Homeಅಂಕಣಗಳುನೀರನಡೆ | ಹುಡುಕಬೇಕಾದ ಹೊಸ ಹಾದಿ

ನೀರನಡೆ | ಹುಡುಕಬೇಕಾದ ಹೊಸ ಹಾದಿ

- Advertisement -
- Advertisement -

ಡಾ. ವಿನಯಾ ಒಕ್ಕುಂದ |

ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಚರಿತ್ರೆಯ ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ಕರ್ನಾಟಕದ ಪ್ರಜ್ಞಾವಂತ ಸಮುದಾಯ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿತೇ? ಎಂಬ ಪ್ರಶ್ನೆ ಉಳಿಯಿತು. ಕನ್ನಡದ ಸಂಸ್ಕೃತಿ ಚಿಂತಕರಾಗಿದ್ದ ಡಿ.ಆರ್.ನಾಗರಾಜ ಹೇಳುತ್ತಾರೆ. “ಜನರಿಗೆ ಮಹಾ ಪ್ರಾಯೋಗಿಕವಾದ ನೈತಿಕ ಕ್ರಿಯಾಶೀಲತೆ ಅಂತಿಮವಾಗಿ ಇದ್ದೇ ಇರುತ್ತದೆ. ಆದರೆ ಜನರು ಅನೈತಿಕ ಭ್ರಷ್ಟತೆಗಳ ರಂಜಕ ಬೆಂಬಲಿಗರೂ ಆಗಬಲ್ಲರು. ಅಂಥ ಸ್ಥಿತಿಯಲ್ಲಿ ಜನರಿಗೆ ಕೊಲೆ ದರೋಡೆ ಪಾತಕತನಗಳೆಲ್ಲವೂ ಮನರಂಜನೆಗಳ ಹಾಗೆ ಕಾಣತೊಡಗುತ್ತದೆ.” ಈ ಮಾತು ಗಾಢವಾಗಿ ಕಲಕುತ್ತಿತ್ತು.

ಡಿ.ಆರ್.ನಾಗರಾಜ್

ಕಳೆದ ಐದು ವರ್ಷಗಳ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆತಂದ ಜನಪ್ರಿಯವಾದರೂ ಜನಪರವಾದ ಯೋಜನೆಗಳು ನೆನಪಾದವು. ಅಧಿಕಾರ ವಹಿಸಿಕೊಂಡ ತಕ್ಷಣ ಘೋಷಿಸಿದ ಅನ್ನಭಾಗ್ಯಯೋಜನೆ, ಹಸಿವು-ಮುಕ್ತ ಕರ್ನಾಟಕದÀ ಕನಸು… ಯಾರು ಎಷ್ಟೇ ವ್ಯಂಗ್ಯ ಮಾಡಿದರೂ, ಅಂತಹ ಯೋಜನೆಗಳಿಗೆ ಹಿಂದೇಟು ಹಾಕದಿರುವ ದೃಢನಿರ್ಧಾರವನ್ನು ಸರ್ಕಾರ ಮಾಡಿತ್ತು. ಯೋಜನೆಗಳ ಫಲಾನುಭವಿ ಸಮುದಾಯ ಖಂಡಿತ ತಮ್ಮ ಕೈ ಹಿಡಿಯುತ್ತದೆ ಎಂಬ ಒಂದಿಷ್ಟು ಅಹಂಕಾರ ಮತ್ತು ಆತ್ಮವಿಶ್ವಾಸಗಳಲ್ಲಿ ಸಿದ್ದರಾಮಯ್ಯ ಇದ್ದರು. ಫಲಿತಾಂಶ ನೋಡುವಾಗ, ಜನರ ಮೇಲಿಟ್ಟ ಈ ನಂಬಿಕೆ ಸುಳ್ಳಾಗಿರುವುದು ಕಾಣುತ್ತಿದೆ.

ಚುನಾವಣೆಯ ರಿಸಲ್ಟ್ ದಿನ ನಾನು ನಮ್ಮೂರಿನಲ್ಲಿದ್ದೆ. ಕಡಲತಡಿಯ ನಮ್ಮೂರಿನದು ಬೆಸೆದ ಬದುಕು. ಊರುಬಿಟ್ಟು ದೂರ ಇರುವ ವರ್ಷಕ್ಕೊಂದಾವರ್ತಿ ಕಾಣಿಸಿಕೊಳ್ಳುವ ಮಕ್ಕಳು ಯಾರ ಮನೆಗೇ ಬಂದರೂ ಊರು ಗಲಗಲ ಅನ್ನುತ್ತದೆ. ಅಂಬಿಗರ ಕೇರಿಯಿಂದ ಫಳಫಳ ಹೊಳೆವ ಮೀನಬುಟ್ಟಿ, ಹಾಲಕ್ಕಿ ಒಕ್ಕಲಿಗರ ಕೇರಿಯಿಂದ ದಣೇ ಆಗ ಕಿತ್ತು ನೀರಹೊಂಡದಲ್ಲದ್ದಿ ಬಂದ ತರಕಾರಿ ಬುಟ್ಟಿ. ಆ ಮನೆ ಅಂಗಳಕ್ಕಿಳಿದು ಬಿಡುತ್ತವೆ. ನಾವಿದ್ದ ಜಾಗೆ ಬಿಡುವಾಗ ಇವರ್ಯಾರು ನೆನಪಾಗದೆ ಇವರಿಗಾಗಿ ಏನೂ ಒಯ್ಯದೆ ಹೋಗಿಬಿಟ್ಟವರು ಕಂಗಾಲಾಗುತ್ತೇವೆ. ನಮ್ಮ ಮನಸ್ಸಿನ ಭಣಭಣಕ್ಕೆ ನಾವೇ ಗಾಬರಿ ಬೀಳುವಂತೆ. ಮೊನ್ನೆಯೂ ಹಾಗಾಯಿತು. ಬೆಳಗ್ಗಿನ 10 ಗಂಟೆಯ ಹೊತ್ತಿಗೆ, ‘ಹೋಯ್‍ತಂಗಿ, ಯಾವಾಗ ಬಂದೆ’-ಅನ್ನುತ್ತ ತಳತಳ ಹೊಳೆವ ಮೀನು ಬುಟ್ಟಿ ಹಿಡ್ದು, ‘ಒಳಗ್ ತಕಂಡ ಹೋಗು ಹಿಡಿ’ ಅನ್ನುತ್ತ; ಎಷ್ಟು ಏನು ಎಂಬ ಯಾವ ರೇಟಿನ ಉಸಾಬರಿಗೂ ಹೋಗದ ಹಾಗೆ ಹೊರಡಲು ಅನುವಾದಳು ಅಂಬೇರ ಶಾಂತಿ. ಟಿ.ವಿ.ಯಲ್ಲಿ ‘ಸಿದ್ರಾಮಯ್ಯ ಹಿನ್ನಡೆ’ ಅಂತ ಬರುತ್ತಿತ್ತು. ‘ಶಾಂತಿ, ನೀವೆಲ್ಲ ಸಿದ್ರಾಮಯ್ಯನ ಪಕ್ಷಕ್ಕೆ ವೋಟು ಹಾಕಿದ್ರಾ ಇಲ್ವಾ? ಅಂತ ಕೇಳಿದ್ದೆ ಲೋಕಾಭಿರಾಮವಾಗಿ. ‘ಇಲ್ರಾ„’ ಅಂದಳು. ಸಹಜ ಕೇಳಿದವಳು ಗಾಬರಿಯಾದೆ. ಸಾಂಪ್ರದಾಯಿಕವಾಗಿ ಇವರೆಲ್ಲ ಆ ಪಕ್ಷದ ಮತದಾರರು ಮತ್ತು ಹತ್ತೆಂಟು ಯೋಜನೆಗಳ ಫಲಾನುಭವಿಗಳು. ಯಾಕೇ? ಎಂದೆ. ‘ನಮ್ಮ ಜಾತಿ ಪೋರನ ಹೊಡ್ದು ಕೊಂದಿರಕಡಾ-ಆದ್ರೂ ಆ ಸಿದ್ರಾಮಯ್ಯ ಒಂದ್ ಮಾತೂ ಹೇಳ್ನೆಲಾ ಕಡಾ. ಗುತ್ತಿತ್ರಾ?’ ಎಂದು ತಿರುಗಿ ಪ್ರಶ್ನಿಸಿದಳು. ಅವಳು ಪರೇಶ ಮೆಸ್ತಾನ ಸಾವಿನ ಸುದ್ದಿ ಪ್ರಸ್ತಾಪಿಸಿದ್ದಳು. ಅದು ಹಾಗಲ್ಲ ಮಾರಾಯ್ತಿ… ಎಂದು ಅವಳ ಮನಸ್ಸಿನಲ್ಲಿ ಬರೆದ ಬರಹ ಅಳಿಸಿ, ಮತ್ತೆ ಬೇರೆ ಬರೆಯಲು ಅವಳ ಬುಟ್ಟಿಯ ಮೀನು ಪುರಸೊತ್ತು ಕೊಡಲಿಲ್ಲ. “ಹಾಳಾಗ್ಲಿ ತಂಗಿ ಆ ಉಸಾಬರಿ… ನೀ ಹ್ಯಾಂಗಿವೆ? ಬರೂದೇ ಅಪರೂಪಾಯ್ತಲೆ” ಅನ್ನುತ್ತ ನಡೆದಳು.

ಬಹುಪಾಲು ದುಡಿವ ವರ್ಗದ ಸಾಮಾನ್ಯ ಜನರೇ ತುಂಬಿರುವ ಸಮಾಜದಲ್ಲಿ, ಜನರ ಮನಸ್ಸಿನಲ್ಲಿ ವಿಷಾನಿಲ ತುಂಬಿದರೆ… ಏನು ಆಗಬಹುದೋ ಅದು ಆಗುತ್ತಿದೆ. ಪರೇಶ ಮೆಸ್ತಾ ಎಂಬ ಎಳೆಯ ಹುಡುಗನ ಅನ್ಯಾಯದ ಸಾವಾಗಿದೆ. ನಿಜಕ್ಕೂ ಅದು ಹತ್ಯೆಯಾಗಿದ್ದರೆ, ಹತ್ಯೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಪ್ರಕರಣ ಸಿಬಿಐನಲ್ಲಿದೆ. ಆದ್ರೆ ಊರೂರುಗಳಲ್ಲಿ ಆ ಹುಡುಗನ ಕಟೌಟುಗಳು, ಪ್ರಚೋದಕ ಬರಹಗಳು ನೀತಿಸಂಹಿತೆ ಜಾರಿಯಾಗುವವರೆಗೂ ರಾರಾಜಿಸಿದವು. ಕಾನೂನು ಉಲ್ಲಂಘನೆಯ ಇಂತಹ ಕ್ರಮಗಳನ್ನು ಸರ್ಕಾರ ನಿರ್ಲಕ್ಷಿಸಿತು. ಚುನಾವಣೆಯ ಹಿಂದಿನ ದಿನ ಬಹಿರಂಗ ಪ್ರಚಾರ ಮತ್ತು ಜಾಹೀರಾತುಗಳಿಗೆ ತಡೆಬಿದ್ದ ಮಾರನೆಯ ದಿನವೂ ಬಹುತೇಕ ಎಲ್ಲ ಕನ್ನಡ ಇಂಗ್ಲಿಷ್ ದಿನಪತ್ರಿಕೆಗಳ ಮೊದಲಿಡೀ ಪುಟದಲ್ಲಿ ಒಂದು ಪಕ್ಷದ ಜಾಹೀರಾತು ರಾರಾಜಿಸಿತು. ಇದು ಮುಖ್ಯ ವಿಷಯ ಅನ್ನಿಸದಷ್ಟು ರಾಜಾರೋಷವಾಗಿ ಕಾನೂನು ಉಲ್ಲಂಘನೆ ನಡೆಯಿತು. ಒಂದು ಪಕ್ಷದವರನ್ನು ಗುರಿಯಾಗಿಟ್ಟುಕೊಂಡು ಚುನಾವಣೆಯ ಹಿಂದಿನ ದಿನದವರೆಗೂ ಐಟಿ ದಾಳಿ ನಡೆಯಿತು. ಇನ್ನೊಂದು ಪ್ರಬಲ ಪ್ರತಿಸ್ಪರ್ಧಿ ಪಕ್ಷದವರು ಶುದ್ಧಹಸ್ತರು. ಅವರ ಬಳಿ ಭ್ರಷ್ಟ ಹಣದ ವಹಿವಾಟು ನಡೆಯಲೇ ಇಲ್ಲವೆಂದು ಬಿಂಬಿಸುವಷ್ಟು.

ಕೋಮು ವಿದ್ರೋಹಕ್ಕೆ ಬಳಕೆಗೊಂಡ ಪರೇಶ್ ಮೇಸ್ತನ ಸಾವು

‘ತೊಂಡೆಕಾಯಿ ಲಾಯಕ್ಕೀತು. ನಿಮ್ಮೂರಲ್ ಸಿಗಾಕಲಾ. ತಕಂಡ ಹೋಗ್ ಮಗಾ’ ಎಂಬ ಅಕ್ಕರಾತಿಯ ಸ್ವರದೊಂದಿಗೇ ನಮ್ಮೂರ ತುಳಸಜ್ಜಿ ಬಂದಳು. ಅವಳ ಹಾಲಕ್ಕಿ ಒಕ್ಕಲಗಿತ್ತಿಯ ನಿಲುವಿಗೆ ಕ್ಯಾಮರಾ ಹಿಡಿದು ಓಡಿಬಂದಳು ಮಗಳು. ‘ಫೋಟೊವಾ? ಇಕಾ’ ಅಂತ ಜಬರ್ದಸ್ಥ ಫೋಸು ಕೊಟ್ಟಳು. ತಲೆಮೇಲೆ ಸಿಂಬಿ ಇಟ್ಟುಕೊಂಡೇ ನಿಂತಳು. ನೀನೂ ಬಾ ಅಂತ ನನ್ನೂ ಎಳಕೊಂಡಳು. ‘ಸಿಂಬಿ ಇಟ್ಟಕಂಡ್ರೆ ತಲಿ ಹಣ್‍ಕೂದ್ಲು ಕಾಣುಕಲಾ. ನೋಡು ಹ್ಯಾಂಗ್ ಬಂದೀದು… ಎಂದು ಜೀವತುಂಬಿ ನಕ್ಕಳು. ವೋಟಿನ ಮಾತಾಡಿದರೆ ತುಳಸಜ್ಜಿ ಕೊಟ್ಟ ಸ್ಪಷ್ಟೀಕರಣವೇ ಬೇರೆ.“ಮನೀಗೆ ಒಬ್ನೇ ಯಜಮಾನ ಮನಸ್ಯಾ ಇರಾಕು ಹೌದಾ. ಅಂವ ಕೊಟ್ಟೀನಕಂಡಾ. ಇವ್ರು ಹಂಚತೀರಕಂಡಾ. ಕೊಟ್ಟವರಿಗೆ ಹಾಕಾಕೋ… ಹಂಚೋರಿಗೆ ಹಾಕಾಕೋ…” ಎಂದು ನನ್ನೇ ದಂಗುಬಡಿಸಿದಳು. ತುಳಸಜ್ಜಿಯ ಪ್ರಕಾರ ಮೋದಿ ಎಂಬ ದೇವರು ಎಲ್ಲವನ್ನೂ ಕರುಣಿಸುತ್ತಿದ್ದಾನೆ. ಆ ಕರುಣೆಯ ಪ್ರಸಾದವನ್ನು ಮುಖ್ಯಮಂತ್ರಿಯೋ ಮತ್ತ್ಯಾರೋ ಹಂಚುತ್ತಾರೆ. ಜನರು ಪ್ರಸಾದ ಕರುಣಿಸುವ ದೇವರನ್ನು ಆರಾಧಿಸಬೇಕೋ, ಪ್ರಸಾದ ಹಂಚುವ ಪೂಜಾರಿಯನ್ನೋ? ತುಳಸಜ್ಜಿಯಂಥವರ ತಲೆಯಲ್ಲಿ ಹೀಗೆ ಅಚ್ಚೊತ್ತಿಸಿದ ಅಭಿಪ್ರಾಯವನ್ನು ಯಾವ ಕೈಯಿಂದ ಅಳಿಸಲಿ? ತಿಳಿಯಲಿಲ್ಲ. ಪೇಪರು, ಟಿ.ವಿ. ಉಸಾಬರಿಗೆ ಹೋಗದ ಈ ದುಡಿವ ಹೆಣ್ಣಿನ ಮನಸ್ಸಿನಲ್ಲಿ ಸುಳ್ಳು ಅಭಿಪ್ರಾಯವನ್ನು ಸರಿ ಎಂಬ ಧಿಮಾಕಿನಲ್ಲಿ ವ್ಯವಸ್ಥಿತವಾಗಿ ಹರಡಿದ ನೆಟ್‍ವರ್ಕ್ ಬಗ್ಗೆ ಗಾಬರಿ ಬಿದ್ದಿದ್ದೆ.

ಇನ್ನುಳಿದ ನಮ್ಮೂರು… ನಿವೃತ್ತ ಮಾಸ್ತರ ಮಂದಿಯಿಂದ ತುಂಬಿದ ಹೈಜಾನಿಕ್-ಹೈಟೆಕ್ ವ್ಯವಸ್ಥೆಯಿರುವ ವೃದ್ಧಾಶ್ರಮದಂತಿದೆ. ಬೆಳಗಿನ ತಿಂಡಿಗೆ ಪೇಪರ್, ಮಧ್ಯಾಹ್ನದೂಟಕ್ಕೆ ಟಿ.ವಿ. ಸುದ್ದಿ ನೋಡುವ ಮಧ್ಯಮ ವರ್ಗದ ಗೌರವಾನ್ವಿತರ ಮನಸ್ಸಿನ ಚಿಂತನೆಗಳು ಈ ಎರಡು ಗಡಿಗಳಾಚೆ ಎಂದೂ ಇಣುಕುವುದಿಲ್ಲ. ಈ ಮಾಧ್ಯಮಗಳೇ ಬಹುತೇಕ ರಾಜಕೀಯ ಪಕ್ಷ-ಸಿದ್ಧಾಂತಗಳಿಗೆ ಮಾರಿಕೊಂಡಿವೆ ಎಂಬುದು ಅವರೊಳಗೆ ಇಳಿಯುವುದಿಲ್ಲ. ನಮ್ಮೂರ ಚಹದಂಗಡಿಯ ಕಿಣಿ ಈಗಲೂ ಸೈಕಲ್ಲಿನಲ್ಲೇ ಓಡಾಡುವುದು. ಹಿಂದಿನ ಮನೆಯ ಬಾಗಿಲಲ್ಲಿ ನಿಂತ ಅವನ ಜರ್ಬಿನ ಮಾತು ಕೇಳಿಸ್ತಿತ್ತು. “ಹೋ ಮಾಸ್ತರೆ… ನಾಳೆ ನಾನೂ ಹೊಂಟೆ ಪ್ರಮಾಣವಚನದ ಕಾರ್ಯಕ್ರಮಕ್ಕೆ. ಪೆಟ್ಟಿಗಿ-ಕೀಲಿ ಎರಡೂ ನಮ್ಮಕಡೆಗೇ ಬಂತಲ್ರೋ…” ಎನ್ನುತ್ತಿದ್ದ. ಅವನ ಅಂಗಡಿಯ ಉಂಡಿ-ಮೈಸೂರ ಪಾಕಗಳಿಗೆ ಮಾಪಿಳ್ಳೆ ಮಕ್ಕಳೇ ಮುಖ್ಯ ಗಿರಾಕಿಗಳು. ಆದರವನಿಗದು ಮುಖ್ಯ ಅನ್ನಿಸಿದಂತಿರಲಿಲ್ಲ. ಹಿಂದೂ ಎಂಬ ಪುಂಗಿ ಅವನ ಕಿವಿಯಾಲೆಗಳಲ್ಲಿ ಸದಾ ಮೊರೆಯುತ್ತಿತ್ತು. ಸುಳ್ಳು-ಭ್ರಮೆಗಳನ್ನು ವ್ಯವಸ್ಥಿತವಾಗಿ ಹರಡಿ ನಂಬಿಸಿದ್ದರಿಂದಾಗಿ ಅವು ಮತಗಳಾಗಿ ಬದಲಾಗಿದ್ದವು. ಉಳಿದ ಯಾವ ಜನಪರ ಯೋಜನೆಗಳಿಗೂ ಆ ನಿಬಿಡತೆಯಲ್ಲಿ ಜಾಗೆಯೇ ಇರಲಿಲ್ಲ.

ಗುಡಿ-ಮಸೀದಿಗಳು ಎದುರು ಬದುರು ಬಾಳ್ವೆ ಮಾಡಿಕೊಂಡು ಬಂದಿದ್ದ ನಮ್ಮೂರಿನಲ್ಲೀಗ ಈ ಎರಡೂ ಯದ್ವಾತದ್ವಾ ಬೆಳೀತಿವೆ. ಮೈಕ್ ಕಟ್ಟಿಕೊಂಡು ಅರಚುತ್ತಿವೆ. ಈ ಎರಡನ್ನೂ ಬಳಸಿಕೊಂಡ ಹೊಳೆ ಹರಿಯುತ್ತಿದೆ. ಎರಡರ ಮಧ್ಯೆ ಸರ್ಕಾರಿ ರಸ್ತೆ ಊರಿಂದೂರನ್ನು ಬೆಸೆಯುತ್ತಿದೆ. ಈ ಎಲ್ಲವೂ ಹೀಗೇ… ಇಷ್ಟಾದರೂ ಸಹನಶೀಲತೆಯಲ್ಲಿ ಉಳಿಯಬೇಕಾದರೆ ಜನರ ಮನಸ್ಸಿಗೆ ನಿಜವಾದ ವಿಚಾರಶಕ್ತಿಯನ್ನು ಕೊಡಬೇಕಿದೆ. ಸರಿ-ತಪ್ಪುಗಳನ್ನು, ನಿಜ-ಸುಳ್ಳುಗಳನ್ನು ಶೋಧಿಸಿ ನೋಡುವ ತ್ರಾಣವನ್ನು ನನ್ನ ಜನ ಪಡೆಯಬೇಕಿದೆ. ಆದರೆ ಹೇಗೆ? ಅವರನ್ನು ಯೋಚನೆಗೆ ಸನ್ನದ್ಧಗೊಳಿಸುವ, ದಾರಿಯನ್ನು ಹುಡುಕಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...