ಕೆಜೆ ಹಳ್ಳಿ-ಡಿಜೆ ಹಳ್ಳಿ ಅಶಾಂತಿಗೆ ಕಾಂಗ್ರೆಸ್ ನಾಯಕರೆ ಕಾರಣ. ಅವರ ಪಕ್ಷದ ಶಾಸಕರ ಮನೆಗೆ ಬೆಂಕಿ ಇಟ್ಟು, ಜೀವಹಾನಿ ಮಾಡಲು ಹೊರಟ ಕಾಂಗ್ರೆಸ್ ನಾಯಕರು, ಬೆಂಗಳೂರನ್ನು ರಕ್ಷಣೆ ಮಾಡುತ್ತೇವೆ ಎಂದು ಯಾವ ಮುಖವಿಟ್ಟುಕೊಂಡು ಮತ ಕೇಳಲು ಹೋಗುತ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಉಪಚುನಾವಣೆಯ ಹಿನ್ನೆಲೆಯಲ್ಲಿ, ರಾಜರಾಜೇಶ್ವರಿ ನಗರ ಬಿಬಿಎಂಪಿ ಕಚೇರಿಗೆ ತಮ್ಮ ಪಕ್ಷದ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಅವರ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಇದನ್ನೂ ಓದಿ: ಪ್ರವಾದಿ ನಿಂದನೆ ಮತ್ತು ಡಿಜೆ ಹಳ್ಳಿ ಗಲಭೆ: ಪಾರದರ್ಶಕ ಸತ್ಯಶೋಧನೆಯ ವಿಶಿಷ್ಟ ಪ್ರಯೋಗ
“ಈ ಕ್ಷೇತ್ರದಲ್ಲಿ ಪ್ರತೀ ಭಾರಿಯೂ ಬೇರೆ ಬೇರೆ ಪಕ್ಷದಿಂದ ಬಂದು ಜೆಡಿಎಸ್ನಿಂದ ಟಿಕೆಟ್ ಪಡೆದು ಚುನಾವಣೆಯ ನಂತರ ಬೇರೆ ಪಕ್ಷಗಳಿಗೆ ಹೋಗಿಬಿಡುತ್ತಿದ್ದರು. ಆದ್ದರಿಂದ ಇದು ಆಗಬಾರದು ಎಂದು ಈ ಬಾರಿ ಪಕ್ಷದ ನಿಷ್ಠಾವಂತನಿಗೆ ಟಿಕೆಟ್ ಕೊಡಬೇಕು ಎಂದು ಭಾವಿಸಿದ್ದೆ ಹಾಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕೃಷ್ಣಮೂರ್ತಿಗೆ ಟಿಕೆಟ್ ನೀಡಲಾಗಿದೆ” ಎಂದು ಹೇಳಿದರು.
ಚುನಾವಣೆಯಲ್ಲಿ ವೈಯಕ್ತಿವಾಗಿ ಮಾತನಾಡುವುದು ಅನವಶ್ಯಕ, ಅದರಿಂದ ಏನೂ ಉಪಯೋಗವಿಲ್ಲ. ನಮ್ಮ ಪಕ್ಷದ ಸಾಧನೆಗಳು, ಕಾಂಗ್ರೆಸ್ ಬಿಜೆಪಿ ವೈಫಲ್ಯಗಳ ಬಗ್ಗೆ ಚರ್ಚೆ ನಡೆಯಬೇಕು ಎಂದ ಅವರು, “ಕೆಜೆ ಹಳ್ಳಿ ಡಿಜೆ ಹಳ್ಳಿ ಅಶಾಂತಿಗೆ ಕಾಂಗ್ರೆಸ್ ನಾಯಕರೆ ಕಾರಣ. ಅವರ ಪಕ್ಷದ ಶಾಸಕರ ಮನೆಗೆ ಬೆಂಕಿ ಇಟ್ಟು, ಜೀವಹಾನಿ ಮಾಡಲು ಹೊರಟ ಕಾಂಗ್ರೆಸ್ ನಾಯಕರು, ಬೆಂಗಳೂರನ್ನು ರಕ್ಷಣೆ ಮಾಡುತ್ತೇವೆ ಎಂದು ಯಾವ ಮುಖವಿಟ್ಟುಕೊಂಡು ಮತ ಕೇಳುತ್ತಾರೆ” ಎಂದು ಹೇಳಿದರು.
ನಂತರ ಬಿಜೆಪಿ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಮಳೆಯಿಂದಾಗಿ ಬೆಂಗಳೂರಿನ ಹಲವಾರು ಬಡಾವಣೆಗಳು ಜಲಾವೃತವಾದವು, ಆಡಳಿತ ಪಕ್ಷ ಬಿಜೆಪಿ ಯಾರಿಗೂ ಪರಿಹಾರ ನೀಡಿಲ್ಲ. ಕೊರೊನಾ ಸಮಯದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ, ಹಲವಾರು ಉತ್ತಮವಾದ ಸಲಹೆಗಳನ್ನು ಕೊಟ್ಟರೂ, ಕೊರೊನಾ ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡಿದೆ ಎಂದು ಜನರು ನೋಡುತ್ತಿದ್ದಾರೆ” ಎಂದು ಅವರು ಹೇಳಿದರು.
ರಾಜರಾಜೇಶ್ವರಿ ನಗರದಲ್ಲಿ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದ್ದು, ನ. 10 ಕ್ಕೆ ಫಲಿತಾಂಶ ಬರಲಿದೆ.
ಇದನ್ನೂ ಓದಿ: ಡಿಜೆ ಹಳ್ಳಿ, ಶೃಂಗೇರಿ: ವೃತ್ತಿನಿಷ್ಠೆಯಿಲ್ಲದ ಮಾಧ್ಯಮಗಳು ಯಾವ ಹುನ್ನಾರದಲ್ಲಿ ಭಾಗಿಯಾಗುತ್ತಿವೆ?