ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷವು ಬಿಜೆಪಿಯ “ಬಿ ಟೀಮ್” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಪರ ಪ್ರಚಾರ ನಡೆಸುವ ವೇಳೆ ಹೇಳಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬಿಆರ್ಎಸ್ ಪಕ್ಷವು ಬಿಜೆಪಿ ರಿಷ್ಟೇದಾರ್ (ಸಂಬಂಧಿ) ಸಮಿತಿ ಇದ್ದಂತೆ ಎಂದು ಖಮ್ಮಂ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಹೇಳಿದರು. ”ಕೆಸಿಆರ್ [ರಾವ್] ಅವರು ರಾಜ ಮತ್ತು ತೆಲಂಗಾಣ ಅವರ ಸಾಮ್ರಾಜ್ಯ ಎಂದು ಭಾವಿಸುತ್ತಾರೆ” ಎಂದು ಹರಿಹಾಯ್ದರು.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಿಆರ್ಎಸ್ ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸಿರುವುದನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ”ಬಿಆರ್ಎಸ್ ಪಕ್ಷವು ಬಿಜೆಪಿಗೆ ಅಧೀನವಾಗಿದೆ” ಎಂದರು.
”ದೆಹಲಿ ಮದ್ಯ ಪ್ರಕರಣದಲ್ಲಿ ಕೆಸಿಆರ್ ಪುತ್ರಿ ಭಾಗಿಯಾಗಿರುವ ಕಾರಣ ಕೆಸಿಆರ್ (ರಾವ್) ಅವರು ನರೇಂದ್ರ ಮೋದಿ ಸರ್ಕಾರದಿಂದ ರಕ್ಷಣೆ ಕೋರುತ್ತಿದ್ದಾರೆ” ಎಂದು ರಾಹುಲ್ ಆರೋಪಿಸಿದ್ದಾರೆ.
”ಮೋದಿ ಈಗ ಬಿಜೆಪಿಯನ್ನು ಬೆಂಬಲಿಸುವಂತೆ ಕೆಸಿಆರ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೆಸಿಆರ್ ಅವರ ರಿಮೋಟ್ ಕಂಟ್ರೋಲ್ ಈಗ ಮೋದಿ ಕೈಯಲ್ಲಿದೆ” ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ”ಭ್ರಷ್ಟ ಮತ್ತು ಬಡವರ ವಿರೋಧಿ ಸರ್ಕಾರದ” ವಿರುದ್ಧ ಚುನಾವಣೆಯಲ್ಲಿ ಹೋರಾಡಿ ಗೆಲುವು ಸಾಧಿಸಿತು. ”ಕರ್ನಾಟಕದಲ್ಲಿ ಬಡವರು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ತುಳಿತಕ್ಕೊಳಗಾದವರ ಬೆಂಬಲದೊಂದಿಗೆ” ಬಿಜೆಪಿಯನ್ನು ಸೋಲಿಸಿದೆವು ಎಂದು ಭಾನುವಾರ ಗಾಂಧಿ ಹೇಳಿದರು.
”ತೆಲಂಗಾಣದಲ್ಲೂ ಅದೇ ರೀತಿಯ ಏನಾದರೂ ಸಂಭವಿಸಲಿದೆ. ಒಂದು ಕಡೆ ರಾಜ್ಯದ ಶ್ರೀಮಂತರು ಮತ್ತು ಶಕ್ತಿಶಾಲಿಗಳು ಮತ್ತು ಇನ್ನೊಂದು ಕಡೆ ನಮ್ಮೊಂದಿಗೆ ಬಡವರು, ಆದಿವಾಸಿಗಳು, ಅಲ್ಪಸಂಖ್ಯಾತರು, ರೈತರು ಮತ್ತು ಸಣ್ಣ ಅಂಗಡಿಯವರು ಇರುತ್ತಾರೆ. ಕರ್ನಾಟಕದಲ್ಲಿ ಏನಾಗಿದೆಯೋ ಅದೇ ತೆಲಂಗಾಣದಲ್ಲೂ ಪುನರಾವರ್ತನೆಯಾಗುತ್ತದೆ” ಎಂದು ರಾಹುಲ್ ಹೇಳಿದರು.
ಕರ್ನಾಟಕ ಚುನಾವಣೆಯಲ್ಲಿ ಸೋತ ನಂತರ ತೆಲಂಗಾಣದಲ್ಲಿ ಬಿಜೆಪಿ ಕೊನೆಗೊಂಡಿದೆ. ತೆಲಂಗಾಣದಲ್ಲಿ ಈಗ ಕಾಂಗ್ರೆಸ್ ಮತ್ತು ಬಿಆರ್ಎಸ್ ನಡುವೆ ಹೋರಾಟ ನಡೆಯುತ್ತಿದೆ. ಕರ್ನಾಟಕದಂತೆಯೇ ತೆಲಂಗಾಣದಲ್ಲೂ ಭ್ರಷ್ಟ ಬಿಆರ್ಎಸ್ ಅನ್ನು ತೆಲಂಗಾಣದ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೋಲಿಸುತ್ತಾರೆ” ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ದ್ವೇಷ, ಹಿಂಸೆಯೆಂಬ ವಿಪತ್ತನ್ನು ಪ್ರೀತಿ ಮತ್ತು ಮಾತುಕತೆ ಮೂಲಕ ಮಾತ್ರ ಎದುರಿಸಬಹುದು: ಮಣಿಪುರ ಭೇಟಿ ಬಳಿಕ ರಾಹುಲ್ ಗಾಂಧಿ