Homeಮುಖಪುಟಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

ಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

- Advertisement -
- Advertisement -

| ಬಿ. ಚಂದ್ರೇಗೌಡ |

ಮರಿ ಹಾಕಿದ್ದ ಬೆಕ್ಕಿನಂತೆ ಓಡಾಡುತ್ತಿದ್ದ ಶಾಮಣ್ಣನವರಲ್ಲಿ ಲವಲವಿಕೆ ಸ್ವಲ್ಪ ತಗ್ಗಿದೆ. ಆದ್ದರಿಂದ ಶ್ರೀದೇವಕ್ಕನವರು ಶಾಮಣ್ಣನವರ ಬಗ್ಗೆ ಹಿಂದಿಗಿಂತ ಹೆಚ್ಚು ಕಾಳಜಿವಹಿಸಿ ಯಾವುದೇ ಸಭೆ ಸಮಾರಂಭಕ್ಕೆ ಜೊತೆಯಲ್ಲೇ ಬಂದು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ದಿನಾಂಕ 14ರಂದು ನಡೆದ ಶಿವಮೊಗ್ಗದ ಕೊಡುಗೈದಾನಿ ಇಬ್ರಾಹಿಂ ಸಾಹೇಬರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಕ್ಕೆ ಶಾಮಣ್ಣ ಶ್ರೀದೇವಕ್ಕ ಜೊತೆಯಾಗೆ ಬಂದಿದ್ದರು. ಇಬ್ರಾಹಿಂ ಸಾಹೇಬರು ಕನ್ನಡದ ಸಾಂಸ್ಕøತಿಕ ಲೋಕದಲ್ಲಿ ಅಚ್ಚಳಿಯದ ನೆನಪನ್ನ ಬಿಟ್ಟು ಹೋಗಿದ್ದಾರೆ. 1992ರಲ್ಲಿ ಬೆಂಗಳೂರಲ್ಲಿ ನಡೆದ ಲಂಕೇಶ್-ಕಂಬಾರ, ಗಿರೀಶ್ ಕಾರ್ನಾಡರ ನಾಟಕೋತ್ಸವಕ್ಕೆ ಧನಸಹಾಯ ಮಾಡಿದವರು ಇಬ್ರಾಹಿಂ ಸಾಹೇಬರು. ಅಷ್ಟೇ ಅಲ್ಲ ಶಿವಮೊಗ್ಗದ ಅವರ ಮನೆ ಆವರಣ ಯಾಚಕರಿಂದ ತುಂಬಿರುತ್ತಿತ್ತು.

ಮದುವೆ, ಮುಂಜಿ, ದೇವಸ್ಥಾನಕ್ಕೆ ಬಣ್ಣ, ಗಣಪತಿ ಹಬ್ಬದ ಖರ್ಚು ಇದಲ್ಲದೆ ಪುಸ್ತಕ ಪ್ರಕಟಿಸುವ ಸಾಹಿತಿಗಳು, ರಾಜಕಾರಣಿ ನಾನಾ ತರದ ಸಂಸ್ಕøತಿಯವರು ಇಬ್ರಾಹಿಂ ಸಾಹೇಬರನ್ನು ಹೀರಿ ಬಿಸಾಡಿದರು. ಇವರ ಹೊಡೆತ ತಾಳಲಾರದೆ ತೀರ್ಥಹಳ್ಳಿಗೆ ಹೋಗಿ ನೆಲೆಸಿದರು. ಯಾಚಕರು ಅಲ್ಲಿಗೂ ದಾಳಿಯಿಟ್ಟರು. ಅಲ್ಲಿಂದ ಅವರು ತಮ್ಮ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಹಿರೇಹಾಳಕ್ಕೆ ಹೋಗಿ ನೆಲೆಸಿದರು. ಅಲ್ಲಿ ಈ ಕೊಡುಗೈ ಕರ್ಣ ದಾನಮಾಡದ ಸ್ಥಿತಿಗೆ ಬಂದಿದ್ದರು. ಆದರೇನು ಇಬ್ರಾಹಿಂ ಸಾಹೇಬರ ಮನೆಗೆ ಹೋದವರು ಬರಿಗೈಲಿ ಹೋಗುವುದು ಅವರಿಗೇ ಅವಮಾನವೆಂದು ಭಾವಿಸಿ ಸಾಲಮಾಡಿ ದಾನ ಮಾಡತೊಡಗಿದರು. ಇಂತಹ ದಾನಶೂರ ಕರ್ಣನ ನೆನಪಿನ ಸಭೆಗೆ ಮೂವತ್ತು ಜನ ಬಂದರು. ಮನುಷ್ಯರು ಉಪಕಾರ ಸ್ಮರಣೆಯಿಲ್ಲದ ನೀಚರೆಂದು ಲಂಕೇಶ್ ಹೇಳಿದ್ದರು. ಆದರೆ ಇಬ್ರಾಹಿಂ ಸಾಹೇಬರು ಅದರ ಅರಿವಿದ್ದೂ ನಗುತ್ತಲೇ ಸಹಾಯ ಮಾಡಿದರು, ಮಾಡುತ್ತಲೇ ಹೊರಟುಹೋದರು.

ಈ ಸಮಯದಲ್ಲಿ ಕಡಿದಾಳು ಶಾಮಣ್ಣನವರು ಕುತೂಹಲ ಸಂಗತಿಯೊಂದನ್ನ ಹೇಳಿದರು. ಜೆ.ಹೆಚ್.ಪಟೇಲರು ಹಂಪಿ ಯೂನಿವರ್ಸಿಟಿಗೆ ಇಬ್ರಾಹಿಂ ಸಾಹೇಬರು ಮತ್ತು ಕಡಿದಾಳು ಶಾಮಣ್ಣನವರನ್ನ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದರು. ಸತತ ನಾಲ್ಕು ವರ್ಷಗಳ ಕಾಲ ಒಂದು ಸಭೆಗೂ ತಪ್ಪಿಸದಂತೆ ಇಬ್ರಾಹಿಂ ಸಾಹೇಬರು ಶಾಮಣ್ಣನವರನ್ನ ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಶಾಮಣ್ಣ ಸಂಗೀತ ಪ್ರೇಮಿಯೆಂದು ಗೊತ್ತಿದ್ದ ಇಬ್ರಾಹಿಂ ಸಾಹೇಬರು ತಮ್ಮ ಕಾರಿನಲ್ಲಿ ಸಂಗೀತದ ಸೀಡಿಗಳನ್ನು ತುಂಬಿಕೊಂಡು. ಅಲ್ಲದೆ ರಾಗಗಳ ಪರಿಚಯವನ್ನ ಮಾಡಿಸಿದರಂತೆ. ನಾಲ್ಕು ವರ್ಷದ ಹಂಪಿ ಪ್ರಯಾಣ ಅದೊಂದು ಸಂಗೀತದ ರಸದೌತಣದ ಪ್ರಯಾಣವಾಗಿತ್ತಂತೆ. ಮರುದಿನ ಶಾಮಣ್ಣನವರ ಸಹೋದರ ಗೋಪಾಲ್ ಮನೆಯಲ್ಲಿ ಸಿಕ್ಕ ಶಾಮಣ್ಣ ಹಿಂದಿನ ದಿನವನ್ನು ಮುಂದುವರಿಸಿದರು.

ಹಾಗೆ ನೋಡಿದರೆ ಶಾಮಣ್ಣನವರ ಬದುಕಿನಲ್ಲಿ ಸಂಗೀತ ಅಧಿಕೃತವಾಗಿ ಪ್ರವೇಶ ಪಡೆದದ್ದು ಮೈಸೂರಲ್ಲಿ ನಡೆದ ರವಿಶಂಕರ್ ಸಿತಾರ್ ಮತ್ತು ಅಲಿ ಅಕ್ಬರ್ ಖಾನ್‍ರವರ ಜುಗಲ್‍ಬಂದಿ ಕಾರ್ಯಕ್ರಮ ಕೇಳಿದ ನಂತರ. ಅದೇ ದಿನ ರಾಜೀವ ತಾರಾನಾಥ್ ಕೂಡ ಆ ಕಛೇರಿ ಕೇಳಿ ಸಂಗೀತದ ಭಾವಸಮಾದಿಗೆ ಒಳಗಾಗಿ ಜೊತೆಯಲ್ಲಿ ಬಂದವರನ್ನ ಮರೆತದ್ದು ಮತ್ತು ನಂತರ ಸರೋದ್ ಮಾಂತ್ರಿಕನಾದ ಆಲಿ ಅಕ್ಬರ್ ಖಾನ್ ಹುಡುಕುತ್ತ ಬಾಂಬೆಗೆ ಹೋದದ್ದು. ಆಶ್ಚರ್ಯವೆಂದರೆ ಶಾಮಣ್ಣನವರೂ ಹೋಗಿಬಿಟ್ಟರು. ಅದಾಗಲೇ ಸರೋದ್ ಮತ್ತು ಸಿತಾರ್‍ನ ನಾದಮೋಹದೊಳಗೆ ಸಿಲುಕಿದ ತೇಜಸ್ವಿಯವರು ನಾನು ಸಿತಾರ್ ಕಲಿಯುತ್ತೇನೆ, ನೀವು ಸರೋದ್ ಕಲಿಯಿರೆಂದು ಶಾಮಣ್ಣನವರಿಗೆ ಹೇಳಿದ್ದು ಕಾರಣವಾಗಿ ಶಾಮಣ್ಣ ಬಾಂಬೆಗೆ ಹೋದರು. ಅಲ್ಲಿಗೋಗಿ ನೋಡಿದರೆ ಚಿಕ್ಕಮನೆಯೊಂದರಲ್ಲಿ ಮಧ್ಯೆ ಒಂದು ಗೋಡೆ. ಆ ಕಡೆ ಅಡಿಗೆ ಮನೆ ಈ ಕಡೆ ಪುಟ್ಟ ಹಾಲು. ಅದಕ್ಕೆ ಅಟ್ಯಾಚ್ ಆದಂತೆ ಟಾಯ್ಲೆಟ್. ಆ ಮನೆಯಲ್ಲಿ ಆಲಿ ಅಕ್ಬರ್ ಖಾನ್‍ರವರಿಂದ ಸಂಗೀತ ಹೇಳಿಸಿಕೊಳ್ಳಲು ಹುಡುಗರು ಬರುತ್ತಿದ್ದರು. ಅವರೆಲ್ಲಾ ಹೊರಟುಹೋದರೆ ಶಾಮಣ್ಣ ಅಲ್ಲೇ ಉಳಿಯುತ್ತಿದ್ದರು. ತಮ್ಮ ಜಾತಿಯವನಲ್ಲ, ಕಳ್ಳುಬಳ್ಳಿಯವನೂ ಅಲ್ಲದ ಹುಡುಗ ಸಂಗೀತದ ಬೆನ್ನು ಹತ್ತಿ ಬಂದಿದ್ದಾನೆ, ಸರಿಯಾಗಿ ಭಾಷೆಯೂ ಬರುತ್ತಿಲ್ಲ. ಅಂತಹ ಶಾಮಣ್ಣನನ್ನ ತಮಗೇ ಮಲಗಲು ಜಾಗವಿಲ್ಲದ ಮನೆಯಲ್ಲಿ ಆಶ್ರಯ ಕೊಟ್ಟು ಸರೋದ್ ಹೇಳಿಕೊಟ್ಟ ಆಲಿ ಅಕ್ಬರ್‍ಖಾನ್ ಮತ್ತು ಅವರ ಶ್ರೀಮತಿಯವರ ಉದಾತ್ತ ನಡವಳಿಕೆ ನೆನಸಿಕೊಂಡರೆ ಈ ಭರತ ಖಂಡದಲ್ಲಿ ಎಂತೆಂತಹ ಮೇಧಾವಿಗಳು ಆಗಿಹೋದರು ಅನ್ನಿಸುತ್ತದೆ. ಸುದೈವಕ್ಕೆ ಆಲಿ ಅಕ್ಬರ್‍ಖಾನ್‍ರಿಗೆ ಎರಡು ಗಂಡುಮಕ್ಕಳಿದ್ದು, ಅವು ಶಾಮಣ್ಣನವರಿಗೆ ಅಂಟಿಕೊಂಡವು. ಶಾಮಣ್ಣನವರಿಗೆ ಡ್ರೈವಿಂಗ್ ಬರುತ್ತಿದ್ದುದು ಅನುಕೂಲವಾಗಿತ್ತು. ಆಗಾಗ್ಗೆ ರವಿಶಂಕರ್ ಮತ್ತು ಅವರ ಶ್ರೀಮತಿ ಅನ್ನಪೂರ್ಣದೇವಿಯವರನ್ನ ಅವರ ಮನೆಗೆ ತಲುಪಿಸಲು, ಕರೆದುಕೊಂಡು ಬರಲು ಶಾಮಣ್ಣ ಬೇಕಾಗಿತ್ತು. ಅಲ್ಲಾವುದ್ದೀನ್ ಖಾನ್, ಅಲಿ ಅಕ್ಬರ್ ಖಾನರ ತಂದೆ. ತಮ್ಮ ಮಗಳಿಗೆ ಅನ್ನಪೂರ್ಣ ಎಂದು ಹೆಸರಿಟ್ಟು ರವಿಶಂಕರ್‍ಗೆ ಮದುವೆ ಮಾಡಿಕೊಟ್ಟಿದ್ದರು. ಹಾಗೇ ತಮ್ಮ ಮಗ ಅಲಿ ಅಕ್ಬರ್ ಖಾನ್ ಹಿಂದೂ ಹುಡುಗಿಯನ್ನ ಮದುವೆಯಾಗಿದ್ದರು. ಇವರನ್ನೆಲ್ಲಾ ಬಂಧಿಸಿದ್ದು ಸಂಗೀತ. ಹಾಗೆನೋಡಿದರೆ ಈ ಸಂಗೀತ ಲೋಕದಲ್ಲಿ ಮುಳುಗಿದವರಿಗೆ ದೇಶ, ಅದರ ಆಡಳಿತ, ಪ್ರಧಾನಮಂತ್ರಿ, ದೇಶದ ಆಗುಹೋಗು ಇದಾವುದು ಅರಿವಿಗೇ ಬರುವುದಿಲ್ಲ.

ಅಲಿ ಅಕ್ಬರ್ ಖಾನ್ ಸಂಗೀತ ಕಛೇರಿಗೆ ಬಂದರೆ ತಮ್ಮ ಸರೋದ್ ಬಿಟ್ಟು ಇನ್ನೇನೂ ನೋಡುತ್ತಿರಲಿಲ್ಲ. ಬೇರೆ ಮಾತೇ ಆಡದ ಅವರು ಅಗತ್ಯವಿದ್ದಷ್ಟು ಮಾತನಾಡಿ ಒಂದಿಷ್ಟು ಸರೋದ್ ಕಲಿಸಿದರಂತೆ. ಆ ನಂತರ ಅಮೆರಿಕದ ಯೂನಿವರ್ಸಿಟಿಯೊಂದಕ್ಕೆ ಇಂಡಿಯನ್ ಮ್ಯೂಜಿಕ್ ಶಾಖೆಯ ನಿರ್ದೇಶಕರಾಗಿ ಹೊರಟು ಹೋದರು. ಇತ್ತ ಅವರ ಶ್ರೀಮತಿಯವರು ಶಾಮಣ್ಣನವರಿಗೆ ಗುರುಪತ್ನಿಯ ಕಾಣಿಕೆಯಾಗಿ ಎರಡು ಜೊತೆ ಜುಬ್ಬ ಪೈಜಾಮ್ ಹೊಲಿಸಿಕೊಟ್ಟು ನಮ್ಮ ನೆನಪಾಗಿ ಇರಲಿ ಎಂದು ಹೇಳಿ ಊರು ತಲುಪುವಷ್ಟು ಗಾಡಿ ಚಾರ್ಜು ಕೊಟ್ಟು ಕಳಿಸಿದ್ದರು. ಅವರು ಕೊಟ್ಟ ಜುಬ್ಬ ಇನ್ನೂ ಇದೆ ಎಂದು ತಣ್ಣಗೆ ಹೇಳಿದ ಶಾಮಣ್ಣನವರ ಕಣ್ಣು ತೇವವಾದಂತೆ ಕಾಣಿಸಿದವು. ಇಂತಹ ಅನುಭವದ ಮತ್ತು ಶ್ರೀಮಂತಿಕೆಯ ನೆನಪುಗಳನ್ನು ಹೊಂದಿರುವ ಶಾಮಣ್ಣನವರ ಮೇಲೆ ಮೂರು ಪುಸ್ತಕ, ಒಂದು ನಾಟಕ ಬಂದಿದ್ದರೂ ಅವರ ಪಕ್ಕ ಕುಳಿತು ಆಲಿಸಿದರೆ ಇನ್ನಷ್ಟು ಅಪೂರ್ಣ ನೆನಪುಗಳು ಅನಾವರಣಗೊಳ್ಳಬಹುದು. ನ್ಯಾಯಪಥ ಪತ್ರಿಕೆಗೆ ಎರಡು ವರ್ಷದ ಚಂದಾ ಹಣದ ಚೆಕ್ಕನ್ನು ಶ್ರೀದೇವಕ್ಕ ಕೈಗಿತ್ತಾಗ ಶಾಮಣ್ಣ ಮತ್ತು ನಾನು ವಾಸ್ತವಕ್ಕಿಳಿದೆವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...