ಆಧಾರ ರಹಿತವಾಗಿ, ಧರ್ಮಗಳ ನಡುವೆ ಕಲಹ ಉಂಟು ಮಾಡುವಂತೆ ರಚನೆಯಾಗಿರುವ ‘ಟಿಪ್ಪು ನಿಜಕನಸುಗಳು’ ಕೃತಿ ಮಾರಾಟ ಮಾಡದಂತೆ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.
ಟಿಪ್ಪುವಿನ ಚಿತ್ರವನ್ನು ವಿಕಾರಗೊಳಿಸಿದ ಮುಖಪುಟದೊಂದಿಗೆ ಅಯೋಧ್ಯಾ ಪ್ರಕಾಶನ ಪ್ರಕಟಿಸಿರುವ, ರಾಷ್ಟ್ರೋತ್ಥಾನ ಪರಿಷತ್ ಮುದ್ರಿಸಿರುವ, ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ‘ಟಿಪ್ಪು ನಿಜಕನಸುಗಳು’ ಕೃತಿಯ ಮಾರಾಟಕ್ಕೆ ತಡೆ ನೀಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ರಫಿವುಲ್ಲಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ನಗರದ 14ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ಮುಂದಿನ ವಿಚಾರಣೆಯವರೆಗೂ ಪುಸ್ತಕವನ್ನು ಅಂಗಡಿಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿಯೂ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ.
“ಪುಸ್ತಕದಲ್ಲಿ ಸಂಪೂರ್ಣ ತಪ್ಪು ಮಾಹಿತಿ ನೀಡಲಾಗಿದೆ. ಲೇಖಕರು ದಾಖಲಿಸಿರುವ ಅಂಶಗಳಿಗೆ ಯಾವುದೇ ಪುರಾವೆಗಳಿಲ್ಲ. ತಾನು ಬರೆದಿರುವ ಅಂಶಗಳನ್ನು ಎಲ್ಲಿಂದ ಪಡೆದುಕೊಳ್ಳಲಾಗಿದೆ ಎಂಬುದಕ್ಕೆ ದಾಖಲೆಗಳನ್ನು ಒದಗಿಸಿಲ್ಲ. ಅಝಾನ್ ಅನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದ್ದು, ತುರುಕರು ಎಂಬ ಪದವನ್ನು ಬಳಕೆ ಮಾಡಿದ್ದಾರೆ. ಈ ಪುಸ್ತಕ ಜನರಿಗೆ ತಲುಪಿದಲ್ಲಿ ಸಮಾಜದಲ್ಲಿ ಅಶಾಂತಿ ಉಂಟಾಗಲು ಕಾರಣವಾಗಲಿದೆ. ಈ ನಿಟ್ಟಿನಲ್ಲಿ ತಡೆಯಾಜ್ಞೆ ನೀಡಬೇಕು” ಎಂದು ಅರ್ಜಿದಾರ ಪರ ವಕೀಲರು ಕೋರಿದ್ದರು.
ಪುಸ್ತಕ ಮಾರಾಟಕ್ಕೆ ನಿರ್ಬಂಧ ವಿಧಿಸಿದ ನ್ಯಾಯಾಲಯವು ಪ್ರತಿವಾದಿಗಳಾದ ಲೇಖಕರು, ಪ್ರಕಾಶಕರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಕೃತಿಯಲ್ಲಿ ಏನಿದೆ?
“ಟಿಪ್ಪು ಸುಲ್ತಾನ್ ತನ್ನ ಜೀವತಾವಧಿಯಲ್ಲಿ ಮತಾಂತರವನ್ನಲ್ಲದೆ ಬೇರೆನನ್ನೂ ಮಾಡಲಿಲ್ಲ. ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವುದೇ ಆತನ ಗುರಿಯಾಗಿತ್ತು. ಆತ ಕನ್ನಡ ವಿರೋಧಿಯಾಗಿದ್ದ ಎಂಬಂತೆ ಚಿತ್ರಿಸಲಾಗಿದೆ. ಉರಿಗೌಡ, ದೊಡ್ಡ ನಂಜೇಗೌಡ ಎಂಬವರು ಟಿಪ್ಪುವನ್ನು ಗುಂಡಿಕ್ಕಿ ಕೊಂದರು” ಎಂಬ ಕಾಲ್ಪನಿಕ ಸಂಗತಿಗಳನ್ನೆಲ್ಲ ಅಡ್ಡಂಡ ಕಾರ್ಯಪ್ಪ ಅವರು ತಮ್ಮ ಕೃತಿಯಲ್ಲಿ ಬರೆದಿದ್ದಾರೆ.
ಟಿಪ್ಪುವನ್ನು ಸೋಲಿಸಲು ಕೊಡವರು, ಮರಾಠರು, ಕೇರಳದ ನಾಯರ್ಗಳು, ಹೈದ್ರಾಬಾದ್ ನಿಜಾಮರೆಲ್ಲರೂ ಬ್ರಿಟಿಷರಿಗೆ ಬೆಂಬಲ ನೀಡಿದರು. ಇದಕ್ಕೆ ಟಿಪ್ಪುವಿನ ಹಿಂದೂ ವಿರೋಧಿ ನೀತಿಯೇ ಕಾರಣವಾಗಿತ್ತು ಎಂಬಂತೆ ಬರೆಯಲಾಗಿದೆ. ಇದನ್ನೂ ಇತಿಹಾಸತಜ್ಞರು ಅಲ್ಲಗಳೆದಿದ್ದಾರೆ.
ಆ ಕಾಲದಲ್ಲಿ ಎಲ್ಲ ರಾಜರು ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಸುತ್ತಿದ್ದರು. ಆದರೂ ಟಿಪ್ಪು ಮಾತ್ರವೇ ಅದನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಕನ್ನಡಕ್ಕೆ ದ್ರೋಹ ಬಗೆದ ಎಂಬಂತೆ ನಿರೂಪಿಸಲಾಗಿದೆ. ಸಹಜವಾಗಿ ಸಾವನ್ನಪ್ಪಿದ ಕೊಡಗು ರಾಜರನ್ನು ಟಿಪ್ಪುವೇ ಕೊಂದನೆಂಬಂತೆ ಚಿತ್ರಿಸಲಾಗಿದೆ ಎಂದು ಇತಿಹಾಸತಜ್ಞರು ಹೇಳುತ್ತಿದ್ದಾರೆ.
ಬ್ರಿಟಿಷರಿಗೆ ಗೂಢಾಚಾರಿಕೆ ಮಾಡಿದ ಅಯ್ಯಂಗಾರಿ ಬ್ರಾಹ್ಮಣರನ್ನು ಕೊಲ್ಲಲಾಯಿತು. ಆದರೆ ಏಕೆ ಕೊಲ್ಲಲಾಯಿತು ಎಂಬುದನ್ನು ಮುಚ್ಚಿಟ್ಟು ಕೃತಿಯನ್ನು ರಚಿಸಲಾಗಿದೆ. ಶೃಂಗೇರಿ ಮಠಕ್ಕೆ ಟಿಪ್ಪು ಬರೆದ ಪತ್ರಗಳ ಕಾಲಘಟ್ಟವನ್ನೇ ತಿರುಚಿ ಉಲ್ಲೇಖಿಸಲಾಗಿದೆ ಎಂಬ ಆರೋಪಗಳು ಬಂದಿವೆ.
ಇದನ್ನೂ ಓದಿರಿ: ಕ್ರಿಶ್ಚಿಯನ್, ಇಸ್ಲಾಂಗೆ ಮತಾಂತರವಾದ ದಲಿತರಿಗೆ ಎಸ್ಸಿ ಮಾನ್ಯತೆ ಚರ್ಚೆಯ ಸುತ್ತ..
ದಿವಾನ್ ಪೂರ್ಣಯ್ಯ ಕೊನೆಗಳಿಗೆಯಲ್ಲಿ ಹಿಂದೂವಾದಿಯಾಗಿ ಇತಿಹಾಸಕಾರ ಹುಸೇನ್ ಆಲಿ ಕೀರ್ಮಾನಿಗೆ ಬೋಧನೆ ಮಾಡಿದ. ದಿವಾನ್ ಪೂರ್ಣಯ್ಯನ ಆಶಯಗಳಿಗೆ ವಿರುದ್ಧವಾಗಿ ಹುಸೇನ್ ಆಲಿ ಕೀರ್ಮಾನಿ ಇತಿಹಾಸದಲ್ಲಿ ಸುಳ್ಳುಗಳನ್ನು ದಾಖಲಿಸಿದ. ಅದಕ್ಕೆ ದಿವಾನ್ ಪೂರ್ಣಯ್ಯ ತಕರಾರು ತೆಗೆದಿದ್ದರು ಎಂಬಂತೆ ಚಿತ್ರಿಸಲಾಗಿದೆ. ಆದರೆ ಇದಕ್ಕೂ ಪುರಾವೆ ಇಲ್ಲ ಎನ್ನಲಾಗುತ್ತಿದೆ.
ಟಿಪ್ಪು ತನ್ನ ಅಧಿಕಾರವಧಿಯ ಪೂರ್ತಿ ಮತಾಂತರ ಮಾಡುತ್ತಲೇ ಇದ್ದ. ಆತನಿಗೆ ಬೇರೆ ಕೆಲಸ ಇರಲಿಲ್ಲ. ಸಿಂಹಾಸನಕ್ಕೆ ಏರಿದ ಕೂಡಲೇ ಊರಿನ ಹೆಸರುಗಳನ್ನು ಬದಲಿಸಲು ಆಜ್ಞೆ ಮಾಡಿದ. ಹೆದ್ದೆಯ ಹೆಸರುಗಳನ್ನು ಪರ್ಷಿಯನ್ ಹೆಸರುಗಳಿಂದ ನಮೂದಿಸಲು ಸೂಚಿಸಿದ. ಹಿಂದೂಗಳಿಗೆ ಹೆದರಿ ದೇವರಾಜಮ್ಮಣ್ಣಿಯವರನ್ನು ಕೊಲ್ಲದೆ ಬಿಟ್ಟ. ಟಿಪ್ಪು ಹತನಾದಾಗ ದೇವರಾಜಮ್ಮಣ್ಣಿ ಖುಷಿಪಟ್ಟರು ಎಂಬಿತ್ಯಾದಿ ಕಪೋಲಕಲ್ಪಿತ ಸಂಗತಿಗಳನ್ನು ಕೃತಿಯೊಳಗೆ ಸೇರಿಸಲಾಗಿದೆ ಎಂದು ಆಕ್ಷೇಪಗಳು ಬಂದಿವೆ.
(ಈ ವಾರದ ‘ನ್ಯಾಯಪಥ’ದಲ್ಲಿ ‘ಟಿಪ್ಪು ನಿಜಕನಸುಗಳು’ ಕೃತಿ ಕುರಿತ ವಿಮರ್ಶೆಗಳನ್ನು ಓದಬಹುದು. ಚಂದಾದಾರರಾಗಲು ಸಂಪರ್ಕಿಸಿ- 98454 35790)



ಕನಿಷ್ಠ ನ್ಯಾಯಾಲಯ ವಿವೇಕವನ್ನ ಎತ್ತಿ ಹಿಡಿದಿದೆ.
Please correct the 8th paras first line.