2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಸುಪ್ರೀಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಅವರನ್ನು ಇಂದು ಸಂಜೆ 6 ಗಂಟೆಯೊಳಗೆ ಬಿಡುಗಡೆ ಮಾಡಲು ಆದೇಶಿಸಿದೆ.
ಜುಬೇರ್ ರವರ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಅವರಿಗೆ ಜಾಮೀನು ನೀಡುವಾಗ ಷರತ್ತುಗಳನ್ನು ವಿಧಿಸಬೇಕೆಂದು ಉತ್ತರ ಪ್ರದೇಶದ ಸರ್ಕಾರಿ ವಕೀಲರಾದ ಗರಿಮ ಪ್ರಸಾದ್ ಮನವಿ ಮಾಡಿದರು. ಆದರೆ ಜಸ್ಟೀಸ್ ಚಂದ್ರಚೂಡ್ರವರು ಅದನ್ನು ಸ್ಪಷ್ಟವಾಗಿ ನಿರಾಕರಿಸಿದರು. ಜಾಮೀನು ಅರ್ಜಿಯ ವಿಚಾರಣೆ ಹೀಗಿತ್ತು.
ಯುಪಿ ಸರ್ಕಾರಿ ವಕೀಲ: ಅರ್ಜಿದಾರರು ಟ್ವಿಟರ್ನಲ್ಲಿ ಪೋಸ್ಟ್ ಹಾಕಬಾರದೆಂದು ಕೋರ್ಟ್ ಈ ಮುಂಚೆ ಹೇಳಿತ್ತು.
ಜಸ್ಟೀಸ್ ಚಂದ್ರಚೂಡ್: ಇದು ವಕೀಲರು ವಾದ ಮಾಡಬಾರದು ಎಂದು ಹೇಳಿದಂತಿದೆ. ಒಬ್ಬ ಪತ್ರಕರ್ತನಿಗೆ ಬರೆಯಬಾರದು ಎಂದು ನಾವು ಹೇಳುವುದು ಹೇಗೆ?
ಯುಪಿ ಸರ್ಕಾರಿ ವಕೀಲ: ಅವರು ಪತ್ರಕರ್ತರಲ್ಲ.
ಜಸ್ಟೀಸ್ ಚಂದ್ರಚೂಡ್: ಅವರು ಮಾಡುವ ಯಾವುದೇ ಟ್ವೀಟ್ ಕಾನೂನಿಗೆ ವಿರುದ್ಧವಾಗಿದ್ದರೆ, ಅದಕ್ಕೆ ಅವರು ಹೊಣೆಯಾಗಿರುತ್ತಾರೆ. ಒಬ್ಬರು ಮಾತನಾಡದಂತೆ ನೀರಿಕ್ಷಣಾ ಆದೇಶ ಹೊರಡಿಸಲು ಸಾಧ್ಯವಿಲ್ಲ.
ಯುಪಿ ಸರ್ಕಾರಿ ವಕೀಲ: ಅವರು ಸಾಕ್ಷಿಗಳನ್ನು ನಾಶಮಾಡಬಾರದೆಂಬ ಷರತ್ತು ವಿಧಿಸಬೇಕು.
ಜಸ್ಟೀಸ್ ಚಂದ್ರಚೂಡ್: ಎಲ್ಲಾ ಸಾಕ್ಷಿಗಳು ಸಾರ್ವಜನಿಕ ಡೊಮೈನ್ನಲ್ಲಿವೆ. ಅವರು ಮತ್ತೆ ಟ್ವೀಟ್ ಮಾಡಬಾರದೆಂದು ನಾವು ಹೇಳಲು ಸಾಧ್ಯವಿಲ್ಲ.
ಆನಂತರ ಜಸ್ಟೀಸ್ ಸೂರ್ಯಕಾಂತ್ ಮತ್ತು ಎ.ಎಸ್ ಬೋಪಣ್ಣರವರಿದ್ದ ಪೀಠವು ಜುಬೇರ್ರನ್ನು ಸಂಜೆ 6 ಗಂಟೆಯೊಳಗೆ ತಿಹಾರ್ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಅವರ ವಿರುದ್ಧ ದಾಖಲಾಗಿರುವ 7 ಎಫ್ಐಆರ್ಗಳನ್ನು ಒಂದೇ ಆಗಿ ಜೋಡಿಸಿದ್ದು, ಉತ್ತರ ಪ್ರದೇಶದಿಂದ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದೆ. ಅಲ್ಲದೆ ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ಎಸ್ಐಟಿಯನ್ನು ರದ್ದುಗೊಳಿಸಿದೆ. ಮುಂದಕ್ಕೂ ಯಾವುದೇ ಎಫ್ಐಆರ್ ದಾಖಲಾದರೂ ಅದನ್ನು ದೆಹಲಿ ಪೊಲೀಸರು ಈಗಿರುವ ಎಫ್ಐಆರ್ನೊಂದಿಗೆ ಜೋಡಿಸಿ ವಿಚಾರಣೆ ನಡೆಸಬೇಕು, ಇದೇ ಜಾಮೀನನ್ನು ಅನ್ವಯಿಸಬೇಕು ಎಂದು ಪೀಠ ಹೇಳಿದೆ. ಅರ್ಜಿದಾರರು ತಮ್ಮ ವಿರುದ್ಧದ ಎಫ್ಐಆರ್ಗಳನ್ನು ರದ್ದುಪಡಿಸಿವಂತೆ ಕೋರಿ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಬಹುದೆಂದು ಸಹ ಹೇಳಿದೆ.
ಇದನ್ನೂ ಓದಿ: ಖ್ಯಾತ ಫ್ಯಾಕ್ಟ್ಚೆಕ್ಕರ್ ಮೊಹಮ್ಮದ್ ಜುಬೇರ್ಗೆ ಜಾಮೀನು: ಸಂಜೆ 6 ಗಂಟೆಯೊಳಗೆ ಬಿಡುಗಡೆಗೆ ಸುಪ್ರೀಂ ಆದೇಶ
Satya meva jayathe