ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕೊನ್ನೆಕೊಪ್ಪ ಗ್ರಾಮದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಹಿಂದೆ ಆತನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದರಿಂದ ಮನವೊಂದು ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಕೊನ್ನೆಕೊಪ್ಪ ಗ್ರಾಮದ ನಿವಾಸಿ ಮಂಜುನಾಥ್ (28) ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾರೆ. ಜೂನ್ 11ರಂದು ಹೊಳೆಹೊನ್ನೂರಿನಲ್ಲಿ ಪೊಲೀಸ್ ಸಿಬ್ಬಂದಿಗಳು ಆತನ ಮೇಲೆ ಸಾರ್ವಜನಿಕವಾಗಿ ಥಳಿಸಿದ್ದರು. ಇದರಿಂದ ಮನವೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಕುಟುಂಬ ಆರೋಪಿಸಿದೆ.
ಈ ಕುರಿತು ಮಂಜುನಾಥ್ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನ್ನ ಪತಿಯ ಸಾವಿಗೆ ಪೊಲೀಸರೇ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ಜೂನ್ 11ರಂದು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಎದುರು ಮಂಜುನಾಥ್ ನಿಂತಿದ್ದರು. ಈ ವೇಳೆ, ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ, ವಿನಾಕಾರಣ ಮಂಜುನಾಥ್ಗೆ ಥಳಿಸಿ, ಪೊಲೀಸ್ ಠಾಣೆಗೆ ಎಳೆದೊಯ್ದರು. ಅಂದು ಸಂಜೆ ಅವರ ತಮ್ಮ ಹೋಗಿ ಬಿಡಿಸಿಕೊಂಡು ಬಂದರು” ಎಂದು ಮಂಜುನಾಥ್ ಪತ್ನಿ ವಿವರಿಸಿದ್ದಾರೆ.
“ಘಟನೆಯಿಂದ ದಿಗ್ಭ್ರಾಂತನಾಗಿದ್ದ ಮಂಜುನಾಥ್ ಖಿನ್ನತೆಗೆ ಒಳಗಾಗಿದ್ದರು. ಜೂನ್ 15ರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೋಮುದ್ವೇಷದಿಂದ ಸಾವು: ಬಿಜೆಪಿ ಸರ್ಕಾರದಲ್ಲಿ ತಾರತಮ್ಯಕ್ಕೆ ಒಳಗಾಗಿದ್ದ 4 ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ


