ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿಯು ಶಾಸಕರು ಮತ್ತು ಸಂಸದರ ಸಭೆಯನ್ನು ಮಂಗಳವಾರ ಕರೆದಿದ್ದು, ಮಿತ್ರ ಪಕ್ಷ ಬಿಜೆಪಿಯೊಂದಿಗೆ ಹೆಚ್ಚುತ್ತಿರುವ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ಮುಟ್ಟುವ ಸಾಧ್ಯತೆಗಳನ್ನು ರಾಜಕೀಯ ವಿಶ್ಲೇಷಣೆಗಳು ಹೇಳುತ್ತಿವೆ.
ಬಿಹಾರದಲ್ಲಿ ಜನತಾ ದಳ (ಯುನೈಟೆಡ್) ಅಥವಾ ಜೆಡಿಯು ಮೈತ್ರಿಕೂಟದ ಪಾಲುದಾರಿಕೆ ಹೊಂದಿರುವ ಬಿಜೆಪಿಯೊಂದಿಗೆ ನಿತೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಿತ್ರಪಕ್ಷಗಳ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬುದು ಬಿಕ್ಕಟ್ಟಿಗೆ ಕಾರಣವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜೆಡಿಯು ತೊರೆದಿರುವ ಆರ್ಸಿಪಿ ಸಿಂಗ್ಗೆ ರಾಜ್ಯಸಭಾ ಸ್ಥಾನವನ್ನು ನೀಡಬಾರದೆಂದು ಜೆಡಿಯು ಆಗ್ರಹಿಸಿತು. ಆರ್ಸಿಪಿ ಸಿಂಗ್ ಅವರು ಕಳೆದ ವರ್ಷ ನಿತೀಶ್ಕುಮಾರ್ ಅವರನ್ನು ಸಂಪರ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ರಾಜ್ಯಸಭೆಯ ವಿಚಾರವಾಗಿ ಜೆಡಿಯುಗೆ ಆರ್ಸಿಪಿ ಸಿಂಗ್ ವಿದಾಯ ಹೇಳಿದ್ದರು.
“ನಾನು ಕೇಂದ್ರ ಸಚಿವನಾಗಿದ್ದಕ್ಕೆ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ” ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮಾಜಿ ಭಾರತೀಯ ಆಡಳಿತ ಸೇವಾ ಅಧಿಕಾರಿ ಸಿಂಗ್ ಆರೋಪಿಸಿದ್ದಾರೆ.
“ಅಸೂಯೆಗೆ ಚಿಕಿತ್ಸೆ ಇಲ್ಲ ಎಂದು ಹೇಳುತ್ತೇನೆ. ನಿತೀಶ್ ಕುಮಾರ್ ಅವರು ತಮ್ಮ ಏಳೇಳು ಜನ್ಮದಲ್ಲೂ ಪ್ರಧಾನಿಯಾಗುವುದಿಲ್ಲ, ಜೆಡಿಯು ಮುಳುಗುವ ಹಡಗು” ಎಂದು ಟೀಕಿಸಿದ್ದಾರೆ.
ತಮ್ಮ ಮೇಲೆ ಸಿಂಗ್ ಮಾಡಿರುವ ಆರೋಪಗಳಿಗೆ ಉತ್ತರಿಸಲು ನಿತೀಶ್ ಅವರು ಜೆಡಿಯು ಪಕ್ಷದ ಉನ್ನತ ನಾಯಕರನ್ನು ಕಳುಹಿಸಿದ್ದಾರೆ. ರಾಜಕೀಯ ಕದನಕ್ಕೆ ಕುಟುಂಬವನ್ನು ಎಳೆದು ತಂದಿರುವುದು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ (ಲಾಲನ್) ಸಿಂಗ್ ಅವರು ಆರ್ಸಿಪಿ ಸಿಂಗ್ ಅವರ ವಿರುದ್ಧ ಹರಿಹಾಯ್ದಿದ್ದಾರೆ.
“ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಅಗತ್ಯವೇನು? ನಾವು ಕೇಂದ್ರ ಸಚಿವ ಸಂಪುಟದ ಭಾಗವಾಗುವುದಿಲ್ಲ ಎಂದು ಮುಖ್ಯಮಂತ್ರಿಯವರು 2019ರಲ್ಲಿಯೇ ನಿರ್ಧರಿಸಿದ್ದರು” ಎಂದು ರಾಜೀವ್ ರಂಜನ್ ಸುದ್ದಿಗಾರರಿಗೆ ತಿಳಿಸಿದರು. “ಜೆಡಿಯು ಮುಂದಿನ ದಿನಗಳಲ್ಲಿಯೂ ಕೇಂದ್ರ ಸಚಿವ ಸಂಪುಟಕ್ಕೆ ಸೇರುವುದಿಲ್ಲ” ಎಂದು ಹೇಳಿರುವುದು, “ಸರಿಪಡಿಸಲಾಗದ ರಾಜಕೀಯ ಬಿರುಕು” ಎಂದೇ ಊಹಿಸಲಾಗುತ್ತಿದೆ.
ರಾಜೀವ್ ರಂಜನ್ ಅವರಂತಹ ನಿತೀಶ್ ಕುಮಾರ್ ಅವರ ಆಪ್ತರ ಪ್ರತಿಕ್ರಿಯೆಯು ಹಲವು ರಾಜಕೀಯ ಲೆಕ್ಕಾಚಾರಕ್ಕೆ ಅವಕಾಶ ನೀಡಿದೆ. ಮುಖ್ಯಮಂತ್ರಿಯವರ ಬೇಡಿಕೆಗಳಿಗೆ ಮಣಿಯಲು ಬಿಜೆಪಿಯ ಮೇಲೆ ಒತ್ತಡ ಹೇರುವ ತಂತ್ರವೂ ಇದೆಂದು ವಿಶ್ಲೇಷಿಸಲಾಗುತ್ತಿದೆ.
ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರನ್ನು ಪದಚ್ಯುತಗೊಳಿಸಬೇಕೆಂಬ ಒತ್ತಡವೂ ಈ ತಂತ್ರಗಾರಿಕೆಯಲ್ಲಿದೆ. ಸಿನ್ಹಾ ಅವರು ಅಧಿಕಾರದಲ್ಲಿ ಮುಂದುವರಿಯುವುದು ನಿತೀಶ್ ಕುಮಾರ್ ಅವರಿಗೆ ಇಷ್ಟವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ರಹಸ್ಯವಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್, ಕಳೆದ ವಾರ ನಡೆದ ನೀತಿ ಆಯೋಗ್ನ ಸಭೆಗೆ ಹೋಗಲಿಲ್ಲ. ಆರೋಗ್ಯ ಸಮಸ್ಯೆಯ ಕಾರಣಗಳನ್ನು ಹೇಳಿ ದೂರ ಉಳಿದಿದ್ದರು. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ 23 ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಗೈರುಹಾಜರಿಯ ಮೂಲಕ ನಿತೀಶ್ ತಮ್ಮ ಕೋಪವನ್ನು ಹೊರಹಾಕಿದ್ದರು.
ಇದನ್ನೂ ಓದಿರಿ: ಮಾಲೆಗಾಂವ್ ಸ್ಫೋಟ ಪ್ರಕರಣ: ಶಂಕಿತ ಭಯೋತ್ಪಾದಕಿ, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಬೈಕ್ನಲ್ಲಿ ಸ್ಫೋಟಕಗಳ…
ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯಲು ಮೋದಿ ಸರ್ಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿರುವ ಆರೋಪವನ್ನು ಸಿಂಗ್ ನಿರಾಕರಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿತೀಶ್ ಅವರೊಂದಿಗೆ ಮಾತನಾಡಿದ್ದಾರೆ. ನಿತೀಶ್ ಅವರ ಶರತ್ತಿನ ಮೇಲೆ ನನಗೆ ಅವಕಾಶ ನೀಡಲಾಯಿತು ಎಂದು ಪ್ರತಿಪಾದಿಸಿದ್ದಾರೆ.
ಆಸ್ತಿ ವ್ಯವಹಾರಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಜೆಡಿಯು ಆರೋಪಗಳನ್ನು ಸಿಂಗ್ ನಿರಾಕರಿಸಿದ್ದಾರೆ. “ಈ ಆಸ್ತಿಗಳು ನನ್ನ ಪತ್ನಿ ಮತ್ತು ಇತರ ಅವಲಂಬಿತರಿಗೆ ಸೇರಿದ್ದು, ಅವರು 2010ರಿಂದಲೂ ತೆರಿಗೆ ಪಾವತಿಸುತ್ತಿದ್ದಾರೆ” ಎಂದಿದ್ದಾರೆ.


