ತಮಿಳುನಾಡು ರಾಜ್ಯದ ಕಾಂಚೀಪುರಂ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಆಕೆಯ ಗೆಳೆಯನ ಎದುರಲ್ಲಿ ಆರು ಮಂದಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಬೆಂಗಳೂರು-ಪುದುಚೇರಿ ಹೆದ್ದಾರಿ ಬಳಿ ಗುರುವಾರ ಈ ಘಟನೆ ನಡೆದಿದೆ.
20 ವರ್ಷದ ಯುವತಿ ತನ್ನ ಗೆಳೆಯನೊಂದಿಗೆ ಪ್ರಯಾಣಿಸುತ್ತಿದ್ದಾಗ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಅವರ ಬಳಿಗೆ ಬಂದು ಕಿರುಕುಳ ನೀಡಲು ಆರಂಭಿಸಿದರು. ದುಷ್ಕರ್ಮಿಗಳು ಇಬ್ಬರಿಗೂ ಚಾಕುವನ್ನು ತೋರಿಸಿ, ಯುವತಿಯನ್ನು ಯಾರೂ ಇಲ್ಲದ ಜಾಗಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಚಾಕು ತೋರಿಸಿ ಗೆಳೆಯನ ಎದುರಿನಲ್ಲಿಯೇ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇಬ್ಬರು ಮುಸುಕುಧಾರಿಗಳು ತಮ್ಮ ಬಳಿಗೆ ಬಂದಾಗ ಕುಡಿದ ಮತ್ತಿನಲ್ಲಿದ್ದರು ಎಂದು ಸಂತ್ರಸ್ತರು ಮಾಹಿತಿ ನೀಡಿದ್ದಾರೆ.
ಮುಸುಕುಧಾರಿಗಳಿಬ್ಬರು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾಗ, ಇನ್ನೂ ನಾಲ್ವರು ಘಟನೆ ನಡೆದ ಸ್ಥಳಕ್ಕೆ ಬಂದು ಅತ್ಯಾಚಾರಿಗಳೊಂದಿಗೆ ಸೇರಿಕೊಂಡರು. ನಂತರ ಆರು ಮಂದಿಯೂ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು.
ಇದನ್ನೂ ಓದಿರಿ: 4 ವರ್ಷದ ಮಗು ಮೇಲೆ ಅತ್ಯಾಚಾರ: ಸಿಸಿಕ್ಯಾಮರ ನೆರವಿನಿಂದ ಆರೋಪಿಯ ಬಂಧನ
ಪರಾರಿಯಾಗಲು ಯತ್ನಿಸಿದರೆ ಕೊಲೆ ಮಾಡುತ್ತೇವೆ ಎಂದು ದುಷ್ಕರ್ಮಿಗಳು ಯುವತಿಗೆ ಬೆದರಿಕೆ ಹಾಕಿದರು. ಈ ಇಬ್ಬರೂ ಸಂತ್ರಸ್ತರು ದುಷ್ಕರ್ಮಿಗಳ ಹಿಡಿತದಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ. ಕುಟುಂಬ ಸದಸ್ಯರಿಗೆ ತಿಳಿಸಿದ ನಂತರ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಎನ್ಡಿಟಿವಿಯೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಗ್ಯಾಂಗ್ ಬಾಲಕಿಗೆ ಚಾಕುವಿನಿಂದ ಬೆದರಿಸಿ ಕತ್ತಲೆ ಪ್ರದೇಶಕ್ಕೆ ಕರೆದೊಯ್ದಿದೆ. ಅವರು ಒಬ್ಬರ ನಂತರ ಒಬ್ಬರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದಿದ್ದಾರೆ.
ಕಾಂಚೀಪುರಂ ಪ್ರದೇಶದಲ್ಲಿ ನಡೆದ ಭೀಕರ ಘಟನೆಯ ನಂತರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದರು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮಧ್ಯಪ್ರದೇಶ: 90 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ
ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ 90 ವರ್ಷದ ವೃದ್ಧೆಯೊಬ್ಬರ ಮೇಲೆ ಮೋಟಾರ್ ಸೈಕಲ್ ಸವಾರನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 15 ಕಿಲೋಮೀಟರ್ ದೂರದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಗುರುವಾರ ರಾತ್ರಿ ಜಬಲ್ಪುರದಿಂದ ಶಹದೋಲ್ ರೈಲು ನಿಲ್ದಾಣಕ್ಕೆ ವೃದ್ಧೆ ಬಂದಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಪ್ರತೀಕ್ ತಿಳಿಸಿದ್ದಾರೆ.
“ವೃದ್ಧೆಯು ರಾತ್ರಿಯಿಡೀ ರೈಲ್ವೇ ನಿಲ್ದಾಣದಲ್ಲಿ ಉಳಿದುಕೊಂಡಿದ್ದರು. ಆಟೋರಿಕ್ಷಾ ಚಾಲಕನೊಬ್ಬ ಶುಕ್ರವಾರ ಬೆಳಿಗ್ಗೆ ವೃದ್ಧೆಯನ್ನು ಅಂಟ್ರಾ ಗ್ರಾಮದ ಮುಖ್ಯ ರಸ್ತೆಗೆ ಡ್ರಾಪ್ ಮಾಡಿದನು. ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿರುವ ತನ್ನ ಸಂಬಂಧಿಕರ ಸ್ಥಳಕ್ಕೆ ಹೋಗಲು ಮತ್ತೊಂದು ವಾಹನವನ್ನು ಹತ್ತುವಂತೆ ಆತ ತಿಳಿಸಿದನು. ವೃದ್ಧೆಯು ಬಸ್ಗಾಗಿ ಕಾಯುತ್ತಿದ್ದಾಗ, ಅಪರಿಚಿತ ಮೋಟರ್ಸೈಕ್ಲಿಸ್ಟ್ ಬಂದಿದ್ದು ವೃದ್ಧೆಯನ್ನು ಗ್ರಾಮಕ್ಕೆ ಬಿಡುವುದಾಗಿ ಹೇಳಿದ್ದಾನೆ. ಆದರೆ ದಾರಿ ತಪ್ಪಿಸಿ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮತ್ತೆ ಅಕೆಯನ್ನು ಮುಖ್ಯ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ” ಎಂದು ಎಸ್ಪಿ ಹೇಳಿದ್ದಾರೆ.
ವೃದ್ಧೆಯು ತನ್ನ ಸಂಬಂಧಿಕರಿಗೆ ತಿಳಿಸಿದ ನಂತರ, ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಪರಿಚಿತ ಮೋಟಾರ್ಸೈಕ್ಲಿಸ್ಟ್ ವಿರುದ್ಧ ಅತ್ಯಾಚಾರ ಮತ್ತು ಇತರ ಅಪರಾಧಗಳಿಗಾಗಿ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕುಮಾರ್ ಪ್ರತೀಕ್ ವಿವರಿಸಿದ್ದಾರೆ.
ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಚಂಡೀಗಡ: ಎಎಸ್ಐ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಸಂತ್ರಸ್ತೆಗೆ ಸಹಾಯ ಮಾಡುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಸಹಾಯಕ ಸಬ್-ಇನ್ಸ್ಪೆಕ್ಟರ್ (ಎಎಸ್ಐ) ಶ್ರೇಣಿಯ ಪೊಲೀಸ್ ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿ ಪೊಲೀಸನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಹರಿಯಾಣ ಪೊಲೀಸ್ನ ಡಯಲ್ 112 ತುರ್ತು ಸೇವೆಯ ಉಸ್ತುವಾರಿಯಾಗಿ ಛಚ್ರೌಲಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದನು.
ಜಗಧಾರಿಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಆರೋಪಿ ಎಎಸ್ಐ ತನ್ನ ಮೇಲೆ ಎರಡು ಬಾರಿ ವಿವಿಧ ಹೋಟೆಲ್ಗಳಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ: ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ ಶಿಕ್ಷೆ
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಐದು ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿರಿ: ತುಮಕೂರು ವಿವಿ ಸಂಶೋಧನಾ ವಿದ್ಯಾರ್ಥಿಯಿಂದ ಬಾಲಕಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು
ದಕ್ಷಿಣ ಕನ್ನಡ ಜಿಲ್ಲೆಯ ಬಿಜೈ ಕಾಪಿಕಾಡು ನಿವಾಸಿ ಶೇಖರ ಶಿಕ್ಷೆಗೊಳಗಾದ ಆರೋಪಿ. ಜುಲೈ 21, 2022ರಂದು ಬೆಳಗ್ಗೆ ಅಪರಾಧಿ ಶೇಖರ್ ಹ್ಯಾಟ್ ಹಿಲ್ ಜಡ್ಜಸ್ ಕ್ವಾಟ್ರರ್ಸ್ ಪಾರ್ಕಿಂಗ್ ಸ್ಥಳದಲ್ಲಿ ಪೈಟಿಂಗ್ ಕೆಲಸ ಮಾಡುತ್ತಿದ್ದನು. ಈ ವೇಳೆ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಮಾಡಿದ ಎಸ್ಐ ಶ್ರೀಕಲಾ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಐದು ವರ್ಷ ಜೈಲು ಶಿಕ್ಷೆ, ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸಂತ್ರಸ್ತೆಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆಯೂ ಅದೇಶಿಸಿದ್ದಾರೆ.


