Homeಅಂಕಣಗಳು‘ಪೇ ಸಿಎಂ’ನ ಭೂತಕಾಲ ಏನು? ‘ಪೇಡ್ ಸಿಎಂ’ ಅಲ್ಲವೇ?

‘ಪೇ ಸಿಎಂ’ನ ಭೂತಕಾಲ ಏನು? ‘ಪೇಡ್ ಸಿಎಂ’ ಅಲ್ಲವೇ?

- Advertisement -
- Advertisement -

‘ಪೇಸಿಎಂ’ನ ಭೂತಕಾಲ, ‘ಪೇಡ್ ಸಿಎಂ’ ಅಂತ ಆದರೆ, ಅದರ ಭವಿಷ್ಯತ್ ಕಾಲ ಏನು? “ರಿಸೀವ್ಡ್ ವಿತ್ ಥ್ಯಾಂಕ್ಸ್ ಫ್ರಮ್ ಸಿಎಂ” ಅಂತಲೇ?

ಇಷ್ಟು ದಿನ ಮತದಾರರಿಗೆ ಹಣ-ಹೆಂಡ ಹಂಚಿ ಸುಸ್ತಾಗಿ ಹೋದ ಪುಢಾರಿಗಳ ಪರಿಸ್ಥಿತಿ ಕರ್ನಾಟಕದ ಪತ್ರಕರ್ತರಿಗೆ ಹಣ-ಹೆಂಡ ಹಂಚಿ ನೋಡೋಣ ಅನ್ನುವ ದೈನೇಸಿ ಸ್ಥಿತಿ ಬಂದಿದೆ. ಇದು ಮತದಾರರನ್ನು ಖರೀದಿಸುವ ಹಾಗೂ ಎಂಎಲ್‌ಎಗಳನ್ನು ಖರೀದಿಸುವ ಪ್ರಕ್ರಿಯೆಗಳ ನಡುವಿನ ಘಟ್ಟ ಅಂತ ಕಾಣುತ್ತದೆ. ಈ ಸ್ಥಿತಿ ಹಿಂದೆಯೂ ಇತ್ತೇ? ಅಥವಾ ಇದು ಹೊಸತೇ? ಇದು ಆಳುವ ಪಕ್ಷದ ಆತ್ಮವಿಶ್ವಾಸದ ಗುರುತೇ ಅಥವಾ ಅವರ ಹತಾಶೆಯ ಸಂಕೇತವೇ?

ಇವುಗಳಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸಿಗಲಾರದೇ ಹೋಗುವ ಸಾಧ್ಯತೆ ಇದೆ.

ಕೆಲವರು “ಒಂದು ಸ್ವೀಟ್ ಡಬ್ಬಿ, ಅದರಲ್ಲಿ ಒಂದು ಸ್ಕಾಚ್, ಸ್ವಲ್ಪ ದುಡ್ಡು, ಡ್ರೈ ಫ್ರೂಟ್, ಇಷ್ಟೇ ಕೊಟ್ಟಿದ್ದಾರೆ. ಅದನ್ನೇ ಏನು ಮಹಾ ಅನ್ನುವ ರೀತಿಯಲ್ಲಿ ನೀವು ಮಾತಾಡುತ್ತಿದ್ದೀರಿ. ಆಳುವವರು ತಿನ್ನೋದು ನೋಡಿದರೆ ಇದೇನೂ ಅಲ್ಲ ಅಂತ ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಹಿಂದೆಮುಂದೆ ಅಡ್ಡಾಡಿ, ಅವರ ಮುಷ್ಠಿ ಭಿಕ್ಷೆ ಗಿಟ್ಟಿಸಿಕೊಳ್ಳುವುದು ಅರವತ್ತರ ದಶಕದಿಂದಲೇ ಶುರು ಆಗಿದೆ. ಎಷ್ಟೋ ಜನ ಜಿ ಕೆಟಗಿರಿ ಸೈಟು ತೊಗೊಂಡು ಉದ್ಧಾರ ಆಗಿದ್ದಾರೆ. ಇನ್ನು ಕೆಲವರು ಇಡೀ ಇಡೀ ಲೇಔಟ್‌ಗಳನ್ನೇ ಮಂಜೂರು ಮಾಡಿಸಿಕೊಂಡಿದ್ದಾರೆ. ಅವೆಲ್ಲಾ ನೋಡಿದರೆ ಈ ಸ್ವೀಟ್ ಬಾಕ್ಸ್ ಜುಜುಬಿ” ಅಂತ ಲೇವಡಿ ಮಾಡಿದ್ದಾರೆ.

ಈ ಘೋಟಾಲಾದಿಂದಾಗಿ ರಾಜಕಾರಣ ಹಾಗೂ ಮಾಧ್ಯಮಗಳ ನಡುವಿನ ಸಂಬಂಧದ ಬಗ್ಗೆ ಚರ್ಚೆ ಆರಂಭ ಆಗಿರುವುದು ಹೌದು. ಅದು ಜನರ ಮನಸ್ಸಿನಲ್ಲಿ ನೆನಪಿನಲ್ಲಿ ಇರುವವರೆಗೆ ಒಳ್ಳೆಯದು. ಆದರೆ ಸಾರ್ವಜನಿಕರ ನೆನಪಿನ ಶಕ್ತಿಗಿಂತ ಮರೆವಿನ ಶಕ್ತಿ ದೊಡ್ಡದು. ಕೋವಿಡ್‌ನಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ, ಆಮ್ಲಜನಕ ಸಿಗದೇ ಸತ್ತುಹೋದ ಸಂಬಂಧಿಕರನ್ನೆ ಮರೆತುಹೋದ ಜನರಿಗೆ ಇಂತಹ ಸ್ವೀಟ್ ಬಾಕ್ಸ್‌ಗಳೆಲ್ಲ ನೆನಪಿರಲಾರವು.

ಈ ದೀಪಾವಳಿ ಪಗಡೆ ಆಟದಲ್ಲಿ ಕೇವಲ ‘ತಮ್ಮವರಿಗೆ’ ಮಾತ್ರ ಆಹೇರು ಕೊಟ್ಟಿದ್ದಾರೆ ಅಂತ ನೀವು ತಿಳಿದುಕೊಂಡಿದ್ದರೆ ಅದು ತಪ್ಪು. ಸಕಲ ಸುದ್ದಿ ಸಾರುವಭೌಮರಿಗೆ ಕಪ್ಪ ಕಾಣಿಕೆ ಹೋಗಿದೆ ಎನ್ನಲಾಗಿದೆ. ಕೆಲವರು ವಾಪಸ್ ಕೊಟ್ಟಿದ್ದಾರೆ. ಸುಮ್ಮನೇ ಇಸಿದುಕೊಂಡು ಬೆಚ್ಚಗೆ ಇಟ್ಟುಕೊಂಡವರು ಕೆಲವರು ಇರಬಹುದು. ಏನೇನೋ ಸುದ್ದಿ ಬರೆದು, ಜನರನ್ನು ದಿಶಾಭೂಲ ಮಾಡುವ ಸುದ್ದಿಗೇಡಿಗಳನ್ನು, ಜನರಿಗೆ ಕಣ್ಣಪಟ್ಟಿ ಕಟ್ಟಿ ಒಂದೇ ಕಡೆ ವಿಚಾರ ಮಾಡುವಂತೆ ನೋಡಿಕೊಳ್ಳುವ ಕುದುರೆ ಗಾಡಿಕಾರರಿಗೆ, ಸರ್ಕಾರಿ ಪರಿಚಾರಿಕರಿಗೆ ಅತಿ ಹೆಚ್ಚು ಹಾಗೂ ಟೀಕಾಕಾರರಿಗೆ ಕಮ್ಮಿ ಅಂತ ತಿಳಕೋ ಬ್ಯಾಡರಿ ಮತ್ತೆ. ಸರ್ಕಾರವನ್ನು ಬೈದು ಬರೆದ ನಿಂದಾಸ್ತುತಿಕಾರರಿಗೆ ಹಾಗೂ ಹೊಗಳಿದ ಭಜನ ಮಂಡಳಿಗಳಿಗೆ ಒಂದೇ ರೀತಿಯ ಉಪಚಾರ ನಡೆದಿದೆ ಅಂತೆ.

ರಾಜ್ಯದ ಚುಕ್ಕಾಣಿಯನ್ನು ಜಬರದಸ್ತ್ ಆಗಿ ಹಿಡಿಸಿಕೊಂಡಿರುವ, ಕ್ರಿಯೆ-ಪ್ರತಿಕ್ರಿಯೆಯಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ನ್ಯೂಟನ್ ಬೊಮ್ಮಾಯಿ ಅವರು ಮಾತ್ರ ಇದರಿಂದ ಕೈ ಝಾಡಿಸಿಕೊಳ್ಳುವ ಗಡಿಬಿಡಿಯಲ್ಲಿ ಇದ್ದಾರೆ. ಅವರು ಮಾತಾಡುವ ಧಾಟಿ ನೋಡಿದರೆ ಅವರು ಮಂಗಳೂರಿಗೆ ಹೋಗಿ ಕೊಂಕಣಿ ಕಲಿತು, ‘ಹಾಂವ್ ನಾ, ಹಾಂವ್ ಕೇಲ್ ನಾ, ಮಕ್ ಗೊತ್ ನಾ’ ಅನ್ನುವ ಡೈಲಾಗ್ ಹೊಡೆಯುತ್ತಿದ್ದಾರೆ ಅಂತ ಕಾಣುತ್ತದೆ.

ಅವರು ಒಂದು ಕಾಲದಲ್ಲಿ ಶಿಗ್ಗಾವಿ-ಹಾವೇರಿ-ಹುಬ್ಬಳ್ಳಿಯಲ್ಲಿ ರೈಲ್ವೆ ಹಳಿಯಗುಂಟ ಓಡಾಡಿಕೊಂಡು, ರೊಟ್ಟಿ-ಎಣ್ಣೆಗಾಯಿ ಉಂಡು, ಅಂದರಿಕು ಮಂಚಿವಾಳ್ಳು ಆಗಿ ಗದಗ ಕಂಪನಿ ನಾಟಕ ನೋಡಿಕೊಂಡು ಇರುತ್ತಿದ್ದಾಗ ಇಷ್ಟು ಚುರುಕಾಗಿರಲಿಲ್ಲವಂತೆ. ಆದರೆ ಇತ್ತೀಚಿಗೆ ಆ ಉಡುಪಿ-ಮಂಗಳೂರು-ಕಾರ್ಕಳ-ಪಂಪ್‌ವೆಲ್ ಅಂತ ಎಲ್ಲಾ ಓಡಾಡಲು ಶುರುಮಾಡಿ, ಅಂಥೋನಿ ಬೋರದೈನ್ ಶೋ ಎಲ್ಲಾ ನೋಡುತ್ತಾ, ಇಡ್ಲಿ-ವಡಾ-ರಾಹು-ಕಟಲಾ-ಸೀಗಡಿ-ಸಮುದ್ರ ಕುದುರೆಯದೆಲ್ಲಾ ರುಚಿ ಬೆಳೆಸಿಕೊಂಡಕೂಡಲೇ ಹೀಗಾಗಿಬಿಟ್ಟರಂತೆ ಎಂದು ಅವರ ಊರಿನ ಜನ ಹೇಳುತ್ತಾರೆ.

ಸುದ್ದಿಮನೆ ಮಿತ್ರರಿಗೆ ನಾವು ದೀಪಾವಳಿ ಉಡುಗೊರೆ ಕೊಟ್ಟಿದ್ದೇವೆ. ಅದು ಹಿಂದೂ ಸಂಪ್ರದಾಯ. ಈ ಕಾಂಗ್ರೆಸ್‌ನವರಿಗೆ ಸಾಬರ-ಕಿರಿಸ್ತಾನರ ಹಬ್ಬ ಎಲ್ಲಾ ಬೋ ಪ್ರೀತಿ. ಆದರೆ ಹಿಂದೂಗಳ ಹಬ್ಬ ಕಂಡರೆ ಆಗೋದಿಲ್ಲ, ಅಂತ ಸುಧಾಕರ್ ಅನ್ನುವ ಸಚಿವರು ಆರೋಗ್ಯಪೂರ್ಣವಾದ ಸಮಜಾಯಿಷಿ ಕೊಟ್ಟಿದ್ದಾರೆ. ದೀಪಾವಳಿಗೆ ಕೌರವರು-ಪಾಂಡವರು ಜೂಜಾಟ ಆಡಿದ್ದು ಹೌದು; ಸೋಮರಸ ಕುಡಿದದ್ದೂ ಹೌದು, ಅಂತ ಅವರು ತಿಳಿದುಕೊಂಡಿರಬಹುದು. ಅಷ್ಟೆಲ್ಲಾ ಆದನಂತರ ಮಹಾಭಾರತದಲ್ಲಿ ಮುಂದೇನಾಯಿತು ಅಂತ ಅವರು ಬಿಡಿಸಿ ಹೇಳಲಿಲ್ಲ. ಅದಕ್ಕೆ ಅವರಿಗೆ ಸಮಸ್ತ ಕನ್ನಡಿಗರ ವತಿಯಿಂದ ಧನ್ಯವಾದಗಳು.

ಬೊಮ್ಮಾಯಿ ಸಾಹೇಬರು ಮಾತ್ರ “ಯಾರಿಗೂ ದುಡ್ಡು ಕೊಡುವಂತೆ ನಾನು ಹೇಳಿಲ್ಲ” ಅನ್ನುತ್ತಿದ್ದಾರೆಯೇ ಹೊರತು, ಯಾರಿಗೂ ದುಡ್ಡು ಸಿಕ್ಕಿಲ್ಲ ಎನ್ನುವ ಮಾತು ಹೇಳುತ್ತಿಲ್ಲ. ಇದು ಭಾಳ ಮಜಾ.

ಇಲ್ಲಿಯವರೆಗೆ ಕೆಲವೇ ಕೆಲವು ಪತ್ರಕರ್ತರು ಅವನ್ನು ವಾಪಸ್ ಕೊಟ್ಟು, ದೂರು ಕೊಟ್ಟು, ಸುದ್ದಿ ಮಾಡಿ, ಟ್ವೀಟ್, ಪೋಸ್ಟ್ ಇತ್ಯಾದಿ ಮಾಡಿದ್ದಾರೆ. ಇವು ಯಾವುದನ್ನೂ ಮಾಡದೇ ಇದ್ದವರೂ ಇದ್ದಾರೆ. ಅವರಿಗೆ ಸ್ವೀಟ್-ಮೀಟ್ ಸ್ಟಾಲ್‌ನ ಬಾಕ್ಸ್ ಬಂದಿರಬಹುದು ಅಥವಾ ಬಂದಿರದೇ ಇರಬಹುದು ಕೂಡ.

ಇದನ್ನೂ ಓದಿ: ‘ಪೇಸಿಎಂ’ ಪೋಸ್ಟರ್‌ಗಳು ವೈರಲ್‌; ಸ್ಕ್ಯಾನ್‌ ಮಾಡಿದರೆ ‘40% ವೆಬ್‌ಸೈಟ್‌’ ಓಪನ್!

ಈ ಸುದ್ದಿ ಹರಡಿದಾಗ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಮಜಾ ಕಮೆಂಟ್‌ಗಳು ಯಾವುವು ಅಂತ ನೋಡೋಣ:

“ಪತ್ರಕರ್ತರಿಗೆ ಕರ್ನಾಟಕದ ಮುಖ್ಯಮಂತ್ರಿಗಳು ಭಾರೀ ಉಡುಗೊರೆ ನೀಡುವುದು ಹೊಸದೇನಲ್ಲ. ನಿಜಲಿಂಗಪ್ಪನವರ ಕಾಲದಿಂದ ಯಡಿಯೂರಪ್ಪನವರ ತನಕ ಜಿ ಕೆಟಗರಿ ಸೈಟ್ ಪಡೆದ ಸಂಪಾದಕರ ಮತ್ತು ಇತರರ ದೊಡ್ಡ ಪಟ್ಟಿಯೇ ಇದೆ. ಈ ಸೈಟ್‌ಗಳ ಬೆಲೆ ಈಗ ಹಲವು ಕೋಟಿ ರೂಪಾಯಿ. ಇಂತಹ ಕೆಲವು ಜಿ ಕೆಟಗರಿ ಸೈಟ್ ಪಡೆದವರನ್ನು ಮಹಾನ್ ಪತ್ರಕರ್ತರು ಎಂದು ಕೊಂಡಾಡುವ ಒಂದು ವರ್ಗವೇ ಇದೆ. ಇವರಲ್ಲಿ ಕೆಲವರು ಈಗ ಪ್ರಾಮಾಣಿಕತೆಯ ಪಾಠ ಮಾಡುವುದು ನೋಡಿದರೆ ಕಲಿಯುಗದ ಕೊನೆಪಾದ ತಲುಪಿದ್ದೇವೆ ಎಂದು ಅರಿವಾಗುತ್ತದೆ! ತಮಾಷೆ ಎಂದರೆ ಎಸ್ ಎಂ ಕೃಷ್ಣ ಕಾಲದಲ್ಲಿ ಸುಮಾರು 50 ಆಯ್ದ ಪತ್ರಕರ್ತರಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಿ ಕೆಟಗರಿ ಸೈಟ್ ನೀಡಲಾಯಿತು. ಆ ಬಗ್ಗೆ ಅಂದು ವಿಧಾನ ಪರಿಷತ್‌ನಲ್ಲಿ ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಶ್ನೆ ಕೇಳಿ ಉಡುಗೊರೆ ಪಡೆದವರ ಹೆಸರು ಬಯಲು ಮಾಡಿದ್ದರು. ಆ ಪಟ್ಟಿಯನ್ನು ಕೆಲ ಪತ್ರಿಕೆಗಳಲ್ಲಿ ಹಾಕಲಾಗಿತ್ತು. ಇವುಗಳ ಹೊರತುಪಡಿಸಿ ವರ್ಗಾವಣೆ, ಗುತ್ತಿಗೆ ದಂಧೆ ನಡೆಸುವ ಇನ್ನೊಂದು ವರ್ಗವೂ ಇದೆ. ಹಾಗೂ ಬ್ಲಾಕ್‌ಮೇಲ್, ಪೀಡಿಸಿ, ಕಾಡಿಸಿ, ಕಾಲಿಗೆ ಬಿದ್ದು, ಶಾಲೆ, ಕಾಲೇಜು, ರೋಗ, ರುಜಿನ, ತೀರ್ಥಯಾತ್ರೆ ಎಂದು ಹಣ ಪಡೆಯುವ ಒಂದು ವರ್ಗವೂ ಇದೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಇನ್ನೊಂದಿಲ್ಲ. ಇವುಗಳ ಎದುರು ಈಗ ಬಂದಿದೆ ಎನ್ನಲಾದ ಒಂದೋ ಎರಡೋ ಲಕ್ಷ ರೂಪಾಯಿ ಪುಡಿಗಾಸು! ಕೇಳಿ ಪಡೆದದ್ದಲ್ಲ. ಹಾಗೆಯೇ ಬಂದಿದ್ದು! ಮೇಲಿನ ಒಂದು ಅಥವಾ ಮೂರೂ ವರ್ಗಕ್ಕೆ ಸೇರಿದ ಕೆಲವರಿಗೂ ಈ ಪುಡಿಗಾಸು ಬಂದಿರಬಹುದು”. ಇದನ್ನು ಬರೆದವರು ಯುವ ಪತ್ರಕರ್ತರೊಬ್ಬರು.

“ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತರೊಬ್ಬರು ತಮ್ಮ ಮಗಳಿಗೆ ಹೈದರಬಾದು ಕರ್ನಾಟಕ ಕೋಟಾ ಅಡಿಯಲ್ಲಿ ಎಂ.ಡಿ ಸೀಟು ಪಡೆದರು. ಶಿವಮೊಗ್ಗ ಮೂಲದವರು ಅದ ಅವರು ತಮ್ಮ ಮಕ್ಕಳು ಗುಲ್ಬರ್ಗದಲ್ಲಿ ಶಾಲೆಗೆ ಹೋಗಿದ್ದಾಗಿ ಸುಳ್ಳು ಪ್ರಮಾಣಪತ್ರ ಕೊಟ್ಟರು. ಇದರ ಬಗ್ಗೆ ತನಿಖೆ ನಡೆದಾಗ ಮುಖ್ಯ ಕಾರ್ಯದರ್ಶಿಯ ಮೇಲೆ ಒತ್ತಡ ಹಾಕಿ ಅದನ್ನು ನಿಲ್ಲಿಸಿದರು. ಈಗ ಅವರು ಬೆಂಗಳೂರಿನ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ಪ್ರಾಮಾಣಿಕತೆ ಬಗ್ಗೆ ಭೀಷಣ ಭಾಷಣ ಮಾಡುವ ಕಾಯಕದಲ್ಲಿ ಇದ್ದಾರೆ”, ಹೀಗೆಂದು ಎಲ್ಲಾ ನೋಡಿ ಸಾಕಾದ ವರದಿಗಾರರೊಬ್ಬರು ಹೇಳಿದರು.

“ಇದು ಜಿಲ್ಲಾಮಟ್ಟದ ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಅನ್ಯಾಯ! ತಾರತಮ್ಯ!! ಬರೀ 2.5 ಲ.ರೂ. ಏಕೆ ಎಂದು ಅಲ್ಲಿಯೂ ಅಸಮಾಧಾನ? ಇದರ ಅರ್ಧದಷ್ಟನ್ನಾದರೂ ಜಿಲ್ಲಾ ಕೇಂದ್ರದಲ್ಲಿ ಗಿಫ್ಟ್ ಕೊಡಬಾರದೆ?”

“ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು” ಎಂಬ ತತ್ವದ ಸ್ಪಷ್ಟ ಉಲ್ಲಂಘನೆ!! ಬೆಂಗಳೂರಿನವರಿಗೆ ಬೆಣ್ಣೆ, ಜಿಲ್ಲಾ ಕೇಂದ್ರದವರಿಗೆ ಸುಣ್ಣ. ’ನಮ್ಮೂರಿಗೆ ಬರಲಿ ಬೊಮ್ಮಾಯಿಯವರು ಕೇಳಿಯೇಬಿಡುತ್ತೇವೆ’ ಎಂದು ಕೆಲವರಾದರೂ ಕೊಡವಿಕೊಂಡು ಹೇಳುವ ತಯಾರಿಯಲ್ಲಿ ಇದ್ದಾರೆ. ಬೊಮ್ಮಾಯಿ ಅವರು ಮೊದಲೇ ಈ ಅನ್ಯಾಯವನ್ನು ಸರಿಪಡಿಸಬೇಕು ಎಂಬುದು ಕೆಲವರ ಹಕ್ಕೊತ್ತಾಯ!” ಹೀಗೆಂದು ವ್ಯಂಗ್ಯವಾಗಿ ತಿವಿದವರು ಒಬ್ಬ ಹಿರಿಯರು.

“ಖರೆ ಖರೆ, ಸುದ್ದಿ ಬರೆಯುವವರಿಗಿಂತ ಸುಳ್ಳು ಸುಳ್ಳು ಸುದ್ದಿ ಹೇಳುವವರಿಗೆ ಹೆಚ್ಚು ರೊಕ್ಕ ಸಿಗುವ ಕಾಲ ಇದು. ಬಲೇ ಕೇಡುಗಾಲ” ಅಂತ ಮೊನ್ನೆ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಿದ್ದರು. ಇದು ರಾಜ್ಯದ ಈಗಿನ ಶಾಸನ, ಕುಶಾಸನ ಹಾಗೂ ಮಾಧ್ಯಮ ಹಾಗೂ ರಾಜಕಾರಣದ ಸ್ಥಿತಿ.

ಅಂದಹಾಗೆ ಜೀವನಪೂರ್ತಿ ಜನತಾ ಪರಿವಾರದಲ್ಲಿ ಕಳೆದು ತಮ್ಮ ಜೀವನ ಸಂಧ್ಯಾ ಕಾಲದಲ್ಲಿ ಸಂಘ ಪರಿವಾರದ ಕಡೆ ಹೋಗುತ್ತಿರುವ ನಾಯಕರೊಬ್ಬರು ಹೇಳಿದರಂತೆ, ’ಕೆಲವು ಪತ್ರಕರ್ತರು ನಾವು ಕಾಶಿಯಾತ್ರೆಗೆ ಹೋಗಬೇಕು ಎಂದು ಕೇಳಿಕೊಂಡು ನನ್ನ ಕಡೆ ಬಂದಿದ್ದರು. ನಾನು ದುಡ್ಡು ಕೊಡಲಿಲ್ಲ. ಟ್ರೇನ್ ಬುಕ್ ಮಾಡಿಸಿಕೊಟ್ಟೆ. ಆದರೆ ಅವರು ನನಗೆ ಹೇಳದೇ ಕೇಳದೇ ಆ ಟಿಕೆಟ್‌ಗಳನ್ನು ರದ್ದುಮಾಡಿಸಿಕೊಂಡು ದುಡ್ಡು ವಾಪಸ್ ತೆಗೆದುಕೊಂಡು ಹೋದರು. ಎನ್ ಮಾಡ್ತೀರಿ’ ಅಂತ ನಗಾಡಿದರಂತೆ.

ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ಇಷ್ಟೆಲ್ಲಾ ಆಗುವಾಗ ನಮ್ಮ ದೋಸ್ತು ಶ್ರೀರಾಮುಲು ಅಣ್ಣಾ ಅವರು ಬಳ್ಳಾರಿಯಲ್ಲಿ ಇದ್ದರಂತೆ. “ಅಯ್ಯೋ ಇದೆಲ್ಲಾ ಏನು ಮಹಾ. ಅಂದ್ರಿಕಿನಾ ನಂ ಬಾಸ್ ಇಡೀ ಕರ್ನಾಟಕ ರಾಜ್ಯಕ್ಕೆನೇ ಬಾಸ್ ಇದ್ದಾಗ, ಪತ್ರಕರ್ತರನ್ನು ಬರೀ ಟ್ರೇನ್‌ನಲ್ಲಿ ಕಾಶಿಗೆ ಕಳಸೋದು ಅಲ್ಲ, ಹೆಲಿಕಾಪ್ಟರ್ ನಲ್ಲಿ ಸಿಂಗಾಪುರ್‌ಗೆ ಕಳಿಸಿ ಕೊಡ್ತಾ ಇದ್ವಿ. ಆ ಕಾಲಾನೇ ಬೇರೆ, ಪಾರ್ಟಿನೆ ಬೇರೆ, ಆಗಿನ್ ಲೀಡರ್ ಬೇರೆ, ಆಗಿನ್ ಪೇಪರ್‌ನವರೆ ಬೇರೆ. ಈಗಿನ ದುಡ್ಡು-ಕಾಸು ಎಲ್ಲಾ ನಮ್ ಬಳ್ಳಾರಿ ಆದಿರಿಗೂ ಸಮಾ ಇಲ್ಲ” ಅಂತ ಗೋಳಾಡಿಕೊಂಡರಂತೆ.

ಇನ್ನು ಸರಕಾರಿ ಲಕೋಟೆಯನ್ನು ಹಿಂದಿರುಗಿಸದೇ, ಹಿಂದಿರುಗಿಸಿದವರನ್ನು ನೋಡಿ ಮುಸಿಮುಸಿ ನಗುತ್ತಾ ಸುಮ್ಮನೇ ಕುಳಿತವರ ಕತೆ ಏನು? ಅವರ ಮನೆ ದೀಪಾವಳಿ ಭರ್ಜರಿ ಅಗಿರಬಹುದೇ? ಅಥವಾ ಅವರಿಗೆ ಅದು ಮಾಮೂಲಿಯಾಗಿದ್ದಿರಬಹುದೇ? ಯಾರಿಗೆ ಗೊತ್ತು?

ಅಲ್ಲವೇ ಶುಕಭಾಷಿಣಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...