Homeಕರ್ನಾಟಕರಾಹುಲ್ ಗಾಂಧಿ ಹೋರಾಟವನ್ನು ಮಣ್ಣುಗೂಡಿಸಿದ ರಾಜ್ಯ ಸರ್ಕಾರ! ಕಾರಣ ಜೆಡಿಎಸ್ಸೋ? ಕಾಂಗ್ರೆಸ್ಸೋ?

ರಾಹುಲ್ ಗಾಂಧಿ ಹೋರಾಟವನ್ನು ಮಣ್ಣುಗೂಡಿಸಿದ ರಾಜ್ಯ ಸರ್ಕಾರ! ಕಾರಣ ಜೆಡಿಎಸ್ಸೋ? ಕಾಂಗ್ರೆಸ್ಸೋ?

- Advertisement -
- Advertisement -

| ನೀಲಗಾರ |

ಯಾವುದನ್ನು ರಾಹುಲ್ ಗಾಂಧಿ ಕಾಯ್ದೆ ಎಂದು ಹೇಳಲಾಗುತ್ತದೋ, ಯಾವುದನ್ನು ಮುಂದಿಟ್ಟುಕೊಂಡು ದೇಶಾದ್ಯಂತ ರೈತರು ಹೋರಾಟ ಮಾಡಿ ನರೇಂದ್ರ ಮೋದಿ ಸರ್ಕಾರವನ್ನು ಮಣಿಸಿದ್ದರೋ, ಆ ವಿಚಾರದಲ್ಲಿ ರಾಹುಲ್ ಗಾಂಧಿ ಪ್ರತಿಪಾದಿಸಿದ ಆಶಯವನ್ನೇ ರಾಜ್ಯ ಸರ್ಕಾರವು ಮಣ್ಣುಗೂಡಿಸಿದೆ. ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಸಮ್ಮಿಶ್ರ ಸರ್ಕಾರದ ಎರಡೂ ಅಂಗಪಕ್ಷಗಳ ವಕ್ತಾರರನ್ನು ‘ಪತ್ರಿಕೆ’ಯು ಮಾತನಾಡಿಸಿತು. ಕಾಂಗ್ರೆಸ್‍ನ ವಕ್ತಾರರಿಗೆ ಇಂತಹದೊಂದು ಬೆಳವಣಿಗೆ ಆಗಿರುವುದರ ಕುರಿತು ಮಾಹಿತಿಯೇ ಇಲ್ಲ! ಮಾಹಿತಿ ಹೊಂದಿರುವ ಜೆಡಿಎಸ್‍ನ ವಕ್ತಾರರು, ಸಮಸ್ಯೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಂದಾಯ ಮಂತ್ರಿ ದೇಶಪಾಂಡೆಯ ಮೇಲೆ ದೋಷ ಹೊರಿಸಿದರು.

ಸ್ವತಃ ತಮ್ಮ ಮೈತ್ರಿಕೂಟದ ನೀತಿಗಳಿಗೇ ಬದ್ಧರಾಗಿರದ ಈ ಪಕ್ಷಗಳ ಸ್ಥಳೀಯ ನಾಯಕರುಗಳು ಬಿಜೆಪಿಯ ನೀತಿಗಳ ವಿರುದ್ಧ ಕಾಟಾಚಾರಕ್ಕೆ ಮಾತ್ರ ಪ್ರತಿಭಟನೆ ಮಾಡುತ್ತಾರೆಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಈ ಎರಡೂ ಪಕ್ಷಗಳ ಸ್ಥಳೀಯ ನಾಯಕರುಗಳು ಈ ಹಿಂದೆ ಮೋದಿ ಸರ್ಕಾರದ ಸದರಿ ತಿದ್ದುಪಡಿಯ ವಿರುದ್ಧ ಕರ್ನಾಟಕದಲ್ಲೂ ಪ್ರತಿಭಟನೆ ನಡೆಸಿದ್ದರು!! ಇದೀಗ ಅದನ್ನೇ ತಾವೂ ಜಾರಿಗೆ ತರಲು ಹೊರಟಿದ್ದಾರೆ.

ನಿನ್ನೆ (ಜೂನ್ 10ರಂದು) ರಾಜ್ಯದ ವಿವಿಧ ಭಾಗಗಳಲ್ಲಿ ರೈತಸಂಘವು ಇದನ್ನು ಖಂಡಿಸಿ ಹೆದ್ದಾರಿ ತಡೆಯನ್ನು ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯು ರಾಜ್ಯ ಸರ್ಕಾರದ ವಿರುದ್ಧ ಆಗಿದ್ದರಿಂದ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಬೇಕಿತ್ತು. ಆದರೆ, ಅದರ ಹಿಂದೆ ನರೇಂದ್ರ ಮೋದಿ ಸರ್ಕಾರದ ನಿಲುವನ್ನೂ ವಿರೋಧ ಮಾಡುವುದರಿಂದ ಯಾವ ಟಿವಿ ಚಾನೆಲ್‍ಗೂ ಅದೊಂದು ದೊಡ್ಡ ಸುದ್ದಿ ಎನಿಸಲಿಲ್ಲ. ಅದರ ಜೊತೆಗೆ ಗಿರೀಶ್ ಕಾರ್ನಾಡರ ನಿಧನದ ಕಾರಣಕ್ಕೂ ಮಾಧ್ಯಮಗಳು ಅದರ ಕಡೆಗೆ ಗಮನ ಕೊಡಲಿಲ್ಲ. ಆದರೆ, ರಾಜ್ಯದ ಸಮ್ಮಿಶ್ರ ಸರ್ಕಾರದ ಅತೀ ದೊಡ್ಡ ತಪ್ಪು ನೀತಿಯ ವಿರುದ್ಧ ನಡೆದ ಮಹತ್ವದ ಪ್ರತಿಭಟನೆ ಇದಾಗಿದೆ.

2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶಾದ್ಯಂತ ಅದು ರೈತರ ಪ್ರತಿಭಟನೆಯನ್ನು ಎದುರಿಸಬೇಕಾಗಿ ಬಂದಿತ್ತು. ಅದಕ್ಕೆ ಕಾರಣ ಭೂಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಂದ ತಿದ್ದುಪಡಿ. ಈ ಭೂಸ್ವಾಧೀನ ಕಾಯ್ದೆಯು ಯುಪಿಎ ಸರ್ಕಾರದಲ್ಲಿ ಜಾರಿಗೆ ಬಂದಿತ್ತು. ವಾಸ್ತವದಲ್ಲಿ ಭಾರತದಲ್ಲಿ ರೈತರ ಭೂಮಿಯನ್ನು ವಿವಿಧ ಯೋಜನೆಗಳಿಗಾಗಿ ಸರ್ಕಾರವು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದರೆ 1894ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಯನ್ನೇ ಬಳಸಲಾಗುತ್ತಿತ್ತು. ಅದು ಏಕಪಕ್ಷೀಯವಾಗಿದ್ದು, ರೈತವಿರೋಧಿಯಾಗಿತ್ತು.

ಅದರ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿ ‘ಅಭಿವೃದ್ಧಿಯ ಹೆಸರಿನಲ್ಲಿ’ ಸರ್ಕಾರಗಳು ಭೂಸ್ವಾಧೀನಕ್ಕೆ ಮುಂದಾದಾಗಲೆಲ್ಲಾ ಭಾರೀ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತಿತ್ತು. ದಿನೇ ದಿನೇ ಅವುಗಳ ತೀವ್ರತೆ ಮತ್ತು ಪ್ರಮಾಣ ಹೆಚ್ಚಾಗುತ್ತಲೆ ಬಂದಿತ್ತು. ಒರಿಸ್ಸಾದ ಕಾಶೀಪುರ, ನಿಯಮಗಿರಿ, ಕಳಿಂಗ ಇತ್ಯಾದಿಗಳೆಡೆ ನಡೆದ ಪ್ರತಿಭಟನೆಗಳು ಮತ್ತು ಪಶ್ಚಿಮ ಬಂಗಾಳದ ಸಿಂಗೂರು ಮತ್ತು ನಂದಿಗ್ರಾಮಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾರೂಪವನ್ನು ತಳೆದಿದ್ದವು. ಏಕೆಂದರೆ, ಅದೇನೇ ಆದರೂ ಭೂಮಿಯನ್ನು ವಶಪಡಿಸಿಕೊಂಡೇ ತೀರುತ್ತೇವೆಂದು ಸರ್ಕಾರಗಳು ಹೊರಟು, ಅನಿವಾರ್ಯವಾಗಿ ರೈತರು ತಿರುಗಿಬಿದ್ದಿದ್ದರು.

ಇವುಗಳ ಪರಿಣಾಮವಾಗಿ ಭೂಸ್ವಾಧೀನದಲ್ಲಿನ ಸಮಸ್ಯೆಗಳಿಂದಾಗಿ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು. ಯುಪಿಎ -2ರ ಸಂದರ್ಭದಲ್ಲಿ ಇದನ್ನು ಪರಿಶೀಲಿಸಿದ ಸರ್ಕಾರವು ಭೂಸ್ವಾಧೀನ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತರಲು ಹೊರಟಿತು. ಆಗ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್‍ಗಾಂಧಿ ಅದರಲ್ಲಿ ನೇರವಾಗಿ ಮಧ್ಯಪ್ರವೇಶಿಸಿದರು. ಊಹೆಗೆ ನಿಲುಕದಷ್ಟು ಪ್ರಮಾಣದಲ್ಲಿ ಸದರಿ ಕಾಯ್ದೆಯನ್ನು ರೈತಪರವಾಗಿಸಲಾಯಿತು. ಅಂತಿಮವಾಗಿ ಭೂಸ್ವಾಧೀನ ಕಾಯ್ದೆ ಎಂಬ ಹೆಸರನ್ನೇ ಬದಲಿಸುವಷ್ಟು ಮಟ್ಟಿಗೆ ಅದು ಜನಪರವಾಗಿತ್ತು. ಅದರ ಹೊಸ ಹೆಸರು ‘ಭೂಸ್ವಾಧೀನ ಮಾಡಿಕೊಳ್ಳುವಾಗ ನ್ಯಾಯಯುತವಾದ ಪರಿಹಾರ ನೀಡುವುದು ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳುವ ಕಾಯ್ದೆ’ ಎಂದಾಗಿತ್ತು! ಹಾಗಾಗಿಯೇ ಇದನ್ನು ರಾಹುಲ್‍ಗಾಂಧಿ ಕಾಯ್ದೆ ಎಂದೂ ಕೆಲವು ಕಾಂಗ್ರೆಸ್ ನಾಯಕರು ಹೇಳುತ್ತಿದ್ದುದುಂಟು.

ಇಂತಹ ಹಲವಾರು ಜನಪರ ಕ್ರಮಗಳಂತೆ, ಇದರ ಬಗ್ಗೆಯೂ ಯುಪಿಎ ಸರ್ಕಾರವು ಹೆಚ್ಚೇನೂ ಪ್ರಚಾರ ಮಾಡಿಕೊಳ್ಳಲಿಲ್ಲ. ಇದರ ಬಗ್ಗೆ ಜನರಿಗೆ ಗೊತ್ತಾಗಿದ್ದು, ಯುಪಿಎ ಸೋತು ಎನ್‍ಡಿಎ ಅಧಿಕಾರಕ್ಕೆ ಬಂದ ಮೇಲೆ. ಈ ಕಾಯ್ದೆಯಿದ್ದರೆ ಭೂಸ್ವಾಧೀನ ಸಾಧ್ಯವೇ ಇಲ್ಲ ಎಂದು ಬಗೆದ ಮೋದಿ ಸರ್ಕಾರವು 2014ರಲ್ಲೇ ಸದರಿ ಕಾಯ್ದೆಗೆ ಗಂಭೀರ ತಿದ್ದುಪಡಿಗಳನ್ನು ಸುಗ್ರೀವಾಜ್ಞೆಯ ಮೂಲಕ ತರಲು ಹೊರಟಿತು. ಇದಕ್ಕೆ ದೇಶದ ಎಲ್ಲೆಡೆ ತೀವ್ರವಾದ ಪ್ರತಿಭಟನೆಗಳು ಶುರುವಾದವು. ಸ್ವತಃ ಬಿಜೆಪಿಯ ರೈತ ವಿಭಾಗವಾದ ಭಾರತೀಯ ಕಿಸಾನ್ ಸಂಘವೂ ವಿರೋಧಿಸಿತು. ಸುಗ್ರೀವಾಜ್ಞೆಯ ಅವಧಿ ಮುಗಿಯುತ್ತಾ ಬಂದಂತೆ, ಅದರ ನವೀಕರಣವಾಗುವ ಹೊತ್ತಿಗೆ ಪ್ರತಿಭಟನೆಗಳು ತಾರಕಕ್ಕೇರಿದವು. ತನ್ನ ಹಲವು ನಾಯಕರನ್ನು ವಿವಿಧ ಕಡೆಗೆ ಕಳಿಸಿ, ಜಿಲ್ಲಾ ಮಟ್ಟದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಬಿಜೆಪಿಯು ಹಮ್ಮಿಕೊಂಡಿತು. ಆದರೂ ವಿರೋಧ ಕಡಿಮೆಯಾಗಲಿಲ್ಲ.

ಅಂತಿಮವಾಗಿ ಮೋದಿ ಸರ್ಕಾರವು ಸದರಿ ತಿದ್ದುಪಡಿಯ ಪ್ರಯತ್ನವನ್ನು ಕೈಬಿಟ್ಟಿತು. ‘ರಾಜ್ಯ ಸರ್ಕಾರಗಳು ತಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಲಿ’ ಎಂದು ಕೇಂದ್ರವು ಹೇಳಿತು. ಆದರೆ, ಕೆಲವು ಬಿಜೆಪಿ ಆಡಳಿತದ ಸರ್ಕಾರಗಳೂ ಒಳಗೊಂಡಂತೆ, ಬಿಜೆಪಿಯೇತರ ಪಕ್ಷಗಳಿದ್ದ ಸರ್ಕಾರಗಳು ಅಂತಹ ತಿದ್ದುಪಡಿಗಳನ್ನು ತಂದಿರಲಿಲ್ಲ. ಆದರೆ, ಕರ್ನಾಟಕದಲ್ಲಿ ಅಂತಹ ಪ್ರಯತ್ನಕ್ಕೆ ಮುಂದಾಗಲಾಗಿದೆ. ಅದೂ ಸ್ವತಃ ಕಾಂಗ್ರೆಸ್ ಮತ್ತು ಅದರ ಮೈತ್ರಿಪಕ್ಷ ಜೆಡಿಎಸ್ ಅಧಿಕಾರದಲ್ಲಿದ್ದಾಗ!

2019ರ ಫೆಬ್ರವರಿಯಲ್ಲಿ ರೈತರ ಪಾಲಿಗೆ ಕರಾಳ ಶಾಸನವಾಗಿರುವ ದೊಡ್ಡ ಬಂಡವಾಳದಾರರು, ಬಹುರಾಷ್ಟ್ರೀಯ ಸಂಸ್ಥೆಗಳ ಲೂಟಿಗೆ ನೆರವಾಗುವ ಈ ಕಾಯ್ದೆಯನ್ನು ರಾಜ್ಯ ಸರ್ಕಾರವು ತಂದಿತು. ‘ಭೂ ಸ್ವಾಧೀನ, ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು ಕರ್ನಾಟಕ ತಿದ್ದುಪಡಿ ಮಸೂದೆ -2019’ ಯನ್ನು ವಿಧಾನಸಭೆಯು ಅಂಗೀಕರಿಸಿತು.

ಫೆಬ್ರವರಿ 6 ರಿಂದ 13 ರವರೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಏನೊಂದು ಚರ್ಚೆ ಮಾಡದೇ, ಬಿಜೆಪಿಯ ಸಭಾತ್ಯಾಗದಿಂದುಂಟಾದ ಪರಿಸ್ಥಿತಿಯನ್ನು ವಿಧಾನಸಭೆಯಲ್ಲಿ ದುರುಪಯೋಗಪಡಿಸಿಕೊಂಡು ಸರ್ಕಾರ ಈ ಮಸೂದೆ ಅಂಗೀಕರಿಸಿತು. ರೈತರ ಮತ್ತು ರೈತಸಂಘಗಳ ಜೊತೆ ಚರ್ಚೆ ನಡೆಸುವ ಸೌಜನ್ಯವನ್ನು ಸಹಾ ಸರಕಾರ ತೋರದಿರುವುದು ದುರಾದೃಷ್ಟಕರವಾಗಿದೆ.

ಏನೇನು ತಿದ್ದುಪಡಿಗಳಿವೆ?
ರೈತರ ಜಮೀನುಗಳನ್ನು ಯಾವುದೇ ಒಪ್ಪಿಗೆಯಿಲ್ಲದೇ ಭೂಮಿ ಪಡೆಯಬಹುದು. ಭೂಸ್ವಾಧೀನದಿಂದ ಸಮಾಜ ಹಾಗೂ ಪರಿಸರದ ಮೇಲಾಗುವ ಪರಿಣಾಮಗಳನ್ನಾಗಲೀ ಮತ್ತು ದೇಶದ, ರಾಜ್ಯದ ಆಹಾರ ಭದ್ರತೆ ಹಾಗೂ ಆಹಾರದ ಸ್ವಾವಲಂಬನೆಯ ಮೇಲಾಗುವ ದುಷ್ಪರಿಣಾಮಗಳನ್ನಾಗಲೀ ಪರಿಗಣಿಸದೇ, ಪುನರ್ವಸತಿ ಕ್ರಮಗಳನ್ನು ದುರ್ಬಲಗೊಳಿಸುವ ಹಾಗೂ ಬೇಕಾಬಿಟ್ಟಿ ದರಕ್ಕೆ ಸ್ವಾಧೀನ ಮಾಡುವ ದುರುದ್ದೇಶವನ್ನು ಹೊಂದಿದೆ. ಇದು ಈ ಹಿಂದೆ ಕೇಂದ್ರದ ನರೇಂದ್ರ ಮೋದಿ ಸರಕಾರ ಮೂರು ಬಾರಿ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಲು ಯತ್ನಿಸಿದುದರ ಪಡಿಯಚ್ಚಾಗಿದೆ.

ಕಾಯ್ದೆಯಲ್ಲಿ ಈ ಮೊದಲು ಭೂಸ್ವಾಧೀನಕ್ಕೆ ಶೇ.80 ರಷ್ಟು ರೈತರ ಒಪ್ಪಿಗೆ ಪಡೆಯಬೇಕಿತ್ತು, ಕೈಗಾರಿಕಾ ಪ್ರದೇಶಾಭಿವೃದ್ಧಿ, ನಗರೀಕರಣ, ರಸ್ತೆಗೆ ಸೇರಿದಂತೆ 6 ಅಂಶಗಳಿಗೆ ಮಾತ್ರ ಭೂಸ್ವಾಧೀನಕ್ಕೆ ಅವಕಾಶ ಇತ್ತು. ಆದರೀಗ ಉದ್ದೇಶಿತ ತಿದ್ದುಪಡಿ ಈ 6 ಅಂಶಗಳನ್ನು ಸೇರಿಸಿಲ್ಲ. ಅಂದರೆ, ಯಾವುದಕ್ಕೆ ಬೇಕಾದರೂ ಸ್ವಾಧೀನ ಮಾಡಬಹುದು ಎಂದರ್ಥ.

ದುರಂತವೆಂದರೆ, ಕಾಂಗ್ರೆಸ್ ವಕ್ತಾರರನ್ನು ಈ ಕುರಿತು ಮಾತನಾಡಿಸಿದಾಗ ಅವರಿಗೆ ಇದರ ಅರಿವಿದ್ದಂತಿರಲಿಲ್ಲ. ಇನ್ನು ಜೆಡಿಎಸ್ ವಕ್ತಾರರು ಸಮಸ್ಯೆ ತಮ್ಮ ಪಕ್ಷದ್ದಲ್ಲವೆಂತಲೂ, ತಾನು ವ್ಯಕ್ತಿಗತವಾಗಿ ವಿರೋಧಿಸುತ್ತೇನೆಂದೂ ಹೇಳಿದರು. ರಮೇಶ್ ಬಾಬು ಅವರ ವ್ಯಕ್ತಿಗತ ನಿಲುವನ್ನು ನಾವು ಸ್ವಾಗತಿಸಬಹುದಾದರೂ, ಅವರ ಪಕ್ಷ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. (ಬಾಕ್ಸ್‍ಗಳನ್ನು ನೋಡಿ).
ಇಂತಹ ಸರ್ಕಾರದಿಂದ ಏನು ನಿರೀಕ್ಷಿಸಬಹುದು ಎಂಬುದು ಓದುಗರ ನಿರ್ಧಾರಕ್ಕೆ ಬಿಟ್ಟಿದ್ದು.

ವೈಯಕ್ತಿಕ ವಿರೋಧವಿದೆ, ಮುಖ್ಯಮಂತ್ರಿಯವರ ಗಮನಕ್ಕೂ ತರುತ್ತೇನೆ

ರಮೇಶ್ ಬಾಬು, ಜೆಡಿಎಸ್ ವಕ್ತಾರರು

2013ರಲ್ಲಿ ಯುಪಿಎ ಸರ್ಕಾರ ಭೂಸ್ವಾಧೀನ ಕಾಯ್ದೆ ತಂದಿತ್ತು. ಅದು ರೈತರ ಹಿತದೃಷ್ಟಿಯಿಂದ ಬಹಳ ಒಳ್ಳೆಯ ಕಾಯ್ದೆ, ಅದನ್ನು ಸ್ವಾಗತಿಸಲೇಬೇಕು. ಆದರೆ ಸರ್ಕಾರದ ಖಜಾನೆಯ ಹಣವೆಲ್ಲವೂ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಕೊಡಬೇಕಾಗುತ್ತದೆ ಎಂಬ ಭಾವನೆಯಲ್ಲಿ ಕರ್ನಾಟಕದಲ್ಲಿ ಅಧಿಕಾರಿಗಳು ಪರಿಹಾರ ಕೊಡುವ ವಿಷಯದಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಇದರಿಂದಾಗಿ ಸಮ್ಮಿಶ್ರ ಸರ್ಕಾರವಿದ್ದರೂ ಸಹ ದೇಶಪಾಂಡೆಯವರು ಕಂದಾಯ ಸಚಿವರಾಗಿ ತಿದ್ದುಪಡಿ ತಂದಿದ್ದಾರೆ. ದುರಂತವೆಂದರೆ ಸದನದಲ್ಲಿ ಚರ್ಚೆಯಾಗದೆ ತಿದ್ದುಪಡಿ ಅಂಗೀಕಾರ ಮಾಡಿದ್ದಾರೆ. ಹಾಗಾಗಿ ಅಧಿಕಾರದಲ್ಲಿರುವ ಎರಡೂ ಪಕ್ಷಗಳು ಅದರ ಜವಾಬ್ದಾರಿ ಹೊತ್ತುಕೊಳ್ಳಬೇಕು. ಈ ತಿದ್ದುಪಡಿ ರೈತರ ಹಿತಕ್ಕೆ ಮಾರಕವಾಗಿದ್ದು, ಅದನ್ನು ವೈಯಕ್ತಿಕವಾಗಿ ನಾನು ವಿರೋಧಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ.
– ರಮೇಶ್ ಬಾಬು, ಜೆಡಿಎಸ್ ವಕ್ತಾರರು.

ಈ ಕಾಯ್ದೆಯ ಹಿಂದೆ ದೊಡ್ಡ ಉದ್ದಿಮೆಪತಿಗಳಿದ್ದಾರೆ

ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ

ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಬಾಯಿಗೆ ಮಣ್ಣಾಕುವ ಸಂಚು ಹೆಣೆದಿದ್ದಾರೆ. ಅವರ ಹಿಂದೆ ದೊಡ್ಡ ದೊಡ್ಡ ಉದ್ಯಮಪತಿಗಳು ನಿಂತಿದ್ದಾರೆ. ಅವರ ಹಿತಕ್ಕಾಗಿ ರೈತ ಪರಿಹಾರ ಕಾಯ್ದೆಯನ್ನು ತಿರುಚಿ ರೈತರ ಹಕ್ಕುಗಳನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಕಂದಾಯ ಸಚಿವ ದೇಶಪಾಂಡೆ, ಹಿಂದಿನ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದರು. ಅವರಿಗೆ ಬಂಡವಾಳಿಗರ ಸ್ನೇಹ ಚೆನ್ನಾಗಿದೆ. ಅವರ ಹಿತಕ್ಕಾಗಿ ಡಿಕೆಶಿ ಜೊತೆಸೇರಿ ಈ ತಿದ್ದುಪಡಿಯನ್ನು ಜಾರಿಗೆ ತಂದಿದ್ದಾರೆ. ರೈತರ ಮರಣ ಶಾಸನವನ್ನು ಜಾರಿ ಮಾಡಿದ್ದೇ ಆದರೆ ರೈತರು ಅವರನ್ನು ರಾಜಕೀಯವಾಗಿ ಮಣಿಸುತ್ತಾರೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತೇವೆ.
ಸದರಿ ಕಾಯ್ದೆಯು ಎರಡೂ ಸದನಗಳಲ್ಲಿ ಅಂಗೀಕೃತವಾಗಿ ರಾಜ್ಯಪಾಲರ ಅನುಮೋದನೆಗೆ ಹೋಗಿದೆ. ಅದು ಇನ್ನೂ ಸದನದಲ್ಲಿ ಚರ್ಚೆಗೆ ಬಂದಿಲ್ಲ ಎನ್ನುವ ಕಾಂಗ್ರೆಸ್ ವಕ್ತಾರರು ಬಹುಶಃ ಎಲ್ಲಿದ್ದಾರೋ ಗೊತ್ತಿಲ್ಲ.
ಕೋಡಿಹಳ್ಳಿ ಚಂದ್ರಶೇಖರ್,
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ.

ಕಾಯ್ದೆಯಿನ್ನೂ ಸದನದಲ್ಲಿ ಚರ್ಚೆಗೇ ಬಂದಿಲ್ಲ; ತಿದ್ದುಪಡಿ ಮಾಡುವುದಾದರೆ ಅದು ದೇಶಪಾಂಡೆ ಅವರ ವ್ಯಕ್ತಿಗತ ಅಭಿಪ್ರಾಯ

ನಟರಾಜ್ ಗೌಡ, ಕಾಂಗ್ರೆಸ್ ವಕ್ತಾರರು

2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ಜಾರಿಗೆ ತಂದ ಕಾಯಿದೆ ಭೂಸ್ವಾಧೀನ ಪರಿಹಾರ ಕಾಯಿದೆ. ಇದನ್ನು ಹಾಗೆಯೇ ಉಳಿಸಿಕೊಳ್ಳುವುದು ಕಾಂಗ್ರೆಸ್‍ನ ಜವಾಬ್ದಾರಿಯೂ ಕೂಡ. ರಸ್ತೆ ಅಗಲೀಕರಣ, ವಿದ್ಯುತ್ ವ್ಯವಸ್ಥೆ ಮತ್ತು ಅಣೆಕಟ್ಟು ನಿರ್ಮಾಣ ಈ ಮೂರು ವಿಷಯಗಳಲ್ಲಿ ರೈತರಿಂದ ಭೂಮಿಯನ್ನು ಅವರ ಅನುಮತಿ ಇಲ್ಲದೆ, ನಿರ್ದಿಷ್ಟ ಪರಿಹಾರ ಕೊಟ್ಟು ಭೂಮಿಯನ್ನು ಪಡೆದುಕೊಳ್ಳಬಹುದು. ಇನ್ನಾವುದೇ ಉದ್ದೇಶಕ್ಕೆ ಅನುಮತಿ ಇಲ್ಲದೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಇಂದು ಚರ್ಚೆಯಾಗುತ್ತಿರುವ ತಿದ್ದುಪಡಿಯ ವಿಚಾರ ದೇಶಪಾಂಡೆಯವರ ಅಭಿಪ್ರಾಯವಿರಬಹುದೇ ಹೊರತು, ಅದು ಸರ್ಕಾರದ್ದಾಗಲು ಸಾಧ್ಯವಿಲ್ಲ. ಆ ವಿಚಾರ ಇನ್ನೂ ಸದನದಲ್ಲಿ ಚರ್ಚೆಯೂ ಆಗಿಲ್ಲ. ಒಂದು ವೇಳೆ ರೈತರಿಗೆ ತೊಂದರೆ ಕೊಡುವಂತಹ ತಿದ್ದುಪಡಿಗಳೊಂದಿಗೆ ಸದನದಲ್ಲಿ ಚರ್ಚೆಗೆ ಬಂದರೆ ಈ ತಿದ್ದುಪಡಿಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಈ ಕಾಯ್ದೆಯಿಂದ ರೈತರಿಗೆ ತೊಂದರೆಯಾಗಲು ನಾವು ಬಿಡುವುದಿಲ್ಲ.
– ನಟರಾಜ್ ಗೌಡ, ಕಾಂಗ್ರೆಸ್ ವಕ್ತಾರರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...