Homeಮುಖಪುಟಶೃಂಗಾರ-ಅಶ್ಲೀಲತೆ; ನಿರ್ಧರಿಸುವವರು ಯಾರು? ಒಟಿಟಿ/ಆನ್‌ಲೈನ್ ವೇದಿಕೆಗಳಲ್ಲಿ ಕಾಮಪ್ರಚೋದಕ ದೃಶ್ಯಗಳು ಹೆಚ್ಚಳವಾಗಿವೆಯೇ?

ಶೃಂಗಾರ-ಅಶ್ಲೀಲತೆ; ನಿರ್ಧರಿಸುವವರು ಯಾರು? ಒಟಿಟಿ/ಆನ್‌ಲೈನ್ ವೇದಿಕೆಗಳಲ್ಲಿ ಕಾಮಪ್ರಚೋದಕ ದೃಶ್ಯಗಳು ಹೆಚ್ಚಳವಾಗಿವೆಯೇ?

- Advertisement -
- Advertisement -

ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಅವುಗಳನ್ನು ಪ್ರಸಾರ ಮಾಡಿದ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನವಾದ ಬಳಿಕ ದೇಶದಲ್ಲಿ ಹೆಚ್ಚಾದ ಚರ್ಚೆಯ ವಿಷಯ ಯಾವುದು ಶೃಂಗಾರ, ಯಾವುದು ಅಶ್ಲೀಲ ಎಂಬುದು. ನನ್ನ ಪತಿ ತಯಾರಿಸಿ ಪ್ರಸಾರ ಮಾಡಿರುವುದು ಶೃಂಗಾರದ ವಿಷಯಗಳನ್ನು ಅಶ್ಲೀಲ ಚಿತ್ರಗಳನ್ನಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು.

ಇನ್ನು ರಾಜ್ ಕುಂದ್ರಾ ಅವರಿಗೆ ಸಂಬಂಧಿಸಿದ ಆಪ್‌ಗಳಲ್ಲಿ ಇದ್ದ ವಿಡಿಯೋಗಳಲ್ಲಿ ನಟಿಸಿದ್ದ ನಟಿ ಗೆಹನಾ ವಶಿಷ್ಠ್ ಕೂಡ, ’ರಾಜ್ ಕುಂದ್ರಾರಿಗೆ ಸಂಬಂಧಿಸಿದ ಆಪ್ ಹಾಟ್‌ಶಾಟ್ಸ್‌ನಲ್ಲಿನ ವಿಷಯಗಳು ಶೃಂಗಾರಕ್ಕೆ ಸಂಬಂಧಿಸಿದ್ದವು. ಅವು ಅಶ್ಲೀಲ ಚಿತ್ರಗಳಲ್ಲ’ ಎಂದು ಹಲವು ಬಾರಿ ವಾದಿಸಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದ ನಟಿ, ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆಯಾಗಿ ಲೈವ್ ಬಂದು ’ಈಗ ನಾನು ಅಶ್ಲೀಲವಾಗಿ ಕಾಣಿಸುತ್ತಿದ್ದೇನಾ’ ಎಂದು ಪ್ರಶ್ನಿಸಿದ್ದರು.

ರಾಜ್ ಕುಂದ್ರಾ ಅವರ ವಕೀಲರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಸಹವರ್ತಿಗಳು ಇದುವರೆಗೆ ಹೇಳುತ್ತಾ ಬಂದಿರುವುದೇನೆಂದರೆ ಕುಂದ್ರಾ ಕಂಪೆನಿಗಳು, ಸಹವರ್ತಿಗಳು ಹಾಗೂ ಅವರ ಮೊಬೈಲ್ ಅಪ್ಲಿಕೇಶನ್ ಹಾಟ್‌ಶಾಟ್ಸ್‌ನಲ್ಲಿ ಅಶ್ಲೀಲತೆಯ ಕಂಟೆಂಟ್ ಉತ್ಪಾದನೆಯಲ್ಲಿ ಭಾಗಿಯಾಗಿಲ್ಲ. ಬದಲಿಗೆ ಕಾಮಪ್ರಚೋದಕ, ಶೃಂಗಾರ ಚಿತ್ರಗಳ ನಿರ್ಮಾಣ ಮಾಡಿರುವುದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ವೆಬ್ ಸಿರೀಸ್, ಹಲವು ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಬಿಡುಗಡೆಯಾಗುವ ಚಿತ್ರಗಳು, ವೆಬ್ ಸರಣಿಗಳ ಬಗ್ಗೆ ಯಾರು ಚಕಾರವೆತ್ತುತ್ತಿಲ್ಲ. ಲೈಂಗಿಕ ವಿಚಾರಗಳೇ ತುಂಬಿತುಳುಕುವ ಹಲವು ಆಪ್‌ಗಳು ಭಾರತದಲ್ಲಿವೆ. ಇವುಗಳಲ್ಲಿ ಇರುವ ವಿಷಯ ಅಶ್ಲೀಲವೇ-ಶೃಂಗಾರವೇ ಎಂಬುದನ್ನು ನಿರ್ಧರಿಸುವವರು ಯಾರು? ಇವು ಕಾಮಪ್ರಚೋದಕದ ದೃಶ್ಯಗಳು, ಅಶ್ಲೀಲತೆಯಲ್ಲ ಎಂದು ಈ ಪ್ಲಾಟ್ಫಾರ್ಮ್‌ಗಳು ಸಮರ್ಥಿಸಿಕೊಳ್ಳುತ್ತವೆ.

ALTbalaji ಎನ್ನುವ ಪ್ಲಾಟ್ಫಾರ್ಮ್ ಒಂದರಲ್ಲಿ ಪ್ರಸಾರವಾದ ’ಗಂಧೀ ಬಾತ್’ ಇಂತಹದ್ದೆ ಕಂಟೆಂಟ್ ಹೊತ್ತ ವೆಬ್ ಸಿರೀಸ್. ಇದು ಎಷ್ಟು ಜನಪ್ರಿಯವಾಯಿತೆಂದರೆ ಇದೇ ಹೆಸರಲ್ಲಿ 5 ಸಿರೀಸ್‌ಗಳು ಬಂದವು. ಬೈ ಸೆಕ್ಷುಯಲ್
ಕಥಾಹಂದರ ಹೊಂದಿದ್ದ ಈ ವೆಬ್ ಸಿರೀಸ್‌ನಲ್ಲಿ ನಟಿಸಿದ ಬಳಿಕ ತಮ್ಮ ಅಭಿಮಾನಿಗಳ ಸಂಖ್ಯೆಯು ಹೆಚ್ಚಾಯಿತು ಎಂದು ನಟಿ ಅನ್ವಿಶಿ ಜೈನ್ ಹೇಳಿಕೊಂಡಿದ್ದಾರೆ.

ಗಂಧೀ ಬಾತ್‌ನ ಯಶಸ್ಸು ಇಂತಹ ಪ್ಲಾಟ್ಫಾರ್ಮ್‌ಗಳಲ್ಲಿ ಒಂದು ಹೊಸ ಪ್ರಕಾರವನ್ನೇ ಹುಟ್ಟುಹಾಕಿತು. ಇದರ ಪರಿಣಾಮವಾಗಿ ಜನಪ್ರಿಯ Zee5 Mnn ಕೂಡ ’ವರ್ಜಿನ್ ಭಾಸ್ಕರ್’ ಎಂಬ ವೆಬ್ ಸಿರೀಸ್ ಆರಂಭಿಸಿತ್ತು. Voot ಒಟಿಟಿಯಲ್ಲಿ ’ಫೂ ಸೆ ಫ್ಯಾಂಟಸಿ’ ಎಂಬ ಸಿರೀಸ್ ಪ್ರಾರಂಭವಾಯಿತು. ಇವೆಲ್ಲವೂ ಒಳಗೊಂಡಿದ್ದು ಕಾಮಪ್ರಚೋದಕತೆಯನ್ನೇ. ಅಂದರೆ, ಇದು ಅಶ್ಲೀಲವಲ್ಲ ಎಂಬುದು ಈ ಪ್ಲಾಟ್ಫಾರ್ಮ್‌ಗಳ ವಾದವೂ ಕೂಡ.

ULLU ಪ್ಲಾಟ್ಫಾರ್ಮ್ ಕೂಡ ಇಂತಹದ್ದೆ ಕಂಟೆಂಟ್‌ಅನ್ನು ಹೆಚ್ಚು ಪ್ರಸಾರ ಮಾಡುತ್ತದೆ. ಭೋಜಪುರಿ, ಮರಾಠಿ ಮತ್ತು ಇತರ ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಹಲವು ವೆಬ್ ಸಿರೀಸ್‌ಗಳನ್ನು ಬಿಡುಗಡೆ ಮಾಡಿದೆ. ’ಪಾಂಚಾಲಿ’, ’ಕಸಕ್’, ’ವುಲ್ಫ್ ಆಫ್ ಬಾಲಿವುಡ್’ ಕಾಮಪ್ರಚೋದಕತೆ ಕಥಾಹಂದರವನ್ನು ಹೊಂದಿರುವ ಧಾರಾವಾಹಿಗಳಾಗಿವೆ.

ಇವುಗಳ ಜನಪ್ರಿಯತೆ ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ಹಲವಾರು ಮುಖ್ಯವಾಹಿನಿಯ ನಟರು ಕೂಡ ಈ ಬಗೆಯ ಕಾಮಪ್ರಚೋದಕ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದರು. ಉದಾಹರಣೆಗೆ, ಅಮೆಜಾನ್ ಪ್ರೈಮ್ ವಿಡಿಯೊದ ವೆಬ್ ಸಿರೀಸ್ ’ರಸ್ಬರಿ’ಯಲ್ಲಿ ನಟಿ ಸ್ವರಾ ಭಾಸ್ಕರ್ ನಟಿಸಿದ್ದಾರೆ, ಅಂಶುಮಾನ್ ಝಾ ’ಮಾಸ್ತರಂ’ನಲ್ಲಿ ನಟಿಸಿದ್ದಾರೆ, ನಟಿ ಅನುಪ್ರಿಯಾ ಗೋಯೆಂಕಾ ULLUವಿನಲ್ಲಿ ಬರುವ ’ಪಾಂಚಾಲಿ’ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಮಿನಿಸ್ಸಾ ಲಂಬಾ ’ಕಸಕ್’ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶೃಂಗಾರದ ವಿಷಯವನ್ನೇ ಪ್ರಸಾರ ಮಾಡುವ ಈ ಆಪ್‌ಗಳ ಹೊರತಾಗಿಯೂ ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, Zee5ನಂತಹ ಒಟಿಟಿಗಳಲ್ಲಿ ಪ್ರಸಾರವಾಗುವ ವೆಬ್ ಸಿರೀಸ್‌ಗಳಲ್ಲಿಯೂ ಇಂತಹ ವಿಷಯಗಳ ಕಂಟೆಂಟ್ ಹೇರಳವಾಗಿದೆ. ಸೆನ್ಸಾರ್ ಇಲ್ಲದ ದೃಶ್ಯಗಳಿಗೆ ಯಾವುದೇ ಬರವಿಲ್ಲ. ಕಲಾವಿದರು ಕೂಡ ಮೈಚಳಿ ಬಿಟ್ಟು ನಟಿಸುವುದನ್ನು ಈ ವೆಬ್ ಸಿರೀಸ್‌ಗಳಲ್ಲಿ ಕಾಣಬಹುದು. ಅದೆಲ್ಲವೂ ಕಾಮಪ್ರಚೋದಕ ಅಥವಾ ಶೃಂಗಾರದ ಕೆಟಗರಿಗೆ ಬಂದು ನಿಲ್ಲತ್ತವೆ. ಇದನ್ನೆಲ್ಲಾ ವ್ಯಾಖ್ಯಾನಿಸುವ ಒಂದು ಸೂಸ್ತವಾದ ಕಾನೂನು ಇಲ್ಲಿಲ್ಲ.

ಇಂತಹದ್ದೇ ಪ್ರಕರಣದಲ್ಲಿಯೇ ಒಂದು ಬಾರಿ ಜೈಲು ಸೇರಿ ಈಗ ರಾಜ್ ಕುಂದ್ರಾ ಪ್ರಕರಣದಲ್ಲಿ ಮತ್ತೆ ಕೇಸ್ ದಾಖಲಿಸಿಕೊಂಡಿರುವ ಗೆಹನಾ ವಶಿಷ್ಠ್ ನಮ್ಮ ದೇಶದಲ್ಲಿ ಯಾವುದು ಅಶ್ಲೀಲ, ಯಾವುದು ಪೋರ್ನ್, ಯಾವುದು ಕಾಮಪ್ರಚೋದಕ, ಯಾವುದು ಶೃಂಗಾರ ಎಂಬುವುದಕ್ಕೆ ಸರಿಯಾದ ವ್ಯಾಖ್ಯಾನವಿಲ್ಲ. ಇದರ ಬಗ್ಗೆ ಸರಿಯಾಗಿ ನಿಯಮಗಳನ್ನು ಮಾಡದೇ ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ವಾದಿಸಿದ್ದಾರೆ.

ಒಟಿಟಿ ಪ್ಲಾಟ್ಫಾರ್ಮ್‌ಗಳು ಭಾರತದಲ್ಲಿ ಕಠಿಣ ಸೆನ್ಸಾರ್ಶಿಪ್ ನಿಯಮಗಳಿಂದ ಸ್ವಾತಂತ್ರ್ಯವನ್ನು ಆನಂದಿಸುತ್ತಿರುವಾಗ, ಈ ವರ್ಷ ಫೆಬ್ರವರಿಯಲ್ಲಿ ಸರ್ಕಾರವು ಡಿಜಿಟಲ್ ಕಂಟೆಂಟ್ ಕಂಪ್ಲೇಂಟ್ ಕೌನ್ಸಿಲ್‌ಅನ್ನು (DCCC) ಸ್ಥಾಪಿಸಿದೆ. ಮಾರ್ಚ್‌ನಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಉದ್ಯಮಕ್ಕೆ ಸ್ವಯಂ ಆಡಳಿತದ ಕೋಡ್-ಆಫ್-ಕಂಟೆಂಟ್‌ಅನ್ನು ಸ್ಥಾಪಿಸಲು ಒಂದು ಅಂತಿಮ ಸೂಚನೆಯನ್ನು ನೀಡಿತು. ಆದರೆ, ಹಲವಾರು ವೇದಿಕೆಗಳು ಇದನ್ನು ಪರಿಗಣಿಸಲು ಸಮಯವನ್ನು ಕೋರಿವೆ.

ಸುಪ್ರೀಂಕೋರ್ಟ್ ವಕೀಲರಾದ ಖುಶ್ಬೂ ಜೈನ್ ಹೇಳುವಂತೆ ಕೇಬಲ್ ಟೆಲಿವಿಷನ್ ಕಾಯ್ದೆ 1995ರ ಪ್ರಕಾರ ಟಿವಿಯಲ್ಲಿ ಅಶ್ಲೀಲ ದೃಶ್ಯಗಳ ಪ್ರಸಾರಕ್ಕೆ ನಿರ್ಬಂಧನೆ ಇದೆ. ಇಂತಹ ಚಿತ್ರಗಳನ್ನು ಇಲ್ಲವೇ ಸಂಬಂಧಿತ ವಿಷಯವನ್ನು ಪ್ರಸಾರ ಮಾಡಿದಲ್ಲಿ ಶಿಕ್ಷೆ ಹಾಗೂ ದಂಡಕ್ಕೆ ಒಳಗಾಗಬೇಕಾಗುತ್ತದೆ ಎಂದು ಜೈನ್ ವಿವರಿಸಿದ್ದಾರೆ.

ಆದರೆ ಆನ್‌ಲೈನ್ ಪೋರ್ಟಲ್‌ಗಳು ಎಗ್ಗಿಲ್ಲದೆ ಇಂತಹ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಅಥವಾ ನಿರ್ಬಂಧಿಸಲು ಯಾವುದೇ ಸೆನ್ಸಾರ್ ಬೋರ್ಡ್‌ಗಳಿಲ್ಲ ಎಂಬುದನ್ನು ತಿಳಿದುಕೊಂಡಿರುವುದರಿಂದಲೇ. ಹಾಗಾಗಿ ಅವುಗಳು ಏನನ್ನು ಬೇಕಾದರೂ ಪ್ರಸಾರ ಮಾಡಬಹುದು ಎಂಬ ಸ್ವಾತಂತ್ರ್ಯ ಹೊಂದಿವೆ ಎಂದು ಜೈನ್ ಅವರನ್ನು ಉಲ್ಲೇಖಿಸಿ ಇಂಡಿಯನ್ ಟೈಮ್ಸ್ ವರದಿ ಮಾಡಿತ್ತು.

ಸದ್ಯ ಕೇಂದ್ರ ಸರ್ಕಾರ ಜೂನ್ 17ರಂದು ಕೇಬಲ್ ಟೆಲಿವಿಷನ್ ಕಾಯ್ದೆ 1995ಕ್ಕೆ ತಿದ್ದುಪಡಿ ತಂದಿದೆ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳನ್ನು ಈ ಶಾಸನಾತ್ಮಕ ವ್ಯವಸ್ಥೆ ಒದಗಿಸಲು ತಿದ್ದುಪಡಿ ಮಾಡಲಾಗಿದೆ. ಇದು ಪಾರದರ್ಶಕವಾಗಿದ್ದು, ನಾಗರಿಕರಿಗೆ ಉಪಯುಕ್ತವಾಗಿದೆ. ಅದೇವೇಳೆ, ಪ್ರಸಾರಕರ ಸ್ವಯಂ ನಿಯಂತ್ರಣ ಕಾಯಿದೆಗಳನ್ನು ಕೇಂದ್ರ ಸರ್ಕಾರದಲ್ಲಿ ನೊಂದಾಯಿಸಲಾಗುವುದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ದೇಶದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಅಪರಾಧವಾಗಿಲ್ಲ. ಆದರೆ, ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡುವುದು ಮತ್ತು ಇತರರೊಂದಿಗೆ ಹಂಚಿಕೊಳ್ಳುವುದು ತಪ್ಪು. ಆಗ ಮಾತ್ರ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 67ಎ ಹೇಳುವಂತೆ ಲೈಂಗಿಕ ಅಭಿವ್ಯಕ್ತಿ ಅಥವಾ
ನಡವಳಿಕೆಯನ್ನು ಹೊಂದಿರುವ ಯಾವುದೇ ವಿಷಯ-ವಸ್ತುವನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು (ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸಾರ ಮಾಡಿದಾಗಿಯೂ) ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ದಂಡವನ್ನು ವಿಧಿಸಲು ಸಾಧ್ಯವಿದೆ. ಹಾಗಾಗಿ ಅಶ್ಲೀಲ ಕಂಟೆಂಟ್ ಮಾರಾಟ ಮಾಡುವಾಗ ಅಥವಾ ವ್ಯಾಪಾರೀಕರಣದಲ್ಲಿ ಸಿಕ್ಕಿಬಿದ್ದರೆ ಜೈಲು ಹಾಗೂ ದಂಡ ಶಿಕ್ಷೆಯ ಸಾಧ್ಯತೆಯಿದೆ. ಆದರೆ, ಯಾವುದು ಅಶ್ಲೀಲ, ಯಾವುದು ಶೃಂಗಾರ ಎಂಬುದನ್ನು ವಿವರಿಸಲು ದೇಶದಲ್ಲಿ ಸರಿಯಾದ ಕಾನೂನುಗಳಿಲ್ಲದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ.

2018ರಲ್ಲಿ ಜನಪ್ರಿಯ ವಯಸ್ಕರ ತಾಣವಾದ ಪೋರ್ನ್‌ಹಬ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿಶ್ವದಲ್ಲಿ ಅಶ್ಲೀಲ ವಿಷಯಗಳ ಬಳಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿತ್ತು. ಆದರೆ, 2019ರಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧ ಕಾರಣದಿಂದ ಮೂರನೇ ಸ್ಥಾನದಲ್ಲಿದ್ದ ಭಾರತ 15ನೇ ಸ್ಥಾನಕ್ಕೆ ಇಳಿದಿದೆ ಎಂದು ಈ ಸಂಸ್ಥೆ ಹೇಳಿದೆ.

ಕನ್ನಡದಲ್ಲಿ ಇನ್ನು ಒಟಿಟಿ, ಮೊಬೈಲ್ ಆಪ್‌ನಂತಹ ಮಾಧ್ಯಮಗಳು ಎಕ್ಸ್‌ಕ್ಲೂಸಿವ್ ಆಗಿ ಬರದ ಕಾರಣ ಇಂತಹ ವಿಷಯಾಧಾರಿತ ಚಿತ್ರಗಳು ಕಡಿಮೆ ಇವೆ ಎನ್ನಬಹುದು. ಆದರೆ ಡಬಲ್ ಮೀನಿಂಗ್ ಡೈಲಾಗ್‌ಗಳಿರುವ ಸಣ್ಣ ಸಣ್ಣ ಕಿರು ಚಿತ್ರಗಳು ಕನ್ನಡದಲ್ಲೂ ಪ್ರಸಾರವಾಗುತ್ತಿವೆ.

ಸೆಕ್ಸ್ ಕಂಟೆಂಟ್‌ಅನ್ನು ಟಿಆರ್‌ಪಿ, ಹಣ, ಅಭಿಮಾನಿಗಳು, ಆಫರ್‌ಗಳು, ಪ್ಲಾಟ್ಫಾರ್ಮ್‌ಗೆ ಟ್ರಾಫಿಕ್ ಹೆಚ್ಚು ಮಾಡುವ ಸಾಧನವಾಗಿ ಬಳಸಲಾಗುತ್ತಿದೆ. ವೆಬ್ ಸಿರೀಸ್‌ಗಳು, ಬಾಲಿವುಡ್‌ನ ಬಿ ಗ್ರೇಡ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸುದ್ದಿ ವೆಬ್‌ಸೈಟ್‌ಗಳು ಕೂಡ ಇಂತಹ ಲೈಂಗಿಕಾಸಕ್ತಿಯ ವಿಷಯಗಳನ್ನು ನೀಡುತ್ತಿವೆ. ಕನ್ನಡದ ಸುದ್ದಿವಾಹಿನಿಗಳ ವೆಬ್ ಪೋರ್ಟಲ್‌ಗಳು, ಸುದ್ದಿ ಪತ್ರಿಕೆಗಳ ಪೋರ್ಟಲ್‌ಗಳು ಸೇರಿದಂತೆ ಇಂತಹ ವಿಷಯಗಳಿರುವ ಸುದ್ದಿ, ಚಿತ್ರಗಳು ಹೇರಳವಾಗಿ ಕಾಣಸಿಗುತ್ತವೆ. ಸುದ್ದಿ ಓದಲು ಬರುವ ನೋಟಿಫಿಕೇಷನ್‌ಗಿಂತ ರಾತ್ರಿಯ ಹೊತ್ತು ಇಂತಹ ವಿಷಯಗಳ ನೋಟಿಫಿಕೇಷನ್‌ಗಳು ಎಷ್ಟೋ ಮಂದಿಗೆ ಕಿರಿಕಿರಿ ಮಾಡಿದರೆ ಮತ್ತೆ ಕೆಲವರಲ್ಲಿ ಖುಷಿ ನೀಡುತ್ತದೆ.

ಪೂರ್ತಿ ನಗ್ನವಾಗಿ ಕಾಣಿಸಿಕೊಳ್ಳುವುದು ಅಶ್ಲೀಲವಾದರೇ, ದೇಹದ ಮೇಲೆ ತೆಳುವಾದ ಬಟ್ಟೆ ಹಾಕಿ ತೋರಿಸುವುದು ಶೃಂಗಾರ ಹೇಗಾಗುತ್ತದೆ? ಒಟ್ಟಾರೆ, ಯಾವುದು ಅಶ್ಲೀಲ, ಯಾವುದು ಶೃಂಗಾರ, ಯಾವುದು ಕಾಮಪ್ರಚೋದಕ ಎಂಬುದನ್ನು ನಿರ್ಧರಿಸುವವರು ಯಾರು ಎಂಬ ಪ್ರಶ್ನೆ ತಲೆದೋರುತ್ತದೆ. ಒಬ್ಬರ ದೃಷ್ಟಿಯಲ್ಲಿ ಶೃಂಗಾರ ಎನ್ನುವಂತಹದ್ದು ಮತ್ತೊಬ್ಬರ ದೃಷ್ಟಿಯಲ್ಲಿ ಅಶ್ಲೀಲ, ಕಾಮಪ್ರಚೋದಕವು ಆಗಿರಬಹುದು.


ಇದನ್ನೂ ಓದಿ: ಅಶ್ಲೀಲ ಚಿತ್ರ ಪ್ರಕರಣ: ಉದ್ಯಮಿ ರಾಜ್ ಕುಂದ್ರಾಗೆ ಮಧ್ಯಂತರ ಜಾಮೀನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...