Homeಮುಖಪುಟಪರೀಕ್ಷಾ ಅಕ್ರಮಕ್ಕೆ ಕಠಿಣ ಶಿಕ್ಷೆ, ಭಾರೀ ದಂಡ: ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲೇನಿದೆ?

ಪರೀಕ್ಷಾ ಅಕ್ರಮಕ್ಕೆ ಕಠಿಣ ಶಿಕ್ಷೆ, ಭಾರೀ ದಂಡ: ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲೇನಿದೆ?

- Advertisement -
- Advertisement -

ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳು ಸೇರಿ ಪರೀಕ್ಷಾ ಅಕ್ರಮ ಪ್ರಕರಣಗಳಲ್ಲಿ ಗರಿಷ್ಠ ಮಟ್ಟದ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಮಸೂದೆಯನ್ನು ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದು, 3ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 1ಕೋಟಿ ರೂ.ಗಿಂತ ಕಡಿಮೆಯಿಲ್ಲದೆ ದಂಡ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.

Public Examinations (Prevention of Unfair Means) Bill- 2024 (ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆಗಟ್ಟುವಿಕೆ) ಮಸೂದೆ-2024), ಕೇಂದ್ರೀಯ ನೇಮಕಾತಿ ಮತ್ತು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ನ ಪ್ರವೇಶ ಪರೀಕ್ಷೆಗಳು, ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC), ರೈಲ್ವೆ ನೇಮಕಾತಿ ಮಂಡಳಿಗಳು (RRBs), ಬ್ಯಾಂಕಿಂಗ್ (IBPS) ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಳು ನಡೆಸುವ ಪರೀಕ್ಷೆಗಳಿಗೆ ಅನ್ವಯಿಸಲಿದೆ.

NTA ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ನಡೆಸುತ್ತದೆ, ಉದಾಹರಣೆಗೆ ಎಂಜಿನಿಯರಿಂಗ್‌ಗಾಗಿ ಪ್ರವೇಶ ಪರೀಕ್ಷೆ (JEE), ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾತಿಗಾಗಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಮತ್ತು ಪದವಿಪೂರ್ವ ಮತ್ತು ಸ್ನಾತಕೋತ್ತರ ಅಧ್ಯಯನಗಳಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ CUET ಪರೀಕ್ಷೆಗಳನ್ನು ನಡೆಸುತ್ತದೆ. ಈ ಗೊತ್ತುಪಡಿಸಿದ ಸಾರ್ವಜನಿಕ ಪರೀಕ್ಷಾ ಪ್ರಾಧಿಕಾರಗಳ ಪರೀಕ್ಷೆಗಳು ಹೊರತಾಗಿ ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳು ಕೂಡ ಈ ಕಾನೂನು ವ್ಯಾಪ್ತಿಗೆ ಬರಲಿದೆ.

ಪ್ರಸ್ತುತ ಸಾರ್ವಜನಿಕ ಪರೀಕ್ಷೆಗಳ ಅಕ್ರಮಗಳ ಬಗ್ಗೆ ಯಾವುದೇ ನಿರ್ದಿಷ್ಟ ವಸ್ತುನಿಷ್ಠ ಕಾನೂನು ಇಲ್ಲ ಎಂದು ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ. ಲಾಭಕ್ಕಾಗಿ ಅನ್ಯಾಯದ ವಿಧಾನಗಳಲ್ಲಿ ತೊಡಗಿರುವ ವ್ಯಕ್ತಿಗಳು, ಸಂಘಟಿತ ಗುಂಪುಗಳು ಅಥವಾ ಸಂಸ್ಥೆಗಳಿಗೆ ಶಿಕ್ಷೆಯನ್ನು ಮಸೂದೆ ಒದಗಿಸುತ್ತದೆ, ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳನ್ನು ಅದರ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಹೇಳಲಾಗಿದೆ.

ಸಿಬ್ಬಂದಿ ಮತ್ತು ಆಡಳಿತದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ‘ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ 2024’ರಲ್ಲಿ 20ಪರೀಕ್ಷಾಅಕ್ರಮಗಳನ್ನು ಉಲ್ಲೇಖಿಸಿದೆ. ನಕಲಿ ಅಭ್ಯರ್ಥಿಗಳ ಹಾಜರಿ, ಉತ್ತರ ಪತ್ರಿಕೆಗಳ ಸೋರಿಕೆ, ದಾಖಲೆಗಳನ್ನು ತಿರುಚುವುದು, ಮೆರಿಟ್‌ ಪಟ್ಟಿ ಸಿದ್ಧಪಡಿಸುವಲ್ಲಿ ಅಕ್ರಮ ಎಸಗುವುದು, ಉದ್ದೇಶಪೂರ್ವಕವಾಗಿ ಭದ್ರತಾ ವ್ಯವಸ್ಥೆ ಉಲ್ಲಂಘನೆ, ಪರೀಕ್ಷಾರ್ಥಿಗಳಿಗೆ ಸೀಟು ನಿಗದಿಪಡಿಸುವಲ್ಲಿ ಅಕ್ರಮ ಎಸಗುವುದು, ಉದ್ದೇಶಪೂರ್ವಕವಾಗಿ ನಿಯಮಗಳನ್ನು ಉಲ್ಲಂಘಿಸುವ ಕ್ರಮವನ್ನು ಪರೀಕ್ಷಾ ಅಕ್ರಮಗಳೆಂದು ಹೊಸ ಮಸೂದೆಯಡಿ ಪರಿಗಣಿಸಲಾಗುತ್ತದೆ.

ತಪ್ಪಿತಸ್ಥರು ಸಂಘಟಿತ ಅಪರಾಧಗಳಲ್ಲಿ ತೊಡಿಗಿರುವುದು ದೃಢಪಟ್ಟಲ್ಲಿ ಕನಿಷ್ಠ 5ರಿಂದ 10 ವರ್ಷ ಸಜೆ, 1 ಕೋಟಿ ದಂಡ ವಿಧಿಸಲು ಅವಕಾಶವಿದೆ. ಶಿಕ್ಷಣ ಸಂಸ್ಥೆಗಳೇ ಅಕ್ರಮಗಳಲ್ಲಿ ತೊಡಗಿದ್ದರೆ ಆಸ್ತಿಯ ಜಪ್ತಿ ಜೊತೆಗೆ, ಪರೀಕ್ಷಾ ವೆಚ್ಚ ವಸೂಲಿಗೂ ಕ್ರಮ ಕೈಗೊಳ್ಳಲಾಗುತ್ತದೆ. ಸಂಘಟಿತ ಅಪರಾಧದ ಪಾತ್ರ ಇಲ್ಲದಿದ್ದರೆ 3ರಿಂದ 5 ವರ್ಷ ಸಜೆ ಹಾಗೂ 10 ಲಕ್ಷವರೆಗೂ ದಂಡ ವಿಧಿಸಲು ಅವಕಾಶವಿದೆ. ದಂಡವನ್ನು ಪಾವತಿಸಲು ತಪ್ಪಿದಲ್ಲಿ, ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಮಸೂದೆಯು ಹೇಳುತ್ತದೆ. ಎಲ್ಲಾ ಅಪರಾಧಗಳು ಜಾಮೀನು ರಹಿತ ಅಪರಾಧ ಎಂದು ಸೆಕ್ಷನ್ 9 ಹೇಳುತ್ತದೆ.

ಪರೀಕ್ಷಾ ಪ್ರಾಧಿಕಾರ ಅಥವಾ ಸೇವಾ ಪೂರೈಕೆದಾರರು ಅಥವಾ ಯಾವುದೇ ಇತರ ಸಂಸ್ಥೆ ಅಥವಾ ವ್ಯಕ್ತಿಗಳ ಗುಂಪು ಸಂಘಟಿತ ಅಪರಾಧವನ್ನು ಎಸಗಿದರೆ, ಅವರಿಗೆ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ರೂ.1 ಕೋಟಿಗಿಂತ ಕಡಿಮೆಯಿಲ್ಲದ  ದಂಡವನ್ನು ವಿಧಿಸಲಾಗುತ್ತದೆ. ದಂಡವನ್ನು ಪಾವತಿಸಲು ತಪ್ಪಿದಲ್ಲಿ, ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಬಿಲ್‌ನ ಸೆಕ್ಷನ್ 11 ಹೇಳುತ್ತದೆ.

ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಗಳಿಗೆ ಹೆಚ್ಚಿನ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಬಿಲ್‌ನ್ನು ಮಂಡಿಸಲಾಗಿದೆ. ಪ್ರಾಮಾಣಿಕ ಮತ್ತು ನಿಜವಾದ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ ಮತ್ತು ಅವರ ಭವಿಷ್ಯವು ಸುರಕ್ಷಿತವಾಗಿದೆ ಎಂದು ಯುವಜನರಿಗೆ ಭರವಸೆ ನೀಡುವುದು ಮಸೂದೆಯ ಉದ್ದೇಶವಾಗಿದೆ ಎಂದು ಬಿಲ್ ಹೇಳುತ್ತದೆ.

ವಿವಿಧ ರಾಜ್ಯಗಳ ನೇಮಕಾತಿ ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆಯಲ್ಲದೆ ಕೇಂದ್ರ ಮಟ್ಟದಲ್ಲಿಯೂ ಇಂತಹ ಪ್ರಕರಣಗಳು ನಡೆದಿವೆ. ಕಳೆದ ವರ್ಷ ಮಾರ್ಚ್‌ನಲ್ಲಿ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಕಳೆದ ತಿಂಗಳು ಪಶ್ಚಿಮ ರೈಲ್ವೇಯ ರೈಲ್ವೇ ನೇಮಕಾತಿ ಕೇಂದ್ರವು ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಸಿಬಿಐ ವಿವಿಧ ರಾಜ್ಯಗಳ 12 ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಇದನ್ನು ಓದಿ: ಅಲ್ಪಸಂಖ್ಯಾತರ ವಿರುದ್ಧದ ಕೇಂದ್ರದ ನಿಲುವು: ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...