯನ್ನು ನೆನೆಯಬಹುದಿತ್ತು. ನೆನೆಯಲಿಲ್ಲ. ಈ ಉದ್ದೇಶಪೂರ್ವಕ ಉಲ್ಲೇಖ ಮತ್ತು ಮರೆವುಗಳಲ್ಲಿ, ನಾಡಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಬದಿಗೆ ತಳ್ಳುವ; ಆದರೆ ಈ ಸಮುದಾಯದ ವ್ಯಕ್ತಿಗಳು ಚರಿತ್ರೆ ಮತ್ತು ವರ್ತಮಾನದಲ್ಲಿ ಮಾಡಿರುವ ಅಪರಾಧವನ್ನು ಮುಂಚೂಣಿಗೆ ನಿಲ್ಲಿಸುವ ಇತಿಹಾಸ ಪ್ರಜ್ಞೆ ಇಲ್ಲಿ ಕೆಲಸ ಮಾಡಿದೆ. ಈ ಸಲ ಚಿತ್ರದುರ್ಗ ಜಿಲ್ಲೆಯ ಆರು ಸ್ಥಾನಗಳಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತು. ಇಲ್ಲಿ ಅಥವಾ ಒಟ್ಟು ೧೦೪ ಸ್ಥಾನಗಳ ಗೆಲುವಿನಲ್ಲಿ ಆಡಳಿತಪಕ್ಷ ವಿರೋಧಿ ಭಾವನೆಗಳ ಸಮೇತ ಹಲವಾರು ಅಂಶಗಳು ಕೆಲಸ ಮಾಡಿವೆ. ಆದರೆ ಮತ ಹೊರಳಿಸುವಲ್ಲಿ ಭಾವನಾತ್ಮಕ ಸಂಗತಿಗಳ ಪಾಲೂ ಇದೆ. ಮತೀಯ ರಾಜಕಾರಣವು ಈ ಭಾವನಾತ್ಮಕ ಯುದ್ಧತಂತ್ರವನ್ನು ಮೊದಲಿಂದಲೂ ಸಮರ್ಥವಾಗಿ ಬಳಸುತ್ತ ಬಂದಿದೆ. ಇದನ್ನು ಎದುರಿಸುವುದಕ್ಕೆ ಬೇಕಾದ ಪ್ರತಿತಂತ್ರದ ವಿಷಯದಲ್ಲಿ ಬಿಜೆಪಿಯೇತರ ಪಕ್ಷಗಳು ಶತಮಾನದಷ್ಟು ಹಿಂದುಳಿದಿವೆ.

ಮೋದಿಯವರು ವಿಭಿನ್ನ ರ್ಯಾಲಿಗಳಲ್ಲಿ ಸ್ಮರಿಸಿದ ಹೆಸರುಗಳಿವು: ಸಂತೆಮಾರಹಳ್ಳಿಯಲ್ಲಿ ಸುತ್ತೂರು ಸ್ವಾಮಿ, ಬಿಳಿಗಿರಿರಂಗ, ಮಲೆಮಾದೇಶ್ವರ; ಉಡುಪಿಯಲ್ಲಿ ಕನಕದಾಸ, ಭಗವಾನ್ ಶ್ರೀಕೃಷ್ಣ, ಪರಶುರಾಮಸೃಷ್ಟಿಯ ಭೂಮಿ, ಮಧ್ವಾಚಾರ್ಯ ತಪೋಭೂಮಿ, ಅಷ್ಟಮಠ ಯತಿಪರಂಪರೆ; ಹುಬ್ಬಳ್ಳಿಯಲ್ಲಿ ಸಿದ್ಧಾರೂಢರು, ಮೂರುಸಾವಿರ ಮಠ, ಕವಿಬೇಂದ್ರೆ, ಗಂಗೂಬಾಯಿ ಹಾನಗಲ್, ಹುತಾತ್ಮ ಸೈನಿಕ ಹನುಮಂತಪ್ಪ ಕೊಪ್ಪದ; ಕಲಬುರ್ಗಿಯಲ್ಲಿ ರಾಷ್ಟ್ರಕೂಟರು, ಬಸವಣ್ಣ, ಮಿತಾಕ್ಷರ ಬರೆದ ವಿಜ್ಞಾನೇಶ್ವರ, ಸುರಪುರದ ವೆಂಕಟಪ್ಪ ನಾಯಕ; ಬೆಳಗಾವಿಯಲ್ಲಿ ಶಿವಾಜಿ, ಬೆಳವಡಿ ಮಲ್ಲಮ್ಮ, ಕಿತ್ತೂರ ಚನ್ನಮ್ಮ, ವೀರಸಂಗೊಳ್ಳಿ ರಾಯಣ್ಣ. ಹುಬ್ಬಳ್ಳಿಯಲ್ಲಿ ಅವರು ಜನರಿಗೆ ‘ಮಂದಿ’ ಶಬ್ದ ಬಳಸಿದರು; ಲಿಂಗಾಯತ ಪ್ರಧಾನ ಕಲಬುರ್ಗಿಯಲ್ಲಿ ‘ಪ್ರಣಾಮ’ದ ಬದಲು ‘ಶರಣಾರ್ಥಿ ಎಂದರು; ಹೈದರಾಬಾದ್ ಕರ್ನಾಟಕದ ಬದಲು ‘ಕಲ್ಯಾಣ ಕರ್ನಾಟಕ’ ಎಂದೂ ಸಂಬೋಧಿಸಿದರು.
ಇಲ್ಲಿನ ವಿಜ್ಞಾನೇಶ್ವರ, ಪರಶುರಾಮ, ಅಷ್ಟಮಠಗಳು ಬ್ರಾಹ್ಮಣವಾದಕ್ಕೆ ಪ್ರಿಯವಾದ ಹೆಸರುಗಳು. ಮೋದಿಯವರ ರ್‍ಯಾಲಿಗಳ ಸಂಖ್ಯೆ ಇಪ್ಪತ್ತೊಂದಂತೆ. ಇದು ನಿಜವಿದ್ದರೆ, ಈ ಸಂಖ್ಯೆ ಪರಶುರಾಮನು ಕ್ಷತ್ರಿಯರ ಜನಾಂಗನಾಶಕ್ಕಾಗಿ ಭೂಪ್ರದಕ್ಷಿಣೆ ಮಾಡಿದ್ದನ್ನು ಸಂಕೇತಿಸುತ್ತದೆ. ಬಿಜೆಪಿ ಉದ್ದೇಶವಾದರೂ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವುದು. ಅದರಲ್ಲೂ ದಕ್ಷಿಣದಲ್ಲಿ ಮೋದಿಗೆ ಸವಾಲಾಗಿರುವ ಸಿದ್ದರಾಮಯ್ಯನವರನ್ನು ನಿವಾರಿಸುವುದು. ಎಂತಲೇ ಸಿದ್ದರಾಮಯ್ಯ ಸೋತಾಗ ಬಿಜೆಪಿ ಬೆಂಬಲಿಗರ ಪ್ರತಿಕ್ರಿಯೆಗಳಲ್ಲಿ ಚಾಮುಂಡೇಶ್ವರಿಯಲ್ಲಿ ‘ಸಿದ್ದರಾಮ ವಧೆ’ ಎಂದಿತ್ತು. ಚಾಮುಂಡಿ ರಾಕ್ಷಸರನ್ನು ಕೊಂದು ಲೋಕದ ಕಂಟಕ ನಿವಾರಣೆ ಮಾಡಿದ ಮಿತ್ ಜತೆಗೆ ಸನಿಹವಾದ ನುಡಿಗಟ್ಟಿದು. ದೇವಿ, ಪಶುರೂಪದಲ್ಲಿದ್ದ ರಾಕ್ಷಸನನ್ನು ಕೊಂದವಳು. ಸಿದ್ಧರಾಮಯ್ಯ ಪಶುಪಾಲಕ ಸಮುದಾಯದಿಂದ ಬಂದವರು.
ಚುನಾವಣೆಯಲ್ಲಿ ಜಾತಿ, ಹಣ, ಧರ್ಮ, ಅಭ್ಯರ್ಥಿಗಳ ವ್ಯಕ್ತಿತ್ವ, ಪಕ್ಷಗಳ ಭರವಸೆ, ಯಾರೊ ಒಬ್ಬರಿಗೆ ಬುದ್ಧಿಕಲಿಸುವ ಕೆಚ್ಚು, ಅನುಕಂಪೆ-ಇತ್ಯಾದಿ ಅನೇಕ ಅಂಶಗಳು ಕೆಲಸ ಮಾಡುತ್ತವೆ. ಇವುಗಳಲ್ಲಿ ಭಾವನಾತ್ಮಕ ಸಂಗತಿಗಳ ಪಾತ್ರವೂ ಇದೆ. ಕರಾವಳಿಯಲ್ಲಿ ನಾನಾ ಕಾರಣಕ್ಕೆ ಜೀವ ಕಳೆದುಕೊಂಡ ತರುಣ ಸಾವನ್ನು ಬಿಜೆಪಿ ಬಳಸಿಕೊಂಡಿತು. ಭಾವನಾತ್ಮಕ ಸಂಗತಿಗಳು ಮತೀಯ ರಾಜಕಾರಣದಲ್ಲಿ ಜನಮನಸ್ಸನ್ನು ಪ್ರವೇಶಿಸುವ ಒಳಗಿಂಡಿಗಳು. ಈ ಸಂಗತಿಗಳಲ್ಲಿ ನಾಲ್ಕು ಆಯಾಮಗಳಿರುತ್ತವೆ: ಅಬ್ರಾಹ್ಮಣ ಸಮುದಾಯಗಳಲ್ಲಿ ಬೇರುಬಿಟ್ಟಿರುವ ದೈವ/ನಾಯಕರನ್ನು ಒಳಗುಮಾಡಿಕೊಳ್ಳುವುದು; ಅಲ್ಲಿರುವ ಹಿಂದುತ್ವ ವಿರೋಧಿಗಳನ್ನು ನಾಶಮಾಡುವುದು; ಮುಸ್ಲಿಮ್ ವಿರೋಧಿ ಆಯಾಮವುಳ್ಳ ಸಂಕೇತಗಳನ್ನು ಮುಂದೊಡ್ಡುವುದು; ಸೂಕ್ಷ್ಮವಾಗಿ ಬ್ರಾಹ್ಮಣವಾದಿ ಮೌಲ್ಯಗಳನ್ನು ನುಸುಳಿಸುವುದು. ಈ ನಾಲ್ಕೂ ಆಯಾಮಗಳು ಹಿಂದುತ್ವದ ಚೌಕಟ್ಟಿನಲ್ಲಿ ತಮ್ಮ ವೈರುಧ್ಯಗಳ ಸಮೇತ ಒಟ್ಟಿಗೆ ಸಂಗಮಿಸುತ್ತವೆ. ಮೂರು ತಿಂಗಳ ಹಿಂದೆ ಕರ್ನಾಟಕಕ್ಕೆ ಬಂದಾಗ ಅಮಿತ್‌ಶಾ ತಮ್ಮ ಪಕ್ಷದವರಿಗೆ ಸ್ಪಷ್ಟವಾಗಿ ಹೇಳಿದ್ದರು: “ಭಾವನಾತ್ಮಕ ವಿಷಯಗಳನ್ನು ಬಳಸಿರಿ”


ಭಾವನಾತ್ಮಕ ವಿಷಯ ಬಳಸುವಲ್ಲಿ ಇತರೆ ಪಕ್ಷಗಳೂ ಯತ್ನಿಸುತ್ತವೆ. ಅಯೋಧ್ಯೆಯ ಮತ್ತು ಶಬಾನು ಪ್ರಕರಣಗಳಲ್ಲಿ ಕಾಂಗ್ರೆಸ್ಸು ಈ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಅದು ಲಿಂಗಾಯತ ಧರ್ಮದ ವಿಷಯದಲ್ಲಿ ಈ ಯತ್ನ ಮಾಡಿ ಬಿಜೆಪಿಯ ಮತಬ್ಯಾಂಕನ್ನು ತುಸುಮಟ್ಟಿಗೆ ಮಾತ್ರ ಒಡೆಯಿತು. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರಾಧನಾ ಯೋಜನೆಯನ್ನು ಜಾರಿಗೆ ತಂದಿದ್ದರು. ಅದರ ಆಶಯ ಕೆಳಜಾತಿ ಸಮುದಾಯಗಳ ದೈವಗಳಿಗೆ ಗುಡಿ ಮಸೀದಿ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವುದು. ಅದು ಸಾಕಷ್ಟು ಮತಗಳಿಕೆ ಮಾಡಿಕೊಟ್ಟಿತು. ಆದರೂ ಸಾಂಸ್ಕೃತಿಕ ರಾಜಕಾರಣ ಮಾಡುವುದರಲ್ಲಿ ಬಿಜೆಪಿಯ ಮುಂದೆ ಉಳಿದ ಪಕ್ಷದವರು ಏನೂ ಅಲ್ಲ. ಅನೇಕರಿಗೆ ಸಾಂಸ್ಕೃತಿಕ ರಾಜಕಾರಣ ಎಂದರೆ ಅರ್ಥವೂ ಆಗುವುದಿಲ್ಲ.
ಭಾರತದ ಮತದಾರರು ತಮ್ಮ ಹಸಿವಿಗೆ ಆರೋಗ್ಯಕ್ಕೆ ಶಿಕ್ಷಣಕ್ಕೆ ಉದ್ಯೋಗಕ್ಕೆ ಸರ್ಕಾರಗಳು ಏನು ಮಾಡಿದವು-ಮಾಡಲಿಲ್ಲ ಎಂಬುದಕ್ಕಿಂತ, ಭಾವನಾತ್ಮಕ ಸಂಗತಿಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆಯೇ? ಹೊಸಪೇಟೆಯಲ್ಲಿ ಅನೇಕ ಮುಸ್ಲಿಮರು ಆನಂದಸಿಂಗ್ ಅವರಿಗೆ ಮತಹಾಕಲು ಹೇಳುತ್ತಿದ್ದ ಒಂದು ಕಾರಣ, ಬಿಜೆಪಿಯನ್ನು ಎದುರು ಹಾಕಿಕೊಂಡು ಆತ ಟಿಪ್ಪುಜಯಂತಿಯಲ್ಲಿ ಭಾಗವಹಿಸಿದರು ಎಂದು. ಜೀವನದ ಮೂಲಭೂತ ಅಗತ್ಯಗಳಿಗೆ ಸರ್ಕಾರದ/ಪಕ್ಷಗಳ/ರಾಜಕಾರಣಿಯ ಮೌಲ್ಯಮಾಪನ ಮಾಡುವ ಎಚ್ಚರವೊಂದು ಭಾರತದಲ್ಲಿ ಬಹಳ ಕ್ಷೀಣವಾಗಿದೆ. ಅದು ಕ್ಷೀಣವಾಗಿರುವ ತನಕ ಭಾವನಾತ್ಮಕ ಸಂಗತಿಗಳಿಂದ ಅವರನ್ನು ವಶಪಡಿಸಿಕೊಳ್ಳುವ ರಾಜಕಾರಣವೂ ಚಾಲ್ತಿಯಲ್ಲಿರುತ್ತದೆ. ಭಾವನಾತ್ಮಕ ವಿಷಯಗಳನ್ನು ಮುಟ್ಟದೆ ಜನರ ಬದುಕಿನ ಸಮಸ್ಯೆಗಳನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಳ್ಳುವ ಚಳವಳಿಗಾರ ಅಭ್ಯರ್ಥಿಗಳು ಸೋಲುತ್ತಿರುತ್ತಾರೆ. ಎಂತಲೇ ಭಾರತದ ಪ್ರಜಾಪ್ರಭುತ್ವ ತನ್ನೆಲ್ಲ ಸಾಧನೆಗಳೊಂದಿಗೆ ಇನ್ನೂ ಪ್ರಬುದ್ಧವಾಗಿಲ್ಲ ಅನಿಸುವುದು. ಇಲ್ಲದಿದ್ದರೆ ನೋಟುರದ್ದತಿಯಿಂದ ಮಗ್ಗುಲಮುರಿ ಹೊಡೆತ ತಿಂದವರೂ ಮೋದಿ ಮೋದಿ ಎಂದು ಉದ್ಘೋಷ ಮಾಡುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...