ಶಿಕ್ಷಕ ವೃತ್ತಿಗೆ ಆಯ್ಕೆಯಾಗಿ ವರ್ಷ ಕಳೆದರೂ ಸ್ಥಳನಿಯುಕ್ತಿ ಮಾಡದೆ, ಆದೇಶ ಪ್ರತಿ ನೀಡದೆ ಸತಾಯಿಸಲಾಗುತ್ತಿರುವುದನ್ನು ಖಂಡಿಸಿ, ಕೂಡಲೇ ಕೌನ್ಸೆಲಿಂಗ್ ನಡೆಸಿ ಕೆಲಸಕ್ಕೆ ಕಳಿಸಬೇಕೆಂದು ಒತ್ತಾಯಿಸಿ ಸಾವಿರಾರು ಭಾವೀ ಶಿಕ್ಷಕರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ 2022ರ ಮಾರ್ಚ್ನಲ್ಲಿ 15,000 ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆಯಲಾಯಿತು. ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಯಿತು. ನವೆಂಬರ್ನಲ್ಲಿ 1:2 ಮತ್ತು 1:1ರ ಆಧಾರದಲ್ಲಿ 13,353 ಶಿಕ್ಷಕರನ್ನು ಆಯ್ಕೆ ಮಾಡಿ ತಾತ್ಕಾಲಿಕ ಪಟ್ಟಿ ಪ್ರಕಟ ಮಾಡಿಲಾಯಿತು. ಆಯ್ಕೆಯಾದ ಭಾವೀ ಶಿಕ್ಷಕರು ಕೊನೆಗೂ ತಮ್ಮ ಆಸೆ ನೆರವೇರಿತು ಎಂಬ ಸಂಭ್ರಮದಲ್ಲಿದ್ದರು. ಆದರೆ ಪಟ್ಟಿ ಪ್ರಕಟವಾಗಿ 9 ತಿಂಗಳಾಗುತ್ತ ಬಂದರೂ ಅವರಿಗೆ ಇದುವರೆಗೂ ಸ್ಥಳ ನಿಯುಕ್ತಿ ಮತ್ತು ನೇಮಕಾತಿ ಆದೇಶ ಸಿಕ್ಕಿಲ್ಲ ಎಂದು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಅಭ್ಯರ್ಥಿಗಳು ಕಿಡಿಕಾರಿದರು.
ಈ ಹಿಂದೆ ಪೋಷಕರ ಜಾತಿ ಮತ್ತು ಅದಾಯ ಸಲ್ಲಿಸಿದ ವಿವಾಹಿತರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸಿದ್ದನ್ನು ಕೋರ್ಟ್ನಲ್ಲಿ ಪ್ರಶ್ನಿಸಿದರು. ಹಾಗಾಗಿ ಪ್ರಕ್ರಿಯೆಯಲ್ಲಿ ವಿಳಂಬವಾಯಿತು. ಪೋಷಕರ ಜಾತಿ ಮತ್ತು ಅದಾಯ ಪ್ರಮಾಣ ಪತ್ರ ಸಲ್ಲಿಸಿದ ವಿವಾಹಿತರನ್ನು ಮೀಸಲಾತಿಯಲ್ಲಿ ಪರಿಗಣಿಸುವಂತೆ ಹಾಗೂ ಇರುವ ತಾತ್ಕಾಲಿಕ ಪಟ್ಟಿಯನ್ನು ರದ್ದುಪಡಿಸಿ ಹೊಸ ಪಟ್ಟಿ ಬಿಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹಾಗಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಯಿತು. ಆನಂತರ ಮಾರ್ಚ್ 08ರಂದು ಸರ್ಕಾರ ಅಂತಿಮ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೆಲ ಅಭ್ಯರ್ಥಿಗಳನ್ನು ಹೊರ ಹಾಕಲಾಗಿದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್ನಲ್ಲಿ ಪ್ರಶ್ನಿಸಿ ಆಯ್ಕೆ ಪಟ್ಟಿಗೆ ಮತ್ತೆ ತಡೆಯಾಜ್ಞೆ ತಂದಿದ್ದರು. ಆ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದರೂ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪದೇ ಪದೇ ನೇಮಕಾತಿ ಪ್ರಕ್ರಿಯೆ ಮುಂದೆ ಹೋಗುತ್ತಿರುವುದರಿಂದ ಆಕ್ರೋಶಗೊಂಡಿರುವ ಭಾವೀ ಶಿಕ್ಷಕರು ಕಳೆದ ಸರ್ಕಾರದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಆದರೆ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೂಡಲೇ ಸ್ಥಳನಿಯುಕ್ತಿ ಮಾಡಿ ಆದೇಶ ಪ್ರತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸದ್ಯ ಭಾವೀ ಶಿಕ್ಷಕರು ಖಾಸಗಿ ಶಾಲೆಗಳಿಂದ ಹೊರಹಾಕಿಸಿಕೊಂಡಿದ್ದಾರೆ. ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗಿರುವುದರಿಂದ ಈ ವರ್ಷದ ಅಂತ್ಯಕ್ಕೆ ಅವರನ್ನು ಕೆಲಸದಿಂದ ತೆಗೆಯಲಾಗಿದೆ. ಅವರ ದಾಖಲೆ ಪತ್ರಗಳು ಪರಿಶೀಲನೆಗಾಗಿ ಇಲಾಖೆ ಬಳಿ ಇವೆ. ಹೊಸದಾಗಿ ಕೆಲಸಕ್ಕೂ ಸೇರಲೂ ಆಗುತ್ತಿಲ್ಲ. ಇನ್ನೊಂದೆ ಸರ್ಕಾರಿ ಕೆಲಸದ ನೇಮಕಾತಿ ಆದೇಶ ಸಿಗದುದ್ದರಿಂದ ಎರಡು ಕಡೆ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯಬೇಕಾದ, ಜೀವನ ನಿರ್ವಹಣೆಗೆ ಸಾಲದ ಮೇಲೆ ಸಾಲ ಮಾಡಬೇಕಾದ ದುಸ್ಥಿತಿಯಲ್ಲಿದ್ದಾರೆ ಎಂದು ಹಲವು ಅಭ್ಯರ್ಥಿಗಳು ಅಳಲು ತೋಡಿಕೊಂಡರು.
ಇನ್ನೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ. ಅದರಿಂದ ಮಕ್ಕಳ ಶಿಕ್ಷಣ ಕುಂಠಿತಗೊಳ್ಳಲಿದೆ. ಮುಂದೆ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆದರೆ ಮತ್ತೆ ನೀತಿ ಸಂಹಿತೆ ಜಾರಿಯಾಗಿ ಪ್ರಕ್ರಿಯೆ ಮತ್ತಷ್ಟು ತಿಂಗಳು ಮುಂದೆ ಹೋಗುವ ಅಪಾಯವಿದೆ. ಹಾಗಾಗಿ ಕೂಡಲೇ ಆದೇಶ ಪತ್ರ ನೀಡಿ ಆಯ್ಕೆಯಾದವರನ್ನು ಶಿಕ್ಷಕರಾಗಿ ನೇಮಿಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದರು.
ಇದನ್ನೂ ಓದಿ: ಅಲೆಮಾರಿಗಳಿಗೆ ಶಾಶ್ವತ ವಸತಿ ಕಲ್ಪಿಸಲು ಒತ್ತಾಯ: ಬಜೆಟ್ನಲ್ಲಿ ಘೋಷಿಸುವಂತೆ ಮನವಿ