ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಕನ್ನಡದ 25 ಸಾಹಿತಿಗಳು ಬಹಿರಂಗ ಪತ್ರ ಬರೆದಿದಿದ್ದಾರೆ.
ದೇವನೂರು ಮಹಾದೇವ, ಡಾ.ತಾರಿಣಿ ಶುಭದಾಯಿನಿ, ಎಸ್.ಎಲ್.ಭೈರಪ್ಪ, ಡಾ.ಸಬಿತಾ ಬನ್ನಾಡಿ ಸೇರಿದಂತೆ ಹಲವಾರು ಸಾಹಿತಿಗಳು ದೂರವಾಣಿ ಮತ್ತು ವಾಟ್ಸಾಪ್ನಲ್ಲಿ ಚರ್ಚಿಸಿಕೊಂಡು ಮುಖ್ಯಮಂತ್ರಿಗಳಿಗೆ ಕಳಿಸಿರುವ ಬಹಿರಂಗ ಪತ್ರವನ್ನು ಪತ್ರಿಕಾ ಹೇಳಿಕೆಯಾಗಿ ನೀಡಿದ್ದಾರೆ.
ಕರ್ನಾಟಕದ ಜನರ ಒತ್ತಾಸೆ, ಹೋರಾಟ ಮತ್ತು ಕನ್ನಡದ ಹಲವಾರು ಹಿರಿಯ ಸಾಹಿತಿಗಳೂ, ಕನ್ನಡಪರ ಹೋರಾಟಗಾರರೂ ದನಿಯೆತ್ತಿದ್ದರಿಂದ ಮೈಸೂರಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಪ್ರಾರಂಭಗೊಂಡು ಸುಮಾರು ಹತ್ತು ವರ್ಷಗಳಾಗಿವೆ. ಆದರೆ ತಮಿಳು ಮತ್ತು ತೆಲುಗು ಶಾಸ್ತ್ರೀಯ ಅಧ್ಯಯನ ವಿಭಾಗಗಳು ಬೆಳವಣಿಗೆ ಹೊಂದಿದ್ದಷ್ಟು ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಬೆಳೆಯದಿರುವುದಕ್ಕೆ ಕನ್ನಡದ ಸಾಹಿತಿಗಳು ವಿಷಾಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಿಳಂಬವಾಗಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸಿ.ಟಿ.ರವಿ ಅವರು ಪ್ರಯತ್ನಶೀಲರಾಗಿದ್ದರೂ ಅದಕ್ಕೆ ಭಾರತೀಯ ಭಾಷಾ ಸಂಸ್ಥಾನದ ಪ್ರಭಾರ ನಿರ್ದೇಶಕರಾದ ಪ್ರೊ.ಡಿ.ಜಿ.ರಾವ್ ಅವರು ಸ್ಪಂದಿಸುತ್ತಿಲ್ಲ ಎಂದು ಸಾಹಿತಿಗಳು ಹೇಳಿಕೆಯಲ್ಲಿ ದೂರಿದ್ದಾರೆ.
ಅಲ್ಲದೇ ನಿರ್ದೇಶಕರು ಶಾಸ್ತ್ರೀಯ ಕನ್ನಡವು ಸ್ವಾಯತ್ತತೆ ಪಡೆಯುವಷ್ಟು ಬೆಳವಣಿಗೆ ಆಗಿಲ್ಲವೆಂದು ಕೇಂದ್ರಕ್ಕೆ ತಪ್ಪು ಮಾಹಿತಿಯನ್ನು ನೀಡಿರುವುದು ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ. ಭಾರತೀಯ ಭಾಷಾಜ್ಞಾನವುಳ್ಳ ಯಾರೂ ಕೂಡ ಹೀಗೆ ಬರೆಯಲು ಸಾಧ್ಯವಿಲ್ಲ. ಹೀಗೆ ಬರೆಯುವುದರ ಮೂಲಕ ಡಿ.ಜಿ.ರಾವ್ ಅವರು ಭಾರತೀಯ ಭಾಷಾ ಸಂಸ್ಥಾನಕ್ಕೂ, ಭಾಷಾ ವಿಜ್ಞಾನಕ್ಕೂ ಅವಮಾನ ಮಾಡಿದ್ದಾರೆ. ಮಾತ್ರವಲ್ಲದೆ, ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರದ ಸಂಶೋಧನ ಕಾರ್ಯಗಳ ಪ್ರಗತಿಯನ್ನು ಹಿನ್ನಡೆಗೊಳಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಈಚೆಗೆ ಹಾಲಿ ಸಂಶೋಧನ ಸಿಬ್ಬಂದಿಯನ್ನು ಬದಲಿಸುವ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಧ್ಯಪ್ರವೇಶಿಸಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಸ್ಥಾನಮಾನ ದೊರಕಿಸಿಕೊಳ್ಳಲು ತುರ್ತಾಗಿ ಕ್ರಮಕೈಗೊಳ್ಳುವುದು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಹಿನ್ನೆಡೆಯುಂಟು ಮಾಡುವ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಪ್ರಭಾರಿ ನಿರ್ದೇಶಕರು ಹೊರಡಿಸಿದ ಕಾನೂನುಬಾಹಿರವಾದ ಹೊಸ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆಯಲು ಸಂಬಂಧಪಟ್ಟವರಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರೊ. ನಂಜರಾಜೇ ಅರಸ್, ಜಿ.ಎಸ್.ಜಯದೇವ, ಪ್ರೊ. ಕೃಷ್ಣಮೂರ್ತಿ ಹನೂರು, ಡಾ.ಬಸವರಾಜ ಕಲ್ಗುಡಿ, ಪ.ಮಲ್ಲೇಶ್, ಡಾ.ಓ.ಎಲ್.ನಾಗಭೂಷಣಸ್ವಾಮಿ, ಡಾ.ಚಂದ್ರಶೇಖರ ನಂಗಲಿ, ಪ್ರೊ.ಎನ್.ಬೋರಲಿಂಗಯ್ಯ,
ಡಾ.ರಾಜಪ್ಪ ದಳವಾಯಿ, ಡಾ.ಕಾಳೇಗೌಡ ನಾಗವಾರ, ಜಿ.ಪಿ.ಬಸವರಾಜ, ಡಾ.ಅರವಿಂದ ಮಾಲಗತ್ತಿ, ಡಾ.ನಟರಾಜ್ ಬೂದಾಳು, ನಾ.ದಿವಾಕರ, ಡಾ.ವೀರಣ್ಣ ರಾಜೂರ, ವೆಂಕಟೇಶ ಮಾಚಕನೂರು, ಡಾ.ಬಸವರಾಜ್ ಮೈಸೂರು, ಡಾ.ಬಸವರಾಜ ಸಾದರ, ಡಾ.ದೇವರ ಕೊಂಡಾರೆಡ್ಡಿ, ಡಾ.ಕೇಶವ ಶರ್ಮ, ಪ್ರೊ. ಪಂಡಿತಾರಾಧ್ಯ ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ ಇತರರಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸಂಗೀತ, ಕನ್ನಡ ಮತ್ತು ಕನ್ನಡಿಗರು: ಹತ್ತೊಂಬತ್ತನೇ ಶತಮಾನದ ಮೈಸೂರು ಸಂಸ್ಥಾನದ ಕೆಲವು ನೋಟಗಳು
ಕನ್ನಡ ವಿರೋಧಿ ಡಿ.ಜಿ.ರಾವ್ ಮೊದಲು ಸಿಐಐಎಲ್ ನಿಂದ ತೊಲಗಬೇಕು.