ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಭಾರೀ ಅನಾಹುತಗಳಿಗೆ ಕಾರಣರಾದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ರವರನ್ನು ಸಂಪುಟದಿಂದ ಕೈಬಿಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಸಿಎಂ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಅವರು, “ನಾಡಿನ ಜನತೆಯ ಆಕ್ರೋಶದ ಬಳಿಕ ಬಹಳ ತಡವಾಗಿಯಾದರೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದೀರಿ. ಆದರೆ, ಈ ಸಮಿತಿ ಪಠ್ಯದೊಳಗೆ ತುರುಕಿರುವ ಸಂವಿಧಾನ ವಿರೋಧಿ ಮತ್ತು ಸಂಗತಿಗಳನ್ನು ಹಾಗೇ ಉಳಿಸಿಕೊಂಡಿದ್ದೀರಿ. ಜಾತಿ ಶ್ರೇಷ್ಠತೆಯ ವ್ಯಸನದ ಸಂಗತಿಗಳನ್ನು ಪಠ್ಯದೊಳಗೆ ಉಳಿಸಿಕೊಳ್ಳುವುದು ಹಾಗೂ ಪ್ರಧಾನವಾಗಿ ಒಂದು ಜಾತಿಯವರ ಬರಹಗಳನ್ನು, ವಿಚಾರಗಳನ್ನು ನಾಡಿನ ಮೇಲೆ ಹೇರಲು ಹೊರಟಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆಗೆ ಅಗತ್ಯವಾದ ಬೌದ್ಧಿಕ ತಿಳಿವಳಿಕೆ ಮತ್ತು ಅರ್ಹತೆಗಳಿಲ್ಲದ, ಸಾಮಾಜಿಕ ತಾಣಗಳಲ್ಲಿ ಶೂದ್ರ-ದಲಿತ ಪರಂಪರೆ ಮತ್ತು ಸಂಸ್ಕೃತಿ ಬಗೆಗೆ ವಿಕೃತಿ ಕಾರಿಕೊಳ್ಳುವುದನ್ನೇ ಪಾಂಡಿತ್ಯ ಎಂದುಕೊಂಡಿರುವ ಹಾಗೂ ಮಹಿಳೆಯರ ಬಗ್ಗೆ ಕನಿಷ್ಠ ಗೌರವವೂ ಇಲ್ಲದಂತೆ ಬಹಿರಂಗವಾಗಿ ಪೋಸ್ಟ್ಗಳನ್ನು ಹಾಕಿ ಅಸಹ್ಯ ಆಚರಿಸುತ್ತಿದ್ದ ವ್ಯಕ್ತಿಯನ್ನು ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ದ್ರೋಹ ಎಸಗಿ ಸರ್ಕಾರ ಗಂಭೀರ ಅಪರಾಧ ಮಾಡಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಎನ್ನುವ ಸಾಲಿನಿಂದ “ಸಂವಿಧಾನ ಶಿಲ್ಪಿ” ಎನ್ನುವ ಪದಕ್ಕೆ ಕತ್ತರಿ ಹಾಕಲಾಗಿದೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಆದರೆ, ಮನುವಾದಿ ವಿಕೃತ ರೋಗಿಷ್ಠರಿಗೆ ಮಾತ್ರ ಬಾಬಾಸಾಹೇಬರು ಕನಸಿನಲ್ಲೂ ದಿಗಿಲು ಬೀಳಿಸುತ್ತಾರೆ. ನಿಮ್ಮ ಸರ್ಕಾರಕ್ಕೆ ಇದನ್ನು ಕತ್ತರಿಸಿ ಹಾಕುವ ರೋಗ ಬಂದಿದೆ. ಜತೆಗೆ ಕನ್ನಡ ರಾಜ್ಯೋತ್ಸವದ ಕುರಿತ ಪಠ್ಯವನ್ನೂ ಕಿತ್ತುಹಾಕಿ ಬಿಜೆಪಿ ನಾಡದ್ರೋಹಿ ಪರಂಪರೆಯನ್ನು ಮುಂದುವರೆಸಿದೆ. ಇಂಥಾ ಅಸಹ್ಯದ ನೂರಾರು ಅಧ್ವಾನಗಳನ್ನು ಪಠ್ಯ ಪರಿಷ್ಕರಣ ಸಮಿತಿ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವನೂರು ಮಹದೇವ, ಮೂಡ್ನಾಕೂಡು ಚಿನ್ನಸ್ವಾಮಿಯವರಂತಹ ಹಿರಿಯ ಬರಹಗಾರರು ತಮ್ಮ ತಕರಾರುಗಳನ್ನು ವ್ಯಕ್ತಪಡಿಸಿದಾಗ ಆ ತಕರಾರುಗಳನ್ನು ಕೇಳಿಸಿಕೊಳ್ಳುವ ಸೌಜನ್ಯವೂ ಇಲ್ಲದಂತೆ ಸರ್ಕಾರ ಮತ್ತು ಪಠ್ಯ ಪುಸ್ತಕ ಸಮಿತಿ ವಿಕೃತಿ ಮೆರೆದಿದೆ. ನಾಡಿನ ಹಿರಿಯ ಮಠಾಧೀಶರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದಾಗ ಅವರುಗಳ ಸಾತ್ವಿಕ ಸಿಟ್ಟನ್ನೂ ಲೇವಡಿ ಮಾಡುವ ರೀತಿಯಲ್ಲಿ ಸಚಿವರು ಮತ್ತು ಪಕ್ಷದ ಮುಖಂಡರಿಂದ ರಾಜಕೀಯ ಹೇಳಿಕೆ ಕೊಡಿಸಲಾಗಿದೆ. ಮಠಾಧೀಶರನ್ನು ಕಾಂಗ್ರೆಸ್ ವಕ್ತಾರರು ಎನ್ನುವ ಅರ್ಥ ಬರುವಂತೆ ಸಚಿವರುಗಳಿಂದ ಪರೋಕ್ಷ ಹೇಳಿಕೆ ಕೊಡಿಸಿ ಮಠ ಪರಂಪರೆಗೆ ಅವಮಾನ ಎಸಗಿದಂತೆ ಸರ್ಕಾರ ವರ್ತಿಸಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ನಮ್ಮ ನಾಡಗೀತೆಯು ಸರ್ಕಾರದ ಅಧಿಕೃತ ಗುರುತು. ನಾಡಿನ ಸಾರ್ವಭೌಮತೆಯ ಸಂಕೇತ. ಇಂತಹ ಗುರುತರವಾದ ಸಂಗತಿಗೆ ಅವಮಾನ ಮಾಡಿರುವ ಚಕ್ರತೀರ್ಥನನ್ನು ಸರ್ಕಾರ ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದ್ದು ಅಕ್ಷಮ್ಯ. ಈತನ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎನ್ನುವ ನಾಡಿನ ಜನತೆಯ, ಲೇಖಕ-ಬರಹಗಾರರ ಮತ್ತು ಸ್ವಾಮೀಜಿಗಳ ಆಗ್ರಹವನ್ನು ಸರ್ಕಾರ ತಕ್ಷಣ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಸವಣ್ಣನವರ ಪಠ್ಯದ ಕುರಿತು ಸಿಎಂ ಬೊಮ್ಮಾಯಿ ಹೇಳಿದ ಸುಳ್ಳುಗಳು ಮತ್ತು ಅರ್ಧ ಸತ್ಯಗಳು
ಈ ಕೂಡಲೇ ವಿಸರ್ಜನೆಗೊಂಡಿರುವ ಸಮಿತಿ ರೂಪಿಸಿರುವ ಪಠ್ಯ ಪುಸ್ತಕಗಳನ್ನು ತಡೆ ಹಿಡಿಯಬೇಕು. ಹಿಂದಿನ ಬರಗೂರು ಸಮಿತಿಯ ಪಠ್ಯಗಳನ್ನೇ ಈ ಸಾಲಿಗೂ ಮಕ್ಕಳಿಗೆ ವಿತರಿಸಬೇಕು. ನಿಜವಾದ ಅರ್ಹತೆ ಇರುವ ಶಿಕ್ಷಣ ತಜ್ಞರ ಸಮಿತಿ ಮೂಲಕ ಪರಿಷ್ಕರಣಾ ಸಮಿತಿ ಮಾಡಿರುವ ಅದ್ವಾನಗಳನ್ನು ಕೂಡಲೇ ಸರಿಪಡಿಸಬೇಕು ಹಾಗೂ ನಾಡಿನ ಸಂಸ್ಕೃತಿ, ಪರಂಪರೆ, ಚರಿತ್ರೆ, ಸಂವಿಧಾನದ ಆಶಯಗಳ ಬಗ್ಗೆ ಗೌರವ ಇರುವವರನ್ನು ಸಮಿತಿಗಳಿಗೆ ನೇಮಿಸಬೇಕು. ಇಷ್ಟೆಲ್ಲಾ ಯಡವಟ್ಟುಗಳಿಗೆ ಕಾರಣರಾದ ಶಿಕ್ಷಣ ಸಚಿವ ನಾಗೇಶ್ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.


