ಶಿವಮೊಗ್ಗದಲ್ಲಿ ಅಶಾಂತಿಗೆ ಕಾರಣವಾಗಿರುವ ಬಜರಂಗದಳ ಸದಸ್ಯ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ “ಇಬ್ಬರನ್ನು ಬಂಧಿಸಲಾಗಿದೆ” ಎಂದು ಶಿವಮೊಗ್ಗ ಎಡಿಜಿಪಿ ಎಸ್.ಮುರುಗನ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಆರೋಪಿಗಳ ಹೆಸರುಗಳನ್ನು ತಿಳಿಸಿಲ್ಲ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಇಬ್ಬರನ್ನು ಬಂಧಿಸಿದ್ದು ಇನ್ನುಳಿದವರನ್ನು ಪತ್ತೆ ಹಚ್ಚಿ ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ, ಶಾಂತಿ ಕಾಪಾಡಲು ಪೊಲೀಸರು ಬೆಳಿಗ್ಗೆಯಿಂದ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಖುದ್ದು ನಾನೇ ರಸ್ತೆಗಳಿದು ಪರಿಶೀಲನೆ ಮಾಡುತ್ತಿದ್ದೇನೆ. ಶಾಂತಿ ಕಾಪಾಡಲು ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
The police detain two people in connection with the murder of #Bhajarangadal activist Harsha in #Shivamogga. @XpressBengaluru @santwana99 @ramupatil_TNIE
— Marx Tejaswi (@_marxtejaswi) February 21, 2022
ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
“ಶಿವಮೊಗ್ಗ ನಗರದಲ್ಲಿ ನಡೆದಿರುವ ಭಜರಂಗದಳ ಸದಸ್ಯ ಹರ್ಷನ ಕೊಲೆಯ ಹಿಂದೆ ಯಾವುದಾದರೂ ಸಂಘಟನೆಗಳಿರುವ ಮಾಹಿತಿ ಸಿಕ್ಕಿಲ್ಲ, ಹಿಜಾಬ್ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ” ಎಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆಯಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ನಗರದ ವಿವಿಧೆಡೆ ಅಹಿತಕರ ಘಟನೆಗಳು ನಡೆದಿವೆ. ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
“ಸಂಘಟನೆಗಳು ಕೈವಾಡ ಏನಾದರೂ ಇದೆಯೇ?” ಎಂದು ಗೃಹ ಸಚಿವರಲ್ಲಿ ಪತ್ರಕರ್ತರು ಕೇಳಿದಾಗ, “ಸಂಘಟನೆಗಳು ಇದರ ಹಿಂದೆ ಇವೆ ಎಂಬ ಯಾವುದೇ ಮಾಹಿತಿ ಸಿಕ್ಕಲಿಲ್ಲ. ನಾಲ್ಕೈದು ಜನ ಯುವಕರ ಗುಂಪು ಇದರ ಹಿಂದೆ ಎಂಬ ಮಾಹಿತಿ ನನಗೆ ಸಿಕ್ಕಿದೆ” ಎಂದಿದ್ದಾರೆ.
“ಈಗ ಪರಿಸ್ಥಿತಿ ಕಂಟ್ರೋಲ್ನಲ್ಲಿದೆ. ಜಿಲ್ಲಾಧಿಕಾರಿಯವರು ಆದೇಶ ಕೊಟ್ಟು ಶಾಲಾ ಕಾಲೇಜುಗಳಿಗೆ ರಜೆ ಕೊಟ್ಟಿದ್ದಾರೆ” ಎಂದಿರುವ ಅವರು, “ಕೊಲೆಗೂ ಹಿಜಾಬ್ ಗದ್ದಲಕ್ಕೂ ಯಾವುದೇ ಸಂಬಂಧವಿದೆ ಎಂದು ತಾನು ಭಾವಿಸಿಲ್ಲ. ಆರೋಪಿಗಳು ಸಿಕ್ಕಿಬಿದ್ದ ನಂತರವಷ್ಟೇ ಸತ್ಯ ಹೊರಬರಲಿದೆ” ಎಂದು ತಿಳಿಸಿರುವುದಾಗಿ ‘ದಿ ಕ್ವಿಂಟ್’ ವರದಿ ಮಾಡಿದೆ.
ಇದನ್ನೂ ಓದಿರಿ: ಬಜರಂಗದಳ ಸದಸ್ಯನ ಕೊಲೆಯ ಹಿಂದೆ ಸಂಘಟನೆಗಳಿರುವ ಮಾಹಿತಿ ಸಿಕ್ಕಿಲ್ಲ: ಗೃಹಸಚಿವ