Homeಸಿನಿಮಾಕ್ರೀಡೆಅಂತಿಮ ಘಟ್ಟ ತಲುಪಿದ ಫಿಫಾ 2022: ಮದಗಜಗಳ ಕಾದಾಟದಲ್ಲಿ ಯಾರ ಮುಡಿಗೇರಲಿದೆ ವಿಶ್ವಕಪ್?

ಅಂತಿಮ ಘಟ್ಟ ತಲುಪಿದ ಫಿಫಾ 2022: ಮದಗಜಗಳ ಕಾದಾಟದಲ್ಲಿ ಯಾರ ಮುಡಿಗೇರಲಿದೆ ವಿಶ್ವಕಪ್?

ಅರ್ಜೆಂಟೀನಾ ಮತ್ತು ಫ್ರಾನ್ಸ್ ತಲಾ ಎರಡು ಭಾರಿ ವಿಶ್ವಕಪ್ ಜಯಿಸಿದ ಇತಿಹಾಸ ಹೊಂದಿವೆ. ಈ ಬಾರಿ ಗೆದ್ದವರು ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿದ ಖ್ಯಾತಿ ಪಡೆಯಲಿದ್ದಾರೆ.

- Advertisement -
- Advertisement -

ಐದು ಬಾರಿ ವಿಶ್ವಚಾಂಪಿಯನ್ ಆಗಿ ಮೆರೆದಿದ್ದ ಬಲಿಷ್ಠ ಬ್ರೆಜಿಲ್ ತಂಡ ಕ್ರೊಯೇಷಿಯಾ ವಿರುದ್ಧ ಅಷ್ಟು ಸುಲಭಕ್ಕೆ ಸೋಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಫುಟ್‌ಬಾಲ್ ದಂತಕಥೆ ಪೀಲೆ ದಾಖಲೆ ಮುರಿದು ಮುನ್ನುಗ್ಗುತ್ತಿದ್ದ ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಯ್ಮರ್ ಕಣ್ಣೀರಿನೊಂದಿಗೆ ಅಂಗಳದಿಂದ ಹೊರನಡೆದ ಗಳಿಗೆಯನ್ನು ಫುಟ್‌ಬಾಲ್ ಜಗತ್ತು ಇನ್ನಷ್ಟು ದಶಕಗಳ ಕಾಲ ನೆನಪಿಟ್ಟುಕೊಳ್ಳಲಿದೆ. ಇನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬನಾದ ಕ್ರಿಸ್ಟಿಯಾನೊ ರೊನಾಲ್ಡೋ ಸಾರಥ್ಯದ ಪೋರ್ಚುಗಲ್ ಈ ವರ್ಷದ ಫೇವರಿಟ್ ತಂಡವಾಗಿತ್ತು. ಈ ತಂಡ ವಿಶ್ವಕಪ್ ಗೆಲ್ಲಲಿದೆ ಎಂದೇ ಹಲವರು ಹೇಳುತ್ತಿದ್ದರು. ಆದರೆ, ಸುಲಭ ತುತ್ತು ಎಂದೇ ಪರಿಗಣಿಸಲಾಗಿದ್ದ ಆಫ್ರಿಕಾದ ಪುಟ್ಟ ರಾಷ್ಟ್ರ ಮೊರೊಕ್ಕೊ ವಿರುದ್ಧ ಪೋರ್ಚುಗಲ್‌ಗೆ ಸೋಲಾದದ್ದು ಮತ್ತೊಂದು ಅಚ್ಚರಿಯ ಫಲಿತಾಂಶ. ಅಷ್ಟೇ ಅಲ್ಲ ಪಂದ್ಯದ ದೀರ್ಘಾವಧಿ ರೊನಾಲ್ಡೋ ಅಂಗಳದಿಂದ ಹೊರಗೆ ಉಳಿದದ್ದು ಏಕೆ ಎಂಬುದೂ ಹಲವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದೆ ಹೋದ ಸಂಗತಿ!

ನೇಯ್ಮರ್

ಈ ಎಲ್ಲ ಅಚ್ಚರಿಗಳ ನಡುವೆ ಇಡೀ ಜಗತ್ತು ಕುತೂಹಲದಿಂದ ಎದುರು ನೋಡುತ್ತಿದ್ದ ಫಿಫಾ ಫುಟ್‌ಬಾಲ್ ವಿಶ್ವಕಪ್ 2022 ಕೊನೆಗೂ ಅಂತಿಮ ಘಟ್ಟದತ್ತ ಹೆಜ್ಜೆ ಇಟ್ಟಿದೆ. ಡಿಸೆಂಬರ್ 18ರ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾ ಮಣಿಸಿರುವ ಅರ್ಜೆಂಟೀನಾ ಮತ್ತು ಎರಡನೇ ಸೆಮಿಫೈನಲ್ ನಲ್ಲಿ ಮೊರೊಕ್ಕೋ ಮಣಿಸಿದ ಫ್ರಾನ್ಸ್ ಫೈನಲ್ ತಲುಪಿವೆ. ಹೀಗಾಗಿ ಫೈನಲ್ ನಲ್ಲಿ ಅರ್ಜೆಂಟೀನಾ ಗೆಲ್ಲುವುದೇ ಅಥವಾ ಫ್ರಾನ್ಸ್ ಪಾರಮ್ಯ ಮೆರಯುವುದೇ ಎಂಬ ಪ್ರಶ್ನೆ ಈಗಾಗಲೇ ಫುಟ್‌ಬಾಲ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.

ಅರ್ಜೆಂಟೀನಾ ಮತ್ತು ಫ್ರಾನ್ಸ್ ತಲಾ ಎರಡು ಭಾರಿ ವಿಶ್ವಕಪ್ ಜಯಿಸಿದ ಇತಿಹಾಸ ಹೊಂದಿವೆ. ಈ ಬಾರಿ ಗೆದ್ದವರು ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿದ ಖ್ಯಾತಿ ಪಡೆಯಲಿದ್ದಾರೆ. ಎಲ್ಲರ ಕಣ್ಣು ಅರ್ಜೆಂಟೀನಾದ ಮೆಸ್ಸಿ ಮತ್ತು ಫ್ರಾನ್ಸ್ ತಂಡದ ಎಂಬಾಪೆ ಮೇಲಿದೆ.

ಅರ್ಜೆಂಟೀನಾ ವರ್ಸಸ್ ಕ್ರೊಯೇಷಿಯಾ

ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ 88 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಎದುರು ನಡೆದ ಮೊದಲ ಸೆಮಿ ಹೈವೋಲ್ಟೇಜ್ ಕದನದಲ್ಲಿ ಅರ್ಜೆಂಟೀನಾ ಕ್ರೊಯೇಷಿಯಾ ವಿರುದ್ಧ 3-0 ಅಂತರದಿಂದ ಗೆದ್ದು ಬೀಗಿತು. ಅರ್ಜೆಂಟೀನಾ ತಂಡದ ಸೆಮಿಫೈನಲ್ ಪ್ರವೇಶದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಗುಂಪು ಹಂತದಲ್ಲಿ ಸೌದಿ ಅರೇಬಿಯಾ ವಿರುದ್ಧ ಮೊದಲ ಪಂದ್ಯದಲ್ಲಿಯೇ ಅಚ್ಚರಿಯ ಸೋಲಿನ ಆಘಾತ ಅನುಭವಿಸಿದ್ದ ಅರ್ಜೆಂಟೀನಾ ಆತ್ಮವಿಶ್ವಾಸವನ್ನು ಮರುಗಳಿಸಿಕೊಳ್ಳುವುದು ಸುಲಭವಿರಲಿಲ್ಲ. ಆದರೆ, ಬಳಿಕ ಲಿಯೊನೆಲ್ ಮೆಸ್ಸಿ ನಾಯಕತ್ವದಲ್ಲಿ ಈ ತಂಡ ಮತ್ತೆ ಪುಟಿದೆದ್ದು ಈವರೆಗೆ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿದೆ.

ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲು, ನಂತರ ಮೆಕ್ಸಿಕೋ ವಿರುದ್ಧ 2-0 ಅಂತರ ಗೆಲುವು, ಪೋಲೆಂಡ್ ವಿರುದ್ಧವೂ 2-0 ಅಂತರದ ಜಯದೊಂದಿಗೆ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವು ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.

ಇನ್ನೂ ನೆದರ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಅರ್ಜೆಂಟೀನಾ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಗೆದ್ದದ್ದೇ ಮತ್ತಷ್ಟು ರೋಚಕ. ಈ ಪಂದ್ಯದಲ್ಲಿ ಉಭಯ ತಂಡಗಳು ಹೆಚ್ಚುವರಿ ಅವಧಿಯ ನಂತರವೂ 2-2 ಅಂತರದ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟ್‌ಔಟ್ ನಡೆಸಲಾಯಿತು. ಇದರಲ್ಲಿ ಅರ್ಜೆಂಟೀನಾ 4-3 ಗೋಲುಗಳಿಂದ ಗೆದ್ದು ಬೀಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಅರ್ಜೆಂಟೀನಾ 1986ರ ಬಳಿಕ ವಿಶ್ವಕಪ್ ಗೆದ್ದಿಲ್ಲ. ಮೆಸ್ಸಿ ಈ ಬಾರಿ ಮರಡೋನಾ ರೀತಿಯಲ್ಲೇ ತಂಡವನ್ನು ಮುನ್ನಡೆಸಿ ತನ್ನ ದೇಶಕ್ಕೆ ಪ್ರಶಸ್ತಿ ತಂದುಕೊಡುತ್ತಾರೆ ಎಂದೇ ಅಭಿಮಾನಗಳ ನಿರೀಕ್ಷೆ! ಅಲ್ಲದೆ ಈ ವಿಶ್ವಕಪ್ ಮೆಸ್ಸಿ ಪಾಲಿಗೆ ಕೊನೆಯ ವಿಶ್ವಕಪ್ ಆಗಿರಲಿದ್ದು, ಈ ಕಾರಣದಿಂದಾಗಿಯೂ ಅರ್ಜೆಂಟೀನಾ ತಂಡಕ್ಕೆ ಇದು ಪ್ರತಿಷ್ಠೆಯ ಕದನ. ವಿಶೇಷವೆಂದರೆ ಅರ್ಜೆಂಟೀನಾ ತಾನಾಡಿರುವ ಆರು ವಿಶ್ವಕಪ್‌ಗಳ ಸೆಮಿಫೈನಲ್‌ನಲ್ಲಿ ಇದುವರೆಗೆ ಒಂದೇ ಒಂದು ಸೋಲುಂಡಿಲ್ಲ. ಆರು ಬಾರಿ ಕೂಡ ಫೈನಲ್‌ಗೇರಿರುವ ದಾಖಲೆ ಬರೆದಿದೆ.

ಇತ್ತ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಜಿಲ್‌ ವಿರುದ್ಧ ಗೆದ್ದು ಸೆಮಿ ತಲುಪಿದ್ದ ಕ್ರೊಯೇಷಿಯಾ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಅರ್ಜೆಂಟೀನಾಕ್ಕೆ ಮೆಸ್ಸಿ ಇದ್ದಂತೆ, ಕ್ರೊಯೇಷಿಯಾಕ್ಕೆ ಲುಕಾ ಮೊಡ್ರಿಕ್ ಬಲವಿದೆ. ಕ್ವಾರ್ಟರ್‌ಫೈನಲ್‌ನ ಮೊದಲ ಪಂದ್ಯದಲ್ಲಿ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಮಿಂಚಿದ ಕ್ರೊಯೇಷಿಯಾ ತಂಡ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡಕ್ಕೆ ಆಘಾತ ನೀಡಿತ್ತು. 120 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಉಭಯ ತಂಡಗಳು 1-1ರ ಅಂತರದಲ್ಲಿ ಸಮಬಲ ಕಂಡಿತ್ತು. ಪೆನಾಲ್ಟಿ ಶೂಟ್‌ಔಟ್‌ನಲ್ಲಿ 4-2 ಅಂತರದಿಂದ ಗೆದ್ದ ಕ್ರೊಯೇಷಿಯಾ ಸೆಮೀಸ್‌ನಲ್ಲಿ ಸೋಲುಂಡಿತು.

ಫ್ರಾನ್ಸ್ ವರ್ಸಸ್ ಮೊರೊಕ್ಕೊ

ವಿಶ್ವಕಪ್ ತಂಡಗಳಲ್ಲೇ ಅತ್ಯಂತ ಆಕ್ರಮಣಕಾರಿ ತಂಡ ಎಂಬ ಹೆಗ್ಗಳಿಕೆಯೊಂದಿಗೆ ಕತಾರ್‌ಗೆ ಬಂದಿಳಿದಿದ್ದ ಫ್ರಾನ್ಸ್ ಆರಂಭದಿಂದಲೂ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಗ್ರೂಪ್ ಹಂತದ ಮೊದಲ ಪಂದ್ಯದಲ್ಲೇ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ 2-1 ಅಂತರದಲ್ಲಿ ಗೆಲುವು ಸಾಧಿಸಿದ್ದ ಫ್ರಾನ್ಸ್ ತನ್ನ ಮೂರನೇ ಪಂದ್ಯದಲ್ಲಿ ಟ್ಯುನೀಷಿಯಾ ವಿರುದ್ಧ 1-0 ಅಂತರದಲ್ಲಿ ಮುಗ್ಗರಿಸಿತ್ತು. ಆದರೂ, ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋಲೆಂಡ್ ವಿರುದ್ಧದ 3-1 ಅಂತರದ ಗೆಲುವು ಹಾಗೂ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸಾಧಿಸಿದ 2-1 ಗೆಲುವು ಮತ್ತು ಸೆಮಿಫೈನಲ್‌ನಲ್ಲಿ 2-0 ಅಂತರದಿಂದ ಮೊರಾಕ್ಕೊ ವಿರುದ್ಧ ಗೆಲುವು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಗ್ರೂಪ್ ಹಂತದಲ್ಲಿ ಕ್ರೊಯೇಷಿಯಾ ವಿರುದ್ಧ ಡ್ರಾ ಸಾಧಿಸುವ ಮೂಲಕವೇ ಅಭಿಯಾನ ಆರಂಭಿಸಿದ್ದ ಮೊರೊಕ್ಕೊ ನಂತರ ಮಾಡಿದ್ದೆಲ್ಲವೂ ಅಕ್ಷರಶಃ ಮೋಡಿಯೇ ಸರಿ! ತನ್ನ ಎರಡನೇ ಪಂದ್ಯದಲ್ಲೇ ಬೆಲ್ಜಿಯಂ ವಿರುದ್ಧ 2-0 ಅಂತರದಲ್ಲಿ ಗೆದ್ದ ಮೊರೊಕ್ಕೊ ಮುಂದಿನ ಪಂದ್ಯಗಳಲ್ಲಿ, ಕೆನಡಾ ವಿರುದ್ಧ 2-1, ಸ್ಪೇನ್ ವಿರುದ್ಧ ಪೆನಾಲ್ಟಿ ಶೂಟ್‌ಔಟ್‌ನಲ್ಲಿ 3-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು. ಇನ್ನು ಕ್ವಾಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧದ 1-0 ಅಂತರದ ಗೆಲುವನ್ನು ಮೊರೊಕ್ಕೊ ಫುಟ್ಬಾಲ್ ಇತಿಹಾಸ ಸುವರ್ಣಾಕ್ಷರದಲ್ಲಿ ಬರೆದಿಟ್ಟುಕೊಳ್ಳಲಿದೆ. ಆದರೆ ಮೊರೊಕ್ಕೊ ತಂಡ ಫ್ರಾನ್ಸ್ ಎದುರು ಸೋತು ಈಗ ಮೂರನೇ ಸ್ಥಾನಕ್ಕಾಗಿ ಕ್ರೋವೆಶಿಯ ವಿರುದ್ಧ ಸೆಣಸಲಿದೆ.

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕಾ ಖಂಡದ ದೇಶ ಎಂಬ ಹೆಗ್ಗಳಿಕೆ ಮೊರೊಕ್ಕೊಗೆ ದಕ್ಕಿದೆ.

ಫೈನಲ್- ಫ್ರಾನ್ಸ್ ಪರ ರೊನಾಲ್ಡೊ ಒಲವು!

ಫಿಫಾ 2022ರ ವಿಶ್ವಕಪ್ ಯಾರ ಮುಡಿಗೆ ಎಂಬ ಪ್ರಶ್ನೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ನಡುವೆ ಸೋಲಿನ ನಿರಾಸೆಯೊಂದಿಗೆ ಕೂಟದಿಂದಲೇ ಹೊರನಡೆದಿರುವ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ “ಪ್ರಸ್ತುತ ಹಾಲಿ ಚಾಂಪಿಯನ್ ಆಗಿರುವ ಫ್ರಾನ್ಸ್ ತಂಡ ಟ್ರೋಫಿ ಗೆಲ್ಲುವುದನ್ನು ನೋಡಲು ಇಷ್ಟಪಡುತ್ತೇನೆ” ಎಂದು ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಎಂಬಾಪೆ

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ರೊನಾಲ್ಡೊ, “ಫ್ರಾನ್ಸ್ ತಂಡದ ಸ್ಟಾರ್ ಆಟಗಾರನಾಗಿರುವ ಕೈಲಿಯನ್ ಎಂಬಾಪೆ ಶ್ರೇಷ್ಠ ಮತ್ತು ನೈಜ ಆಟಗಾರ. ಫುಟ್‌ಬಾಲ್‌ಗೆ ಅಗತ್ಯವಾದ ತಾಂತ್ರಿಕ ಗುಣ ಅವರಲ್ಲಿದೆ. ಕಲಾತ್ಮಕ ಹಾಗೂ ರಕ್ಷಣಾತ್ಮಕ ಆಟ ಪ್ರದರ್ಶಿಸುವ ಮೂಲಕ ಅವರು ಗೋಲು ಗಳಿಸುತ್ತಿದ್ದಾರೆ. ಅಲ್ಲದೆ, ಫ್ರಾನ್ಸ್ ತಂಡಕ್ಕೆ ಮತ್ತೊಂದು ವಿಶ್ವಕಪ್ ಗೆದ್ದು ಕೊಡುವ ಛಲವೂ ಅವರಲ್ಲಿದೆ” ಎಂದು ತಿಳಿಸಿದ್ದಾರೆ.

ಗೋಲ್ಡನ್ ಬೂಟ್ ರೇಸ್ ನಲ್ಲಿ ಮೆಸ್ಸಿ, ಎಂಬಾಪೆ, ಗಿರೌಲ್ಡ್

ಫಿಫಾ ಫುಟ್‌ಬಾಲ್ ವಿಶ್ವಕಪ್ 2022 ಟೂರ್ನಿಯಲ್ಲಿ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ 5 ಗಳಿಸಿದರೆ, ಫ್ರಾನ್ಸ್ ತಂಡದ ಮುಂಚೂಣಿ ಆಟಗಾರ ಕೈಲಿಯನ್ ಎಂಬಾಪೆ ಸಹ 5 ಗೋಲು ಗಳಿಸುವ ಮೂಲಕ ಗೋಲ್ಡನ್ ಬೂಟ್ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಎಂಬಾಪೆ ಸಹ ಆಟಗಾರ ಒಲಿವಿಯರ್ ಗಿರೌಲ್ಡ್ 4 ಗೋಲು ಗಳಿಸಿದ್ದು, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಎದುರು ನೋಡುತ್ತಿದ್ದಾರೆ. ಫೈನಲ್ ಪಂದ್ಯದಲ್ಲಿ ಈ ಆಟಗಾರರಲ್ಲಿ ಯಾರು ಹೆಚ್ಚು ಗೋಲು ಗಳಿಸುತ್ತಾರೊ ಅವರಿಗೆ ಈ ವಿಶ್ವಕಪ್‌ನ ಗೋಲ್ಡನ್ ಬೂಟ್ ಪ್ರಶಸ್ತಿ ಮುಡಿಗೇರಲಿದೆ.

ವಿಶ್ವಕಪ್ ಗೆದ್ದ ತಂಡಗಳಿವು!

1930 ರಿಂದ 2018ರ ನಡುವೆ ಒಟ್ಟು 21 ಬಾರಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಜರುಗಿದೆ. ಈ ಪೈಕಿ ಖ್ಯಾತ ಬ್ರೆಜಿಲ್ ತಂಡ 5 ವಿಶ್ವಕಪ್‌ನಲ್ಲಿ ಗೆಲ್ಲುವ ಮೂಲಕ ಫುಟ್‌ಬಾಲ್ ಲೋಕದಲ್ಲಿ ಪಾರಮ್ಯ ಸಾಧಿಸಿದೆ. ಇದು ತಂಡವೊಂದರ ಅತಿಹೆಚ್ಚು ಗೆಲುವು. ಇನ್ನೂ ಜರ್ಮನಿ ಮತ್ತು ಇಟಲಿ ತಲಾ 4 ಬಾರಿ ಹಾಗೂ ದಕ್ಷಿಣ ಅಮೆರಿಕದ ಪುಟ್ಟ ರಾಷ್ಟ್ರ ಉರುಗ್ವೆ, ಅರ್ಜೆಂಟೀನಾ ಮತ್ತು ಫ್ರಾನ್ಸ್ ಎರಡು ಬಾರಿ ವಿಶ್ವಕಪ್‌ಅನ್ನು ತನ್ನ ಮುಡಿಗೇರಿಸಿಕೊಂಡಿವೆ. ಇಂಗ್ಲೆಂಡ್ ಮತ್ತು ಸ್ಪೇನ್ ದೇಶಗಳು ತಲಾ ಒಂದು ಬಾರಿ ವಿಶ್ವಕಪ್ ವಿಜಯಿಗಳಾಗಿವೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...