2018 ರಲ್ಲಿ ಡೆಹ್ರಾಡೂನ್ನಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿದ್ದ ಆರೋಪಿಯೊಬ್ಬರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ವಿಚಾರಣಾ ನ್ಯಾಯಾಲಯವು ನೀಡಿದ್ದ ಮರಣದಂಡನೆಯನ್ನು ಅನುಮೋದಿಸಿದ್ದ ಉತ್ತರಾಖಂಡ ಹೈಕೋರ್ಟ್ನ ಜನವರಿ 2020 ರ ತೀರ್ಪಿನ ವಿರುದ್ಧ ಆರೋಪಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರನ ಮಾನಸಿಕ ಸ್ಥಿತಿಯನ್ನು ಮೌಲ್ಯಮಾಪನವನ್ನು ಮಾಡಿ ಅದರ ವರದಿಯನ್ನು ನೀಡುವಂತೆ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ ಸೂಚಿಸಿದೆ.
“ಪ್ರಕರಣದಲ್ಲಿ ಹೆಚ್ಚಿನ ಪರಿಗಣನೆಗೆ ಬಾಕಿಯಿದೆ, ಅರ್ಜಿದಾರನಿಗೆ ನೀಡಲಾದ ಮರಣದಂಡನೆಯ ಕಾರ್ಯಾಚರಣೆಯನ್ನು ತಡೆಹಿಡಿಯಲಾಗುತ್ತದೆ. ಈ ಸಂಬಂಧದ ಸೂಚನೆಯನ್ನು ತಕ್ಷಣವೇ ಸಂಬಂಧಪಟ್ಟ ಕಾರಾಗೃಹಕ್ಕೆ ಕಳುಹಿಸಲಿ” ಎಂದು ನ್ಯಾಯಮೂರ್ತಿಗಳಾದ ಎಸ್ಆರ್ ಭಟ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಮಾರ್ಚ್ 2 ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ಕೊಲೆ ಯತ್ನ ಪ್ರಕರಣ: ವಕೀಲ ಜಗದೀಶ್ಗೆ ಜಾಮೀನು, ಇನ್ನೊಂದು ಪ್ರಕರಣದ ವಿಚಾರಣೆ ಮಾ.7ಕ್ಕೆ
ಈ ವಿಷಯದಲ್ಲಿ ಸಂಪೂರ್ಣ ವರದಿ ಪಡೆಯುವ ಸಲುವಾಗಿ, ಅಪರಾಧಿ ಜೈಲಿನಲ್ಲಿದ್ದಾಗ ಮಾಡಿದ ಕೆಲಸಗಳ ಸ್ವರೂಪದ ಬಗ್ಗೆ ಸಂಬಂಧಿಸಿದ ಜೈಲು ಆಡಳಿತ ಏಪ್ರಿಲ್ 25 ರೊಳಗೆ ವರದಿಯನ್ನು ತನ್ನ ಮುಂದೆ ಇಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ ನ್ಯಾಯದ ಹಿತಾಸಕ್ತಿಗಾಗಿ ನಾವು ಮೇಲ್ಮನವಿದಾರರ ಮಾನಸಿಕ ಸ್ಥಿತಿಗತಿಯ ಮೌಲ್ಯಮಾಪನವನ್ನು ಪಡೆಯಬೇಕೆಂದು ಭಾವಿಸುತ್ತೇವೆ” ಎಂದು ಪೀಠ ತಿಳಿಸಿದೆ.
ಘಟನೆ ಹಿನ್ನೆಲೆ:
ಜುಲೈ 2018 ರಲ್ಲಿ ಡೆಹ್ರಾಡೂನ್ನಲ್ಲಿ 11 ವರ್ಷದ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಅಪರಾಧಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ತನ್ನ ಮಗಳು ನಾಮತ್ತೆಯಾಗಿದ್ದಾರೆ. ಮಕ್ಕಳ ಬಳಿ ತನ್ನ ಮಗಳ ಬಗ್ಗೆ ವಿಚಾರಿಸಿದಾಗ ಆರೋಪಿ ಜೈ ಪ್ರಕಾಶ್ ಆಕೆಯನ್ನು ತನ್ನ ಗುಡಿಸಲಿನ ಕಡೆಗೆ ಕರೆದೊಯ್ದಿದ್ದಾನೆ ಎಂದು ತಿಳಿಸಲಾಗಿತ್ತು. ಗುಡಿಸಲಿನಲ್ಲಿ ಸಂತ್ರಸ್ತೆಯ ಶವ ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ವಿಚಾರಣೆ ವೇಳೆ ಆರೋಪಿಯು ನಿರಪರಾಧಿ ಎಂದು ಹೇಳಿಕೊಂಡಿದ್ದು, ಈ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು.
ಆರೋಪಿ ಜೈ ಪ್ರಕಾಶ್ ವಿರುದ್ಧ ಅವರನ್ನು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಪೋಕ್ಸೊ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆಗಸ್ಟ್ 2019 ರಲ್ಲಿ ವಿಚಾರಣಾ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತ್ತು. ಜೊತೆಗೆ ಆರೋಪಿಯು ಅಸಹಾಯಕಳಾದ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ ಎಂದು ಹೈಕೋರ್ಟ್ ಹೇಳಿತ್ತು.
ಇದನ್ನೂ ಓದಿ: ನಾಗರಾಜ್ ಮಂಜುಳೆಯ ‘ಝುಂಡ್’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’


