Homeಮುಖಪುಟಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

ಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

- Advertisement -
- Advertisement -

| ಬಿ. ಚಂದ್ರೇಗೌಡ |

ಮರಿ ಹಾಕಿದ್ದ ಬೆಕ್ಕಿನಂತೆ ಓಡಾಡುತ್ತಿದ್ದ ಶಾಮಣ್ಣನವರಲ್ಲಿ ಲವಲವಿಕೆ ಸ್ವಲ್ಪ ತಗ್ಗಿದೆ. ಆದ್ದರಿಂದ ಶ್ರೀದೇವಕ್ಕನವರು ಶಾಮಣ್ಣನವರ ಬಗ್ಗೆ ಹಿಂದಿಗಿಂತ ಹೆಚ್ಚು ಕಾಳಜಿವಹಿಸಿ ಯಾವುದೇ ಸಭೆ ಸಮಾರಂಭಕ್ಕೆ ಜೊತೆಯಲ್ಲೇ ಬಂದು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ದಿನಾಂಕ 14ರಂದು ನಡೆದ ಶಿವಮೊಗ್ಗದ ಕೊಡುಗೈದಾನಿ ಇಬ್ರಾಹಿಂ ಸಾಹೇಬರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಕ್ಕೆ ಶಾಮಣ್ಣ ಶ್ರೀದೇವಕ್ಕ ಜೊತೆಯಾಗೆ ಬಂದಿದ್ದರು. ಇಬ್ರಾಹಿಂ ಸಾಹೇಬರು ಕನ್ನಡದ ಸಾಂಸ್ಕøತಿಕ ಲೋಕದಲ್ಲಿ ಅಚ್ಚಳಿಯದ ನೆನಪನ್ನ ಬಿಟ್ಟು ಹೋಗಿದ್ದಾರೆ. 1992ರಲ್ಲಿ ಬೆಂಗಳೂರಲ್ಲಿ ನಡೆದ ಲಂಕೇಶ್-ಕಂಬಾರ, ಗಿರೀಶ್ ಕಾರ್ನಾಡರ ನಾಟಕೋತ್ಸವಕ್ಕೆ ಧನಸಹಾಯ ಮಾಡಿದವರು ಇಬ್ರಾಹಿಂ ಸಾಹೇಬರು. ಅಷ್ಟೇ ಅಲ್ಲ ಶಿವಮೊಗ್ಗದ ಅವರ ಮನೆ ಆವರಣ ಯಾಚಕರಿಂದ ತುಂಬಿರುತ್ತಿತ್ತು.

ಮದುವೆ, ಮುಂಜಿ, ದೇವಸ್ಥಾನಕ್ಕೆ ಬಣ್ಣ, ಗಣಪತಿ ಹಬ್ಬದ ಖರ್ಚು ಇದಲ್ಲದೆ ಪುಸ್ತಕ ಪ್ರಕಟಿಸುವ ಸಾಹಿತಿಗಳು, ರಾಜಕಾರಣಿ ನಾನಾ ತರದ ಸಂಸ್ಕøತಿಯವರು ಇಬ್ರಾಹಿಂ ಸಾಹೇಬರನ್ನು ಹೀರಿ ಬಿಸಾಡಿದರು. ಇವರ ಹೊಡೆತ ತಾಳಲಾರದೆ ತೀರ್ಥಹಳ್ಳಿಗೆ ಹೋಗಿ ನೆಲೆಸಿದರು. ಯಾಚಕರು ಅಲ್ಲಿಗೂ ದಾಳಿಯಿಟ್ಟರು. ಅಲ್ಲಿಂದ ಅವರು ತಮ್ಮ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಹಿರೇಹಾಳಕ್ಕೆ ಹೋಗಿ ನೆಲೆಸಿದರು. ಅಲ್ಲಿ ಈ ಕೊಡುಗೈ ಕರ್ಣ ದಾನಮಾಡದ ಸ್ಥಿತಿಗೆ ಬಂದಿದ್ದರು. ಆದರೇನು ಇಬ್ರಾಹಿಂ ಸಾಹೇಬರ ಮನೆಗೆ ಹೋದವರು ಬರಿಗೈಲಿ ಹೋಗುವುದು ಅವರಿಗೇ ಅವಮಾನವೆಂದು ಭಾವಿಸಿ ಸಾಲಮಾಡಿ ದಾನ ಮಾಡತೊಡಗಿದರು. ಇಂತಹ ದಾನಶೂರ ಕರ್ಣನ ನೆನಪಿನ ಸಭೆಗೆ ಮೂವತ್ತು ಜನ ಬಂದರು. ಮನುಷ್ಯರು ಉಪಕಾರ ಸ್ಮರಣೆಯಿಲ್ಲದ ನೀಚರೆಂದು ಲಂಕೇಶ್ ಹೇಳಿದ್ದರು. ಆದರೆ ಇಬ್ರಾಹಿಂ ಸಾಹೇಬರು ಅದರ ಅರಿವಿದ್ದೂ ನಗುತ್ತಲೇ ಸಹಾಯ ಮಾಡಿದರು, ಮಾಡುತ್ತಲೇ ಹೊರಟುಹೋದರು.

ಈ ಸಮಯದಲ್ಲಿ ಕಡಿದಾಳು ಶಾಮಣ್ಣನವರು ಕುತೂಹಲ ಸಂಗತಿಯೊಂದನ್ನ ಹೇಳಿದರು. ಜೆ.ಹೆಚ್.ಪಟೇಲರು ಹಂಪಿ ಯೂನಿವರ್ಸಿಟಿಗೆ ಇಬ್ರಾಹಿಂ ಸಾಹೇಬರು ಮತ್ತು ಕಡಿದಾಳು ಶಾಮಣ್ಣನವರನ್ನ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದರು. ಸತತ ನಾಲ್ಕು ವರ್ಷಗಳ ಕಾಲ ಒಂದು ಸಭೆಗೂ ತಪ್ಪಿಸದಂತೆ ಇಬ್ರಾಹಿಂ ಸಾಹೇಬರು ಶಾಮಣ್ಣನವರನ್ನ ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಶಾಮಣ್ಣ ಸಂಗೀತ ಪ್ರೇಮಿಯೆಂದು ಗೊತ್ತಿದ್ದ ಇಬ್ರಾಹಿಂ ಸಾಹೇಬರು ತಮ್ಮ ಕಾರಿನಲ್ಲಿ ಸಂಗೀತದ ಸೀಡಿಗಳನ್ನು ತುಂಬಿಕೊಂಡು. ಅಲ್ಲದೆ ರಾಗಗಳ ಪರಿಚಯವನ್ನ ಮಾಡಿಸಿದರಂತೆ. ನಾಲ್ಕು ವರ್ಷದ ಹಂಪಿ ಪ್ರಯಾಣ ಅದೊಂದು ಸಂಗೀತದ ರಸದೌತಣದ ಪ್ರಯಾಣವಾಗಿತ್ತಂತೆ. ಮರುದಿನ ಶಾಮಣ್ಣನವರ ಸಹೋದರ ಗೋಪಾಲ್ ಮನೆಯಲ್ಲಿ ಸಿಕ್ಕ ಶಾಮಣ್ಣ ಹಿಂದಿನ ದಿನವನ್ನು ಮುಂದುವರಿಸಿದರು.

ಹಾಗೆ ನೋಡಿದರೆ ಶಾಮಣ್ಣನವರ ಬದುಕಿನಲ್ಲಿ ಸಂಗೀತ ಅಧಿಕೃತವಾಗಿ ಪ್ರವೇಶ ಪಡೆದದ್ದು ಮೈಸೂರಲ್ಲಿ ನಡೆದ ರವಿಶಂಕರ್ ಸಿತಾರ್ ಮತ್ತು ಅಲಿ ಅಕ್ಬರ್ ಖಾನ್‍ರವರ ಜುಗಲ್‍ಬಂದಿ ಕಾರ್ಯಕ್ರಮ ಕೇಳಿದ ನಂತರ. ಅದೇ ದಿನ ರಾಜೀವ ತಾರಾನಾಥ್ ಕೂಡ ಆ ಕಛೇರಿ ಕೇಳಿ ಸಂಗೀತದ ಭಾವಸಮಾದಿಗೆ ಒಳಗಾಗಿ ಜೊತೆಯಲ್ಲಿ ಬಂದವರನ್ನ ಮರೆತದ್ದು ಮತ್ತು ನಂತರ ಸರೋದ್ ಮಾಂತ್ರಿಕನಾದ ಆಲಿ ಅಕ್ಬರ್ ಖಾನ್ ಹುಡುಕುತ್ತ ಬಾಂಬೆಗೆ ಹೋದದ್ದು. ಆಶ್ಚರ್ಯವೆಂದರೆ ಶಾಮಣ್ಣನವರೂ ಹೋಗಿಬಿಟ್ಟರು. ಅದಾಗಲೇ ಸರೋದ್ ಮತ್ತು ಸಿತಾರ್‍ನ ನಾದಮೋಹದೊಳಗೆ ಸಿಲುಕಿದ ತೇಜಸ್ವಿಯವರು ನಾನು ಸಿತಾರ್ ಕಲಿಯುತ್ತೇನೆ, ನೀವು ಸರೋದ್ ಕಲಿಯಿರೆಂದು ಶಾಮಣ್ಣನವರಿಗೆ ಹೇಳಿದ್ದು ಕಾರಣವಾಗಿ ಶಾಮಣ್ಣ ಬಾಂಬೆಗೆ ಹೋದರು. ಅಲ್ಲಿಗೋಗಿ ನೋಡಿದರೆ ಚಿಕ್ಕಮನೆಯೊಂದರಲ್ಲಿ ಮಧ್ಯೆ ಒಂದು ಗೋಡೆ. ಆ ಕಡೆ ಅಡಿಗೆ ಮನೆ ಈ ಕಡೆ ಪುಟ್ಟ ಹಾಲು. ಅದಕ್ಕೆ ಅಟ್ಯಾಚ್ ಆದಂತೆ ಟಾಯ್ಲೆಟ್. ಆ ಮನೆಯಲ್ಲಿ ಆಲಿ ಅಕ್ಬರ್ ಖಾನ್‍ರವರಿಂದ ಸಂಗೀತ ಹೇಳಿಸಿಕೊಳ್ಳಲು ಹುಡುಗರು ಬರುತ್ತಿದ್ದರು. ಅವರೆಲ್ಲಾ ಹೊರಟುಹೋದರೆ ಶಾಮಣ್ಣ ಅಲ್ಲೇ ಉಳಿಯುತ್ತಿದ್ದರು. ತಮ್ಮ ಜಾತಿಯವನಲ್ಲ, ಕಳ್ಳುಬಳ್ಳಿಯವನೂ ಅಲ್ಲದ ಹುಡುಗ ಸಂಗೀತದ ಬೆನ್ನು ಹತ್ತಿ ಬಂದಿದ್ದಾನೆ, ಸರಿಯಾಗಿ ಭಾಷೆಯೂ ಬರುತ್ತಿಲ್ಲ. ಅಂತಹ ಶಾಮಣ್ಣನನ್ನ ತಮಗೇ ಮಲಗಲು ಜಾಗವಿಲ್ಲದ ಮನೆಯಲ್ಲಿ ಆಶ್ರಯ ಕೊಟ್ಟು ಸರೋದ್ ಹೇಳಿಕೊಟ್ಟ ಆಲಿ ಅಕ್ಬರ್‍ಖಾನ್ ಮತ್ತು ಅವರ ಶ್ರೀಮತಿಯವರ ಉದಾತ್ತ ನಡವಳಿಕೆ ನೆನಸಿಕೊಂಡರೆ ಈ ಭರತ ಖಂಡದಲ್ಲಿ ಎಂತೆಂತಹ ಮೇಧಾವಿಗಳು ಆಗಿಹೋದರು ಅನ್ನಿಸುತ್ತದೆ. ಸುದೈವಕ್ಕೆ ಆಲಿ ಅಕ್ಬರ್‍ಖಾನ್‍ರಿಗೆ ಎರಡು ಗಂಡುಮಕ್ಕಳಿದ್ದು, ಅವು ಶಾಮಣ್ಣನವರಿಗೆ ಅಂಟಿಕೊಂಡವು. ಶಾಮಣ್ಣನವರಿಗೆ ಡ್ರೈವಿಂಗ್ ಬರುತ್ತಿದ್ದುದು ಅನುಕೂಲವಾಗಿತ್ತು. ಆಗಾಗ್ಗೆ ರವಿಶಂಕರ್ ಮತ್ತು ಅವರ ಶ್ರೀಮತಿ ಅನ್ನಪೂರ್ಣದೇವಿಯವರನ್ನ ಅವರ ಮನೆಗೆ ತಲುಪಿಸಲು, ಕರೆದುಕೊಂಡು ಬರಲು ಶಾಮಣ್ಣ ಬೇಕಾಗಿತ್ತು. ಅಲ್ಲಾವುದ್ದೀನ್ ಖಾನ್, ಅಲಿ ಅಕ್ಬರ್ ಖಾನರ ತಂದೆ. ತಮ್ಮ ಮಗಳಿಗೆ ಅನ್ನಪೂರ್ಣ ಎಂದು ಹೆಸರಿಟ್ಟು ರವಿಶಂಕರ್‍ಗೆ ಮದುವೆ ಮಾಡಿಕೊಟ್ಟಿದ್ದರು. ಹಾಗೇ ತಮ್ಮ ಮಗ ಅಲಿ ಅಕ್ಬರ್ ಖಾನ್ ಹಿಂದೂ ಹುಡುಗಿಯನ್ನ ಮದುವೆಯಾಗಿದ್ದರು. ಇವರನ್ನೆಲ್ಲಾ ಬಂಧಿಸಿದ್ದು ಸಂಗೀತ. ಹಾಗೆನೋಡಿದರೆ ಈ ಸಂಗೀತ ಲೋಕದಲ್ಲಿ ಮುಳುಗಿದವರಿಗೆ ದೇಶ, ಅದರ ಆಡಳಿತ, ಪ್ರಧಾನಮಂತ್ರಿ, ದೇಶದ ಆಗುಹೋಗು ಇದಾವುದು ಅರಿವಿಗೇ ಬರುವುದಿಲ್ಲ.

ಅಲಿ ಅಕ್ಬರ್ ಖಾನ್ ಸಂಗೀತ ಕಛೇರಿಗೆ ಬಂದರೆ ತಮ್ಮ ಸರೋದ್ ಬಿಟ್ಟು ಇನ್ನೇನೂ ನೋಡುತ್ತಿರಲಿಲ್ಲ. ಬೇರೆ ಮಾತೇ ಆಡದ ಅವರು ಅಗತ್ಯವಿದ್ದಷ್ಟು ಮಾತನಾಡಿ ಒಂದಿಷ್ಟು ಸರೋದ್ ಕಲಿಸಿದರಂತೆ. ಆ ನಂತರ ಅಮೆರಿಕದ ಯೂನಿವರ್ಸಿಟಿಯೊಂದಕ್ಕೆ ಇಂಡಿಯನ್ ಮ್ಯೂಜಿಕ್ ಶಾಖೆಯ ನಿರ್ದೇಶಕರಾಗಿ ಹೊರಟು ಹೋದರು. ಇತ್ತ ಅವರ ಶ್ರೀಮತಿಯವರು ಶಾಮಣ್ಣನವರಿಗೆ ಗುರುಪತ್ನಿಯ ಕಾಣಿಕೆಯಾಗಿ ಎರಡು ಜೊತೆ ಜುಬ್ಬ ಪೈಜಾಮ್ ಹೊಲಿಸಿಕೊಟ್ಟು ನಮ್ಮ ನೆನಪಾಗಿ ಇರಲಿ ಎಂದು ಹೇಳಿ ಊರು ತಲುಪುವಷ್ಟು ಗಾಡಿ ಚಾರ್ಜು ಕೊಟ್ಟು ಕಳಿಸಿದ್ದರು. ಅವರು ಕೊಟ್ಟ ಜುಬ್ಬ ಇನ್ನೂ ಇದೆ ಎಂದು ತಣ್ಣಗೆ ಹೇಳಿದ ಶಾಮಣ್ಣನವರ ಕಣ್ಣು ತೇವವಾದಂತೆ ಕಾಣಿಸಿದವು. ಇಂತಹ ಅನುಭವದ ಮತ್ತು ಶ್ರೀಮಂತಿಕೆಯ ನೆನಪುಗಳನ್ನು ಹೊಂದಿರುವ ಶಾಮಣ್ಣನವರ ಮೇಲೆ ಮೂರು ಪುಸ್ತಕ, ಒಂದು ನಾಟಕ ಬಂದಿದ್ದರೂ ಅವರ ಪಕ್ಕ ಕುಳಿತು ಆಲಿಸಿದರೆ ಇನ್ನಷ್ಟು ಅಪೂರ್ಣ ನೆನಪುಗಳು ಅನಾವರಣಗೊಳ್ಳಬಹುದು. ನ್ಯಾಯಪಥ ಪತ್ರಿಕೆಗೆ ಎರಡು ವರ್ಷದ ಚಂದಾ ಹಣದ ಚೆಕ್ಕನ್ನು ಶ್ರೀದೇವಕ್ಕ ಕೈಗಿತ್ತಾಗ ಶಾಮಣ್ಣ ಮತ್ತು ನಾನು ವಾಸ್ತವಕ್ಕಿಳಿದೆವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...