- ಎ.ಕೆ.ಸುಬ್ಬಯ್ಯ |
ಪ್ರತ್ಯೇಕ ಲಿಂಗಾಯತ ಧರ್ಮ ರಾಜಕೀಯ ಲಾಭ ಬಯಸುವುದು ಸರಿಯಲ್ಲ ಎಂಬ ಚಿತ್ರನಟ ಹಾಗೂ ಲಿಂಗಾಯತ ಧರ್ಮ ಹೋರಾಟದ ಮುಖಂಡರೂ ಆಗಿರುವ ಚೇತನ್ ಅವರ ಹೇಳಿಕೆಯನ್ನು ವಿಮರ್ಶಿಸುತ್ತಲೇ ಈ ಲೇಖನ ಪ್ರಾರಂಭಿಸುತ್ತೇನೆ.
ರಾಜಕೀಯ ಲಾಭ ಗಳಿಸುವುದು ಬಿಡುವುದು ರಾಜಕಾರಣಿಗಳಿಗೆ ಆಯಾ ರಾಜಕೀಯ ಪಕ್ಷಗಳ ವಿವೇಚನೆಗೆ ಬಿಟ್ಟ ವಿಷಯ. ಅದರ ಬಗ್ಗೆ ಉಳಿದ ನಮ್ಮಂತವರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲವೆಂಬುದು ನನ್ನ ಅನಿಸಿಕೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ರಾಜ್ಯವ್ಯಾಪಿ ಆಂದೋಲನ ನಡೆಸಿದವರು ತಮ್ಮ ಗುರಿ ಮುಟ್ಟುವುದಕ್ಕಾಗಿ ಈ ಚುನಾವಣೆಯಲ್ಲಿ ಯಾವ ನಿಲುವು ತಳೆಯಬೇಕಾಗಿತ್ತು..? ಎಂಬ ಪ್ರಶ್ನೆಗೆ ಚೇತನ್ರವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ತಿಳಿಯುವ ಕುತೂಹಲ ನನ್ನನ್ನು ಕಾಡುತ್ತಿದೆ. ಲಿಂಗಾಯತರೆಲ್ಲ ವೀರಶೈವ ಕಪಿಮುಷ್ಠಿಯನ್ನು ಧಿಕ್ಕರಿಸಿ ಲಿಂಗಾಯತರು ಹಿಂದುಗಳಲ್ಲ, ಅದೊಂದು ಪ್ರತ್ಯೇಕ ಧರ್ಮ ಎಂದು ಘೋಷಿಸಿಕೊಂಡು, ಅದಕ್ಕೆ ಮಾನ್ಯತೆ ನೀಡಬೇಕೆಂದು ರಾಜ್ಯವ್ಯಾಪಿ ಆಂದೋಲನವನ್ನು ಬಸವಕಲ್ಯಾಣದಿಂದ ಆರಂಭಿಸಿದಾಗ ಹರ್ಷ ಪುಳಕಿತರಾಗಿ, ಆಂದೋಲನವನ್ನು ಸ್ವಾಗತಿಸಿ ಸಂತೋಷಪಟ್ಟವರಲ್ಲಿ ನಾನೂ ಒಬ್ಬ. ಈ ಸಂದರ್ಭದಲ್ಲಿ, ನನ್ನ ಪ್ರಿಯರೂ ಆಗಿರುವ ಚಿತ್ರನಟ ಚೇತನ್ ಅವರು ತಳೆದ ಸಕಾರಾತ್ಮಕ ನಿಲುವಿಗಾಗಿ ನಾನು ಅವರನ್ನು ಅಭಿನಂದಿಸಿದ್ದೂ ಉಂಟು. ದಿಡ್ಡಳ್ಳಿ ಆದಿವಾಸಿಗಳ ಬದುಕಿನ ಹೋರಾಟದಲ್ಲಿ ನನ್ನ ಒಡನಾಡಿಯಾಗಿದ್ದ ಚೇತನ್ ಅವರ ಜನಪರ ಕಾಳಜಿಯನ್ನು ಕಂಡು, ನಾನೊಬ್ಬ ಅವರ ಅಭಿಮಾನಿಯೇ ಆಗಿಬಿಟ್ಟಿದ್ದೇನೆ. ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತರು ನಡೆಸಿದ ಹೋರಾಟದ ಅಂಗವಾಗಿ ರಾಜ್ಯವ್ಯಾಪಿಯಾಗಿ ನಡೆದ ಆಂದೋಲನದಲ್ಲಿ ಅಕ್ಷರಶಃ ಲಕ್ಷೋಪಲಕ್ಷ ಜನ ಭಾಗವಹಿಸಿದ್ದರು. ಈ ಆಂದೋಲನ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಗಮನವನ್ನು ಸೆಳೆದಿತ್ತು ಎಂದರೆ ಅತಿಶಯೋಕ್ತಿಯಲ್ಲ. ಈ ಆಂದೋಲನಕ್ಕೆ ನಾಡಿನ ಪ್ರಗತಿಪರ ಚಿಂತಕರ ಬೆಂಬಲ ಸಹ ಮುಕ್ತವಾಗಿ ದೊರೆಯಿತು. ಏಕೆಂದರೆ ಲಿಂಗಾಯತ ಧರ್ಮ ಬಸವಣ್ಣ ಸ್ಥಾಪಿಸಿದ ಪ್ರತ್ಯೇಕ ಧರ್ಮವೇ ಹೊರತು, ಅದು ಹಿಂದು ಧರ್ಮದೊಳಗಿನ ಒಂದು ಜಾತಿಯಲ್ಲ ಎಂಬುದು ಸತ್ಯಸಂಗತಿ. ಈ ಧರ್ಮದ ಸ್ಥಾಪಕ ಬಸವಣ್ಣ. ವಚನ ಸಾಹಿತ್ಯವೇ ಅದರ ಧರ್ಮ ಗ್ರಂಥ. ಇಲ್ಲಿ ವೈದಿಕಶಾಹಿಯ ವೇದ, ಪುರಾಣ, ಚಾತುರ್ವರ್ಣದ ಗೊಡ್ಡುಪುರಾವೆಗಳೆಲ್ಲವನ್ನೂ ಧಿಕ್ಕರಿಸಲಾಗಿದೆ. ವೈದಿಕ ದೇವರುಗಳನ್ನೂ ಧಿಕ್ಕರಿಸಿ ದೇಹವೇ ದೇಗುಲವೆಂದು ದೃಢಪಡಿಸಲಾಗಿದೆ. ಆದ್ದರಿಂದ ಇದು ಖಂಡಿತವಾಗಿಯೂ ಒಂದು ಪ್ರತ್ಯೇಕ ಧರ್ಮವಲ್ಲದೆ, ವೈಧಿಕ ಧರ್ಮ ಅಥವ ಹಿಂದೂ ಧರ್ಮದೊಳಗಿನ ಒಂದು ಜಾತಿ ಖಂಡಿತ ಅಲ್ಲ.
ಇದು ಮಾನವ ಧರ್ಮ. ಜಗಜ್ಯೋತಿ ಬಸವಣ್ಣ ಸ್ಥಾಪಿಸಿದ ಈ ಧರ್ಮ ಎಲ್ಲರಿಗೂ ಸ್ವೀಕಾರ ಯೋಗ್ಯವಾದ ಧರ್ಮವಾಗಿದೆ. ಇದಕ್ಕೆ ಪ್ರತ್ಯೇಕ ಧರ್ಮವೆಂದು ಮಾನ್ಯತೆ ನೀಡುವುದೆಂದರೆ ಮಾನವ ಕೋಟಿಯ ಏಳಿಗೆ ಎಂದೇ ಅರ್ಥ. ಇಂಥ ಒಂದು ಮಾನವ ಧರ್ಮವನ್ನು ವೈದಿಕಶಾಹಿ ತನ್ನ ಎಂದಿನ ಕುತಂತ್ರವನ್ನು ಬಳಸುತ್ತ, ವೀರಶೈವ ಪಂಚ ಪೀಠಗಳ ಮೂಲಕ ಬಸವ ಧರ್ಮವನ್ನೇ ನುಂಗಿಹಾಕಿ ಅದನ್ನೊಂದು ಜಾತಿಯನ್ನಾಗಿ ಪರಿವರ್ತಿಸಿ, ವೈದಿಕ ಯಾನೆ ಹಿಂದೂ ಧರ್ಮದ ಭಾಗವನ್ನಾಗಿಸಿ, ಲಿಂಗಾಯತ ಧರ್ಮವನ್ನೇ ಕೊಂದು ಬಿಟ್ಟಿದ್ದರು. ಪಂಚಪೀಠಗಳೇ ಈ ಕೊಲೆ ಘಾತುಕರುಗಳು. ಲಿಂಗಾಯತ ಧರ್ಮವನ್ನು ನುಂಗಲು ವೈದಿಕರು ಪಂಚಪೀಠಗಳೆಂಬ ಮೊಸಳೆಗಳನ್ನು ಸೃಷ್ಟಿಸಿ, ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದರು. ಈ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಂದೋಲನ ಕಂಡು ಹರ್ಷಪುಳಕಿತನಾದ ನಾನು, ಬಸವಣ್ಣ ವೀರಶೈವರೆಂಬ ಮೊಸಳೆಯ ಹೊಟ್ಟೆಯನ್ನು ಸೀಳಿಕೊಂಡು ಹೊರಬರುತ್ತಾನೆಂದು, ಆ ದೃಶ್ಯವನ್ನು ಕಾಣಲು ಕಾತುರತೆಯಿಂದ ಕಾಯುತ್ತಿದ್ದೆ.
ಲಿಂಗಾಯತ ಪ್ರತ್ಯೇಕ ಧರ್ಮದ ಆಂದೋಲನಕಾರರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂಬ ಒತ್ತಾಯವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಮೇಲೆ ಹೇರುತ್ತಾ ಬಂದಾಗ, ಅವರ ಬೇಡಿಕೆಯನ್ನು ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತಾ ಬಂದದ್ದು ಸರಿಯಷ್ಟೆ. ಈ ಹೋರಾಟವನ್ನು ವಿರೋಧಿಸುತ್ತಾ ಬಂದ ವೀರಶೈವರು, ಇದಕ್ಕೆಲ್ಲ ಸಿದ್ದರಾಮಯ್ಯನವರೇ ಕಾರಣ, ಅವರು ಧರ್ಮ ಒಡೆಯುತ್ತಿದ್ದಾರೆ ಎಂದೆಲ್ಲಾ ತಲೆಬುಡವಿಲ್ಲದೆ ಆರೋಪ ಮಾಡತೊಡಗಿದಾಗ, ಪ್ರತ್ಯೇಕ ಧರ್ಮದ ಹೋರಾಟಗಾರರು ಗಟ್ಟಿಧ್ವನಿಯಲ್ಲಿ ಅಂಥ ಆರೋಪವನ್ನು ತಳ್ಳಿ ಹಾಕಿ, ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಆರೆಸ್ಸೆಸ್ ನೇತಾರರು ಹಾಗೂ ಪೇಜಾವರ ಮಠಾಧೀಶರಿಗೆ ಮಾತ್ರ ಲಿಂಗಾಯತ ಹೋರಾಟಗಾರರು ಖಡಕ್ ಉತ್ತರ ನೀಡಿದ್ದು ಸರಿಯಾಗಿದ್ದು, ಸ್ವಾಗತಾರ್ಹ ಕ್ರಮವಾಗಿತ್ತು. ಆರೆಸ್ಸೆಸ್ ಸರಸಂಘ ಚಾಲಕ ಭಾಗವತ್ ಹಾಗೂ ಪೇಜಾವರ ಶ್ರೀಗಳಿಗೆ ನಮ್ಮ ಧರ್ಮದ ವಿಷಯದಲ್ಲಿ ಮೂಗು ತೂರಿಸದಿರಿ ಎಂದೇನೋ ನಿರ್ದಾಕ್ಷಿಣ್ಯವಾಗಿ ಹೇಳಿದರು. ಈ ಹಿನ್ನೆಲೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವವರ ನಿಷ್ಠೆ ಪ್ರಶ್ನಾತೀತವಾಗಿ ಗೋಚರಿಸಿತು. ಅದೊಂದು ಢೋಂಗಿ ಹೋರಾಟವೆಂದು ಯಾರಿಗೂ ಅನ್ನಿಸಲೇ ಇಲ್ಲ. ವೀರಶೈವ ಮಠಾಧೀಶರುಗಳು, ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂದು ಅಬ್ಬರಿಸಿದಾಗ ಲಿಂಗಾಯತರು ಅದನ್ನು ನಿರಾಕರಿಸಿ, ಪ್ರತ್ಯೇಕ ಲಿಂಗಾಯತರ ಸಮಾವೇಶಗಳನ್ನು ಸಂಘಟಿಸಲಾಗಿತ್ತು. ಜಾಗತಿಕ ಲಿಂಗಾಯತ ಸಂಘಟನೆಗಳೂ ಸಹ ಅಸ್ತಿತ್ವಕ್ಕೆ ಬಂದವು. ಬಸವ ಟಿವಿ ಎಂಬ ಟಿವಿ ಚಾನಲ್ ಕೂಡ ಅಸ್ತಿತ್ವಕ್ಕೆ ಬಂತು. ಈ ಹಿನ್ನೆಲೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ತಾರ್ಕಿಕ ಅಂತ್ಯ ಕಾಣುತ್ತದೆಂದೇ ಎಲ್ಲರೂ ಭಾವಿಸುವಂತಾಯಿತು. ಇದು ಸಿದ್ದರಾಮಯ್ಯನವರನ್ನು ಹಳಿಯಲು ನಡೆಸಿದ ಲಿಂಗಾಯತ ಪಿತೂರಿಯೆಂದು, ಪರಿಗಣಿಸುವುದಕ್ಕೆ ಯಾವ ಕಾರಣವೂ ಸಾರ್ವಜನಿಕವಾಗಿ ಗೋಚರಿಸಲಿಲ್ಲ. ಈ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆ ಬಂತು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿಯವರು, ಲಿಂಗಾಯತ ಮಠಾಧೀಶರ ಸಭೆ ಕರೆದು, ಈ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನೇ ಬೆಂಬಲಿಸಬೇಕೆಂದು, ಇದರಲ್ಲಿ ಮುಚ್ಚುಮರೆಯಿಲ್ಲವೆಂದು ಹೇಳುತ್ತಾ ಒಬ್ಬ ಮಹಾ ಮುತ್ಸದ್ದಿಯಾಗಿಯೇ ವಿಜೃಂಭಿಸಿದರು. ಸಭೆಯಲ್ಲಿದ್ದ ಇತರೆ ಮಠಾಧೀಶರುಗಳು ಸಹ ತಮ್ಮ ಸಮ್ಮತಿ ನೀಡಿದಂತೆ ಕಂಡುಬಂತು. ಅದಕ್ಕೂ ಮೊದಲು ಹಲವು ಪ್ರಮುಖ ಮಠಾಧೀಶರುಗಳು ತುಂಬಾ ಪ್ರಗತಿಪರ ಧ್ವನಿಯಲ್ಲಿ ಸಂಘಪರಿವಾರವನ್ನು, ವೈದಿಕಶಾಹಿಯನ್ನು ಪ್ರತಿರೋಧಿಸುತ್ತಿದ್ದು ಬಸವತತ್ವವನ್ನು ಸಮರ್ಥಿಸಿ ಮಾತನಾಡಿದ್ದು ರೋಮಾಂಚನಕಾರಿಯಾಗಿತ್ತು. ಇಂಥವರಿಗೆಲ್ಲಾ ಲಿಂಗಾಯತ ಪ್ರತ್ಯೇಕ ಧರ್ಮದ ಆಂದೋಲನವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡುಹೋಗಲು ಭದ್ರಬುನಾದಿ ಅವಕಾಶ ಆಂದೋಲನಕಾರರಿಗೆ ಈ ಚುನಾವಣೆ ಸುವರ್ಣ ಅವಕಾಶವಾಗಿತ್ತು ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ.
ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ವೈದಿಕಶಾಹಿ ನಿಯಂತ್ರಣದ ಬಿಜೆಪಿ ಸರ್ಕಾರ ಇರುವತನಕ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಅಸಂಭವವೆಂದು ತಿಳಿಯಲು ಹೆಚ್ಚಿನ ಬುದ್ಧಿ ಏನು ಬೇಕಾಗಿಲ್ಲ. ಸಾಮಾನ್ಯ ಜ್ಞಾನ ಉಳ್ಳವರಿಗೆ ಇದು ಸರಳವಾಗಿ ಅರ್ಥವಾಗುತ್ತೆ. ಆದ್ದರಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಸಾಕಾರಗೊಳ್ಳಬೇಕಾದರೆ ಕೇಂದ್ರದಲ್ಲಿ ಕೋಮುವಾದಿ ಸರ್ಕಾರ ಹೋಗಿ, ಜಾತ್ಯತೀತ ಸರ್ಕಾರ ಬರಲೇಬೇಕು. ಇಲ್ಲವಾದರೆ ಲಿಂಗಾಯತ ಪ್ರತ್ಯೇಕ ಧರ್ಮದ ಕಾರ್ಯ ನನಸಾಗಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಇದ್ದದ್ದರಿಂದಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಗೆ ಮಾನ್ಯತೆ ದೊರೆಯಿತು. ಬಿಜೆಪಿ ಸರ್ಕಾರ ಇದ್ದಿದ್ದರೆ ಅದು ದೊರಕುತ್ತಿರಲಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮಣ್ಣು ಮುಕ್ಕಿಸಬೇಕಾದ ಅನಿವಾರ್ಯತೆ ಲಿಂಗಾಯತ ಪ್ರತ್ಯೇಕ ಧರ್ಮ ಬೇಕೆನ್ನುವವರಿಗೆ ಇತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆಯನ್ನು ಕಟುವಾಗಿ ವಿರೋಧಿಸುತ್ತಾ ವೀರಶೈವ-ಲಿಂಗಾಯತ ಎರಡೂ ಒಂದೇ, ಲಿಂಗಾಯತ ಪ್ರತ್ಯೇಕ ಧರ್ಮ ಬೇಡವೆಂದು ಪ್ರತಿಪಾದಿಸುತ್ತಾ, ಲಿಂಗಾಯತರು ವೀರಶೈವ ಅಧೀನವೇ ಇರಬೇಕೆಂದು ಪರೋಕ್ಷವಾಗಿ ಹೇಳುತ್ತಾ ಬಂದ ವೀರಶೈವ ಮಠಾಧೀಶರುಗಳು ಬಹಿರಂಗವಾಗಿಯೇ ಬಿಜೆಪಿ ಪರವಾಗಿ ನಿಂತು ಕಾಂಗ್ರೆಸ್ ಸೋಲಿಸಬೇಕೆಂದು ಕರೆ ಕೊಟ್ಟರು. ಅದರಲ್ಲಿ ಮುಚ್ಚುಮರೆ ಇರಲಿಲ್ಲ. ಆದರೇ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂದು ಪ್ರತಿಪಾದಿಸುತ್ತಾ ಬಂದ ಮಠಾಧೀಶರುಗಳು ಮಾತ್ರ ಬರುಬರುತ್ತಾ ಮೌನಿಗಳಾಗಿ ಒಳಗೊಳಗೆ ವೀರಶೈವ ಮಠಾಧೀಶರ ಅಪೇಕ್ಷೆಯನ್ನೇ ಹಿಂಬಾಲಿಸಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬಹಿರಂಗ ವಿರೋಧ ಮಾಡಿದ ಬಿಜೆಪಿಯನ್ನೇ ಚುನಾವಣೆಯಲ್ಲಿ ಬೆಂಬಲಿಸಿದ್ದು ಒಂದು ಕ್ರೂರ ವ್ಯಂಗ್ಯವಾಗಿ ತೋರುತ್ತದೆ. ಏಕೆ ಹೀಗಾಯಿತೆಂದು ವಿಮರ್ಶಿಸಿದಾಗ ಇದರ ಹಿಂದೆ ಕೇವಲ ಜಾತೀಯತೆ ಎದ್ದು ಕಾಣುತ್ತದಲ್ಲದೇ ಮತ್ತೇನೂ ಇಲ್ಲ.
ಈ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಂದೋಲನ ಮಾಡಿದವರ ಮುಂದೆ ಇದ್ದ ಆಯ್ಕೆ ಏನೆಂದರೆ ಆಂದೋಲನವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡು ಹೋಗಲು ಬಿಜೆಪಿಯನ್ನು ಮಣ್ಣು ಮುಕ್ಕಿಸುವ ಮೂಲಕ ಭದ್ರಬುನಾದಿ ಹಾಕುವುದು, ಇಲ್ಲ ಆಂದೋಲನಕ್ಕೆ ಎಳ್ಳು ನೀರು ಬಿಟ್ಟು ತಮ್ಮ ಜಾತಿಯವನಾದ ಯಡಿಯೂರಪ್ಪನನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಬಿಜೆಪಿಗೆ ಓಟು ಕೊಡುವುದರ ಮೂಲಕ ಬೆಂಬಲಿಸುವುದು. ಅಂತಿಮವಾಗಿ ಲಿಂಗಾಯತರು ಧರ್ಮದ ಮಾತು ಬಿಟ್ಟು ಜಾತಿಯನ್ನೇ ಆಯ್ಕೆ ಮಾಡಿಕೊಂಡರು. ಧರ್ಮ ಬಿಟ್ಟು ಜಾತಿಗೆ ಪಕ್ಷಾಂತರಗೊಂಡು, ಅಷ್ಟೊಂದು ಕಷ್ಟಪಟ್ಟು ಕಟ್ಟಿದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಗೋರಿ ನಿರ್ಮಿಸಿಬಿಟ್ಟರು. ಅಲ್ಲಿಗೆ ಬಸವಣ್ಣ ಹಾಗೂ ವಚನ ಸಾಹಿತಿಗಳು ವೀರಶೈವರೆಂಬ ವೈದಿಕಶಾಹಿಗಳ ಹೊಟ್ಟೆಗೆ ಮತ್ತೆ ಸೇರಿಕೊಂಡಂತಾಯ್ತು. ಒಂದು ಧರ್ಮವಾಗಿ ಲಿಂಗಾಯತ ಇಡೀ ಮಾನವ ಕೋಟಿಗೆ ಸ್ವೀಕಾರ ಯೋಗ್ಯವಾಗಿದೆ. ಅದೊಂದು ಜಾತಿಯಾಗಿ ಯಾರಿಗೂ ಬೇಕಾಗಿಲ್ಲ. ಇಂದಿನ ಈ ಬೆಳವಣಿಗೆಯನ್ನು ಐತಿಹಾಸಿಕ ದುರಂತವೆಂದೇ ಬಣ್ಣಿಸಬೇಕಾಗಿದೆ.