49 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ, ಸಾಂಸ್ಕೃತಿಕ ಸಮುದಾಯದ 185 ಸೆಲೆಬ್ರಿಟಿಗಳು ಪತ್ರ ಚಳವಳಿ ಆರಂಭಿಸಿದ್ದಾರೆ. ಬಿಹಾರದ ಮುಜಫ್ಫರ್ಪುರದಲ್ಲಿ ನಡೆದ ಸಾಮೂಹಿಕ ಹಲ್ಲೆ ಖಂಡಿಸಿ, ಪ್ರಧಾನಿಗೆ ಬಹಿರಂಗ ಪತ್ರ ಬರೆದಿದ್ದ 49 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವ ಕ್ರಮವನ್ನು ದೇಶದ ಎಲ್ಲ ಭಾಗದ ಸೆಲೆಬ್ರಿಟಿಗಳು ಖಂಡಿಸಿದ್ದಾರೆ.
ನಟ ನಾಸಿರುದ್ದೀನ್ ಶಾ, ಡ್ಯಾನ್ಸರ್ ಮಲ್ಲಿಕಾ ಸಾರಾಬಾಯಿ, ಲೇಖಕ ಅಶೋಕ್ ವಾಜಪೇಯಿ, ನಯನತಾರಾ ಸೆಹಗಲ್, ಶಶಿ ದೇಶಪಾಂಡೆ, ರೋಮಿಲಾ ಥಾಪರ್, ಟಿ.ಎಂ ಕೃಷ್ಣಾ, ವಿವನ್ ಸುಂದರನ್ ಸೇರಿದಂತೆ 185 ಸೆಲೆಬ್ರಿಟಿಗಳು, 49 ಸೆಲೆಬ್ರಿಟಿಗಳ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಪತ್ರದ ಮೂಲಕ ಸೆಲೆಬ್ರಿಟಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ದೇಶದ್ರೋಹದ ಕೇಸ್ ದಾಖಲಿಸಿರುವುದನ್ನು ವಿರೋಧಿಸಿದ್ದಾರೆ.
ನಾಗರಿಕ ಸಮಾಜದ ಗೌರವಾನ್ವಿತ ಸದಸ್ಯರಂತೆ ಕರ್ತವ್ಯ ನಿರ್ವಹಿಸಿದ ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ, ಗುಂಪುಗಳ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ್ದೇ ಅಪರಾಧದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಂತಿಯುತವಾಗಿ ಬದುಕು ನಡೆಸುತ್ತಿರುವ ಜನತೆಯನ್ನು ಪ್ರೀತಿಸಬೇಕು. ನಮ್ಮ ಸಂವಿಧಾನ ಜಾತ್ಯಾತೀತ ರಾಷ್ಟ್ರವನ್ನಾಗಿಸಿದೆ. ಇಲ್ಲಿ ಎಲ್ಲಾ ಜಾತಿ, ಸಮುದಾಯ ಹಾಗೂ ಜನರಿಗೆ ಸಮಾನ ಹಕ್ಕು ಮತ್ತು ಕರ್ತವ್ಯಗಳಿವೆ. ಮುಸ್ಲಿಂ ಮತ್ತು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಪ್ರಕಾರ, 2016ರಲ್ಲಿ ದಲಿತರ ವಿರುದ್ಧ 840ಕ್ಕಿಂತ ಹೆಚ್ಚು ದೌರ್ಜನ್ಯ ನಡೆದಿರುವ ಬಗ್ಗೆ ವರದಿಯಾಗಿದೆ. ಜನವರಿ 1, 2009ರಿಂದ ಅಕ್ಟೋಬರ್ 29, 2018ರವರೆಗೆ ಧಾರ್ಮಿಕ ವಿಚಾರವಾಗಿ 254 ಅಪರಾಧ ವರದಿಗಳಾಗಿವೆ. ಧಾರ್ಮಿಕ ವಿಚಾರವಾಗಿ ನಡೆದ ಅಪರಾಧಗಳಲ್ಲಿ ಕನಿಷ್ಠ 91 ಮಂದಿ ಮೃತಪಟ್ಟಿದ್ದು, 579 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ನಾಗರಿಕರ ಧಾರ್ಮಿಕ ಅಪರಾಧ ವರದಿ ಪ್ರಕಾರ, ಭಾರತದ ಜನಸಂಖ್ಯೆಯ ಶೇ.14ರಲ್ಲಿ, ಮುಸ್ಲಿಮರು ಶೇ. 62 ಪ್ರಕರಣಗಳಲ್ಲಿ ಬಲಿಪಶುವಾಗಿದ್ದಾರೆ. ಶೇ. 14 ರಷ್ಟು ಪ್ರಕರಣಗಳಲ್ಲಿ ಕ್ರಿಶ್ಚಿಯನ್ನರು ಬಲಿಯಾಗಿದ್ದಾರೆ. ಅಷ್ಟೇ ಅಲ್ಲ 2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸುಮಾರು ಶೇ. 90ರಷ್ಟು ದಾಳಿ ನಡದಿರುವ ಪ್ರಕರಣಗಳು ವರದಿ ಆಗಿರುವುದನ್ನು ಉಲ್ಲೇಖಿಸಿದ್ದಾರೆ.
ಜೈ ಶ್ರೀರಾಮ್ ಘೋಷಣೆ ಯುದ್ಧದ ಭಯದ ವಾತಾವರಣ ನಿರ್ಮಿಸಿದೆ. ಧಾರ್ಮಿಕತೆಯ ಹೆಸರಲ್ಲಿ ಹಲವು ಘಟನೆಗಳು ನಡೆದಿವೆ. ಧರ್ಮದ ಹೆಸರಲ್ಲಿ ಸಾಮೂಹಿಕ ಹಲ್ಲೆಗಳು ನಡೆದಿದ್ದು, ದೇಶದಲ್ಲಿ ಭೀತಿ ಹುಟ್ಟಿಸಿವೆ ಎಂದು ಸೆಲೆಬ್ರಿಟಿಗಳು ಹೇಳಿದ್ದಾರೆ.
ಕೇಂದ್ರ ಸರ್ಕಾರದ ದೌರ್ಜನ್ಯ ಮತ್ತು ದಬ್ಬಾಳಿಕೆಯ ವಿರುದ್ಧ ಪ್ರಜ್ಞಾವಂತರೆಲ್ಲರೂ ಒಕ್ಕೊರಲಿನಿಂದ ದನಿ ಎತ್ತಬೇಕು.