Homeಮುಖಪುಟಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

ಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

- Advertisement -
- Advertisement -

ಕಳೆದ 40 ವರ್ಷಗಳ ಕಾಲ ಆರ್‌ಎಸ್‌ಎಸ್‌ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ ಹನುಮೇಗೌಡರು ಅಲ್ಲಿ ತಮಗಾದ ಅನುಭವಗಳನ್ನು, ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬ ಈ ಕಿರು ಹೊತ್ತಿಗೆಯಲ್ಲಿ ಅನಾವರಣ ಮಾಡಿದ್ದಾರೆ. ಸಂಘದ ಕರಾಳ ಮುಖ ಮುಚ್ಚಿಟ್ಟರೆ ಸಮಾಜಕ್ಕೆ ದ್ರೋಹ ಮಾಡಿದಂತೆ ಎಂಬ ಆತ್ಮಸಾಕ್ಷಿಗೆ ಓಗೊಟ್ಟು ಹನುಮೇಗೌಡರು ರಾಜ್ಯದ ಜನತೆಗೆ ಸತ್ಯದರ್ಶನ ಮಾಡಿಸಲು ಹೊರಟಿದ್ದಾರೆ. ಅಲ್ಲಿ ತಾವು ಅನುಭವಿಸಿದ ಮಾನಸಿಕ ಹಿಂಸೆ, ನೋವುಗಳು ಭವಿಷ್ಯದಲ್ಲಿ ಬೇರಾರಿಗೂ ಬರದಿರಲಿ ಎಂಬ ಸದುದ್ದೇಶ ಅವರದಾಗಿದೆ. ಆದ ಕಾರಣ ಆರ್‌ಎಸ್‌ಎಸ್‌ನ ಕಾನೂನು ಬಾಹಿರ ಒಳವ್ಯವಹಾರಗಳನ್ನು ಎಳೆಎಳೆಯಾಗಿ ಹೊರಹಾಕುತ್ತಿದ್ದಾರೆ. ಸಾರ್ವಜನಿಕರಿಗೆ ಸಂಘಪರಿವಾರದ ಮುಖವಾಡವನ್ನು ತೆಗೆದು ನಿಜವಾದ ಮುಖವನ್ನು ಅನಾವರಣ ಮಾಡಿದ್ದಾರೆ.

ದೇಶಭಕ್ತಿ, ಹಿಂದುತ್ವ, ಶಿಸ್ತು-ತ್ಯಾಗ-ಸೇವೆ, ನಿಸ್ವಾರ್ಥ, ಪ್ರಾಮಾಣಿಕತೆ, ಶುದ್ಧತೆ-ಬದ್ಧತೆ, ಗೋಭಕ್ತಿ ಸಂಸ್ಕೃತಿಯ ಸಂಸ್ಕಾರಗಳ ಪಡೆದಿದ್ದೇವೆಂದು, ನಿಜ ದೇಶಭಕ್ತರು ತಾವೇ ಎನ್ನುತ್ತಾ ಪರಮ ವೈಭವದ ಸ್ಥಿತಿಗೆ ಭಾರತವನ್ನು ಕೊಂಡೊಯ್ದು ರಾಮರಾಜ್ಯ ನಿರ್ಮಾಣ ಮಾಡುತ್ತೇವೆಂದು ಹೊರಟ ದೇಶೋದ್ಧಾರಕ ಭಕ್ತರು-ದೇಶದ ನಿಜ ಬೆಳವಣಿಗೆಗೆ ಕಟಿಬದ್ಧರಾದ ನಾಯಕರಿಂದ ನಿರೀಕ್ಷಿತ ಫಲ ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ. ಬದುಕಿಗೆ ಬೇಕಾದ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಗಳಿಗೆ ಕಾರಣರಾದವರಿಂದಲೇ ರೈಲು, ವಿಮಾನ, ಬ್ಯಾಂಕು, ಮುಂತಾದ ದೇಶದ ಸ್ವತ್ತುಗಳ ಮಾರಾಟದ ಕೆಲಸಗಳನ್ನು ನೋಡುತ್ತಾ, ಇವರ ಸುಳ್ಳು ಭಾಷಣಗಳ ಕೇಳುತ್ತಾ ಅಂಧಭಕ್ತಿಯಲ್ಲಿ ಮೈಮರೆತಿದ್ದಾರೆ. ಯಾವುದೇ ’ಸಂಸ್ಕಾರವಂತರು’ ಎಂಬ ಹಣೆಪಟ್ಟಿ ಕಟ್ಟಿಕೊಳ್ಳದ, ಭರವಸೆಗಳ ಪೊಳ್ಳು ಭಾಷಣಗಳ ಮಾಡದ, ಅನ್ಯಪಕ್ಷದ ನಾಯಕರನ್ನ ನಿಂದಿಸುತ್ತಾ ಆತ್ಮವಂಚನೆಗೆ ಮುಂದಾಗಿದ್ದಾರೆ. ಆದರೆ, ನಿಷ್ಪಕ್ಷಪಾತಿಯಾದ ಮತ್ತು ವಿಚಾರವಂತಿಕೆಗೆ ತೆರೆದುಕೊಳ್ಳಲು ಸಾಧ್ಯವಾದ ಕೆಲವು ಸ್ವಯಂಸೇವಕರು ಈಗ ವಿಮರ್ಶೆ ಮಾಡಲು ಮುಂದಾಗಿದ್ದಾರೆ.

ಆರ್‌ಎಸ್‌ಎಸ್ ಜನತೆಗೆ ನಂಬಿಕೆ ದ್ರೋಹ ಮಾಡಿ, ಹಿಂದುತ್ವವಾದಿ ಹೆಸರಿನಲ್ಲಿ ಬಿಜೆಪಿ ಮುಖವಾಡ ಧರಿಸಿ ರಾಜ್ಯದ ಯುವಕರ ದಾರಿ ತಪ್ಪಿಸಿ, ಬಾಲಕರನ್ನು ಸೆಳೆದು ಅವರ ಚಿಂತನಾ ಶಕ್ತಿಯನ್ನು ಕುಗ್ಗಿಸಿ, ಅವರ ತಲೆಗೆ ಸುಳ್ಳಿನ ಕಂತೆಗಳನ್ನು ತುಂಬಿ, ಯುವಶಕ್ತಿಯನ್ನು ಬಳಸಿ ಬಿಸಾಡುತ್ತಿದೆ. ಕಪಟ ಗೋಭಕ್ತಿಯ ನಾಟಕ ಮಾಡುತ್ತಿದೆ. ಸಂವಿಧಾನ ವಿರೋಧಿ ಮನುಧರ್ಮವಾದಿ ಕುತಂತ್ರದ ರೂಪವಾಗಿದೆ ಆರ್‌ಎಸ್‌ಎಸ್ ಎಂದೆನ್ನುವ ಹನುಮೇಗೌಡರು ’ನಾನೇಕೆ ಈ ಪುಸ್ತಕ ಬರೆದೆ’ ಎಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.

’ಆರ್‌ಎಸ್‌ಎಸ್‌ನ ಸ್ವಯಂಸೇವಕರು ಶಿಸ್ತು-ತ್ಯಾಗ-ಸೇವೆಗೆ ಸದಾ ಸಿದ್ಧರು. ನಂಬಿಕೆ ಪ್ರಾಮಾಣಿಕತೆಗೆ ಯೋಗ್ಯರು. ಪ್ರತಿಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥಿಗಳಾಗಿ ಬದ್ಧತೆ-ಶುದ್ಧತೆಗಳಿಂದ ದೇಶ ಧರ್ಮಕ್ಕಾಗಿ ದುಡಿಯುತ್ತಾರೆ’ ಎಂಬುದಾಗಿ ನಮ್ಮ ಜನ ಮೆಚ್ಚುತ್ತಾರೆ. ಅದೇ ಕಾರಣಕ್ಕೆ ಸಂಘದ ವಿರೋಧಿಗಳೂ ಸಹ ಸಂಘದ ಕಾರ್ಯಶೈಲಿ, ಶಿಸ್ತು ಬದ್ಧತೆಗಳನ್ನು ಒಪ್ಪುತ್ತಾರೆ. ಇಂತಹ ಸಂಘಟನೆಯಲ್ಲಿರುವ ಶೇ.95ರಷ್ಟು ಕೆಳಹಂತದ ಸ್ವಯಂಸೇವಕರು ಇಂದಿಗೂ ಪ್ರಾಮಾಣಿಕರು ಮತ್ತು ಅಮಾಯಕರು. ಹಣವಿಲ್ಲ, ಹಣದ ಹಂಬಲವಿಲ್ಲ, ಅಧಿಕಾರದ ಅಂದಣವಿಲ್ಲ, ಜನವಿಲ್ಲ, ಜನದ ಬೆಂಬಲವಿಲ್ಲ, ಅನುಕೂಲತೆಗಳ ಸುಳಿವಿಲ್ಲ ಎಂಬ ಹಾಡಿನೊಂದಿಗೆ ಮೈಮರೆಯುವವರು ಇವರು. ಆದರೆ ಈ ಶೇ.95ರಷ್ಟಿರುವ ಸ್ವಯಂಸೇವಕರೆಲ್ಲ ಹಿಂದುಳಿದ ವರ್ಗದವರು ಮತ್ತು ಶೂದ್ರ ಜನಾಂಗದವರು ಎಂಬುದು ಇಲ್ಲಿ ಮುಖ್ಯ. ಇವರೆಲ್ಲರೂ ಸಂಘದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಸಂಘದ ಪ್ರಮುಖರನ್ನು ಪ್ರಶ್ನಿಸಬಾರದು. ಇದೊಂದು ಸರ್ವಾಧಿಕಾರಿ ಧೋರಣೆ. ಪ್ರಮುಖರ ಮಾತಿಗೆ ಮರುಮಾತಿಲ್ಲದೆ ಕೆಲಸ ಮಾಡಬೇಕು. ಒಂದು ರೀತಿಯಲ್ಲಿ ಗುಲಾಮಿ ಮನೋಭಾವನೆಗೆ ಹೊಂದಿಕೊಂಡಿರಬೇಕು. ಇದನ್ನು ಹಿಟ್ಲರ್‌ನ ಸರ್ವಾಧಿಕಾರ ಮತ್ತು ಫ್ಯಾಸಿಸಂ ಎಂದು ಕರೆಯಬಹುದು. ಇಂತಹ ಸೂಕ್ಷ್ಮತೆ ಗಮನಿಸಿದವರು ಪ್ರಾರಂಭದಲ್ಲಿಯೇ ಸಂಘಟನೆಯಿಂದ ದೂರ ಸರಿಯುತ್ತಾರೆ. ಧರ್ಮ, ದೇಶ, ಹಿಂದುತ್ವ ಎಂದು ಮುಂತಾಗಿ ಕೆಲವರು ಹಲವು ವರ್ಷಗಳ ಕಾಲ ಸಹಿಸಿಕೊಂಡು ಮುಂದುವರಿಯುತ್ತಾರೆ. ಮತ್ತೆ ಕೆಲವರು ಸಂಘದ ಪ್ರಮುಖರ ಮಾತಿನ ಮೋಡಿಗೆ ಒಳಗಾಗಿ ಭಕ್ತರಾಗುತ್ತಾರೆ. ಆದರೆ ಹಿಡನ್ ಅಜೆಂಡಾ ಹೊಂದಿದ ಶೇ.5ರಷ್ಟು ಸ್ವಯಂಸೇವಕರು, ಪ್ರಮುಖರು, ಕಾರ್ಯಕರ್ತರು ಮತ್ತು ಪ್ರಚಾರಕರು ಶೇ.95ರಷ್ಟು ಸ್ವಯಂಸೇವಕರನ್ನು ದುರ್ಬಳಕೆ ಮಾಡಿಕೊಂಡು ಬಳಸಿ ಬಿಸಾಡುತ್ತಿದ್ದಾರೆ. ಆ ರೀತಿ ಬಳಸಿ ಬಿಸಾಕಿದ ಕಾರ್ಯಕರ್ತರಲ್ಲಿ ನಾನೂ ಒಬ್ಬ- ಎಂದು ತಮ್ಮ ನೋವನ್ನು ವ್ಯಕ್ತಪಡಿಸಿರುತ್ತಾರೆ- ಹನುಮೇಗೌಡರು. ಹಾಗೆಯೇ ಬೃಹದಾಕಾರವಾಗಿ ಬೆಳೆದು ನಿಂತಿರುವ ಆರ್‌ಎಸ್‌ಎಸ್ ಸಂಘಟನೆಯು ಯಾವ ದಾಖಲೆಯೂ ಇಲ್ಲದ ಬೇನಾಮಿ ಸಂಘಟನೆಯಾಗಿದೆ ಎಂಬುದನ್ನು ಮನಗಾಣಿಸುತ್ತಾರೆ.

ಇದನ್ನೂ ಓದಿ: ಕೃತಿ ವಿಮರ್ಶೆ: ಆರ್‌ಎಸ್‌ಎಸ್‌ ಜಾತಿ ರಾಜಕೀಯ ಕನಸುಗಳ ಸಾಕಾರಕ್ಕೆ ಟಿಪ್ಪು ಹೆಸರಲ್ಲಿ ನಕಲಿ ಇತಿಹಾಸ ಸೃಷ್ಟಿ!

ನಾನು ಈ ಸಂಘಟನೆಗೆ ಸದಸ್ಯ ಎಂದು ದಾಖಲೆ ಒದಗಿಸಲು ಯಾವ ಕಾರ್ಯಕರ್ತನಿಗೂ ಸಾಧ್ಯವಾಗದು. ಈ ಪರಿಸ್ಥಿತಿಯಲ್ಲಿ ನಾನು ಅನುಭವಿಸಿದ ನೋವು, ಅವಮಾನ ಮತ್ತ್ಯಾರೂ ಅನುಭವಿಸಬಾರದು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದೇನೆ. ನಾನು ನನ್ನ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದೇನೆ. ಆದ್ದರಿಂದ ನಾನು ಮೌನಕ್ಕೆ ಶರಣಾಗದೆ, ದೇಶದ ಜನತೆಗೆ ಸತ್ಯ ದರ್ಶನ ಮಾಡಿಸಬೇಕು ಎಂದು ನಿರ್ಧರಿಸಿದ್ದೇನೆ. ಭವಿಷ್ಯದಲ್ಲಿ ದೇಶದ ಮಕ್ಕಳು, ಯುವಕರು ಆರ್‌ಎಸ್‌ಎಸ್ ಸಂಘಟನೆಯ ವಂಚನೆಯ ಜಾಲಕ್ಕೆ ಸಿಲುಕದೆ, ಮೋಸದ ಕೂಪಕ್ಕೆ ಬೀಳದೆ, ಬೀದಿ ಹೆಣವಾಗದೆ, ತಂದೆ ತಾಯಿಗಳ ಋಣ ತೀರಿಸಿ, ಧನ್ಯತೆ ಪಡೆಯುವಂತಾಗಲಿ ಎನ್ನುವ ಕಳಕಳಿ ನನ್ನದು. ನಾನು ಮತ್ತು ನನ್ನಂತೆ ದಾರಿ ತಪ್ಪಿದವರು ತಂದೆ ತಾಯಿಯರಿಗೆ ನೋವು ಕೊಡುವುದೂ ಬೇಡ; ಮಕ್ಕಳು ಬೀದಿ ಹೆಣವಾಗುವುದೂ ಬೇಡ; ಕೋಮು ದಳ್ಳುರಿಯಲ್ಲಿ ಸಿಲುಕಿ ಜೈಲುಪಾಲಾದ ಮಕ್ಕಳ ತಂದೆ ತಾಯಂದಿರಂತೆ ಮತ್ತ್ಯಾರೂ ನೋವಿಗೆ ಸಿಗಬಾರದೆಂಬುದು ನನ್ನ ದೃಢ ನಿಲುವಾಗಿದೆ. ಈಗಾಗಲೇ ಬೀದಿ ಹೆಣವಾಗಿ, ಜೈಲು ಪಾಲಾಗಿ, ಬಳಸಿ ಬಿಸಾಡಿದ ಮಕ್ಕಳ ನೋವಿನಲ್ಲಿ ಕೊರಗಿ ಸೊರಗಿ ಸ್ವರ್ಗವಾಸಿ ಆದವರಿಗೂ ಮುಕ್ತಿ ಸಿಗುವಂತಾಗಲಿ ಎಂಬ ಆಶಾಭಾವನೆ ನನ್ನದಾಗಿದೆ. ನನ್ನಂತೆ ನೋವುಂಡವರು, ತುಳಿತಕ್ಕೆ ಒಳಗಾದವರು, ಧ್ವನಿಕಳೆದುಕೊಂಡು ಅಸಹಾಯಕರಾಗಿರುವ ಸ್ವಯಂಸೇವಕರು ನನಗೆ ತಿಳಿಸಿದ ಒಂದಷ್ಟು ವಿಷಯಗಳನ್ನೂ ಈ ಹೊತ್ತಿಗೆಯಲ್ಲಿ ಸೇರಿಸಿರುತ್ತೇನೆ. ಅವರಿಗೂ ನ್ಯಾಯ ಸಿಗುವಂತಾಗಲಿ.

ಕುವೆಂಪು

ಹೀಗೆ ಇವತ್ತಿಗೂ ದೇಶದಲ್ಲಿ ಇದೇ ಪರಿಸ್ಥಿತಿ ಇದೆ. ಆಡಿಸುವಾತ ಬೀಳಿಸುವಾತ ’ರಿಮೋಟ್ ಕಂಟ್ರೊಲ್’ ಹಿಡಿದು ಎಲ್ಲೋ ಕುಳಿತಿರುತ್ತಾನೆ. ಅವನ ಒಂದು ಕೂದಲೂ ಕೊಂಕುವುದಿಲ್ಲ. ಆದರೆ ಸಂಘಕ್ಕೆ ಸೇರ್ಪಡೆಯಾಗಿ ಬ್ರೈನ್‌ವಾಷ್ ಆದ ಶೂದ್ರವರ್ಗದ ಕಾರ್ಯಕರ್ತರು ಹಿಂದುತ್ವ-ಬಿಜೆಪಿ ಎಂದು ತಮ್ಮ ತಮ್ಮಲ್ಲೇ ಬಡಿದಾಡಿ ಹೊಡೆದಾಡಿ ಸಾಯುತ್ತಾರೆ. ಕಾರ್ಯಕರ್ತರನ್ನು ಪ್ರಚೋದಿಸುವುದೇ ಆರ್‌ಎಸ್‌ಎಸ್‌ನ ಹುಟ್ಟುಗುಣ ಎನ್ನುತ್ತಾರೆ ಗೌಡರು. ಹೀಗೆ ಕಾರ್ಯಕರ್ತರನ್ನು ಬಲಿಗೊಟ್ಟು ಅಧಿಕಾರ ಹಿಡಿವ ಹಿಂದುತ್ವವಾದಿಗಳು ಆಮೇಲೆ ಏರಿದ ಏಣಿಯನ್ನು ಒದ್ದು ಅವರ ಕಷ್ಟನಷ್ಟದತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಈ ಕಾರಣಕ್ಕಾಗಿಯೇ ಪತ್ರಕರ್ತೆ ಗೌರಿ ಲಂಕೇಶ್ ಅವರು ’ನೀವು ಸಂಘಪರಿವಾರದ ಕೈ ಹತಾರಗಳಾಗಬೇಡಿ; ಏಳಿ, ಎಚ್ಚರಗೊಳ್ಳಿ ನಿಮ್ಮ ಹಕ್ಕುಗಳನ್ನು ಮರೆಯದಿರಿ’ ಎಂದು ಎಚ್ಚರಿಸುತ್ತಿದ್ದರು. ಅದೇ ಕಾರಣಕ್ಕೆ ಅವರು ಹಂತಕನ ಗುಂಡಿಗೆ ಬಲಿಯಾದರು. ಕೊಲೆಗಾರ ಯಾರೆಂಬುದಕ್ಕೆ ಇನ್ನೂ ವಿಚಾರಣೆಯಾಗುತ್ತಿದೆ!

ಹನುಮೇಗೌಡರು ಬಿಚ್ಚಿಡುವಂತೆ ಪ್ರತಿಪಕ್ಷದ ಹಲವಾರು ರಾಜಕಾರಣಿಗಳಿಗೂ ಕೂಡ ನಿಜವಾದ ಸಾಮಾನ್ಯ ಕಾರ್ಯಕರ್ತರ ಶುದ್ಧತೆ ಬದ್ಧತೆ ಏನೇನೂ ಇರುವುದಿಲ್ಲ; ವಿರೋಧಪಕ್ಷದಲ್ಲಿರುವಾಗ ಸಂಘಪರಿವಾರವನ್ನು ಬಾಯಿಗೆ ಬಂದಂತೆ ಅವರು ದೂಷಿಸುತ್ತಾರೆ; ಆದರೆ ಅಂಥವರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ಒಳಬರಮಾಡಿಕೊಂಡ ಕೂಡಲೇ ಅವರೆಲ್ಲರೂ ಸಂಪನ್ನರೂ ಶುದ್ಧರೂ ಬದ್ಧರೂ ಪ್ರಾಮಾಣಿಕರೂ ಆಗಿಬಿಡುತ್ತಾರೆ. ಇದೇ ವ್ಯಂಗ್ಯ! ಬಿಜೆಪಿಗೆ ಬಹುಮತ ಒಂದಿದ್ದರೆ ಸಾಕು; ಸಿದ್ಧಾಂತಕ್ಕೆ ತಿಲಾಂಜಲಿ ಕೊಟ್ಟರೂ ಪರವಾಗಿಲ್ಲ. ಹೀಗಾಗಿ ನಿಜವಾಗಿ ದುಡಿವ ಸ್ವಯಂಸೇವಕರನ್ನು ಆರ್‌ಎಸ್‌ಎಸ್ ಮೂಲೆಗುಂಪಾಗಿಸುತ್ತದೆ. ಇಂಥ ಕಠೋರ ಸತ್ಯಗಳಿಗೆ ಈ ಕಿರು ಪುಸ್ತಕ ಕನ್ನಡಿಯಾಗಿದೆ.

ಇದನ್ನೂ ಓದಿ: ’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

ಕೊನೆಯದಾಗಿ, ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬ ಪುಸ್ತಕವನ್ನು ಓದುತ್ತಿದ್ದರೆ ರಾಷ್ಟ್ರಕವಿ ಕುವಂಪು ಅವರು 1967ರಲ್ಲಿ ಬರೆದ ಪ್ರೇತ-ಕ್ಯೂ ಕವನ ಸಂಕಲನದ ’ಬ್ರಾಹ್ಮ ನಾಯಿ-ಶೂದ್ರ ಕೋಳಿ’ ಎಂಬ ಪದ್ಯ ನೆನಪಾಗುತ್ತದೆ. ’ವರ್ಣೋತ್ಪತ್ತೀಯ, ವರ್ಣ ಸ್ಪರ್ಧೆಯ, ವರ್ಣ ಸಂಘರ್ಷಗಳ ಹಾಗೂ ಅವುಗಳ ದುಷ್ಪರಿಣಾಮದ ಕತೆಯೇ ಭರತಖಂಡದ ಇತಿಹಾಸ. ಬ್ರಾಹ್ಮಣ್ಯದವರ ಕುತಂತ್ರಕ್ಕೆ ಮುಗ್ಧ ಶೂದ್ರರು ಹೇಗೆ ಬಲಿಯಾಗುತ್ತಿದ್ದಾರೆಂಬುದೇ ’ಬ್ರಾಹ್ಮ ನಾಯಿ-ಶೂದ್ರ ಕೋಳಿ’ ಕವನದ ವಸ್ತು. ನಡೆದೊಂದು ಘಟನೆಯಿಂದ ಈ ಕವಿತೆ ಪ್ರೇರಿತವಾಯಿತೆಂದು ಕವಿಗಳೇ ಅಡಿ ಟಿಪ್ಪಣಿಯಲ್ಲಿ ಹೇಳಿದ್ದಾರೆ:

1

ಶೂದ್ರ ಕೋಳಿ ಮೇಯುತ್ತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮ ನಾಯಿ ಹೊಂಚುತ್ತಿತ್ತು
ಅಲ್ಲಿ ಇಲ್ಲಿ.
ಶೂದ್ರ ಕೋಳಿಗೇನು ಗೊತ್ತು
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮನೆ ಮೇಯುತ್ತಿತ್ತು

2

ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನ ಪಟ್ಟೆ;
ಒಡಲಿನಲ್ಲಿ ಖಾಲಿ ಹೊಟ್ಟೆ
ಮೆಲ್ಲ ಮೆಲ್ಲ ಸುಳಿದು ಸುತ್ತಿ
ಹತ್ತೆ ಬಂತು
ಸಾಧು ಎಂದು ಶೂದ್ರ ಕೋಳಿ
ನೋಡೆ ನಿಂತು.
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾರ್‍ವವೀಡನೊಂದು ಗೋಡೆ
ರಕ್ಷೆಯಾಯ್ತು;
ಪಾರ್ವನಾಯ್ಗೆ ಶೂದ್ರ ಕೋಳಿ
ಭಕ್ಷ್ಯವಾಯ್ತು!

ಪ್ರಸ್ತುತ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬೀ ಪುಸ್ತಕವು ಕುವೆಂಪು ಅವರ ’ಬ್ರಾಹ್ಮ ನಾಯಿ – ಶೂದ್ರ ಕೋಳಿ’ ಎಂಬ ಕವಿತೆಗೆ ಬರೆದ ಆಧುನಿಕ ಭಾಷ್ಯವೊ ಎಂಬಂತಿದೆ.

***

(ಇಲ್ಲಿ ಬರುವ ಬ್ರಾಹ್ಮ ಎಂಬ ಮಾತು ಸಂಕುಚಿತ ಮನೋಧರ್ಮದ ಬ್ರಾಹ್ಮಣತನಕ್ಕೆ ಅನ್ವಯವಾಗುತ್ತದೆಯೇ ಹೊರತು ಬ್ರಾಹ್ಮಣ ಜಾತಿಗಲ್ಲ ಎಂದು ತಿಳಿಯಬೇಕಾಗುತ್ತದೆ ಎಂದು ಕುವೆಂಪು ಟಿಪ್ಪಣಿ ಹಾಕಿದ್ದಾರೆ.)

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...