Homeಅಂಕಣಗಳುಸರ್ವೋಚ್ಚ ನ್ಯಾಯಾಲಯ: ಬಹುತೇಕ ಒಂದೇ ಬಗೆಯ ಬಿಕ್ಕಟ್ಟು ಎದುರಿಸುತ್ತಿರುವ ಭಾರತ ಮತ್ತು ಇಸ್ರೇಲ್

ಸರ್ವೋಚ್ಚ ನ್ಯಾಯಾಲಯ: ಬಹುತೇಕ ಒಂದೇ ಬಗೆಯ ಬಿಕ್ಕಟ್ಟು ಎದುರಿಸುತ್ತಿರುವ ಭಾರತ ಮತ್ತು ಇಸ್ರೇಲ್

- Advertisement -
- Advertisement -

ಇಸ್ರೇಲ್ ಈ ವರ್ಷದ ಆರಂಭದಿಂದ ಭಾರೀ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಇಸ್ರೇಲಿನ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ನೇಮಿಸುವಲ್ಲಿ, ಸರ್ಕಾರದ ಪಾತ್ರವನ್ನು ಹೆಚ್ಚಿಸಿಕೊಳ್ಳುವ ಹಾಗೂ ಸರ್ಕಾರ ರಚಿಸುವ ಕಾಯ್ದೆ ಕಾನೂನುಗಳ ಮೇಲೆ ಸುಪ್ರೀಂ ಕೋರ್ಟ್‌ನ ಪರಾಮರ್ಶೆಯ ಅಧಿಕಾರವನ್ನು ಮೊಟಕುಗೊಳಿಸುವ ಇಸ್ರೇಲಿ ಸರ್ಕಾರದ ಕಾನೂನು ಅಲ್ಲಿನ ಜನತೆಯನ್ನು ಕೆರಳಿಸಿದೆ. ಉಂಟಾಗಿರುವ ಈ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಸುಮಾರು 11 ವಾರಗಳಿಂದ ಲಕ್ಷಾಂತರ ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಸುಪ್ರೀಂ ಕೋರ್ಟಿನ ಅಧಿಕಾರವನ್ನು ಕಡಿತಗೊಳಿಸಿ ನಿರಂಕುಶವಾಗಲು ಪ್ರಯತ್ನಿಸುತ್ತಿರುವ ಸರ್ಕಾರದ ನಡೆಯನ್ನು ಶತಾಯಗತಾಯ ಸೋಲಿಸಲು ವಿವಿಧ ವಲಯದ ಜನ ಒಗ್ಗೂಡಿದ್ದಾರೆ. ವಿಶ್ವದಾದ್ಯಂತ ಪ್ರಜಾಪ್ರಭುತ್ವಗಳು ಸರ್ವಾಧಿಕಾರದತ್ತ ವಾಲುತ್ತಿವೆ ಎಂದು ಹಲವು ಅಧ್ಯಯನಗಳು ಎಚ್ಚರಿಸುತ್ತಿರುವಾಗ ದೇಶವೊಂದರ ನ್ಯಾಯಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಜನರ ಕರ್ತವ್ಯವಾದೀತು!

ಈ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ, ಇತಿಹಾಸಕಾರ ಮತ್ತು ’ಸೇಪಿಯನ್ಸ್’ ಪುಸ್ತಕದ ಕರ್ತೃ ಯುವಲ್ ನೋವಾ ಹರಾರಿ ಅವರು ಜನರನ್ನು ಎಚ್ಚರಿಸುವ ಭಾಷಣ ಮಾಡಿದ್ದರು. “ಕಾನೂನುಬದ್ಧ ರೀತಿಯಿಂದಲೇ ಅಧಿಕಾರಕ್ಕೆ ಬಂದ ಜನರಿಂದಲೇ ಸ್ಥಾಪಿತವಾದ ಸರ್ವಾಧಿಕಾರಗಳಿಂದ ಇತಿಹಾಸವು ತುಂಬಿಹೋಗಿದೆ. ಅತ್ಯಂತ ಹಳೆಯ ತಂತ್ರವೆಂದರೆ: ಮೊದಲಿಗೆ ಅಧಿಕಾರ ಪಡೆಯಲು ಕಾನೂನನ್ನು ಬಳಸಿಕೊಳ್ಳುವುದು ಮತ್ತು ನಂತರ ಕಾನೂನನ್ನು ವಿರೂಪಗೊಳಿಸಲು ಆ ಅಧಿಕಾರವನ್ನು ಬಳಸಿಕೊಳ್ಳುವುದು. ಇವನ್ನು ಜೊತೆಯಾಗಿ ಪರಿಶೀಲಿಸಿದಾಗ, ಈ (ಇಸ್ರೇಲಿ) ಸರಕಾರವು ಪ್ರಸ್ತುತ ತರುತ್ತಿರುವ ಕಾನೂನಿಗೆ ಒಂದೇ ಸರಳ ಅರ್ಥವಿದೆ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ನೀವು ಕಾನೂನಿನಲ್ಲಿ ಪಿಎಚ್.ಡಿ ಪಡೆದಿರಬೇಕಾದ ಅಗತ್ಯವಿಲ್ಲ. ಅದೆಂದರೆ: ಈ

ಬೆಂಜಮಿನ್ ನೆತನ್ಯಾಹು

ಕಾನೂನುಗಳು ಅಂಗೀಕಾರವಾದರೆ, ನಮ್ಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಾಶ ಮಾಡಲು ಸರಕಾರಕ್ಕೆ ಸಂಪೂರ್ಣ ಅಧಿಕಾರ ಇರುತ್ತದೆ” ಎಂದಿದ್ದ ಅವರು, “ಪ್ರಜಾಪ್ರಭುತ್ವವು ಒಂದು ಒಪ್ಪಂದ. ಅದರ ಪ್ರಕಾರ ಸರಕಾರವು ಜನರ ಮೂಲಭೂತ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂಬ ಷರತ್ತಿನ ಮೇಲೆ ನಾಗರಿಕರು ಸರಕಾರದ ನಿರ್ಧಾರಗಳನ್ನು ಗೌರವಿಸಬೇಕು. ಒಂದು ಕಡೆಯವರು ಈ ಒಪ್ಪಂದವನ್ನು ಮುರಿದಾಗ ಇನ್ನೊಂದು ಕಡೆಯವರು ತಮ್ಮ ಪಾತ್ರವನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿಲ್ಲ. ಒಂದು ಸರಕಾರವು ಸರ್ವಾಧಿಕಾರವನ್ನು ಸ್ಥಾಪಿಸಲು ಹೊರಟಾಗ ಆದನ್ನು ಪ್ರತಿರೋಧಿಸಲು ನಾಗರಿಕರಿಗೆ ಹಕ್ಕಿದೆ” ಎಂದಿದ್ದರು. ಈ ಮೂಲಕ ದೇಶದ ಪ್ರತಿ ನಾಗರಿಕನೂ ಈ ಕಾನೂನು ತಿದ್ದುಪಡಿಗಳ ವಿರುದ್ಧ ಹೋರಾಡಬೇಕೆಂಬ ಕರೆಕೊಟ್ಟು “ನಾವಿಂದು ಧ್ವನಿ ಎತ್ತದಿದ್ದರೆ, ಜೀವನಪೂರ್ತಿ ಬಾಯಿಮುಚ್ಚಿ ಬಿದ್ದಿರಬೇಕು” ಎಂದಿದ್ದರು.

ಇಸ್ರೇಲಿನದ್ದು ಭಾರತದಂತೆಯೇ ತೀವ್ರ ಬಲಪಂಥೀಯ ಸರ್ಕಾರ. ಕಳೆದ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ದೊರಕದ ಕಾರಣ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಹಲವು ಪಕ್ಷಗಳನ್ನು (ಇದರಲ್ಲಿ ಉಗ್ರ ಬಲಪಂಥೀಯ ಪಕ್ಷಗಳೂ ಒಳಗೊಂಡಿವೆ) ಒಳಗೊಂಡ ಸರ್ಕಾರವನ್ನು 2022ರ ಅಂತ್ಯದಲ್ಲಿ ರಚಿಸಲಾಗಿತ್ತು. ಇಂತಹ ಮೈತ್ರಿಕೂಟದಲ್ಲಿ ಇತಮಾರ್ ಬೆನ್-ಗ್ವಿರ್ ಎಂಬ ವ್ಯಕ್ತಿಯನ್ನು ರಾಷ್ಟ್ರೀಯ ಭದ್ರತಾ ಸಚಿವರನ್ನಾಗಿ ನೇಮಿಸಲಾಗಿದೆ. ಪ್ಯಾಲೆಸ್ತೇನಿಯನ್ನರ ವಿರುದ್ಧ ಬಹಿರಂಗವಾಗಿ ದ್ವೇಷ ಕಾರುವ ಈ ವ್ಯಕ್ತಿ ಅಲ್ಲಿನ ಲಿಬರಲ್ ಮತ್ತು ಸೆಂಟ್ರಿಸ್ಟ್ ಮುಖಂಡರನ್ನೂ ಅವರ ಧೋರಣೆಗೆ ಲೇವಡಿ ಮಾಡುವವರು. ಉಗ್ರ ಬಲಪಂಥೀಯತೆಯ ಪ್ರತಿಪಾದಕರಾದ ಇವರು ’ಅರಬ್ಬರು ನಾಯಿಗಳಂತೆ, ಅವರು ಸುಮ್ಮನೆ ಬಾಯಿಮುಚ್ಚಿರಬೇಕು ಇಲ್ಲ ಹೊರನಡೆಯಬೇಕು’ ಎಂದು ಪ್ರತಿಪಾದಿಸುತ್ತಿದ್ದ ಇಸ್ರೇಲಿ ಧರ್ಮಗುರು ಮೀರ್ ಕಹಾನೆ ಅನ್ನುವರರ ಅನುಯಾಯಿ. ’ಜ್ಯೂಯಿಶ್ ಪ್ರಭುತ್ವ ಪ್ರಜಾಪ್ರಭುತ್ವವಾಗಿರುವುದೇ ಹುಚ್ಚಾಟ’ ಎಂದು ಪ್ರತಿಪಾದಿಸುತ್ತಿದ್ದ ವ್ಯಕ್ತಿಯೀತ. ಇಂತಹವರ ಬೆಂಬಲಿಗರು ಸರ್ಕಾರದಲ್ಲಿ ನುಸುಳಿದಾಗ ಏನಾಗಬಹುದು ಎಂದು ಊಹಿಸುವುದು ಕಷ್ಟವೇನಲ್ಲ. ಹಿಂದಿನ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ, ನೆತನ್ಯಾಹು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಬಲಪಂಥೀಯ ಆರ್ಥಿಕತೆಯನ್ನು ಪೋಷಿಸಿ ಆಡಳಿತ ನಡೆಸುತ್ತಿದ್ದರಾದರೂ, ಪ್ರಜಾಪ್ರಭುತ್ವದ ಸಂಸ್ಥೆಗಳ ಸ್ವಾತಂತ್ರ್ಯವನ್ನು ಹರಣ ಮಾಡುವ ನಿಟ್ಟಿನಲ್ಲಿ ಮುಂದುವರಿದಿರಲಿಲ್ಲ ಎನ್ನಲಾಗುತ್ತದೆ. ಈಗ ಆ ಕೆಲಸಕ್ಕೂ ಅಡಿಯಿಟ್ಟಿರುವುದು ಜಗತ್ತಿನಲ್ಲಿ ಪ್ರಜಾಪ್ರಭುತ್ವಗಳು ಸರ್ವಾಧಿಕಾರಕ್ಕೆ ತಿರುಗುತ್ತಿರುವುದರ ಪ್ರತೀಕವಾಗಿದೆ.

ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿರುವ ಪಕ್ಷಾಂತರ ಹಾವಳಿ

ಇಂತಹುದ್ದೇ ವಿದ್ಯಮಾನಗಳು ಭಾರತದಲ್ಲಿಯೂ ಬೇರೆಬೇರೆ ರೀತಿಯಲ್ಲಿ ಕಾಣಿಸುತ್ತಿವೆ. ಮೊದಲು ಸುಪ್ರೀಂ ಕೋರ್ಟ್ ಕೊಲಿಜಿಯಂ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆಕ್ಷೇಪವೆತ್ತಿದ್ದರು. ಸರ್ಕಾರ ಕೆಲವು ನ್ಯಾಯಾಧೀಶರನ್ನು ನೇಮಿಸುವಲ್ಲಿ ತೋರುತ್ತಿರುವ ದೃಷ್ಟಿಕೋನವನ್ನು ಸರ್ವೋಚ್ಚ ನ್ಯಾಯಾಲಯ ಆಕ್ಷೇಪಿಸಿದ್ದರಿಂದ ಕೊಲಿಜಿಯಂ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಮಾತುಗಳನ್ನು ರಿಜಿಜು ಅವರು ಆಡಿದ್ದರು. ಈಗಿನ ಸಂದರ್ಭದಲ್ಲಿ, ಕೊಲಿಜಿಯಂ ವ್ಯವಸ್ಥೆ ಪರಿಪೂರ್ಣವಲ್ಲದಿದ್ದರೂ ಇದ್ದುದರಲ್ಲಿ ಸುಧಾರಿತ ವ್ಯವಸ್ಥೆ. ಅದರಲ್ಲಿ ಸರ್ಕಾರದ ಪ್ರತಿನಿಧಿಗಳು ತೂರಿಕೊಂಡರೆ ಆಗುವ ಅಪಾಯವನ್ನು ಯಾರಾದರೂ ಮನಗಾಣಬಹುದು.

ಕಿರಣ್ ರಿಜಿಜು

ಹಾಗೆಯೇ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರನ್ನು (ಇಸಿ) ನೇಮಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಹೊಸದೊಂದು ಕಾನೂನು ರಚಿಸುವವರೆಗೂ, ಪ್ರಧಾನ ಮಂತ್ರಿ, ಸಂಸತ್ತಿನ ವಿರೋಧ ಪಕ್ಷದ ನಾಯಕ ಅಥವಾ ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳುಳ್ಳ ವಿರೋಧ ಪಕ್ಷವೊಂದರ ಮುಖಂಡ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಸಿಇಸಿ ಮತ್ತು ಇಸಿರನ್ನು ನೇಮಿಸಬೇಕು ಎಂದು ಇತ್ತೀಚಿಗೆ ಸುಪ್ರೀಂ ಕೋರ್ಟ್‌ನ ಪೀಠವೊಂದು ಒಮ್ಮತದ ತೀರ್ಮಾನ ನೀಡಿತ್ತು. ಇದರ ಬಗ್ಗೆ ಇತ್ತೀಚಿಗೆ ಒಂದು ಸಭೆಯಲ್ಲಿ ಆಕ್ಷೇಪವೆತ್ತಿದ್ದ ರಿಜಿಜು ಇದನ್ನು ಲಕ್ಷ್ಮಣರೇಖೆಯೆಂದು ಕರೆದು, ಕಾರ್ಯಾಂಗದ ವಿಷಯಕ್ಕೆ ನ್ಯಾಯಾಲಯ ಮೂಗು ತೂರಿಸುವುದಾದರೆ ನ್ಯಾಯಾಲಯದ ಕೆಲಸಗಳನ್ನು ಮಾಡುವವರು ಯಾರು ಎಂದಿದ್ದರು.

ಇವೆಲ್ಲವೂ ನ್ಯಾಯಾಲಯದ ಬಗೆಗಿನ ಸಾಮಾನ್ಯ ವಿಮರ್ಶೆಗಳಲ್ಲ. ಬದಲಿಗೆ, ದೇಶ ಸರ್ವಾಧಿಕಾರದತ್ತ ವಾಲುತ್ತಿದೆ ಎಂದು ಪ್ರತಿಪಕ್ಷಗಳಿಂದ ಹಿಡಿದು ಜನಸಾಮಾನ್ಯರವರೆಗೂ ದೂರುತ್ತಿರುವ ಹಿನ್ನೆಲೆಯಲ್ಲಿ ಇಂತಹ ಟೀಕೆಗಳು ಬೇರೆಯೇ ಅರ್ಥವನ್ನು ಪಡೆದುಕೊಳ್ಳುತ್ತವೆ. ಸರ್ವೋಚ್ಚ ನ್ಯಾಯಾಲಯ ಇನ್ನೂ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ಸಿಕ್ಕಿರದೆ ಹೋಗಿರುವುದರಿಂದ, ಅದನ್ನು ಸಾಧಿಸಿಕೊಳ್ಳಲು ಇವೆಲ್ಲವೂ ನಾಂದಿಯಂತೆ ಕಾಣದೆ ಇರದು. ಮುಂದೊಂದು ದಿನ ನ್ಯಾಯಾಂಗದ ವಿಷಯದಲ್ಲಿ ಈಗ ಇಸ್ರೇಲಿ ಸರ್ಕಾರ ಬಂದಿರುವ ಹಂತಕ್ಕೆ ಭಾರತ ಸರ್ಕಾರವೂ ಮುಂದುವರಿಯಬಾರದೆಂದಿದ್ದರೆ ನಾಗರಿಕ ಸಮಾಜ ಬಹಳ ಎಚ್ಚರಿಕೆಯಿಂದ ನಮ್ಮ ಪ್ರಜಾಪ್ರಭುತ್ವವನ್ನು ಮತ್ತದರ ಸಂಸ್ಥೆಗಳನ್ನು ಕಾಯ್ದುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...