ಕತ್ತಲಾಗಿದೆ ಜಗವು
ಜ್ಞಾನದ ದೀವಿಗೆ ಹಿಡಿದು
ಮತ್ತೆ ಹುಟ್ಟಿ ಬಾ
ಅಣ್ಷ ಬಸವಣ್ಣ
ಅಕ್ಷಯ ತೃತೀಯ ಗಳಿಗೆ,
ಒಳ್ಳೆಯ ಗಳಿಗೆಯಾದುದೇ
ನಿನ್ನ ಜನನದಿಂದ,
ಈ ಮಿತಿಗೆ ಮಾಡುವ
ಕಾರ್ಯ ಶುಭವೆಂದು
ಬಡಿದಾಡುವ ಜನ,
ನಿನ್ನ ತತ್ವಗಳನೆಲ್ಲಾ
ಗಾಳಿಗೆ ತೂರಿಹರು,
ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……
ಇಂದೊಂದು ದಿನ
ಸರಕಾರಿ ರಜೆ ಘೋಷಿಸಿ,
ನಿನ್ನ ಪಟಕೊಂದು
ಹೂವಿನ ಹಾರ ಹಾಕಿ,
ತರಾತುರಿಯ ಮೆರವಣಿಗೆಯಲಿ
ನಿನ್ನ ನೆಡೆದಾಡಿಸಿ,
ಬಾಯ್ತುಂಬಾ
ನಿನ್ನ ಹೊಗಳಿ ಉಂಡು
ಮಲಗುವವರಿಗೆ,
ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……
ಸಭೆ-ಸಮಾರಂಭಗಳ
ವೇದಿಕೆಯಲಿ,
ಸಹಸ್ರಾರು ಜನರೆದುರಿಗೆ,
ಕಂಠಪಾಠ ಮಾಡಿದ
ನಾಲ್ಕು ವಚನಗಳ ವಾಚಿಸಿ,
ಮರಳಿ ಮಣ್ಣು ತಿನ್ನುವ
ಕೆಲಸ ಮಾಡುವವರ
ಕೆಲ ಜನರಿಗೆ,
ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……
ನೀನೇ ಒಂದು ಧರ್ಮ
ನಿನ್ನ ಹೆಸರಿನಾ
ಧರ್ಮದಾ ನೆರಳಿನಲಿ,
ಅಧರ್ಮ ಮಾಡುವಾ
ಕೆಲವು ಕದನಗಳು
ಹಗಲಿರುಳು ನೆಡೆಯುತ್ತಿವೆ,
ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……
ಆಚರಣೆ ಯಾವುದಾದರೇನು,
ವಿಚಾರ ವಿಲ್ಲದೇ ಫಲವೇನು,
ಮೌಢ್ಯಗಳ ದಿಕ್ಕರಿಸಿದ
ಎಲ್ಲರ ಭಾವಗಳ ಭಕುತಿಗೆ
ಮುಕುಟವಿಟ್ಟ ,
ನಿನ್ಮ ಭಾವಕೆ ಬೆಂಕಿ ಹಚ್ಚುವ
ಜನರಿಹರು,
ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……
ನುಡಿ-ನೆಡೆಯ ಹೆಜ್ಜೆಗಳಾ
ಗುರುತು,
ನಿನ್ನ ವಚನದಾ ಗುಟ್ಟು,
ವಚನ ವಾಚನವ
ಮಾಡುವವರೆಲ್ಲರೂ,
ಪಾಲಿಸುವರಾ ಎಂದು,
ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……
ಮಾಧ್ಯಮಗಳ ಬರಾಟೆಯಿಲ್ಲ,
ಸಾಮಾಜಿಕ ಜಾಲತಾಣದಾ
ಅಬ್ಬರವಿಲ್ಲ,
ಮೈಕು- ಮೋಟಾರು ಗಾಡಿಗಳ
ಗಲಾಟೆಯಿಲ್ಲದೇ,
ಹೇಗೆ ಸೇರಿಸಿದೆ ಎಣಕೆಯಿಲ್ಲದಾ
ಶರಣ ಗಣಗಳನು,
ಅದರ ಗುಟ್ಟು,
ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……
ಜಾತಿ-ಧರ್ಮಗಳ ದೊಂಬಿಯಲಿ
ನಿತ್ಯವೂ ಮಾರಣ ಹೋಮ,
ಅಧಿಕಾರದಾ ಹಪಹಪಿಗೆ
ಅಂಧಕಾರ ಮಾಡಿಹರು ನಾಡನ್ನು,
ಅರಿವಿನಾ ದೀವಿಗೆ ಹಿಡಿದು
ನಮ್ಮನ್ನು ರಕ್ಷಿಸಿ,
ಫಾತುಕರ ಮನಕೆ
ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……
- ಶೈಲಜಾ ಹಿರೇಮಠ, ಗಂಗಾವತಿ.