Homeಅಂಕಣಗಳುಚುನಾವಣೆಯಲ್ಲಿ ಭಾವನಾತ್ಮಕ ವಿಷಯ - ರಹಮತ್ ತರಿಕೆರೆ

ಚುನಾವಣೆಯಲ್ಲಿ ಭಾವನಾತ್ಮಕ ವಿಷಯ – ರಹಮತ್ ತರಿಕೆರೆ

- Advertisement -
- Advertisement -

ಈ ಬಾರಿ ಮೋದಿಯವರ ಚುನಾವಣಾ ಭಾಷಣಗಳಲ್ಲಿ ಒಂದು ವಿಶೇಷತೆಯಿತ್ತು. ನಾಂದಿವಾಕ್ಯದಂತೆ, ಸ್ಥಳೀಯ ಚರಿತ್ರೆ ಪುರಾಣ ವರ್ತಮಾನದ ಸಂಗತಿಗಳನ್ನು ಅವಕ್ಕೆ ಜೋಡಿಸಲಾಗಿತ್ತು. ಅವನ್ನು ಮುರುಕು ಕನ್ನಡದಲ್ಲಿ ಹೇಳಿದ ಬಳಿಕ ಅವರು ಹಿಂದಿ ಭಾಷಣಕ್ಕೆ ಹೊರಳಿಕೊಳ್ಳುತ್ತಿದ್ದರು. ಚಿತ್ರದುರ್ಗದಲ್ಲಿ ಅವರು ‘ಆಕ್ರಮಣಕಾರರ’ ವಿರುದ್ಧ ಹೋರಾಡಿದ ವೀರಮದಕರಿ ನಾಯಕ, ಒನಕೆ ಓಬವ್ವ ಅವರಿಗೂ; ಮುರುಘಾಶರಣ ಹಾಗೂ ಮಾದಾರಚನ್ನಯ್ಯ ಸ್ವಾಮಿಗಳಿಗೂ ‘ಪ್ರಣಾಮ್ ಹೇಳಿದರು. ಉತ್ತರ ದೇಶದವರು ಕನ್ನಡದಲ್ಲಿ ಮಾತಾಡಿದ್ದಕ್ಕೊ ತಮ್ಮ ಊರಿನ/ ಸಮುದಾಯದ ದೈವ/ಸಾಂಸ್ಕೃತಿಕ ನಾಯಕರ ಹೆಸರು ಪ್ರಧಾನಿಯ ಬಾಯಿಯಿಂದ ಬಂದುದಕ್ಕೊ ಜನ ಕೇಕೆಹಾಕಿತು. ಇಲ್ಲಿ ‘ಆಕ್ರಮಣಕಾರರು’ ಎನ್ನುವುದು ಚರಿತ್ರೆಯ ಹೈದರಾಲಿಯನ್ನು ಹಾಗೂ ವರ್ತಮಾನದ ಮುಸ್ಲಿಮರನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ; ‘ಅವರ’ ಆಕ್ರಮಣಕ್ಕೆ ‘ನಾವು’ ಪ್ರತ್ಯುತ್ತರ ಕೊಟ್ಟಿದ್ದೇವೆ ಎಂಬ ದನಿಯನ್ನೂ ಹೊರಡಿಸುತ್ತದೆ. ಈ ದನಿ ಇದ್ದಕ್ಕಿದ್ದಂತೆ ಹುಟ್ಟಿದ್ದಲ್ಲ. ಇದರ ಹಿಂದೆ ‘ನಾಗರಹಾವು’ ಸಿನಿಮಾದಲ್ಲಿ ಓಬವ್ವ ಹಸಿರುಪೇಟ ಸುತ್ತಿಕೊಂಡು ದಾಟಿಬಿಟ್ಟಿದ್ದ ಮುಸ್ಲಿಂ ಸೈನಿಕರನ್ನು ಕಿಂಡಿಯೊಳಗೆ ನುಸುಳುತ್ತಿದ್ದಂತೆ ಉಗ್ರರೂಪಿಯಾಗಿ ನಿಂತು ಚಚ್ಚುತ್ತಿರುವ ದೃಶ್ಯಾವಳಿಯಿದೆ; (ಹಾಡು ‘ಕನ್ನಡನಾಡಿನ ವೀರರಮಣಿ’ಯಾದ ಅವಳನ್ನು ‘ದುರ್ಗಿ ಎಂದೂ ಕರೆಯುತ್ತದೆ.) ಸಿದ್ದರಾಮಯ್ಯ ಸರ್ಕಾರ ಟಿಪ್ಪುಜಯಂತಿಯನ್ನು ಆರಂಭಿಸಿದ ಬಳಿಕ, ಸಂಘಪರಿವಾರವು ಮಹಿಳೆಯರಿಗೆ ಓಬವ್ವನ ವೇಷತೊಡಿಸಿ ಒನಕೆ ಕೊಟ್ಟು ಮಾಡಿಸಿದ ಪ್ರತಿಭಟನಾ ಕಾರ್ಯಕ್ರಮವಿದೆ. ಚರಿತ್ರೆಯ ಘಟನೆಯನ್ನು ಭಾವನಾತ್ಮಕ ವಿಷಯವನ್ನಾಗಿ ಮಾಡಿ ವರ್ತಮಾನದ ರಾಜಕಾರಣದಲ್ಲಿ ಫಾಯದೆ ಎತ್ತುವ ಸಾಂಸ್ಕೃತಿಕ ರಾಜಕಾರಣವೆಂದರೆ ಇದುವೇ.

ಇತಿಹಾಸ ಹೊಕ್ಕರೆ ವಾಸ್ತವ ಬೇರೆಯೇ ಇದೆ. ಚಿತ್ರದುರ್ಗ ಕೆಳದಿ ಸವಣೂರು ಕರ್ನೂಲು ಮುಂತಾದ ಸ್ಥಳೀಯ ನವಾಬ-ಪಾಳೇಗಾರರನ್ನು ಕಿತ್ತುಹಾಕಿ ಹೈದರ್-ಟಿಪ್ಪು ಮೈಸೂರು ರಾಜ್ಯಕ್ಕೆ ಕೇಂದ್ರೀಕೃತ ಆಡಳಿತವನ್ನು ಒದಗಿಸಿಕೊಂಡರು. ಇವರಲ್ಲಿ ಕರ್ನೂಲು-ಸವಣೂರು ನವಾಬರು ಮುಸ್ಲಿಮರಾಗಿದ್ದರು. ಸವಣೂರಿನ ನವಾಬನಂತೂ ಟಿಪ್ಪು ತಂಗಿಯ ಗಂಡನಾಗಿದ್ದು ಅವನು ಜೀವಮಾನವಿಡೀ ಟಿಪ್ಪುವಿಗೆ ವಿರುದ್ಧವಾಗಿ ಪೇಶ್ವೆಗಳಿಗೆ ನೆರವಾದವನು. ಇದರಂತೆಯೇ ವಿಜಯನಗರದ ಅರಸರು ಇದೇ ಚಿತ್ರದುರ್ಗ ಜಿಲ್ಲೆಯ ಸಿರುಮಣನಾಯಕನನ್ನು ಹೊಸಕಿಹಾಕಿದರು. ಅವನ ದುರಂತ ಸಾವಿಗೆ ಮಿಡಿಯುತ್ತ ‘ಸಿರುಮಣನಾಯಕ ಸಾಂಗತ್ಯ ಕಾವ್ಯವೇ ಹುಟ್ಟಿತು. ಮದಕರಿಯ ಸಂಬಂಧಿಯಾದ ತರೀಕೆರೆಯ ಸರ್ಜಾ ಹನುಮಪ್ಪನಾಯಕನನ್ನು ಬ್ರಿಟಿಷರು ಹಿಡಿದು ಗಲ್ಲಿಗೇರಿಸುವಾಗ, ಮುಮ್ಮಡಿ ಕೃಷ್ಣರಾಜರ ಆಳ್ವಿಕೆಯಿತ್ತು. ಸುರಪುರದ ರಂಗಪ್ಪನಾಯಕನನ್ನು ಬ್ರಿಟಿಷರು ಮುಗಿಸುವಾಗ ನಿಜಾಂ ಆಳ್ವಿಕೆಯಿತ್ತು. ಟಿಪ್ಪು ಶಂಗೇರಿ ಮಠಕ್ಕೆ ಟಿಪ್ಪು ಅಪಾರ ಗೌರವವಿಟ್ಟುಕೊಟ್ಟಿದ್ದರೆ, ಚಿತ್ರದುರ್ಗ ಪಾಳೇಗಾರರು ಚಿತ್ರದುರ್ಗದ ಬಡೆಮಕಾನಿನ ಸೂಫಿದರ್ಗಾಕ್ಕೆ ನಡೆದುಕೊಳ್ಳುತ್ತಿದ್ದರು.
ಚರಿತ್ರೆಯಲ್ಲಿ ನಡೆದ ರಾಜ್ಯವಿಸ್ತರಣೆಯ ಎಲ್ಲ ಕಾಳಗಗಳ ಹಿಂದೆ ಪ್ರಾಂತ್ಯ ಧರ್ಮ ಜಾತಿಗಳಿಗಿಂತ ಹೆಚ್ಚಾಗಿ, ರಾಜಕೀಯ ಆರ್ಥಿಕ ಕಾರಣಗಳಿರುತ್ತವೆ. ಈಗ ಚುನಾವಣೆಯಲ್ಲಿ ಗೆದ್ದ ಶಾಸಕರು ಖರೀದಿಗೊಂಡು ಇನ್ನೊಂದು ಪಕ್ಷಕ್ಕೆ ಹೋಗುವಂತೆ ಅಥವಾ ಕಟ್ಟಾವಿರೋಧಿಗಳು ಒಗ್ಗೂಡಿ ಸರ್ಕಾರ ರಚಿಸುವಂತೆಯೇ ಅಲ್ಲೂ ಸ್ನೇಹ-ಹಗೆತನ ಸಂಭವಿಸಿವೆ. ಗಂಟುಕಟ್ಟಿದ ನೂಲುಂಡೆಯಂತೆ ಸಂಕೀರ್ಣವಾಗಿರುವ ಚರಿತ್ರೆಯಿಂದ, ತಮಗೆ ಬೇಕಾದ ಒಂದೆಳೆಯನ್ನು ಹೆಕ್ಕಿಕೊಂಡು ಮತೀಯವಾದ ಬಳಸುತ್ತದೆ. ಅದನ್ನು ಹತ್ಯಾರ ಮಾಡಿ ವರ್ತಮಾನದಲ್ಲಿರುವ ಒಂದೇ ಊರಿನ ಜನರ ಸಂಬಂಧಗಳನ್ನು ಕತ್ತರಿಸುತ್ತದೆ. ಅವರನ್ನು ಪರಸ್ಪರ ಎದುರಾಳಿಗಳಾಗಿಸುತ್ತದೆ. ಭಾವನೆಗಳನ್ನು ಮತಗಳಾಗಿಸಿ ಚುನಾವಣೆ ಗೆದ್ದು ಅಧಿಕಾರ ಹಿಡಿಯುತ್ತದೆ. ಓಟಿನ ಬೇಟೆಗಾರರಿಗೆ ಜನರ ನಿತ್ಯ ಬದುಕಿನಲ್ಲಿ ಹದಗೆಡುವ ಮನುಷ್ಯ ಸಂಬಂಧಗಳ ಪರಿವೆ ಇರುವುದಿಲ್ಲ.

ಸ್ಥಳೀಯ ದುರ್ಬಲ ದೊರೆಯನ್ನು ಸೋಲಿಸಿದ ಬಲಿಷ್ಠ ದೊರೆಗಳನ್ನೆಲ್ಲ ‘ಆಕ್ರಮಣಕಾರಿಗಳು’ ಎನ್ನುವುದಾದರೆ, ಮೋದಿ ಬಿಜಾಪುರದಲ್ಲಿ ಸಿಕಂದರ ಆದಿಲಶಾನನ್ನು ನೆನೆಯಬೇಕಿತ್ತು. ಔರಂಗಜೇಬನು ಬಿಜಾಪುರ ರಾಜ್ಯವನ್ನು ಧ್ವಂಸಗೊಳಿಸಿದಾಗ ತರುಣ ಸುಲ್ತಾನ ಸಿಕಂದರನಿಗೆ ವಿಷಪ್ರಾಶನ ಮಾಡಿಸಿದ. ಮೈಸೂರಿನ ರ್‍ಯಾಲಿಯಲ್ಲಿ ಪೇಶ್ವೆಗಳು-ಬ್ರಿಟಿಷರು- ಹೈದರಾಬಾದ್ ನವಾಬರ ಕೂಡುಯುದ್ಧದಿಂದ ಹತನಾದ ಟಿಪ್ಪುವನ್ನು ನೆನೆಯಬೇಕಿತ್ತು. ಶಿವಮೊಗ್ಗೆಯಲ್ಲಿ ಮಾತಾಡುವಾಗ ಮೈಸೂರು ಒಡೆಯರ ಆಳ್ವಿಕೆಯಲ್ಲಿ ಗಲ್ಲಿಗೇರಲ್ಪಟ್ಟ ಈಸೂರು ಹೋರಾಟಗಾರರನ್ನು ನೆನೆಯಬೇಕಿತ್ತು. ಆದರೆ ಬಲಿಷ್ಠ ಆಕ್ರಮಣಕಾರರ ಎದುರು ಸೋತು ಮಡಿದ ಇವರ ಹೆಸರು ಅವರಿಗೆ ಪ್ರಯೋಜಕವಾಗಿರಲಿಲ್ಲ.
ಮೋದಿಯವರು, ಚರಿತ್ರೆಯಿಂದ ಮಾತ್ರವಲ್ಲ, ವರ್ತಮಾನದ ಕೆಲವು ಪ್ರಕರಣಗಳನ್ನು ಪ್ರಸ್ತಾಪಿಸಿದರು. ಬೀದರಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಪ್ರಾಣಬಿಟ್ಟ ಹುಡುಗಿಗೆ ಸಂತಾಪ ಸೂಚಿಸಿದರು. ಆದರೆ ಬಿಜಾಪುರದಲ್ಲಿ ದಾನಮ್ಮನನ್ನು ಅತ್ಯಾಚಾರ ಮಾಡಿ ಕೊಂದವರನ್ನು ಖಂಡಿಸಲಿಲ್ಲ. ಯಾಕೆಂದರೆ ಬಿಜಾಪುರದಲ್ಲಿ ಆಪಾದಿತರು ಭಜರಂಗದಳದ ಹುಡುಗರಾಗಿದ್ದರು; ಬೀದರಿನಲ್ಲಿ ಹುಡುಗ ಮುಸ್ಲಿಮನಾಗಿದ್ದ. ಮೋದಿ ಚಿಕ್ಕಮಗಳೂರಿನ ರ್‍ಯಾಲಿಯಲ್ಲಿ ದತ್ತಪೀಠವನ್ನು ನೆನೆದರು. ಅದಕ್ಕೆ ಅಭೇದಗೊಂಡಿರುವ ಬಾಬಾಬುಡನಗಿರಿಯ ಸೂಫಿಸಂತನನ್ನು; ಕಲಬುರ್ಗಿಯಲ್ಲಿ ಬಂದೇನವಾಜನನ್ನು; ಕರಾವಳಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬುನಾದಿ ಹಾಕಿದ ಉಡುಪಿಯ ಹಾಜಿ ಅಬ್ದುಲ್ಲಾರನ್ನು; ಹುಬ್ಬಳ್ಳಿಯ ರ್‍ಯಾಲಿಯಲ್ಲಿ ಶಿಶುನಾಳನನ್ನು; ಬಿಜಾಪುರದಲ್ಲಿ ಗಣಪತಿ-ಸರಸ್ವತಿ ಪ್ರಾರ್ಥನೆಯಿಂದ ‘ಕಿತಾಬೆ ನವರಸ್ ಬರೆದ ಇಬ್ರಾಹಿಂ ಆದಿಲಶಾಹಿಯನ್ನು ನೆನೆಯಬಹುದಿತ್ತು. ನೆನೆಯಲಿಲ್ಲ. ಈ ಉದ್ದೇಶಪೂರ್ವಕ ಉಲ್ಲೇಖ ಮತ್ತು ಮರೆವುಗಳಲ್ಲಿ, ನಾಡಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಬದಿಗೆ ತಳ್ಳುವ; ಆದರೆ ಈ ಸಮುದಾಯದ ವ್ಯಕ್ತಿಗಳು ಚರಿತ್ರೆ ಮತ್ತು ವರ್ತಮಾನದಲ್ಲಿ ಮಾಡಿರುವ ಅಪರಾಧವನ್ನು ಮುಂಚೂಣಿಗೆ ನಿಲ್ಲಿಸುವ ಇತಿಹಾಸ ಪ್ರಜ್ಞೆ ಇಲ್ಲಿ ಕೆಲಸ ಮಾಡಿದೆ. ಈ ಸಲ ಚಿತ್ರದುರ್ಗ ಜಿಲ್ಲೆಯ ಆರು ಸ್ಥಾನಗಳಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತು. ಇಲ್ಲಿ ಅಥವಾ ಒಟ್ಟು ೧೦೪ ಸ್ಥಾನಗಳ ಗೆಲುವಿನಲ್ಲಿ ಆಡಳಿತಪಕ್ಷ ವಿರೋಧಿ ಭಾವನೆಗಳ ಸಮೇತ ಹಲವಾರು ಅಂಶಗಳು ಕೆಲಸ ಮಾಡಿವೆ. ಆದರೆ ಮತ ಹೊರಳಿಸುವಲ್ಲಿ ಭಾವನಾತ್ಮಕ ಸಂಗತಿಗಳ ಪಾಲೂ ಇದೆ. ಮತೀಯ ರಾಜಕಾರಣವು ಈ ಭಾವನಾತ್ಮಕ ಯುದ್ಧತಂತ್ರವನ್ನು ಮೊದಲಿಂದಲೂ ಸಮರ್ಥವಾಗಿ ಬಳಸುತ್ತ ಬಂದಿದೆ. ಇದನ್ನು ಎದುರಿಸುವುದಕ್ಕೆ ಬೇಕಾದ ಪ್ರತಿತಂತ್ರದ ವಿಷಯದಲ್ಲಿ ಬಿಜೆಪಿಯೇತರ ಪಕ್ಷಗಳು ಶತಮಾನದಷ್ಟು ಹಿಂದುಳಿದಿವೆ.

ಮೋದಿಯವರು ವಿಭಿನ್ನ ರ್ಯಾಲಿಗಳಲ್ಲಿ ಸ್ಮರಿಸಿದ ಹೆಸರುಗಳಿವು: ಸಂತೆಮಾರಹಳ್ಳಿಯಲ್ಲಿ ಸುತ್ತೂರು ಸ್ವಾಮಿ, ಬಿಳಿಗಿರಿರಂಗ, ಮಲೆಮಾದೇಶ್ವರ; ಉಡುಪಿಯಲ್ಲಿ ಕನಕದಾಸ, ಭಗವಾನ್ ಶ್ರೀಕೃಷ್ಣ, ಪರಶುರಾಮಸೃಷ್ಟಿಯ ಭೂಮಿ, ಮಧ್ವಾಚಾರ್ಯ ತಪೋಭೂಮಿ, ಅಷ್ಟಮಠ ಯತಿಪರಂಪರೆ; ಹುಬ್ಬಳ್ಳಿಯಲ್ಲಿ ಸಿದ್ಧಾರೂಢರು, ಮೂರುಸಾವಿರ ಮಠ, ಕವಿಬೇಂದ್ರೆ, ಗಂಗೂಬಾಯಿ ಹಾನಗಲ್, ಹುತಾತ್ಮ ಸೈನಿಕ ಹನುಮಂತಪ್ಪ ಕೊಪ್ಪದ; ಕಲಬುರ್ಗಿಯಲ್ಲಿ ರಾಷ್ಟ್ರಕೂಟರು, ಬಸವಣ್ಣ, ಮಿತಾಕ್ಷರ ಬರೆದ ವಿಜ್ಞಾನೇಶ್ವರ, ಸುರಪುರದ ವೆಂಕಟಪ್ಪ ನಾಯಕ; ಬೆಳಗಾವಿಯಲ್ಲಿ ಶಿವಾಜಿ, ಬೆಳವಡಿ ಮಲ್ಲಮ್ಮ, ಕಿತ್ತೂರ ಚನ್ನಮ್ಮ, ವೀರಸಂಗೊಳ್ಳಿ ರಾಯಣ್ಣ. ಹುಬ್ಬಳ್ಳಿಯಲ್ಲಿ ಅವರು ಜನರಿಗೆ ‘ಮಂದಿ’ ಶಬ್ದ ಬಳಸಿದರು; ಲಿಂಗಾಯತ ಪ್ರಧಾನ ಕಲಬುರ್ಗಿಯಲ್ಲಿ ‘ಪ್ರಣಾಮ’ದ ಬದಲು ‘ಶರಣಾರ್ಥಿ ಎಂದರು; ಹೈದರಾಬಾದ್ ಕರ್ನಾಟಕದ ಬದಲು ‘ಕಲ್ಯಾಣ ಕರ್ನಾಟಕ’ ಎಂದೂ ಸಂಬೋಧಿಸಿದರು.
ಇಲ್ಲಿನ ವಿಜ್ಞಾನೇಶ್ವರ, ಪರಶುರಾಮ, ಅಷ್ಟಮಠಗಳು ಬ್ರಾಹ್ಮಣವಾದಕ್ಕೆ ಪ್ರಿಯವಾದ ಹೆಸರುಗಳು. ಮೋದಿಯವರ ರ್‍ಯಾಲಿಗಳ ಸಂಖ್ಯೆ ಇಪ್ಪತ್ತೊಂದಂತೆ. ಇದು ನಿಜವಿದ್ದರೆ, ಈ ಸಂಖ್ಯೆ ಪರಶುರಾಮನು ಕ್ಷತ್ರಿಯರ ಜನಾಂಗನಾಶಕ್ಕಾಗಿ ಭೂಪ್ರದಕ್ಷಿಣೆ ಮಾಡಿದ್ದನ್ನು ಸಂಕೇತಿಸುತ್ತದೆ. ಬಿಜೆಪಿ ಉದ್ದೇಶವಾದರೂ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವುದು. ಅದರಲ್ಲೂ ದಕ್ಷಿಣದಲ್ಲಿ ಮೋದಿಗೆ ಸವಾಲಾಗಿರುವ ಸಿದ್ದರಾಮಯ್ಯನವರನ್ನು ನಿವಾರಿಸುವುದು. ಎಂತಲೇ ಸಿದ್ದರಾಮಯ್ಯ ಸೋತಾಗ ಬಿಜೆಪಿ ಬೆಂಬಲಿಗರ ಪ್ರತಿಕ್ರಿಯೆಗಳಲ್ಲಿ ಚಾಮುಂಡೇಶ್ವರಿಯಲ್ಲಿ ‘ಸಿದ್ದರಾಮ ವಧೆ’ ಎಂದಿತ್ತು. ಚಾಮುಂಡಿ ರಾಕ್ಷಸರನ್ನು ಕೊಂದು ಲೋಕದ ಕಂಟಕ ನಿವಾರಣೆ ಮಾಡಿದ ಮಿತ್ ಜತೆಗೆ ಸನಿಹವಾದ ನುಡಿಗಟ್ಟಿದು. ದೇವಿ, ಪಶುರೂಪದಲ್ಲಿದ್ದ ರಾಕ್ಷಸನನ್ನು ಕೊಂದವಳು. ಸಿದ್ಧರಾಮಯ್ಯ ಪಶುಪಾಲಕ ಸಮುದಾಯದಿಂದ ಬಂದವರು.
ಚುನಾವಣೆಯಲ್ಲಿ ಜಾತಿ, ಹಣ, ಧರ್ಮ, ಅಭ್ಯರ್ಥಿಗಳ ವ್ಯಕ್ತಿತ್ವ, ಪಕ್ಷಗಳ ಭರವಸೆ, ಯಾರೊ ಒಬ್ಬರಿಗೆ ಬುದ್ಧಿಕಲಿಸುವ ಕೆಚ್ಚು, ಅನುಕಂಪೆ-ಇತ್ಯಾದಿ ಅನೇಕ ಅಂಶಗಳು ಕೆಲಸ ಮಾಡುತ್ತವೆ. ಇವುಗಳಲ್ಲಿ ಭಾವನಾತ್ಮಕ ಸಂಗತಿಗಳ ಪಾತ್ರವೂ ಇದೆ. ಕರಾವಳಿಯಲ್ಲಿ ನಾನಾ ಕಾರಣಕ್ಕೆ ಜೀವ ಕಳೆದುಕೊಂಡ ತರುಣ ಸಾವನ್ನು ಬಿಜೆಪಿ ಬಳಸಿಕೊಂಡಿತು. ಭಾವನಾತ್ಮಕ ಸಂಗತಿಗಳು ಮತೀಯ ರಾಜಕಾರಣದಲ್ಲಿ ಜನಮನಸ್ಸನ್ನು ಪ್ರವೇಶಿಸುವ ಒಳಗಿಂಡಿಗಳು. ಈ ಸಂಗತಿಗಳಲ್ಲಿ ನಾಲ್ಕು ಆಯಾಮಗಳಿರುತ್ತವೆ: ಅಬ್ರಾಹ್ಮಣ ಸಮುದಾಯಗಳಲ್ಲಿ ಬೇರುಬಿಟ್ಟಿರುವ ದೈವ/ನಾಯಕರನ್ನು ಒಳಗುಮಾಡಿಕೊಳ್ಳುವುದು; ಅಲ್ಲಿರುವ ಹಿಂದುತ್ವ ವಿರೋಧಿಗಳನ್ನು ನಾಶಮಾಡುವುದು; ಮುಸ್ಲಿಮ್ ವಿರೋಧಿ ಆಯಾಮವುಳ್ಳ ಸಂಕೇತಗಳನ್ನು ಮುಂದೊಡ್ಡುವುದು; ಸೂಕ್ಷ್ಮವಾಗಿ ಬ್ರಾಹ್ಮಣವಾದಿ ಮೌಲ್ಯಗಳನ್ನು ನುಸುಳಿಸುವುದು. ಈ ನಾಲ್ಕೂ ಆಯಾಮಗಳು ಹಿಂದುತ್ವದ ಚೌಕಟ್ಟಿನಲ್ಲಿ ತಮ್ಮ ವೈರುಧ್ಯಗಳ ಸಮೇತ ಒಟ್ಟಿಗೆ ಸಂಗಮಿಸುತ್ತವೆ. ಮೂರು ತಿಂಗಳ ಹಿಂದೆ ಕರ್ನಾಟಕಕ್ಕೆ ಬಂದಾಗ ಅಮಿತ್‌ಶಾ ತಮ್ಮ ಪಕ್ಷದವರಿಗೆ ಸ್ಪಷ್ಟವಾಗಿ ಹೇಳಿದ್ದರು: “ಭಾವನಾತ್ಮಕ ವಿಷಯಗಳನ್ನು ಬಳಸಿರಿ”


ಭಾವನಾತ್ಮಕ ವಿಷಯ ಬಳಸುವಲ್ಲಿ ಇತರೆ ಪಕ್ಷಗಳೂ ಯತ್ನಿಸುತ್ತವೆ. ಅಯೋಧ್ಯೆಯ ಮತ್ತು ಶಬಾನು ಪ್ರಕರಣಗಳಲ್ಲಿ ಕಾಂಗ್ರೆಸ್ಸು ಈ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಅದು ಲಿಂಗಾಯತ ಧರ್ಮದ ವಿಷಯದಲ್ಲಿ ಈ ಯತ್ನ ಮಾಡಿ ಬಿಜೆಪಿಯ ಮತಬ್ಯಾಂಕನ್ನು ತುಸುಮಟ್ಟಿಗೆ ಮಾತ್ರ ಒಡೆಯಿತು. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರಾಧನಾ ಯೋಜನೆಯನ್ನು ಜಾರಿಗೆ ತಂದಿದ್ದರು. ಅದರ ಆಶಯ ಕೆಳಜಾತಿ ಸಮುದಾಯಗಳ ದೈವಗಳಿಗೆ ಗುಡಿ ಮಸೀದಿ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವುದು. ಅದು ಸಾಕಷ್ಟು ಮತಗಳಿಕೆ ಮಾಡಿಕೊಟ್ಟಿತು. ಆದರೂ ಸಾಂಸ್ಕೃತಿಕ ರಾಜಕಾರಣ ಮಾಡುವುದರಲ್ಲಿ ಬಿಜೆಪಿಯ ಮುಂದೆ ಉಳಿದ ಪಕ್ಷದವರು ಏನೂ ಅಲ್ಲ. ಅನೇಕರಿಗೆ ಸಾಂಸ್ಕೃತಿಕ ರಾಜಕಾರಣ ಎಂದರೆ ಅರ್ಥವೂ ಆಗುವುದಿಲ್ಲ.
ಭಾರತದ ಮತದಾರರು ತಮ್ಮ ಹಸಿವಿಗೆ ಆರೋಗ್ಯಕ್ಕೆ ಶಿಕ್ಷಣಕ್ಕೆ ಉದ್ಯೋಗಕ್ಕೆ ಸರ್ಕಾರಗಳು ಏನು ಮಾಡಿದವು-ಮಾಡಲಿಲ್ಲ ಎಂಬುದಕ್ಕಿಂತ, ಭಾವನಾತ್ಮಕ ಸಂಗತಿಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆಯೇ? ಹೊಸಪೇಟೆಯಲ್ಲಿ ಅನೇಕ ಮುಸ್ಲಿಮರು ಆನಂದಸಿಂಗ್ ಅವರಿಗೆ ಮತಹಾಕಲು ಹೇಳುತ್ತಿದ್ದ ಒಂದು ಕಾರಣ, ಬಿಜೆಪಿಯನ್ನು ಎದುರು ಹಾಕಿಕೊಂಡು ಆತ ಟಿಪ್ಪುಜಯಂತಿಯಲ್ಲಿ ಭಾಗವಹಿಸಿದರು ಎಂದು. ಜೀವನದ ಮೂಲಭೂತ ಅಗತ್ಯಗಳಿಗೆ ಸರ್ಕಾರದ/ಪಕ್ಷಗಳ/ರಾಜಕಾರಣಿಯ ಮೌಲ್ಯಮಾಪನ ಮಾಡುವ ಎಚ್ಚರವೊಂದು ಭಾರತದಲ್ಲಿ ಬಹಳ ಕ್ಷೀಣವಾಗಿದೆ. ಅದು ಕ್ಷೀಣವಾಗಿರುವ ತನಕ ಭಾವನಾತ್ಮಕ ಸಂಗತಿಗಳಿಂದ ಅವರನ್ನು ವಶಪಡಿಸಿಕೊಳ್ಳುವ ರಾಜಕಾರಣವೂ ಚಾಲ್ತಿಯಲ್ಲಿರುತ್ತದೆ. ಭಾವನಾತ್ಮಕ ವಿಷಯಗಳನ್ನು ಮುಟ್ಟದೆ ಜನರ ಬದುಕಿನ ಸಮಸ್ಯೆಗಳನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಳ್ಳುವ ಚಳವಳಿಗಾರ ಅಭ್ಯರ್ಥಿಗಳು ಸೋಲುತ್ತಿರುತ್ತಾರೆ. ಎಂತಲೇ ಭಾರತದ ಪ್ರಜಾಪ್ರಭುತ್ವ ತನ್ನೆಲ್ಲ ಸಾಧನೆಗಳೊಂದಿಗೆ ಇನ್ನೂ ಪ್ರಬುದ್ಧವಾಗಿಲ್ಲ ಅನಿಸುವುದು. ಇಲ್ಲದಿದ್ದರೆ ನೋಟುರದ್ದತಿಯಿಂದ ಮಗ್ಗುಲಮುರಿ ಹೊಡೆತ ತಿಂದವರೂ ಮೋದಿ ಮೋದಿ ಎಂದು ಉದ್ಘೋಷ ಮಾಡುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...