ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ಆಹಾರ ನಿಗಮದ ಉಗ್ರಾಣದಲ್ಲಿ ಶೇಖರಿಸಲ್ಪಟ್ಟಿದ್ದ 1,550 ಟನ್ ಆಹಾರಧಾನ್ಯ ಹಾಳಾಗಿದೆ ಎಂಬುದು ಗ್ರಾಹಕರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ದೃಢಪಟ್ಟಿದೆ ಎಂದು ದಿ ವೈರ್.ಇನ್ ವರದಿ ಮಾಡಿದೆ.
ಮೇ ತಿಂಗಳಲ್ಲಿ 26 ಟನ್ ಮತ್ತು ಜೂನ್ ತಿಂಗಳಲ್ಲಿ 1453 ಟನ್ ಆಹಾರಧಾನ್ಯ ನಷ್ಟವಾಗಿದೆ ಎಂದು ಅಂಕಿಅಂಶಗಳು ಸ್ಪಷ್ಟಪಡಿಸಿವೆ. ಜುಲೈ-ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ 41, 51 ಟನ್ ಆಹಾರಧಾನ್ಯ ನಷ್ಟವಾಗಿರುವುದು ದಾಖಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಶೂನ್ಯನಷ್ಟವಾಗಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ದೂರದ ಗ್ರಾಮಗಳಿಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿದರು. ಬಹಳಷ್ಟು ಜನರಿಗೆ ಆಹಾರ ಸಿಗದೇ ಒದ್ದಾಡಿದ್ದರು. ಆಗ ಅವರ ಹಸಿವನ್ನು ದೂರ ಮಾಡಲು ಆಹಾರಧಾನ್ಯಗಳನ್ನು ಬಳಸದೇ, ವ್ಯರ್ಥ ಮಾಡಿದ್ದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗ್ರಾಹಕರ ವ್ಯವಹಾರಗಳ ಸಚಿವಾಲಯ ನೀಡಿದ ದಾಖಲೆಗಳಂತೆ ಭಾರತೀಯ ಆಹಾರ ನಿಗಮದ ಉಗ್ರಾಣಗಳಲ್ಲಿ ಆಹಾರಧಾನ್ಯಗಳನ್ನು ಸಂಗ್ರಹ ಮಾಡಲಾಗಿತ್ತು. ಈ ಆಹಾರಧಾನ್ಯಗಳು ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿತ್ತು. ಕೀಟನಾಶಕವನ್ನು ಸಿಂಪಡಿಸಲಾಗಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಲಾಕ್ಡೌನ್ ವಿಧಿಸಿದ್ದು ನೀವು, ಈಗ ನೀವೇ ನೆರವು ನೀಡಿ: ಕೇಂದ್ರಕ್ಕೆ ಸುಪ್ರೀಂ ತಾಕೀತು
’ಆಹಾರಧಾನ್ಯಗಳು ನಷ್ಟವಾಗಿದ್ದರೆ ಶೀಘ್ರವೇ ತನಿಖೆ ಮಾಡುತ್ತೇವೆ. ಪ್ರಕರಣ ದಾಖಲಿಸುತ್ತೇವೆ. ಅದರ ಆಧಾರದ ಮೇಲೆ ಸಂಬಂಧಪಟ್ಟ ಪ್ರಾಧಿಕಾರವು ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಿದೆ. 2014 ರಿಂದ 2018ರ ಅವಧಿಯಲ್ಲಿ 125 ಮಂದಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದ’ ಎಂದು ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆಂದು ದಿ ವೈರ್.ಇನ್ ವರದಿ ಮಾಡಿದೆ.
ಪ್ರಸಕ್ತ ವರ್ಷದ ಏಪ್ರಿಲ್ನಲ್ಲಿ ಉಗ್ರಾಣಗಳಲ್ಲಿ ಸರ್ಕಾರ ವೈಜ್ಞಾನಿಕ ಮಾದರಿಯನ್ನು ಅಳವಡಿಸಿಕೊಂಡಿದ್ದರಿಂದ ನಷ್ಟ ಕಡಿಮೆಯಾಗಿದೆ. ಸಂಗ್ರಹ ಮತ್ತು ವಿತರಣೆಗೆ ಅನುಕೂಲವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
2015-16 ಸಾಲಿನಲ್ಲಿ 60.3 ದಶಲಕ್ಷ ಟನ್ ಅಕ್ಕಿ ಮತ್ತು ಗೋಧಿ ಖರೀದಿಸಿದ್ದು 3116 ಟನ್ ಆಹಾರ ಧಾನ್ಯ ಗಳು ಹಾಳಾಗಿದೆ. ಇದು ಒಟ್ಟು ಖರೀದಿಯಲ್ಲಿ ಕೇವಲ ಶೇ. 0.005ರಷ್ಟು ಮಾತ್ರ ಎಂದು ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ. 2016-17ನೇ ಸಾಲಿನಲ್ಲಿ 61 ದಶಲಕ್ಷ ಟನ್ ಖರೀದಿಸಿದ್ದು ನಷ್ಟ ಪ್ರಮಾಣ ಕೇವಲ ಶೇ. 0.014ರಷ್ಟು ಆಗಿದೆ ಎಂದು ವರದಿ ತಿಳಿಸಿದೆ.
ಈ ನಡುವೆ 2017-18, 2018-19ನೇ ಸಾಲಿನಲ್ಲಿ ಶೇ. 0.003ರಷ್ಟು ಮತ್ತು ಶೇ. 0.006 ರಷ್ಟು ನಷ್ಟವಾಗಿದೆ. 2019-20ರಲ್ಲಿ 75.17 ದಶಲಕ್ಷ ಟನ್ ಆಹಾರಧಾನ್ಯ ಖರೀದಿಸಿತ್ತು. ಇದರಲ್ಲಿ 1930 ಟನ್ ನಷ್ಟವಾಗಿದೆ. ಇದು ಒಟ್ಟು ಖರೀದಿಯ ಕೇವಲ ಶೇ.0.002ರಷ್ಟು ಆಗಿದೆ ಎಂದು ದಿ ವೈರ್.ಇನ್ ವರದಿ ಮಾಡಿದೆ.