Homeಮುಖಪುಟವಿವಾಹ ಕಾಯ್ದೆ; ಎಲ್‌ಜಿಬಿಟಿಕ್ಯುಐ ಸಮುದಾಯದ ಬೇಡಿಕೆ ಮತ್ತು ಭಾರತ ಸರ್ಕಾರದ ನಿರಾಶಾದಾಯಕ ಪ್ರತಿಕ್ರಿಯೆ

ವಿವಾಹ ಕಾಯ್ದೆ; ಎಲ್‌ಜಿಬಿಟಿಕ್ಯುಐ ಸಮುದಾಯದ ಬೇಡಿಕೆ ಮತ್ತು ಭಾರತ ಸರ್ಕಾರದ ನಿರಾಶಾದಾಯಕ ಪ್ರತಿಕ್ರಿಯೆ

- Advertisement -
- Advertisement -

ಭಾರತದ ವೈವಿಧ್ಯ ಎಲ್‌ಜಿಬಿಟಿಕ್ಯುಐ ಸಮುದಾಯದ (LGBTQI- Lesbian, Gay, Bisexual, Transgender, Queer, Intersex) 18ಕ್ಕೂ ಹೆಚ್ಚು ದೂರುದಾರರು ಈಗಿರುವ ವಿವಾಹ ಕಾಯಿದೆಗಳು ಅಸಾಂವಿಧಾನಿಕ ಎಂಬ ನೆಲೆಯಲ್ಲಿ ಅವುಗಳನ್ನು ಪ್ರಶ್ನಿಸಿದ್ದಾರೆ. ಈ ವಿಷಯವು ಸುಪ್ರೀಂ ಕೋರ್ಟಿನ ಮೂವರು ಸದಸ್ಯರ ಪೀಠದ ಮುಂದೆ ಬಂದಾಗ, ಮುಖ್ಯ ನ್ಯಾಯಾಧೀಶರಾದ ನ್ಯಾ. ಚಂದ್ರಚೂಡ್ ಅವರು- ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪ್ರಾಮುಖ್ಯತೆ ಪಡೆಯುವುದೆಂದು ಗುರುತಿಸಿ, ಅದನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಒಪ್ಪಿಸಿದರು. ಇದರ ವಿಚಾರಣೆಯು ಏಪ್ರಿಲ್ 18ರಂದು ನಡೆಯಲಿದೆ.

ಹದಿನೆಂಟಕ್ಕೂ ಹೆಚ್ಚು ದೂರುದಾರರಲ್ಲಿ ಎಲ್‌ಜಿಬಿಟಿಕ್ಯುಐ ಸಮುದಾಯದ ಹಲವು ಯುವ ಮನಸ್ಸುಗಳಿದ್ದು, ತಾವು ಪ್ರೀತಿಸುವ ವ್ಯಕ್ತಿಯನ್ನು ನೆಲದ ಕಾನೂನಿಗೆ ಅನುಗುಣವಾಗಿ ಮದುವೆಯಾಗಲು ಬಯಸಿದ್ದಾರೆ.

ಈ ಹೃದಯಪೂರ್ವಕ ಇಚ್ಛೆಯನ್ನು ಪುರುಷ ಸಲಿಂಗಿ ಜೋಡಿಯಾಗಿರುವ (ಗೇ) ಸುಪ್ರಿಯೋ ಚಕ್ರಬೊರ್ತಿ ಮತ್ತು ಅಭಯ್ ಡಾಂಗೆ, ಉತ್ಕರ್ಷ್ ಸಕ್ಸೇನಾ ಮತ್ತು ಅನನ್ಯ ಕೋಟಿಯಾ ಅವರಂತೆಯೇ, ಮಹಿಳಾ ಸಲಿಂಗಿ ಜೋಡಿಗಳಾದ (ಲೆಸ್ಬಿಯನ್) ಕವಿತಾ ಅರೋರಾ ಮತ್ತು ಅಂಕಿತಾ ಖನ್ನಾ, ಅದಿತಿ ಆನಂದ್ ಮತ್ತು ಸುಸಾನ್ ಡಯಾಸ್ ಜೋಡಿಗಳು ಸಲ್ಲಿಸಿದ ಅರ್ಜಿಗಳಲ್ಲಿ ಕಾಣಬಹುದು. ಅರ್ಜಿದಾರರಲ್ಲಿ ಪರಿಚಿತ ಟ್ರಾನ್ಸ್‌ಜೆಂಡರ್ ಕಾರ್ಯಕರ್ತರಾದ ಅಕ್ಕೈ ಪದ್ಮಶಾಲಿ, ಜೈನಾಬ್ ಪಟೇಲ್, ಉಮಾ ಉಮೇಶ್ ಮತ್ತು ವೈಜಯಂತಿ ವಸಂತ ಮೋಗ್ಲಿ; ಗೇ ಕಾರ್ಯಕರ್ತರಾದ ನಿತಿನ್ ಕರಾನಿ ಮತ್ತು ಹರೀಶ್ ಐಯ್ಯರ್; ಕ್ವೀರ್ (ಸ್ಥಾಪಿತ ಲಿಂಗತ್ವದ ಅಥವಾ ಲೈಂಗಿಕತ್ವದ ಗುರುತುಗಳನ್ನು ಒಪ್ಪಿಕೊಳ್ಳದವರು) ಮತ್ತು ಲೆಸ್ಬಿಯನ್ ಕಾರ್ಯಕರ್ತರಾದ ರಿತುಪರ್ಣ ಬೊರಾ, ಚಯನಿಕಾ ಶಾ, ಮಾಯಾ ಶರ್ಮಾ ಮತ್ತು ಮೀನಾಕ್ಷಿ ಸನ್ಯಾಲ್, ಅಂತರ್‌ಲಿಂಗತ್ವ (Intersex, ಗಂಡು ಮತ್ತು ಹೆಣ್ಣಿನ ಜೈವಿಕ ಗುಣಗಳನ್ನು ಹೊಂದಿರುವ ವ್ಯಕ್ತಿ) ಕಾರ್ಯಕರ್ತರಾದ ಗೋಪಿ ಶಂಕರ್ ಎಂ. ಸೇರಿದ್ದಾರೆ.

ಅರ್ಜಿದಾರರು ದೇಶದ ಉದ್ದಗಲದಿಂದ ಬಂದಿದ್ದು, ಎಲ್‌ಜಿಬಿಟಿಕ್ಯುಐ ಸಮುದಾಯದ ಎಲ್ಲಾ ವರ್ಗಗಳಿಗೆ ಸೇರಿರುವುದು, ಅವರ ಅರ್ಜಿಗಳು ಭಾರತದ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಸಾಂಸ್ಥಿಕ ವಿವಾಹವು ಒದಗಿಸುವ ಹಲವಾರು ಲಾಭಗಳಿಂದ ತಮ್ಮನ್ನು ಹೊರತುಪಡಿಸುವ ಹಲವಾರು ಕಾಯಿದೆಗಳನ್ನು ಅರ್ಜಿದಾರರು ಪ್ರಶ್ನಿಸುತ್ತಿದ್ದಾರೆ. ಹನ್ನೊಂದು ಅರ್ಜಿದಾರರು ವಿಶೇಷ ವಿವಾಹ ಕಾಯಿದೆ, ಇಬ್ಬರು ಹಿಂದೂ ವಿವಾಹ ಕಾಯಿದೆ, ಮೂವರು ವಿದೇಶಿ ವಿವಾಹ ಕಾಯಿದೆ ಮತ್ತು ಒಬ್ಬರು ಎಲ್ಲಾ ವಿವಾಹ ಕಾಯಿದೆಗಳನ್ನು ಪ್ರಶ್ನಿಸುತ್ತಿದ್ದಾರೆ. ಮತ್ತೊಬ್ಬರು ಒಂದೇ ಲಿಂಗದ ಜೋಡಿಯನ್ನು ಸಾಗರೋತ್ತರ ಭಾರತೀಯ ನಾಗರಿಕ (ಓಸಿಐ) ಸ್ಥಾನಮಾನಕ್ಕೆ ಅರ್ಜಿ ಹಾಕುವುದರಿಂದ ಹೊರತುಪಡಿಸಿರುವ ಪೌರತ್ವ ಕಾಯಿದೆಯ ಕೇಂದ್ರ ಸರಕಾರದ ವ್ಯಾಖ್ಯಾನವನ್ನು ಪ್ರಶ್ನಿಸಿದ್ದಾರೆ.

ಈ ಎಲ್ಲಾ ಪ್ರಶ್ನೆಗಳ ತಳಪಾಯವಾಗಿರುವುದು ಸಮಾನತೆಯ ತತ್ವಗಳು. ಮದುವೆಯು ನೀಡುವ ಸೌಲಭ್ಯಗಳಿಂದ ಎಲ್‌ಜಿಬಿಟಿಕ್ಯುಐ ಸಮುದಾಯದ ವ್ಯಕ್ತಿಗಳನ್ನು ಹೊರತುಪಡಿಸಲು ಸಾಂವಿಧಾನಿಕವಾಗಿ ಸ್ವೀಕಾರಾರ್ಹವಾದ ಯಾವುದೇ ಆಧಾರಗಳಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಜಂಟಿ ಬ್ಯಾಂಕ್ ಖಾತೆಗಳನ್ನು ತೆರಯುವ, ಜಂಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಹಕ್ಕುಗಳ ಸಹಿತ, ತಮ್ಮ ಲೈಂಗಿಕ ಆಸಕ್ತಿ, ಲಿಂಗತ್ವ ಗುರುತು ಅಥವಾ ಅಸ್ಮಿತೆ ಇತ್ಯಾದಿಗಳ ಆಧಾರದಲ್ಲಿ ತಮ್ಮನ್ನು ಹೊರತುಪಡಿಸಲಾಗಿರುವ ಸೌಲಭ್ಯಗಳ ಸರಣಿಯನ್ನೇ ಅರ್ಜಿದಾರರು ಪಟ್ಟಿ ಮಾಡಿದ್ದಾರೆ. ಇವುಗಳಲ್ಲಿ ವಿಮಾ ಕಾಯಿದೆಯ ಪ್ರಕಾರ ತನ್ನ ಸಂಗಾತಿಯನ್ನು ಫಲಾನುಭವಿಯಾಗಿ ನಾಮನಿರ್ದೇಶನ ಮಾಡುವ ಅಧಿಕಾರ, ತಾವು ಪ್ರೀತಿಸುವ ವ್ಯಕ್ತಿಯ ಪರವಾಗಿ- ಆ ವ್ಯಕ್ತಿ ಸ್ವಂತ ನಿರ್ಧಾರ ಮಾಡಲಾಗದ ಸ್ಥಿತಿಯಲ್ಲಿ ಇದ್ದಾಗ- ವೈದ್ಯಕೀಯ ನಿರ್ಧಾರಗಳನ್ನು ಮಾಡುವ ಅರ್ಜಿದಾರರ ಹಕ್ಕುಗಳು ಕೂಡಾ ಸೇರಿವೆ. ಮದುವೆಯಾದ ದಂಪತಿಗಳಿಗೆ ಸಿಗುವ ಸೌಲಭ್ಯಗಳಿಂದ ಎಲ್‌ಜಿಬಿಟಿಕ್ಯುಐ ಸಮುದಾಯದ ವ್ಯಕ್ತಿಗಳನ್ನು ಹೊರತುಪಡಿಸಿದರೆ ಕಾನೂನುಪ್ರಕಾರ ಸಮಾನವಾಗಿರುವುದು ಸಾಧ್ಯವಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.

ಮದುವೆಯ ಪ್ರಶ್ನೆಯು ತಮ್ಮ ಸ್ವಯಂ ಅಭಿವ್ಯಕ್ತಿಯ ಹಕ್ಕಿಗೆ ತಳಕುಹಾಕಿಕೊಂಡಿದೆ ಎಂದು ಕೂಡಾ ಅರ್ಜಿದಾರರು ಒತ್ತಿಹೇಳಿದ್ದಾರೆ. ಮದುವೆ ಎಂಬುದು ಪ್ರೀತಿಸುವ ಹಕ್ಕನ್ನು ಸಮಾಜವು ಗುರುತಿಸುವ ಒಂದು ವಿಧಾನವಾಗಿದೆ ಮತ್ತು ನ್ಯಾ. ಲೀಲಾ ಸೇಠ್ ಅವರ ಸ್ಫೂರ್ತಿದಾಯಕ ಶಬ್ದಗಳಲ್ಲಿ ಹೇಳುವುದಾದರೆ “ಜೀವನವನ್ನು ಅರ್ಥಪೂರ್ಣಗೊಳಿಸುವುದೇ ಪ್ರೀತಿ”. ಜೀವನದ ಸ್ಮರಣೀಯ ಮತ್ತು ಅರ್ಥಪೂರ್ಣ ನಿರ್ಧಾರಗಳಲ್ಲೊಂದನ್ನು ತೆಗೆದುಕೊಳ್ಳುವುದರಿಂದ ತಮ್ಮನ್ನು ಹೊರಗಿಡುವುದು, ಮನುಷ್ಯರಾಗಿರುವುದೆಂದರೇನು ಎಂಬ ಒಂದು ಮೂಲಭೂತ ಆಯಾಮಕ್ಕೇ ಹೊಡೆತ ನೀಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಇದನ್ನೂ ಓದಿ: ಸಲಿಂಗ ವಿವಾಹ ಮಾನ್ಯತೆಗಾಗಿ ಸುಪ್ರೀಂಕೋರ್ಟ್‌ಗೆ ಪತ್ರ; ಕೇಂದ್ರದ ನಿಲುವಿಗೆ ವಿರೋಧ

ಈ ರೀತಿ ಮದುವೆ ಆಗುವುದಕ್ಕೆ ನಿಷೇಧವಿರುವುದರಿಂದ ಅಪಾಯಕ್ಕೆ ಒಳಗಾಗಿರುವುದೆಂದರೆ ಸಾಂವಿಧಾನಿಕವಾಗಿ ರಕ್ಷಿತವಾದ ಮಾನವೀಯ ಘನತೆಯ ಮೌಲ್ಯ ಎಂದೂ ಅರ್ಜಿದಾರರು ವಾದಿಸಿದ್ದಾರೆ. ಮದುವೆಯು ಒಂದು ಸಂಬಂಧಕ್ಕೆ ಸಾಮಾಜಿಕ ಅಂಗೀಕಾರವನ್ನು ಒದಗಿಸುತ್ತದೆ ಮತ್ತು ಎಲ್‌ಜಿಬಿಟಿಕ್ಯುಐ ಸಂಬಂಧಗಳನ್ನು ಬೇರೆಬೇರೆ ಲಿಂಗ ಸಂಬಂಧದ ಮದುವೆಗಿಂತ ಕೀಳು ಎಂಬ ಕಳಂಕವನ್ನು ತೊಡೆಯಲು ಸಾಧ್ಯವಾಗುತ್ತದೆ ಎಂದೂ ಅರ್ಜಿದಾರರು ವಾದಿಸಿದ್ದಾರೆ.

ಅರ್ಜಿದಾರರ ವಾದಗಳು ಸುಪ್ರೀಂ ಕೋರ್ಟಿನಲ್ಲಿ ಮೂಡಿಬರುತ್ತಿರುವ ನ್ಯಾಯಶಾಸ್ತ್ರೀಯ ವಿವೇಚನೆಯಿಂದ ಬಲವನ್ನು ಪಡೆಯುತ್ತವೆ. ಪುಟ್ಟಸ್ವಾಮಿ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ ತೀರ್ಪು ನೀಡುತ್ತಾ ನ್ಯಾಯಾಲಯವು, “ವಿವಾಹದ ಪಾವಿತ್ರ್ಯತೆ, ಸಂತಾನಾಭಿವೃದ್ಧಿಯ ಸ್ವಾತಂತ್ರ್ಯ, ಕೌಟುಂಬಿಕ ಜೀವನದ ಅಯ್ಕೆ ಮತ್ತು ಜೀವನದ ಘನತೆಯು ’ಪ್ರತಿ ವ್ಯಕ್ತಿಯ’ ಕಾಳಜಿಗಳಾಗಿವೆ… ಸಂತೋಷದ ಅನ್ವೇಷಣೆಯು ಸ್ವಾಯತ್ತತೆ ಮತ್ತು ಘನತೆಯ ಆಧಾರದ ಮೇಲೆ ನಿಂತಿದೆ. ಇವೆರಡೂ ಖಾಸಗಿತನದ ಅತ್ಯಗತ್ಯ ಗುಣಗಳಾಗಿದ್ದು, ವ್ಯಕ್ತಿಗಳ ಹುಟ್ಟಿನ ಗುರುತುಗಳ ನಡುವೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ” ಎಂದು ಹೇಳಿದೆ.

“ನಿರಪರಾಧಿಕರಣಗೊಳಿಸಲು (decriminalization) ಕಾರಣವಾಗಿರುವ ಸಾಂವಿಧಾನಿಕ ತತ್ವಗಳು- ಸಲಿಂಗಿ ಸಂಬಂಧಗಳು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಾರ್ಥಕತೆಯನ್ನು ಕಂಡುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು- ನಿರಂತರವಾಗಿ ಹಕ್ಕುಗಳ ಕುರಿತ ಸಂವಾದದಲ್ಲಿ ತೊಡಗಬೇಕು. ಸಲಿಂಗಿ ಸಂಬಂಧಗಳ ಕುರಿತು ಕಾನೂನು ತಾರತಮ್ಯ ಮಾಡುವಂತಿಲ್ಲ. ಮಾತ್ರವಲ್ಲ, ಅದು ಸಮಾನ ರಕ್ಷಣೆಯನ್ನು ಸಾಧಿಸಲು ಧನಾತ್ಮಕ ಹೆಜ್ಜೆಗಳನ್ನು ಕೂಡಾ ಇಡಬೇಕು” ಎಂದು ’ನವ್‌ತೇಜ್ ಜೋಹರ್ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ನ್ಯಾ. ಚಂದ್ರಚೂಡ್ ಹೇಳಿದ್ದಾರೆ.

’ನಲ್ಸಾ (NALSA) ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ನ್ಯಾಯಾಲಯವು, “ಪರಿಚ್ಛೇದ 14- ’ವ್ಯಕ್ತಿ’ (person) ಎಂಬ ಪದವನ್ನು ಸೀಮಿತಗೊಳಿಸುವುದಿಲ್ಲ. ಅದರ ಅನ್ವಯ ಗಂಡು ಅಥವಾ ಹೆಣ್ಣಿಗೆ ಮಾತ್ರವೇ ಅಲ್ಲ. ಗಂಡು/ಹೆಣ್ಣು ಎರಡೂ ಅಲ್ಲದ ಹಿಜಿಡಾಗಳು/ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ನ್ಯಾಯಾಲಯ ಬಳಸಿದ ಪದಗಳು: Hijras/transgender persons) ಕೂಡಾ- ’ವ್ಯಕ್ತಿ’ ಎಂಬುದರ ಪದವ್ಯಾಖ್ಯೆಯ ಒಳಗೆ ಬರುತ್ತಾರೆ. ಆದುದರಿಂದ ಉದ್ಯೋಗ, ಆರೋಗ್ಯ ರಕ್ಷಣೆ, ಶಿಕ್ಷಣ ಮಾತ್ರವಲ್ಲದೇ, ಸಮಾನ ಸಾಮಾಜಿಕ ಮತ್ತು ಪೌರತ್ವದ ಹಕ್ಕುಗಳೂ ಸೇರಿದಂತೆ, ಸರಕಾರದ ಚಟುವಟಿಕೆಯ ಎಲ್ಲಾ ಕ್ಷೇತ್ರಗಳಲ್ಲೂ- ಈ ದೇಶದ ಯಾವುದೇ ಇತರ ನಾಗರಿಕರು ಅನುಭವಿಸುವ ಕಾನೂನು ರಕ್ಷಣೆಗೆ ಅವರು ಅರ್ಹರಾಗಿದ್ದಾರೆ” ಎಂದು ಹೇಳಿದೆ.

ಸಂವಿಧಾನದ ತತ್ವಗಳನ್ನು ಎಲ್‌ಜಿಬಿಟಿಕ್ಯುಐ ಸಮುದಾಯದ ವ್ಯಕ್ತಿಗಳ ಜೀವನ ಮತ್ತು ಪ್ರೀತಿಗಳಿಗೆ ಅನ್ವಯಿಸುವುದಕ್ಕೆ ಈಗ ಆರಂಭವಾಗಿದ್ದು, ಆ ಮೂಲಕ ಸಂವಿಧಾನದ ಸಮಾನತೆಯ ಭರವಸೆಗಳಿಗೆ ಜೀವ ತುಂಬಲಾಗುತ್ತಿದೆ.

ಸಂವಿಧಾನದ ಪಠ್ಯ ಮತ್ತು ಅದರ ನ್ಯಾಯಾಲಯದ ವ್ಯಾಖ್ಯಾನಗಳಲ್ಲಿ ಕೂಡಾ ಬೇರೂರಿರುವ ಈ ಗಾಢವಾದ ವಿಮೋಚನಕಾರಿ ಬೆಳವಣಿಗೆಗಳಿಗೆ ಭಾರತ ಸರಕಾರದ ಪ್ರತಿಕ್ರಿಯೆಯು ನಿರಾಶಾದಾಯಕವಾಗಿದೆ. ’ದೇಶದ ಸಾಮೂಹಿಕ ವಿವೇಕವನ್ನು ಪ್ರತಿಫಲಿಸುವ ಶಾಸಕಾಂಗವು’, ’ಸಾಂಸ್ಕೃತಿಕ ನಿಯಮಗಳು’ ಮತ್ತು ’ಸಾಮಾಜಿಕ ಗುಣಮಟ್ಟ’ದ ಮೇಲೆ ಆಧರಿತವಾಗಿದೆ ಹಾಗೂ ಅದು ’ಮಾನವ ಸಂಬಂಧಗಳನ್ನು ಅನುಮತಿಸುತ್ತದೆ ಅಥವಾ ನಿಷೇಧಿಸುತ್ತದೆ’ ಎಂದು ಮುಂತಾಗಿ ಭಾರತ ಸರ್ಕಾರ ವಾದಿಸಿದೆ.

’ಸಾಂಸ್ಕೃತಿಕ ನಿಯಮ’ಗಳನ್ನು ಮತ್ತು ’ಸಾಮಾಜಿಕ ಗುಣಮಟ್ಟ’ವನ್ನು ರಕ್ಷಿಸಲು ಶಾಶಕಾಂಗವು ಸನ್ನದ್ಧವಾಗಿದೆ ಎಂಬ ಈ ಅಭಿಪ್ರಾಯವು ಘನ ತಪ್ಪಿನಿಂದ ಕೂಡಿದೆ. ಸದಾ ಬದಲಾಗುವ ಸಾಮಾಜಿಕ ಗುಣಮಟ್ಟ ಅಥವಾ ಸಾಂಸ್ಕೃತಿಕ ನಿಯಮಗಳ ರಕ್ಷಣೆಯು ಶಾಸಕಾಂಗದ ಕೆಲಸವಲ್ಲ. ಇಂಥ ವಾದವು ಹಿಂದೆ ಜಾತಿ ಪದ್ಧತಿ ಮತ್ತು ಸತಿ ಪದ್ಧತಿಯಂತಹ ಪಿಡುಗುಗಳ ಸಮರ್ಥನೆಯಲ್ಲಿ/ರಕ್ಷಣೆಯ ಹಿಂದೆಯೂ ಇತ್ತು. ಆದುದರಿಂದ ತನ್ನ ಈ ನಿಲುವಿನ ಬದಲಾಗಿ ಭಾರತ ಸರಕಾರವು ತನ್ನ ಕಾರ್ಯಗಳನ್ನು ಸಂವಿಧಾನದ ಆಳವಾದ ನೈತಿಕತೆಯ ತಳಹದಿಯಲ್ಲಿ ನಿರ್ವಹಿಸಬೇಕು. ಕೇಂದ್ರ ಮಂತ್ರಿಗಳು (ಸೇರಿದಂತೆ ಶಾಸಕಾಂಗದ ಸದಸ್ಯರು) ಭಾರತೀಯ ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿರುವ ಸಾಂವಿಧಾನಿಕ ಪ್ರಮಾಣ ಸ್ವೀಕರಿಸಿರುತ್ತಾರೆ. ಆದುದರಿಂದ, ಸಂವಿಧಾನದ ಆಶಯಗಳನ್ನು ಅರ್ಥಪೂರ್ಣಗೊಳಿಸುವುದು ಅವರ ಕರ್ತವ್ಯವಾಗಿದೆ. ’ಸಾಮಾಜಿಕ ಗುಣಮಟ್ಟ’ ಮತ್ತು ’ಸಾಂಸ್ಕತಿಕ ನಿಯಮ’ಗಳ ಅಸ್ಪಷ್ಟ ಮತ್ತು ಅಂದಾದುಂದಿ ಕಲ್ಪನೆಗಳ ಆಧಾರದಲ್ಲಿ ಅವರು ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲಾಗದು.

ಬಾಬಾಸಾಹೇಬ್ ಅಂಬೇಡ್ಕರರು ಸಂವಿಧಾನ ರಚನಾ ಸಭೆಯಲ್ಲಿ ವಿವರಿಸಿದಂತೆ: “ಸಾಂವಿಧಾನಿಕ ನೈತಿಕತೆಯು ಒಂದು ಸಹಜ ಭಾವನೆಯಲ್ಲ. ಅದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನಮ್ಮ ಜನರು ಅದನ್ನು ಇನ್ನಷ್ಟೇ ಕಲಿತುಕೊಳ್ಳಬೇಕಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ಪ್ರಜಾಪ್ರಭುತ್ವವು- ಮೂಲಭೂತವಾಗಿ ಅಪ್ರಜಾಸತ್ತಾತ್ಮಕವಾಗಿರುವ ಮಣ್ಣಿನ ಮೇಲ್ಪದರ ಮಾತ್ರವೇ ಆಗಿದೆ.”

ಬಾಬಾಸಾಹೇಬರ ದೃಷ್ಟಿಕೋನದ ಸಾರವೆಂದರೆ, ಭಾರತೀಯ ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸುವ ಅಗತ್ಯವಿದೆ. ಒಂದು ಜಾತಿ ಆಧರಿತ, ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯು- ದಲಿತರು, ಮಹಿಳೆಯರು ಮತ್ತು ಎಲ್‌ಜಿಬಿಟಿಕ್ಯುಐ ಸಮುದಾಯದ ವ್ಯಕ್ತಿಗಳ ಹಕ್ಕುಗಳನ್ನು ಸೀಮಿತಗೊಳಿಸುತ್ತದೆ. ತನ್ನ ಸಾಂವಿಧಾನಿಕ ಕರ್ತವ್ಯಗಳ ಈ ಆಯಾಮವನ್ನೇ ಭಾರತ ಸರಕಾರವು ಅರ್ಥಮಾಡಿಕೊಂಡು ಗೌರವಿಸಲು ವಿಫಲವಾಗಿರುವುದು. ’ಸಹ ನಾಗರಿಕರು’ ತಮ್ಮ ’ಸಾಂವಿಧಾನಿಕ ಹಕ್ಕುಗಳನ್ನು ಸಾಕಾರಗೊಳಿಸುವ ಆಕಾಂಕ್ಷೆ ಹೊಂದಿದ್ದಾರೆ’ ಮತ್ತು ’ಸಮಾಜದ ರೂಪಾಂತರ’ವನ್ನು ಬಯಸುತ್ತಿದ್ದಾರೆ ಎಂಬ ವಾಸ್ತವಕ್ಕೆ ಕುರುಡುಗಣ್ಣಾಗಲು ಕೇಂದ್ರ ಸರಕಾರವು ನಿರ್ಧರಿಸಿದೆ. ’ಸಾಮಾಜಿಕ ಗುಣಮಟ್ಟ’ ಮತ್ತು ’ಸಾಂಸ್ಕೃತಿಕ ನಿಯಮ’ಗಳ ರೂಪಾಂತರ ಅಥವಾ ಬದಲಾವಣೆಯಷ್ಟೇ ಸಂವಿಧಾನವು ತನ್ನೆಲ್ಲಾ ನಾಗರಿಕರ ಪರವಾಗಿ ಮಾತನಾಡಲು ಆರಂಭಿಸುವಂತೆ ಮಾಡಬಲ್ಲದು.

ಇದುವೇ ಏಪ್ರಿಲ್ 18, 2023ರಂದು ಸುಪ್ರೀಂ ಕೋರ್ಟಿನ ಮುಂದೆ ಬರಲಿರುವ ವಿಷಯ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆನ ರಾಜ್ಯಾಧ್ಯಕ್ಷರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...