Homeಎಕಾನಮಿಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

ಬಜಾಜ್ ಅವರ ಬುಲಂದ್ “ಟೀಕೆ” ಮತ್ತು ಹಮಾರಾ “ಮಿಜಾಜ್” : ರಾಜಾರಾಂ ತಲ್ಲೂರು

- Advertisement -
- Advertisement -

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಎಂಬುದರಲ್ಲಿ ಅಧಿಕಾರಸ್ಥರ ಪಾವತಿ ಕೂಲಿಗಳು (ಟ್ರಾಲ್ ಸೇನೆ) ಬಿಟ್ಟರೆ ಬೇರಾರಿಗೂ ಎಲ್ಲೂ ಯಾರಿಗೂ ಸಂಶಯ ಉಳಿದಂತಿಲ್ಲ. ಸ್ವತಃ ಹಣಕಾಸು ಸಚಿವೆ ಎಲ್ಲವೂ ಸರಿಯಿಲ್ಲ, ಆದರೆ ಪೂರ್ಣ ಕೆಟ್ಟಿಲ್ಲ ಎಂದು ಸಂಸತ್ತಿನಲ್ಲೇ ದಾಖಲಿಸಿಯಾಗಿದೆ. ಸಾರ್ವಜನಿಕ ಅಭಿಪ್ರಾಯಗಳೂ ಈ ನಿಟ್ಟಿನಲ್ಲಿ ಹರಳುಗಟ್ಟಿವೆ.

ಮೊನ್ನೆ ಡಿಸೆಂಬರ್ ಒಂದರಂದು ಎಕನಾಮಿಕ್ ಟೈಮ್ಸ್ ಕಾನ್‍ಕ್ಲೇವ್‍ನಲ್ಲಿ ವೇದಿಕೆಯ ಮೇಲಿದ್ದ ಗೃಹ ಸಚಿವ ಅಮಿತ್ ಷಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೇ ಸಚಿವ ಪಿಯೂಷ ಗೋಯಲ್ ಅವರನ್ನುದ್ದೇಶಿಸಿ ಬಜಾಜ್ ಗುಂಪಿನ ಮುಖ್ಯಸ್ಥ ರಾಹುಲ್ ಬಜಾಜ್ ಅವರು, ಸರ್ಕಾರದ ವಿರುದ್ಧ ಕುತೂಹಲಕರ ಟೀಕೆಯೊಂದನ್ನು ಮಾಡುತ್ತಾರೆ. “ಯುಪಿಎ -2 ಆಳ್ವಿಕೆಯಲ್ಲಿ ನಾವು (ಉದ್ಯಮಿಗಳು) ಯಾರನ್ನು ಬೇಕಿದ್ದರೂ ಟೀಕಿಸಬಹುದಿತ್ತು. ಆದರೆ ನೀವೀಗ ಅದನ್ನು (ಟೀಕೆಯನ್ನು) ಸ್ವೀಕರಿಸುತ್ತೀರಿ ಎಂಬ ವಿಶ್ವಾಸ ಇಲ್ಲ. ನಾನು ಹೇಳುತ್ತಿರುವುದು ತಪ್ಪಿರಬಹುದು, ಆದರೆ ಎಲ್ಲರಲ್ಲೂ ಈ ಭಾವನೆ ಇದೆ.”

ಅಸಹನೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಾಗ ಹುಲ್ಲುಕಡ್ಡಿಯಂತೆ ಕಾಣಿಸಿಕೊಂಡ ಈ ಟೀಕೆಯನ್ನು ಎಲ್ಲರೂ ಗಪ್ಪೆಂದು ಹಿಡಿದು ಕುಳಿತಿರುವ ರೀತಿ – ಹಲವಾರು ವ್ಯಥೆಗಳನ್ನು ಒಟ್ಟಾಗಿ ಹೇಳುತ್ತಿದೆ. ಅಲ್ಲಿ ದೇಶದ ಹಲವು ಮಂದಿ ಪ್ರಮುಖ ಕಾರ್ಪೋರೇಟ್ ಧಣಿಗಳು ಹಾಜರಿದ್ದರು.

ಅಧಿಕಾರಸ್ಥರ ಪ್ರತಿಕ್ರಿಯೆ
ಮೊದಲನೆಯದಾಗಿ ಬಜಾಜ್ ಟೀಕೆಗೆ ಅಲ್ಲೇ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಷಾ , ನರೇಂದ್ರ ಮೋದಿ ಸರ್ಕಾರ ಅತ್ಯಂತ ಹೆಚ್ಚು ಟೀಕೆಗೊಳಗಾಗಿರುವ ಸರ್ಕಾರ ಎಂದರಲ್ಲದೇ ಬಿಜೆಪಿಗೆ ಸತ್ಯ ತಿಳಿಸುವ ಕುರಿತು ಇನ್ನೂ ಜನರಲ್ಲಿ ಭಯ ಇದ್ದರೆ, ಅದನ್ನು ಹೋಗಲಾಡಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ಇತ್ತರು. ಇದು ಸರ್ಕಾರದ ಕಡೆಯಿಂದ ಬಂದ ತಕ್ಷಣದ ಪ್ರತಿಕ್ರಿಯೆ.

ಅದಾದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮರುದಿನ, ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿ, ಪ್ರಶ್ನೆ ಕೇಳಿ ಉತ್ತರ ಪಡೆಯುವ ಬದಲು, ಅಭಿಪ್ರಾಯಗಳನ್ನು ಹರಡುತ್ತಾ ಹೋದರೆ ಆ ಅಭಿಪ್ರಾಯ ಜನಪ್ರಿಯವಾಗತೊಡಗಿದೊಡನೆ ದೇಶದ ಹಿತಾಸಕ್ತಿಗೆ ಹಾನಿ ಆಗಬಹುದೆಂದು ಎಚ್ಚರಿಸಿದರು.

ಅದೇದಿನ ಅಧಿಕಾರಸ್ಥರ ಮುಖವಾಣಿ ಸ್ವರಾಜ್ಯ ಮ್ಯಾಗಝೀನಿನ ಸಂಪಾದಕ ಆನಂದ್ ರಂಗನಾಥನ್ ಅವರು ಒಂದು ಟ್ವೀಟ್‍ನಲ್ಲಿ “ಬಜಾಜ್‍ಗೆ ಪ್ರಜ್ಞೆ ಬರಬೇಕೆಂದರೆ (ಅವರ ಸ್ಕೂಟರಿನಂತೆ) ಎರಡು ಬಾರಿ ಬಗ್ಗಿಸಿ ಕಿಕ್ ಒದೆಯಬೇಕು. ಓಆಂ ಸರ್ಕಾರ ಎದುರಿಸಿದಷ್ಟು ಟೀಕೆಗಳನ್ನು ಯಾರೂ ಎದುರಿಸಿಲ್ಲ. ಅವರು ಯಾವ ಲೋಕದಲ್ಲಿದ್ದಾರೆ? ಭೂಲೋಕದಲ್ಲಂತೂ ಅಲ್ಲ” ಎಂದು ವ್ಯಂಗ್ಯವಾಗಿ ಹೇಳಿದರು.

ಕಳೆದ ಆರು ವರ್ಷಗಳಲ್ಲಿ ಹಾಲೀ ಕೇಂದ್ರ ಸರ್ಕಾರದ ಮತ್ತವರ ಸಮರ್ಥಕರ ಕಾರ್ಯವೈಖರಿಯನ್ನು ಅರಿತಿರುವವರಿಗೆ ಈ ಮೂರು ಪ್ರತಿಕ್ರಿಯೆಗಳು ಸ್ತರವಾರು ಏನನ್ನು ಧ್ವನಿಸುತ್ತಿವೆ ಎಂಬುದನ್ನು ವಿವರಿಸಬೇಕಾಗಿಲ್ಲ.

ಉದ್ಯಮಿಗಳೇಕೆ ಹೀಗೆ?

ಇಲ್ಲಿ ನಿಜಕ್ಕೂ ಅಚ್ಚರಿ ಪಡಬೇಕಾಗಿರುವುದು ರಾಹುಲ್ ಬಜಾಜ್, ಕಿರಣ್ ಮಜುಂದಾರ್ ಅವರಂತಹ ದೊಡ್ಡ ಉದ್ಯಮಪತಿಗಳ ಈ ಚಹಾಕಪ್ಪಿನ ಹಠಾತ್ ಕ್ರಾಂತಿಯ ಬಗ್ಗೆ. ಯಾಕೆಂದರೆ, ಹಾಲೀ ಕೇಂದ್ರ ಸರ್ಕಾರ ಕಳೆದ ಆರು ವರ್ಷಗಳಲ್ಲಿ, ಅದರಲ್ಲೂ ನೋಟು ರದ್ಧತಿಯ ಬಳಿಕ, ಉದ್ದಿಮೆಗಳಿಗೆ ಕೊಟ್ಟಿರುವಷ್ಟು ಸವಲತ್ತುಗಳನ್ನು ಬೇರಾರಿಗೂ ಕೊಟ್ಟಿಲ್ಲ. ಆದರೂ ಹೀಗೇಕೆ?

ಒಂದು ಮಗ್ಗುಲಿನಿಂದ ನೋಡಿದಾಗ, ಇದು ಅಧಿಕಾರಸ್ಥರಿಗೆ ಹತ್ತಿರ ಇರುವ ಉದ್ದಿಮೆಗಳ (ಉದಾಹರಣೆಗೆ ಎಲ್ಲ ಆರ್ಥಿಕ ಹೊಡೆತಗಳ ಹೊರತಾಗಿಯೂ ಅಸ್ವಾಭಾವಿಕ ಎಂಬಷ್ಟು ಬೆಳವಣಿಗೆ ಕಂಡಿರುವ ಅದಾನಿ, ಅಂಬಾನಿ ಇತ್ಯಾದಿ ಕಾರ್ಪೋರೇಟ್ ಗಳು) ವಿರುದ್ಧ ಸ್ವಲ್ಪ ದೂರದಲ್ಲಿರುವವರ ಅಸಹಾಯಕ ಅಸಹನೆಯಂತೆ ಕಾಣಿಸುತ್ತದೆ.
ಎರಡನೆಯದಾಗಿ ತಮ್ಮ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ, ಸರ್ಕಾರಿ ವ್ಯವಸ್ಥೆ ಬಳಸಿಕೊಂಡು ಉದ್ದಿಮೆಗಳವರ ಬೆನ್ನು ಮುರಿಯಲು ನಾವು ಹಿಂಜರಿಯಲಾರೆವು ಎಂಬ ಸರ್ಕಾರದ ಪರೋಕ್ಷ ಎಚ್ಚರಿಕೆಗೆ ಉದ್ಯಮಿ ವರ್ಗದ ಭಯ-ಆತಂಕದ ಪ್ರತಿಕ್ರಿಯೆಯೂ ಇದಾಗಿರಬಹುದು.

ಇದಲ್ಲದೇ ಬೇರೆ ಕಾರಣಗಳೂ ಇದ್ದಿರಬಹುದು. ಆದರೆ ಕಾರಣಗಳಿಗಿಂತ ಹೆಚ್ಚಾಗಿ ಇದೊಂದು ಸುಯೋಜಿತ ತಂತ್ರವಾಗಿರಬಹುದು ಎಂಬ ಸಂಶಯ ಮೂಡಿದರೂ ಅಚ್ಚರಿ ಇಲ್ಲ.

ಮಾರುಕಟ್ಟೆಯ ವಾಸ್ತವಗಳು

ಆದರೆ ಸೇವಾ ಉದ್ಯಮವನ್ನೇ 65%ರಷ್ಟು ನೆಚ್ಚಿಕೊಂಡಿರುವ ಭಾರತದಂತಹ ದೇಶವೊಂದರಲ್ಲಿ ಮೂಲಸೌಕರ್ಯ, ಆಟೊ ಮೊಬೈಲ್‍ನಂತಹ ಉದ್ಯಮಗಳು ಬದಿಗೆ ಸರಿಯತೊಡಗಿದ್ದು ಹೊಸ ಬೆಳವಣಿಗೆಯೇನಲ್ಲ. ಇದು 90ರ ದಶಕದ ಕೊನೆಯಲ್ಲಿ ನಡೆದ “ಐಟಿ ಕ್ರಾಂತಿ”ಯ ಫಲ.

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ, ಮಾರುಕಟ್ಟೆಯಲ್ಲಿ ಬೇರೆ ದೇಶಗಳ ಬುಡ ಕತ್ತರಿಸುವ ಸ್ಪರ್ಧೆ ಹಾಗೂ ಮೂರನೇ ಹಂತದ ಐಟಿ ಕ್ರಾಂತಿ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇತ್ಯಾದಿ) ಆರಂಭಗೊಂಡಿರುವುದರಿಂದ, ಅದಕ್ಕೆ ಸನ್ನದ್ಧಗೊಂಡಿರದ ಭಾರತದ ಐಟಿ ಉದ್ಯಮ ಥಂಡಾ ಹೊಡೆಯುತ್ತಿದೆ. ಪರ್ಯಾಯ ಇಂಧನ ಮೂಲಗಳ ಗಲಾಟೆಯಲ್ಲಿ ಆಟೊಮೊಬೈಲ್ ಉದ್ಯಮ ಕೂಡ ದಾರಿಕಾಣದೆ ನಿಂತಿದೆ.

ಇತ್ತ ಡಿಮಾನೆಟೈಸೇಷನ್‍ನಿಂದಾಗಿ ದೇಶದ ಹಣಕಾಸು ವ್ಯವಸ್ಥೆಗೆ “ಸಾಸಿವೆ ಡಬ್ಬಿಯ ಶಾಪ” ತಗುಲಿದೆ. ಒಂದು ಪುಟ್ಟ ಗಲ್ಲಿಯ ಆರ್ಥಿಕತೆಯ ಮೇಲೆ ಇದರಿಂದ ಬಿದ್ದಿರುವ ಹೊಡೆತ ಹಂತಹಂತವಾಗಿ ಮೇಲೆದ್ದು, ಎಲ್ಲವನ್ನೂ ನುಂಗಿ ನೊಣೆಯುತ್ತಾ, ಬಹುತೇಕ ಎಲ್ಲ ಮೂಲಸೌಕರ್ಯ ಉದ್ದಿಮೆಗಳ ಮೇಲೂ ದುಷ್ಪರಿಣಾಮ ಬೀರಿದೆ.

ನೋಟುರದ್ಧತಿಯ ಬಳಿಕ ಕೇಂದ್ರ ಸರ್ಕಾರ ತನ್ನಲ್ಲಿ ಆರೋಗ್ಯವಂತ ಯೋಜನೆಯೊಂದು ಇದ್ದಿದ್ದರೆ, ತನ್ನ ಮರುನಿರ್ಮಾಣ ಕೆಲಸವನ್ನು ದೇಶದ ಕೃಷಿಭೂಮಿಗಳಿಂದ ಆರಂಭಿಸಬೇಕಿತ್ತು. ಅದನ್ನು ಬಿಟ್ಟು ಕೃಷಿ ಭೂಮಿಗಳನ್ನು ಈಗ ಕೆಲಸ ಇಲ್ಲದೆ ಕುಳಿತಿರುವ ಕಾರ್ಪೋರೇಟ್ ಗಳಿಗೆ ಹಸ್ತಾಂತರಿಸುವ ಹಠ ಹಿಡಿದು ಕಾರ್ಯಾಚರಿಸುತ್ತಿದೆ. ಏನೆಲ್ಲ ಇದೆಯೋ ಅದನ್ನೆಲ್ಲ ಕಾರ್ಪೋರೇಟ್ ಗಳಿಗೆ ದಾನ ಕೊಡುವುದೇ ತನ್ನ ಉದ್ಯೋಗ ಎಂದು ತಿಳಿದಂತಿದೆ.

ಒಟ್ಟು ಅರ್ಥ ಏನು?

ಇಂತಹದೊಂದು ಗಂಭೀರ ಸನ್ನಿವೇಶದಲ್ಲಿ ಕೈಗಾರಿಕೆಗಳ ಪ್ರತಿನಿಧಿಯೊಬ್ಬರು ಸರ್ಕಾರವನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಾಗ ಅದನ್ನು ದೇಶದ ನಾಗರಿಕ ಹೇಗೆ ಗ್ರಹಿಸಬೇಕು?

ಸರ್ಕಾರವೊಂದು ತನ್ನ ಎಲ್ಲ ಬಲ ಬಳಸಿಕೊಂಡು, ತನ್ನ ವಿರುದ್ಧ ತಳಮಟ್ಟದಲ್ಲಿ ಯಾರೂ ಚಕಾರ ಎತ್ತುವಂತಿಲ್ಲ ಎಂಬ ವಾತಾವರಣ ನಿರ್ಮಿಸಿರುವಾಗ, ಧ್ವನಿ ಎತ್ತಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನೂ ತನ್ನ ಕ್ರಿಯೆಯ ಮೂಲಕವೇ ಸ್ಪಷ್ಟವಾಗಿ ನೀಡಿರುವಾಗ, ರಾಹುಲ್ ಬಜಾಜ್ ಅವರ ಈ ಪ್ರತಿಕ್ರಿಯೆ “ಕೃತಕವಾಗಿ ಉತ್ಪಾದಿಸಲಾದ” ಪ್ರತಿಕ್ರಿಯೆ ಎಂಬ ಯೋಚನೆಗಳು ಬರುವುದೂ ಸಹಜ.

ಸಾವಿರಾರು ರೈತರು ದಿಲ್ಲಿ ಚಲೋ ಮಾಡಿದಾಗಲಾಗಲೀ, ಬ್ಯಾಂಕ್ ನೌಕರರು-ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳು ತಮ್ಮ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ನಡೆಸಿದ ಹೋರಾಟಕ್ಕಾಗಲೀ, ಯಾವತ್ತೂ ಮಣೆ ಹಾಕದ ಮಾಧ್ಯಮಗಳು ಇದೊಂದು ಒಂಟಿಧ್ವನಿಗೆ ಈ ಮಹತ್ವ ಯಾಕೆ ಕೊಟ್ಟವು?!

ಸದ್ಯಕ್ಕೆ ಚಹಾಕಪ್ಪಿನಲ್ಲಿ ನಡೆದುಹೋದ ಈ ಕ್ರಾಂತಿ ಅಲ್ಲಿಂದ ಹೊರಜಗತ್ತಿಗೆ ಚೆಲ್ಲಿ ಬಿರುಗಾಳಿ ಮೂಡಿಸೀತೇ ಎಂಬುದು ಸ್ಪಷ್ಟವಾಗಲು ಇನ್ನೂ ಸ್ವಲ್ಪ ಸಮಯ ಕಾದುನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...