Homeಅಂಕಣಗಳು‘ಪೇ ಸಿಎಂ’ನ ಭೂತಕಾಲ ಏನು? ‘ಪೇಡ್ ಸಿಎಂ’ ಅಲ್ಲವೇ?

‘ಪೇ ಸಿಎಂ’ನ ಭೂತಕಾಲ ಏನು? ‘ಪೇಡ್ ಸಿಎಂ’ ಅಲ್ಲವೇ?

- Advertisement -
- Advertisement -

‘ಪೇಸಿಎಂ’ನ ಭೂತಕಾಲ, ‘ಪೇಡ್ ಸಿಎಂ’ ಅಂತ ಆದರೆ, ಅದರ ಭವಿಷ್ಯತ್ ಕಾಲ ಏನು? “ರಿಸೀವ್ಡ್ ವಿತ್ ಥ್ಯಾಂಕ್ಸ್ ಫ್ರಮ್ ಸಿಎಂ” ಅಂತಲೇ?

ಇಷ್ಟು ದಿನ ಮತದಾರರಿಗೆ ಹಣ-ಹೆಂಡ ಹಂಚಿ ಸುಸ್ತಾಗಿ ಹೋದ ಪುಢಾರಿಗಳ ಪರಿಸ್ಥಿತಿ ಕರ್ನಾಟಕದ ಪತ್ರಕರ್ತರಿಗೆ ಹಣ-ಹೆಂಡ ಹಂಚಿ ನೋಡೋಣ ಅನ್ನುವ ದೈನೇಸಿ ಸ್ಥಿತಿ ಬಂದಿದೆ. ಇದು ಮತದಾರರನ್ನು ಖರೀದಿಸುವ ಹಾಗೂ ಎಂಎಲ್‌ಎಗಳನ್ನು ಖರೀದಿಸುವ ಪ್ರಕ್ರಿಯೆಗಳ ನಡುವಿನ ಘಟ್ಟ ಅಂತ ಕಾಣುತ್ತದೆ. ಈ ಸ್ಥಿತಿ ಹಿಂದೆಯೂ ಇತ್ತೇ? ಅಥವಾ ಇದು ಹೊಸತೇ? ಇದು ಆಳುವ ಪಕ್ಷದ ಆತ್ಮವಿಶ್ವಾಸದ ಗುರುತೇ ಅಥವಾ ಅವರ ಹತಾಶೆಯ ಸಂಕೇತವೇ?

ಇವುಗಳಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸಿಗಲಾರದೇ ಹೋಗುವ ಸಾಧ್ಯತೆ ಇದೆ.

ಕೆಲವರು “ಒಂದು ಸ್ವೀಟ್ ಡಬ್ಬಿ, ಅದರಲ್ಲಿ ಒಂದು ಸ್ಕಾಚ್, ಸ್ವಲ್ಪ ದುಡ್ಡು, ಡ್ರೈ ಫ್ರೂಟ್, ಇಷ್ಟೇ ಕೊಟ್ಟಿದ್ದಾರೆ. ಅದನ್ನೇ ಏನು ಮಹಾ ಅನ್ನುವ ರೀತಿಯಲ್ಲಿ ನೀವು ಮಾತಾಡುತ್ತಿದ್ದೀರಿ. ಆಳುವವರು ತಿನ್ನೋದು ನೋಡಿದರೆ ಇದೇನೂ ಅಲ್ಲ ಅಂತ ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಹಿಂದೆಮುಂದೆ ಅಡ್ಡಾಡಿ, ಅವರ ಮುಷ್ಠಿ ಭಿಕ್ಷೆ ಗಿಟ್ಟಿಸಿಕೊಳ್ಳುವುದು ಅರವತ್ತರ ದಶಕದಿಂದಲೇ ಶುರು ಆಗಿದೆ. ಎಷ್ಟೋ ಜನ ಜಿ ಕೆಟಗಿರಿ ಸೈಟು ತೊಗೊಂಡು ಉದ್ಧಾರ ಆಗಿದ್ದಾರೆ. ಇನ್ನು ಕೆಲವರು ಇಡೀ ಇಡೀ ಲೇಔಟ್‌ಗಳನ್ನೇ ಮಂಜೂರು ಮಾಡಿಸಿಕೊಂಡಿದ್ದಾರೆ. ಅವೆಲ್ಲಾ ನೋಡಿದರೆ ಈ ಸ್ವೀಟ್ ಬಾಕ್ಸ್ ಜುಜುಬಿ” ಅಂತ ಲೇವಡಿ ಮಾಡಿದ್ದಾರೆ.

ಈ ಘೋಟಾಲಾದಿಂದಾಗಿ ರಾಜಕಾರಣ ಹಾಗೂ ಮಾಧ್ಯಮಗಳ ನಡುವಿನ ಸಂಬಂಧದ ಬಗ್ಗೆ ಚರ್ಚೆ ಆರಂಭ ಆಗಿರುವುದು ಹೌದು. ಅದು ಜನರ ಮನಸ್ಸಿನಲ್ಲಿ ನೆನಪಿನಲ್ಲಿ ಇರುವವರೆಗೆ ಒಳ್ಳೆಯದು. ಆದರೆ ಸಾರ್ವಜನಿಕರ ನೆನಪಿನ ಶಕ್ತಿಗಿಂತ ಮರೆವಿನ ಶಕ್ತಿ ದೊಡ್ಡದು. ಕೋವಿಡ್‌ನಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ, ಆಮ್ಲಜನಕ ಸಿಗದೇ ಸತ್ತುಹೋದ ಸಂಬಂಧಿಕರನ್ನೆ ಮರೆತುಹೋದ ಜನರಿಗೆ ಇಂತಹ ಸ್ವೀಟ್ ಬಾಕ್ಸ್‌ಗಳೆಲ್ಲ ನೆನಪಿರಲಾರವು.

ಈ ದೀಪಾವಳಿ ಪಗಡೆ ಆಟದಲ್ಲಿ ಕೇವಲ ‘ತಮ್ಮವರಿಗೆ’ ಮಾತ್ರ ಆಹೇರು ಕೊಟ್ಟಿದ್ದಾರೆ ಅಂತ ನೀವು ತಿಳಿದುಕೊಂಡಿದ್ದರೆ ಅದು ತಪ್ಪು. ಸಕಲ ಸುದ್ದಿ ಸಾರುವಭೌಮರಿಗೆ ಕಪ್ಪ ಕಾಣಿಕೆ ಹೋಗಿದೆ ಎನ್ನಲಾಗಿದೆ. ಕೆಲವರು ವಾಪಸ್ ಕೊಟ್ಟಿದ್ದಾರೆ. ಸುಮ್ಮನೇ ಇಸಿದುಕೊಂಡು ಬೆಚ್ಚಗೆ ಇಟ್ಟುಕೊಂಡವರು ಕೆಲವರು ಇರಬಹುದು. ಏನೇನೋ ಸುದ್ದಿ ಬರೆದು, ಜನರನ್ನು ದಿಶಾಭೂಲ ಮಾಡುವ ಸುದ್ದಿಗೇಡಿಗಳನ್ನು, ಜನರಿಗೆ ಕಣ್ಣಪಟ್ಟಿ ಕಟ್ಟಿ ಒಂದೇ ಕಡೆ ವಿಚಾರ ಮಾಡುವಂತೆ ನೋಡಿಕೊಳ್ಳುವ ಕುದುರೆ ಗಾಡಿಕಾರರಿಗೆ, ಸರ್ಕಾರಿ ಪರಿಚಾರಿಕರಿಗೆ ಅತಿ ಹೆಚ್ಚು ಹಾಗೂ ಟೀಕಾಕಾರರಿಗೆ ಕಮ್ಮಿ ಅಂತ ತಿಳಕೋ ಬ್ಯಾಡರಿ ಮತ್ತೆ. ಸರ್ಕಾರವನ್ನು ಬೈದು ಬರೆದ ನಿಂದಾಸ್ತುತಿಕಾರರಿಗೆ ಹಾಗೂ ಹೊಗಳಿದ ಭಜನ ಮಂಡಳಿಗಳಿಗೆ ಒಂದೇ ರೀತಿಯ ಉಪಚಾರ ನಡೆದಿದೆ ಅಂತೆ.

ರಾಜ್ಯದ ಚುಕ್ಕಾಣಿಯನ್ನು ಜಬರದಸ್ತ್ ಆಗಿ ಹಿಡಿಸಿಕೊಂಡಿರುವ, ಕ್ರಿಯೆ-ಪ್ರತಿಕ್ರಿಯೆಯಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ನ್ಯೂಟನ್ ಬೊಮ್ಮಾಯಿ ಅವರು ಮಾತ್ರ ಇದರಿಂದ ಕೈ ಝಾಡಿಸಿಕೊಳ್ಳುವ ಗಡಿಬಿಡಿಯಲ್ಲಿ ಇದ್ದಾರೆ. ಅವರು ಮಾತಾಡುವ ಧಾಟಿ ನೋಡಿದರೆ ಅವರು ಮಂಗಳೂರಿಗೆ ಹೋಗಿ ಕೊಂಕಣಿ ಕಲಿತು, ‘ಹಾಂವ್ ನಾ, ಹಾಂವ್ ಕೇಲ್ ನಾ, ಮಕ್ ಗೊತ್ ನಾ’ ಅನ್ನುವ ಡೈಲಾಗ್ ಹೊಡೆಯುತ್ತಿದ್ದಾರೆ ಅಂತ ಕಾಣುತ್ತದೆ.

ಅವರು ಒಂದು ಕಾಲದಲ್ಲಿ ಶಿಗ್ಗಾವಿ-ಹಾವೇರಿ-ಹುಬ್ಬಳ್ಳಿಯಲ್ಲಿ ರೈಲ್ವೆ ಹಳಿಯಗುಂಟ ಓಡಾಡಿಕೊಂಡು, ರೊಟ್ಟಿ-ಎಣ್ಣೆಗಾಯಿ ಉಂಡು, ಅಂದರಿಕು ಮಂಚಿವಾಳ್ಳು ಆಗಿ ಗದಗ ಕಂಪನಿ ನಾಟಕ ನೋಡಿಕೊಂಡು ಇರುತ್ತಿದ್ದಾಗ ಇಷ್ಟು ಚುರುಕಾಗಿರಲಿಲ್ಲವಂತೆ. ಆದರೆ ಇತ್ತೀಚಿಗೆ ಆ ಉಡುಪಿ-ಮಂಗಳೂರು-ಕಾರ್ಕಳ-ಪಂಪ್‌ವೆಲ್ ಅಂತ ಎಲ್ಲಾ ಓಡಾಡಲು ಶುರುಮಾಡಿ, ಅಂಥೋನಿ ಬೋರದೈನ್ ಶೋ ಎಲ್ಲಾ ನೋಡುತ್ತಾ, ಇಡ್ಲಿ-ವಡಾ-ರಾಹು-ಕಟಲಾ-ಸೀಗಡಿ-ಸಮುದ್ರ ಕುದುರೆಯದೆಲ್ಲಾ ರುಚಿ ಬೆಳೆಸಿಕೊಂಡಕೂಡಲೇ ಹೀಗಾಗಿಬಿಟ್ಟರಂತೆ ಎಂದು ಅವರ ಊರಿನ ಜನ ಹೇಳುತ್ತಾರೆ.

ಸುದ್ದಿಮನೆ ಮಿತ್ರರಿಗೆ ನಾವು ದೀಪಾವಳಿ ಉಡುಗೊರೆ ಕೊಟ್ಟಿದ್ದೇವೆ. ಅದು ಹಿಂದೂ ಸಂಪ್ರದಾಯ. ಈ ಕಾಂಗ್ರೆಸ್‌ನವರಿಗೆ ಸಾಬರ-ಕಿರಿಸ್ತಾನರ ಹಬ್ಬ ಎಲ್ಲಾ ಬೋ ಪ್ರೀತಿ. ಆದರೆ ಹಿಂದೂಗಳ ಹಬ್ಬ ಕಂಡರೆ ಆಗೋದಿಲ್ಲ, ಅಂತ ಸುಧಾಕರ್ ಅನ್ನುವ ಸಚಿವರು ಆರೋಗ್ಯಪೂರ್ಣವಾದ ಸಮಜಾಯಿಷಿ ಕೊಟ್ಟಿದ್ದಾರೆ. ದೀಪಾವಳಿಗೆ ಕೌರವರು-ಪಾಂಡವರು ಜೂಜಾಟ ಆಡಿದ್ದು ಹೌದು; ಸೋಮರಸ ಕುಡಿದದ್ದೂ ಹೌದು, ಅಂತ ಅವರು ತಿಳಿದುಕೊಂಡಿರಬಹುದು. ಅಷ್ಟೆಲ್ಲಾ ಆದನಂತರ ಮಹಾಭಾರತದಲ್ಲಿ ಮುಂದೇನಾಯಿತು ಅಂತ ಅವರು ಬಿಡಿಸಿ ಹೇಳಲಿಲ್ಲ. ಅದಕ್ಕೆ ಅವರಿಗೆ ಸಮಸ್ತ ಕನ್ನಡಿಗರ ವತಿಯಿಂದ ಧನ್ಯವಾದಗಳು.

ಬೊಮ್ಮಾಯಿ ಸಾಹೇಬರು ಮಾತ್ರ “ಯಾರಿಗೂ ದುಡ್ಡು ಕೊಡುವಂತೆ ನಾನು ಹೇಳಿಲ್ಲ” ಅನ್ನುತ್ತಿದ್ದಾರೆಯೇ ಹೊರತು, ಯಾರಿಗೂ ದುಡ್ಡು ಸಿಕ್ಕಿಲ್ಲ ಎನ್ನುವ ಮಾತು ಹೇಳುತ್ತಿಲ್ಲ. ಇದು ಭಾಳ ಮಜಾ.

ಇಲ್ಲಿಯವರೆಗೆ ಕೆಲವೇ ಕೆಲವು ಪತ್ರಕರ್ತರು ಅವನ್ನು ವಾಪಸ್ ಕೊಟ್ಟು, ದೂರು ಕೊಟ್ಟು, ಸುದ್ದಿ ಮಾಡಿ, ಟ್ವೀಟ್, ಪೋಸ್ಟ್ ಇತ್ಯಾದಿ ಮಾಡಿದ್ದಾರೆ. ಇವು ಯಾವುದನ್ನೂ ಮಾಡದೇ ಇದ್ದವರೂ ಇದ್ದಾರೆ. ಅವರಿಗೆ ಸ್ವೀಟ್-ಮೀಟ್ ಸ್ಟಾಲ್‌ನ ಬಾಕ್ಸ್ ಬಂದಿರಬಹುದು ಅಥವಾ ಬಂದಿರದೇ ಇರಬಹುದು ಕೂಡ.

ಇದನ್ನೂ ಓದಿ: ‘ಪೇಸಿಎಂ’ ಪೋಸ್ಟರ್‌ಗಳು ವೈರಲ್‌; ಸ್ಕ್ಯಾನ್‌ ಮಾಡಿದರೆ ‘40% ವೆಬ್‌ಸೈಟ್‌’ ಓಪನ್!

ಈ ಸುದ್ದಿ ಹರಡಿದಾಗ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಮಜಾ ಕಮೆಂಟ್‌ಗಳು ಯಾವುವು ಅಂತ ನೋಡೋಣ:

“ಪತ್ರಕರ್ತರಿಗೆ ಕರ್ನಾಟಕದ ಮುಖ್ಯಮಂತ್ರಿಗಳು ಭಾರೀ ಉಡುಗೊರೆ ನೀಡುವುದು ಹೊಸದೇನಲ್ಲ. ನಿಜಲಿಂಗಪ್ಪನವರ ಕಾಲದಿಂದ ಯಡಿಯೂರಪ್ಪನವರ ತನಕ ಜಿ ಕೆಟಗರಿ ಸೈಟ್ ಪಡೆದ ಸಂಪಾದಕರ ಮತ್ತು ಇತರರ ದೊಡ್ಡ ಪಟ್ಟಿಯೇ ಇದೆ. ಈ ಸೈಟ್‌ಗಳ ಬೆಲೆ ಈಗ ಹಲವು ಕೋಟಿ ರೂಪಾಯಿ. ಇಂತಹ ಕೆಲವು ಜಿ ಕೆಟಗರಿ ಸೈಟ್ ಪಡೆದವರನ್ನು ಮಹಾನ್ ಪತ್ರಕರ್ತರು ಎಂದು ಕೊಂಡಾಡುವ ಒಂದು ವರ್ಗವೇ ಇದೆ. ಇವರಲ್ಲಿ ಕೆಲವರು ಈಗ ಪ್ರಾಮಾಣಿಕತೆಯ ಪಾಠ ಮಾಡುವುದು ನೋಡಿದರೆ ಕಲಿಯುಗದ ಕೊನೆಪಾದ ತಲುಪಿದ್ದೇವೆ ಎಂದು ಅರಿವಾಗುತ್ತದೆ! ತಮಾಷೆ ಎಂದರೆ ಎಸ್ ಎಂ ಕೃಷ್ಣ ಕಾಲದಲ್ಲಿ ಸುಮಾರು 50 ಆಯ್ದ ಪತ್ರಕರ್ತರಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಿ ಕೆಟಗರಿ ಸೈಟ್ ನೀಡಲಾಯಿತು. ಆ ಬಗ್ಗೆ ಅಂದು ವಿಧಾನ ಪರಿಷತ್‌ನಲ್ಲಿ ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಶ್ನೆ ಕೇಳಿ ಉಡುಗೊರೆ ಪಡೆದವರ ಹೆಸರು ಬಯಲು ಮಾಡಿದ್ದರು. ಆ ಪಟ್ಟಿಯನ್ನು ಕೆಲ ಪತ್ರಿಕೆಗಳಲ್ಲಿ ಹಾಕಲಾಗಿತ್ತು. ಇವುಗಳ ಹೊರತುಪಡಿಸಿ ವರ್ಗಾವಣೆ, ಗುತ್ತಿಗೆ ದಂಧೆ ನಡೆಸುವ ಇನ್ನೊಂದು ವರ್ಗವೂ ಇದೆ. ಹಾಗೂ ಬ್ಲಾಕ್‌ಮೇಲ್, ಪೀಡಿಸಿ, ಕಾಡಿಸಿ, ಕಾಲಿಗೆ ಬಿದ್ದು, ಶಾಲೆ, ಕಾಲೇಜು, ರೋಗ, ರುಜಿನ, ತೀರ್ಥಯಾತ್ರೆ ಎಂದು ಹಣ ಪಡೆಯುವ ಒಂದು ವರ್ಗವೂ ಇದೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಇನ್ನೊಂದಿಲ್ಲ. ಇವುಗಳ ಎದುರು ಈಗ ಬಂದಿದೆ ಎನ್ನಲಾದ ಒಂದೋ ಎರಡೋ ಲಕ್ಷ ರೂಪಾಯಿ ಪುಡಿಗಾಸು! ಕೇಳಿ ಪಡೆದದ್ದಲ್ಲ. ಹಾಗೆಯೇ ಬಂದಿದ್ದು! ಮೇಲಿನ ಒಂದು ಅಥವಾ ಮೂರೂ ವರ್ಗಕ್ಕೆ ಸೇರಿದ ಕೆಲವರಿಗೂ ಈ ಪುಡಿಗಾಸು ಬಂದಿರಬಹುದು”. ಇದನ್ನು ಬರೆದವರು ಯುವ ಪತ್ರಕರ್ತರೊಬ್ಬರು.

“ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತರೊಬ್ಬರು ತಮ್ಮ ಮಗಳಿಗೆ ಹೈದರಬಾದು ಕರ್ನಾಟಕ ಕೋಟಾ ಅಡಿಯಲ್ಲಿ ಎಂ.ಡಿ ಸೀಟು ಪಡೆದರು. ಶಿವಮೊಗ್ಗ ಮೂಲದವರು ಅದ ಅವರು ತಮ್ಮ ಮಕ್ಕಳು ಗುಲ್ಬರ್ಗದಲ್ಲಿ ಶಾಲೆಗೆ ಹೋಗಿದ್ದಾಗಿ ಸುಳ್ಳು ಪ್ರಮಾಣಪತ್ರ ಕೊಟ್ಟರು. ಇದರ ಬಗ್ಗೆ ತನಿಖೆ ನಡೆದಾಗ ಮುಖ್ಯ ಕಾರ್ಯದರ್ಶಿಯ ಮೇಲೆ ಒತ್ತಡ ಹಾಕಿ ಅದನ್ನು ನಿಲ್ಲಿಸಿದರು. ಈಗ ಅವರು ಬೆಂಗಳೂರಿನ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ಪ್ರಾಮಾಣಿಕತೆ ಬಗ್ಗೆ ಭೀಷಣ ಭಾಷಣ ಮಾಡುವ ಕಾಯಕದಲ್ಲಿ ಇದ್ದಾರೆ”, ಹೀಗೆಂದು ಎಲ್ಲಾ ನೋಡಿ ಸಾಕಾದ ವರದಿಗಾರರೊಬ್ಬರು ಹೇಳಿದರು.

“ಇದು ಜಿಲ್ಲಾಮಟ್ಟದ ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಅನ್ಯಾಯ! ತಾರತಮ್ಯ!! ಬರೀ 2.5 ಲ.ರೂ. ಏಕೆ ಎಂದು ಅಲ್ಲಿಯೂ ಅಸಮಾಧಾನ? ಇದರ ಅರ್ಧದಷ್ಟನ್ನಾದರೂ ಜಿಲ್ಲಾ ಕೇಂದ್ರದಲ್ಲಿ ಗಿಫ್ಟ್ ಕೊಡಬಾರದೆ?”

“ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು” ಎಂಬ ತತ್ವದ ಸ್ಪಷ್ಟ ಉಲ್ಲಂಘನೆ!! ಬೆಂಗಳೂರಿನವರಿಗೆ ಬೆಣ್ಣೆ, ಜಿಲ್ಲಾ ಕೇಂದ್ರದವರಿಗೆ ಸುಣ್ಣ. ’ನಮ್ಮೂರಿಗೆ ಬರಲಿ ಬೊಮ್ಮಾಯಿಯವರು ಕೇಳಿಯೇಬಿಡುತ್ತೇವೆ’ ಎಂದು ಕೆಲವರಾದರೂ ಕೊಡವಿಕೊಂಡು ಹೇಳುವ ತಯಾರಿಯಲ್ಲಿ ಇದ್ದಾರೆ. ಬೊಮ್ಮಾಯಿ ಅವರು ಮೊದಲೇ ಈ ಅನ್ಯಾಯವನ್ನು ಸರಿಪಡಿಸಬೇಕು ಎಂಬುದು ಕೆಲವರ ಹಕ್ಕೊತ್ತಾಯ!” ಹೀಗೆಂದು ವ್ಯಂಗ್ಯವಾಗಿ ತಿವಿದವರು ಒಬ್ಬ ಹಿರಿಯರು.

“ಖರೆ ಖರೆ, ಸುದ್ದಿ ಬರೆಯುವವರಿಗಿಂತ ಸುಳ್ಳು ಸುಳ್ಳು ಸುದ್ದಿ ಹೇಳುವವರಿಗೆ ಹೆಚ್ಚು ರೊಕ್ಕ ಸಿಗುವ ಕಾಲ ಇದು. ಬಲೇ ಕೇಡುಗಾಲ” ಅಂತ ಮೊನ್ನೆ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಿದ್ದರು. ಇದು ರಾಜ್ಯದ ಈಗಿನ ಶಾಸನ, ಕುಶಾಸನ ಹಾಗೂ ಮಾಧ್ಯಮ ಹಾಗೂ ರಾಜಕಾರಣದ ಸ್ಥಿತಿ.

ಅಂದಹಾಗೆ ಜೀವನಪೂರ್ತಿ ಜನತಾ ಪರಿವಾರದಲ್ಲಿ ಕಳೆದು ತಮ್ಮ ಜೀವನ ಸಂಧ್ಯಾ ಕಾಲದಲ್ಲಿ ಸಂಘ ಪರಿವಾರದ ಕಡೆ ಹೋಗುತ್ತಿರುವ ನಾಯಕರೊಬ್ಬರು ಹೇಳಿದರಂತೆ, ’ಕೆಲವು ಪತ್ರಕರ್ತರು ನಾವು ಕಾಶಿಯಾತ್ರೆಗೆ ಹೋಗಬೇಕು ಎಂದು ಕೇಳಿಕೊಂಡು ನನ್ನ ಕಡೆ ಬಂದಿದ್ದರು. ನಾನು ದುಡ್ಡು ಕೊಡಲಿಲ್ಲ. ಟ್ರೇನ್ ಬುಕ್ ಮಾಡಿಸಿಕೊಟ್ಟೆ. ಆದರೆ ಅವರು ನನಗೆ ಹೇಳದೇ ಕೇಳದೇ ಆ ಟಿಕೆಟ್‌ಗಳನ್ನು ರದ್ದುಮಾಡಿಸಿಕೊಂಡು ದುಡ್ಡು ವಾಪಸ್ ತೆಗೆದುಕೊಂಡು ಹೋದರು. ಎನ್ ಮಾಡ್ತೀರಿ’ ಅಂತ ನಗಾಡಿದರಂತೆ.

ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ಇಷ್ಟೆಲ್ಲಾ ಆಗುವಾಗ ನಮ್ಮ ದೋಸ್ತು ಶ್ರೀರಾಮುಲು ಅಣ್ಣಾ ಅವರು ಬಳ್ಳಾರಿಯಲ್ಲಿ ಇದ್ದರಂತೆ. “ಅಯ್ಯೋ ಇದೆಲ್ಲಾ ಏನು ಮಹಾ. ಅಂದ್ರಿಕಿನಾ ನಂ ಬಾಸ್ ಇಡೀ ಕರ್ನಾಟಕ ರಾಜ್ಯಕ್ಕೆನೇ ಬಾಸ್ ಇದ್ದಾಗ, ಪತ್ರಕರ್ತರನ್ನು ಬರೀ ಟ್ರೇನ್‌ನಲ್ಲಿ ಕಾಶಿಗೆ ಕಳಸೋದು ಅಲ್ಲ, ಹೆಲಿಕಾಪ್ಟರ್ ನಲ್ಲಿ ಸಿಂಗಾಪುರ್‌ಗೆ ಕಳಿಸಿ ಕೊಡ್ತಾ ಇದ್ವಿ. ಆ ಕಾಲಾನೇ ಬೇರೆ, ಪಾರ್ಟಿನೆ ಬೇರೆ, ಆಗಿನ್ ಲೀಡರ್ ಬೇರೆ, ಆಗಿನ್ ಪೇಪರ್‌ನವರೆ ಬೇರೆ. ಈಗಿನ ದುಡ್ಡು-ಕಾಸು ಎಲ್ಲಾ ನಮ್ ಬಳ್ಳಾರಿ ಆದಿರಿಗೂ ಸಮಾ ಇಲ್ಲ” ಅಂತ ಗೋಳಾಡಿಕೊಂಡರಂತೆ.

ಇನ್ನು ಸರಕಾರಿ ಲಕೋಟೆಯನ್ನು ಹಿಂದಿರುಗಿಸದೇ, ಹಿಂದಿರುಗಿಸಿದವರನ್ನು ನೋಡಿ ಮುಸಿಮುಸಿ ನಗುತ್ತಾ ಸುಮ್ಮನೇ ಕುಳಿತವರ ಕತೆ ಏನು? ಅವರ ಮನೆ ದೀಪಾವಳಿ ಭರ್ಜರಿ ಅಗಿರಬಹುದೇ? ಅಥವಾ ಅವರಿಗೆ ಅದು ಮಾಮೂಲಿಯಾಗಿದ್ದಿರಬಹುದೇ? ಯಾರಿಗೆ ಗೊತ್ತು?

ಅಲ್ಲವೇ ಶುಕಭಾಷಿಣಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...