ಮೈಸೂರು ವಿಶ್ವವಿದ್ಯಾನಿಲಯದ ಪಿಜಿ ಹಾಸ್ಟೆಲ್ಗಳಲ್ಲಿ ಊಟ ನಿಲ್ಲಿಸಲಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಸ್.ಟಿ.ರಾಮಚಂದ್ರ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗಿದೆ.
ಕೋವಿಡ್ ಅವಧಿಯಲ್ಲಿ ಹಾಸ್ಟೆಲ್ ಹಾಗೂ ಮೆಸ್ಗಳನ್ನು ಮುಚ್ಚಲಾಗಿತ್ತು. ಕಡಿಮೆ ಅವಧಿಯಲ್ಲಿ ಹಾಸ್ಟೆಲ್ ತೆರೆದು ಪರೀಕ್ಷೆಗಳನ್ನು ನಡೆಸಲಾಯಿತು. ಈಗ ಹೊಸ ವಿದ್ಯಾರ್ಥಿಗಳ ಪ್ರವೇಶಾತಿಯೂ ನಡೆಯುತ್ತಿದೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಮನೆಗೆ ತೆರೆಯದೆ ಹಾಸ್ಟೆಲ್ಗಳಲ್ಲೇ ಉಳಿದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದಾರೆ. ಆದರೆ ಊಟ ಅವಧಿ ಮುಗಿದ ವಿದ್ಯಾರ್ಥಿಗಳಿಗೆ ಊಟ ನೀಡುವುದಿಲ್ಲ ಎಂದು ಮೈಸೂರು ವಿವಿ ತಿಳಿಸಿತ್ತು. ಹೀಗೆ ಉಂಟಾಗಿರುವ ಗೊಂದಲದ ವೇಳೆ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಡಾ.ಎಸ್.ಟಿ.ರಾಮಚಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ‘ಗೂಂಡಾಗಿರಿ’ ಮಾಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಹರಿಬಿಡಲಾಗಿದೆ.
ಇದರ ಕುರಿತು ಪ್ರತಿಕ್ರಿಯೆ ಪಡೆಯಲು ರಾಮಚಂದ್ರ ಅವರನ್ನು ಸಂಪರ್ಕಿಸಿದಾಗ ಅವರು ಘಟನೆಯ ವಿವರ ಹಾಗೂ ಮೈಸೂರು ವಿವಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. “ನಾನು ತನಿಖೆ ನಡೆಸಿದ್ದರಿಂದ ಸಿಕ್ಕಿಬಿದ್ದವರು ಕೆಲವರನ್ನು ಛೂ ಬಿಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“72 ವಿದ್ಯಾರ್ಥಿಗಳಿಗೆ ಮಾತ್ರ ಮೌಖಿಕ ಸಂದರ್ಶನ (ವೈವಾ), ಪ್ರಾಯೋಗಿಕ ಪರೀಕ್ಷೆ ಹಾಗೂ ಡೆಸಾರ್ಟೇಷನ್ ಸಲ್ಲಿಕೆ ಬಾಕಿ ಇದೆ. ಉಳಿದ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರಕ್ರಿಯೆ ಮುಗಿದಿದೆ. ಪರೀಕ್ಷೆ ಮುಗಿದವರು ಮನೆಗೆ ಹೋಗಬೇಕಿತ್ತು. ಆದರೆ ಹೋಗಿಲ್ಲ. ವಿಭಾಗಗಳಲ್ಲಿ ಹೊಸದಾಗಿ ಪ್ರವೇಶ ಪಡೆದವರಿಗೆ (ಹಾಸ್ಟೆಲ್ಗೆ ಪ್ರವೇಶ ಪಡೆಯದಿದ್ದರೂ), ಪರೀಕ್ಷೆ ಇದ್ದವರಿಗೆ ಸೇರಿ 250 ಮಂದಿಗೆ ಮಂಗಳವಾರ ಅಡುಗೆ ಮಾಡಿಸಲಾಗಿತ್ತು. ಯಾರಿಗೂ ಊಟ ಮಾಡಲು ಅವಕಾಶ ನೀಡದೆ ವಿಶ್ವ ಪ್ರಸಾದ್ ಎಂಬವವರು ಮೆಸ್ಗೆ ಬೀಗ ಹಾಕಿದ್ದರು. ಪರೀಕ್ಷೆ ಇದ್ದ 72 ಮಂದಿ ವಿದ್ಯಾರ್ಥಿಗಳು ದೂರಿದಾಗ ಸ್ಥಳಕ್ಕೆ ಭೇಟಿ ನೀಡಲಾಯಿತು. ರಾಜಾನಂದ ಎಂಬವರು ನನ್ನ ಕೈ ಎಳೆಯೋದು, ಮೈಮೇಲೆ ಬೀಳೋದು ಮಾಡುತ್ತಿದ್ದ. ಹೊಡೆಯುತ್ತೀಯೇನಪ್ಪ, ಬಾ ಹೊಡಿ ಎಂದು ನಾನು ಮುನ್ನುಗ್ಗಿದೆ ಅಷ್ಟೆ. ಅದನ್ನು ಗೂಂಡಾಗಿರಿ ಎಂದು ಬಿಂಬಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿರಿ: ದಕ್ಷಿಣ ಕನ್ನಡ: BJP ನಾಯಕನ ಮೇಲೆ ಬಜರಂಗ ದಳದ ಕಾರ್ಯಕರ್ತರಿಂದ ತಲವಾರು ದಾಳಿ
ಅಕ್ಟೋಬರ್ 13ರಲ್ಲಿ ಪರೀಕ್ಷೆ ಮುಗಿದರೂ ಇಲ್ಲೇ ಇದ್ದಾರೆ. ಪ್ರವೇಶ ಪಡೆದವರು ಹಾಗೂ ಪರೀಕ್ಷೆ ಇರುವವರು ಸೇರಿ 170 ಮಂದಿ ಮಾತ್ರ ಇರಬೇಕು. ಆದರೆ 600 ಮಂದಿ ಅನಧಿಕೃತವಾಗಿದ್ದಾರೆ. ಅವರ್ಯಾರೂ ಅಧಿಕೃತ ಅಲ್ಲ ಎಂದ ಅವರಿಗೆ, ‘ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಂದ ಇ.ಬಿ.ಎಲ್ ಹೆಚ್ಚುವರಿ ಹಣ ನೀಡಲಾಗಿಲ್ಲ ಯಾಕೆ?’ ಎಂದು ಪ್ರಶ್ನಿಸಿದಾಗ, ‘ಸರ್ಕಾರದಿಂದ ಹಣ ಬಂದಿಲ್ಲ’ ಎಂದರು.
“2019-20ನೇ ಸಾಲಿನ ವಿದ್ಯಾರ್ಥಿವೇತನ ಮಾತ್ರ ಬರುತ್ತಿದೆ. ಲಾಕ್ ಡೌನ್ ಜಾರಿಯಾದ ಸಮಯದ ಹಣವನ್ನು ಸರ್ಕಾರ ಕೊಡುವುದಿಲ್ಲ. ಇ.ಬಿ.ಎಲ್. ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಬೆಂಗಳೂರಿಗೆ ಹೋಗಿ ಬಂದಿದ್ದು ಇ.ಬಿ.ಎಲ್. ಹಣವನ್ನು ನೀಡಬೇಕೆಂದು ಕೋರಿದ್ದೇವೆ. ಸರ್ಕಾರದ ಮಟ್ಟದಲ್ಲಿ ಆಗಬೇಕು. ಯಾವುದೇ ಹಣವೂ ದುರಪಯೋಗಿ ಆಗಿಲ್ಲ. 2021ನೇ ಸಾಲಿನಲ್ಲಿ ಆರು ತಿಂಗಳಿಗೆ ಮಾತ್ರ ಸ್ಕಾಲರ್ಶಿಪ್ ನೀಡಲಾಗಿದೆ. ಈ ವರ್ಷದ ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ವೆಚ್ಚವನ್ನು ವಿಶ್ವವಿದ್ಯಾನಿಲಯದಿಂದ ಭರಿಸಬೇಕು. ವಿದ್ಯಾರ್ಥಿಗಳಿಗೆ ಬರಬೇಕಾದ ಇ.ಬಿ.ಎಲ್. ಬಂದರೆ ನಾವು ಅವರಿಗೆ ತಲುಪಿಸುತ್ತೇವೆ” ಎಂದು ಪ್ರತಿಕ್ರಿಯಿಸಿದರು.
ಸರ್ಕಾರ ಒಬ್ಬ ವಿದ್ಯಾರ್ಥಿಗೆ 1600 ರೂ.ಗಳನ್ನು ತಿಂಗಳಿಗೆ ನೀಡುತ್ತದೆ. ವಿಶ್ವವಿದ್ಯಾನಿಲಯದಿಂದ ಇ.ಬಿ.ಎಲ್. 300 ರೂ. ನೀಡಿ, ಒಂದು ತಿಂಗಳ ಮೆಸ್ ಬಿಲ್ 1900 ರೂ. ಭರಿಸಲಾಗುತ್ತಿದೆ. ಈ ಹಣ ದಿನಸಿ ವೆಚ್ಚವಾಗಿ ಹೋಗುತ್ತದೆ. ಅಡುಗೆ ಭಟ್ಟರಿಗೆ ವಿವಿ ಹಣ ನೀಡುತ್ತದೆ. ಲಾಕ್ಡೌನ್ ಸಮಯದಲ್ಲಿ ಹಾಸ್ಟೆಲ್ಗಳು ಇರಲಿಲ್ಲ. ಹೀಗಾಗಿ ಈ ಸಮಯದ ಹಣವನ್ನು ಸರ್ಕಾರ ನೀಡುವುದಿಲ್ಲ. ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದೆವು. ವಿಶ್ವವಿದ್ಯಾನಿಲಯವೇ 38 ಲಕ್ಷ ರೂ.ಗಳನ್ನು ಭರಿಸಬೇಕಾಯಿತು. ಈ ಬಾರಿಯೂ ಅಷ್ಟೇ. ಆರು ತಿಂಗಳ ಹಣವನ್ನು ಮಾತ್ರ ಸರ್ಕಾರ ನೀಡುತ್ತದೆ. ಇನ್ನೆರಡು ತಿಂಗಳ ಹಣವನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಸಂಕಷ್ಟ ತೋಡಿಕೊಂಡರು.
ಮುಂದುವರಿದು ಮಾತನಾಡಿದ ಅವರು, “ಎರಡು ವರ್ಷಗಳಿಂದ ಇ.ಬಿ.ಎಲ್. ಹಣ ಬಂದಿಲ್ಲ. ಅದರ ಹಿಂದಿನ ವರ್ಷಗಳಲ್ಲಿಯೂ ಬಹಳ ವಿದ್ಯಾರ್ಥಿಗಳಿಗೆ ಇ.ಬಿ.ಎಲ್. ಬಂದಿಲ್ಲ. ಅದನ್ನೆಲ್ಲ ಸರಿ ಮಾಡಲಾಗುತ್ತಿದೆ. ನಾನು ನಿರ್ದೇಶಕನಾಗಿ ಅಧಿಕಾರಕ್ಕೆ ಒಂದು ವರ್ಷ, ಐದು ತಿಂಗಳಾಗಿದೆ. 28 ಲಕ್ಷ ರೂ. ಹೆಚ್ಚುವರಿ ಮೆಸ್ ಬಿಲ್ ಬಂದಿತ್ತು. ಈ ಹಿಂದೆ ಒಟ್ಟು 46 ಲಕ್ಷ ರೂ.ಗಳನ್ನು ವಾರ್ಡನ್ಗಳು, ಕ್ಲರ್ಕ್ಗಳು ಎಲ್ಲ ಸೇರಿ ತಿಂದಿದ್ದರು. ಅವರನ್ನೆಲ್ಲ ಹಿಡಿದು ತನಿಖೆ ಮಾಡಿಸಿದ್ದೇನೆ. ನಾನು ಯಾರ್ಯಾರನ್ನು ಹಿಡಿದಿದ್ದೇನೆಯೋ ಅವರೆಲ್ಲ ಈ ಪ್ರತಿಭಟನೆಯ ಹಿಂದೆ ಇದ್ದಾರೆ” ಎಂದು ಆರೋಪಿಸಿದರು.
“ನನ್ನ ಮೇಲೆ ನೂರು ರೂಪಾಯಿ ಭ್ರಷ್ಟಾಚಾರ ಇದ್ದರು ನನ್ನನ್ನು ಜೈಲಿಗೆ ಹಾಕಿರಿ. ನಾನು ಸಹ ಪ್ರಾಧ್ಯಾಪಕ. ನನ್ನ ಮೇಲೆ ಆರೋಪ ಬಂದರೆ ಇವತ್ತೇ ಈ ನಿರ್ದೇಶಕನ ಸ್ಥಾನ ಬಿಡುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಎಲ್ಲ ಹಾಸ್ಟೆಲ್ಗಳನ್ನು ಸೇರಿ 4,300 ವಿದ್ಯಾರ್ಥಿಗಳು ಇದ್ದಾರೆ. ಕೇವಲ 2% ವಿದ್ಯಾರ್ಥಿಗಳು ಮಾತ್ರ ಹೀಗೆ ತಿರುಗಿ ಬೀಳುತ್ತಿದ್ದಾರೆ. ಕೆಲವರನ್ನು ನನಗಾಗದವರು ಛೂ ಬಿಡುತ್ತಿದ್ದಾರೆ. ನನ್ನಿಂದ ರೋಲ್ಕಾಲ್ ಮಾಡಲು ನೋಡುತ್ತಿದ್ದಾರೆ ಎಂದು ದೂರಿದರು.
“ಪರೀಕ್ಷೆ ಮುಗಿದ ಮೇಲೂ ಮೆಸ್ ನಡೆಸಿದರೆ ಏಕೆ ಮೆಸ್ ನಡೆಸುತ್ತಿದ್ದೀರಿ ಎಂದು ಆಡಿಟರ್ ನನ್ನನ್ನು ಕೇಳುತ್ತಾರೆ. ಮುನ್ನೂರು ಜನರು ಇರುವಲ್ಲಿ, ಐನ್ನೂರು ಜನರಿಗೆ ಊಟ ಯಾಕೆ ಹಾಕಿದ್ದೀರಿ ಎಂದು ನನ್ನನ್ನು ಪ್ರಶ್ನಿಸುತ್ತಾರೆ” ನಾನೇನು ಉತ್ತರ ನೀಡಲಿ” ಎಂದು ಕೇಳಿದರು.
“ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿವೆ. ಈಗ ಉಳಿದಿರುವ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಲೇಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ವಿದ್ಯಾರ್ಥಿಗಳು ಇದ್ದಾರೆ. ಅವಧಿ ಮುಗಿದ ಮೇಲೆಯೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲ್ಲ. ಅಕ್ಟೋಬರ್ 31ಕ್ಕೆ ಕ್ಲೋಸ್ ಮಾಡಿಸಿ, ಹೊಸ ವಿದ್ಯಾರ್ಥಿಗಳಿಗೆ ನವೆಂಬರ್ 1ರಿಂದ ಅವಕಾಶ ನೀಡಲಾಗುತ್ತಿದೆ” ಎಂದರು.