Homeಚಳವಳಿನೈಸರ್ಗಿಕ ಕೃಷಿ ಸಂವಾದ: ಭಾರತದ ಹಸಿವು ನೀಗಿಸಿದ ಶ್ರೇಯ ಕೃಷಿ ವಿವಿಗಳಿಗೂ ಸಲ್ಲಬೇಕು

ನೈಸರ್ಗಿಕ ಕೃಷಿ ಸಂವಾದ: ಭಾರತದ ಹಸಿವು ನೀಗಿಸಿದ ಶ್ರೇಯ ಕೃಷಿ ವಿವಿಗಳಿಗೂ ಸಲ್ಲಬೇಕು

- Advertisement -
- Advertisement -

ಕಳೆದ ವಾರ ‘ನಾನು ಗೌರಿ’ ಪತ್ರಿಕೆಯಲ್ಲಿ ಶೂನ್ಯ ಬಂಡವಾಳ ಕೃಷಿ ಕುರಿತು ಸರಣಿ ಲೇಖನಗಳು ಪ್ರಕಟಗೊಂಡಿದ್ದವು. ಚುಕ್ಕಿ ನಂಜುಂಡಸ್ವಾಮಿ ಅವರು ಶೂನ್ಯ ಬಂಡವಾಳ ಕೃಷಿ ಓಲೈಸುವ ದಿಸೆಯಲ್ಲಿ ಕೃಷಿ ವಿವಿಗಳ ಅಸ್ತಿತ್ವನ್ನು ಪ್ರಶ್ನಿಸಿದ್ದಾರೆ. ಬದಲಾದ ಕೃಷಿ ನೀತಿಯಿಂದ ಶ್ರೀಮಂತ ದೇಶಗಳ ಕೃಷಿ ಉತ್ಪನ್ನಗಳು, ಸಲಕರಣೆಗಳು, ರಾಸಾಯನಿಕಗಳು, ರಸ ಗೊಬ್ಬರಗಳು ಭಾರತಕ್ಕೆ ಬಂದಿದ್ದು, ಇವುಗಳನ್ನು ತಡೆಯಲು ಕೃಷಿ ವಿವಿಗಳಿಗೆ ಹೇಗೆ ಸಾಧ್ಯ? ವಿ.ರಮೇಶ್ ಅವರ ಲೇಖನದ ಸಾರಾಂಶ ಶೂನ್ಯ ಬಂಡವಾಳ ಕೃಷಿಯನ್ನು ಸಂಶೋಧನೆಗೆ ಒಳಪಡಿಸಿ ರೈತರ ಹೊಲಗಳಿಗೆ ವಿಸ್ತರಿಸಬೇಕೆಂಬುದು.

ಚುಕ್ಕಿ ಅವರು ಹೇಳಿದಂತೆ ಕೃಷಿ ವಿವಿಗಳು ಕೇವಲ ಹಸಿರು ಕ್ರಾಂತಿಯನ್ನು ಪ್ರಚಾರ ಪಡಿಸಲಿಲ್ಲ. ಬದಲಿಗೆ ಇಲ್ಲಿನ ಸಮಸ್ಯೆಗಳನ್ನು ಅರಿತು ಅದಕ್ಕೆ ಬೇಕಾದ ಪರಿಹಾರಕ್ಕೆ ಕೈ ಹಾಕಿದರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಇಡೀ ಭಾರತವೇ ಹಸಿವಿನಿಂದ ಸಾಯುತ್ತಿತ್ತು. ಅಮೇರಿಕಾದಂಥ ಅನೇಕ ಮುಂದುವರೆದ ದೇಶಗಳಿಂದ ಆಹಾರವನ್ನು ಆಮದು ಮಾಡಿಕೊಂಡು ಜನತೆಗೆ ಅನ್ನ ಒದಗಿಸುವ ಸಂಕಷ್ಟಗಳಲ್ಲಿ ದೇಶವಿತ್ತು. ಜನರನ್ನು ಹಸಿವಿನಿಂದ ಮುಕ್ತಗೊಳಿಸಲು ಸರ್ಕಾರದ ಮುಂದಿದ್ದ ಆಯ್ಕೆಯೆಂದರೆ ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ಅಭಿವೃದ್ಧಿಗೊಳಿಸಬೇಕಾದದ್ದು. ಅಷ್ಟೊತ್ತಿಗಾಗಲೇ ನಾರ್ಮನ್ ಬೋರ್ಲಾಗ್ ಗೋಧಿಯಲ್ಲಿ ಹೊಸ ತಳಿಗಳನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಪರಿಚಯಿಸಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಾಗಿತ್ತು.

ಇದೇ ದಾರಿಯಲ್ಲಿ ನಡೆದ ಡಾ.ಸ್ವಾಮಿನಾಥನ್ ಭತ್ತ, ಗೋಧಿಗಳಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿಗೊಳಿಸಿ ದೇಶದಲ್ಲಿ ನಡೆದ ಹಸಿರು ಕ್ರಾಂತಿಗೆ ಚಾಲನೆ ಕೊಟ್ಟರು. 1950ರಲ್ಲಿ ಕೇವಲ 50 ಮಿಲಿಯನ್ ಟನ್‍ಗಳಷ್ಟಿದ್ದ ಆಹಾರ ಉತ್ಪಾದನೆ ಇಂದು 270 ಮಿಲಿಯನ್ ಟನ್‍ಗಳಷ್ಟು ಉತ್ಪಾದನೆಯಾಗಿದೆ ಎಂದರೆ ಕುತೂಹಲವೆನ್ನಿಸಬಹುದಲ್ಲವೇ. ಕೃಷಿ ವಿಜ್ಞಾನಿಗಳ ಅವಿರತ ಶ್ರಮ, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಬೇಳೆ ಕ್ರಾಂತಿ ಈ ಎಲ್ಲಾ ಕ್ರಾಂತಿಗಳು ಕೃಷಿ ವಿಜ್ಞಾನಿಗಳು ಅಭಿವೃದ್ಧಿಗೊಳಿಸಿದ ಹೈಬ್ರಿಡ್ ತಳಿಗಳಿಂದ ಸಾಧ್ಯವಾಯಿತು. ಪ್ರಸ್ತುತ ಕೃಷಿಯಲ್ಲಿ ಯಾಂತ್ರಿಕತೆ, ಸಸ್ಯ ಸಂರಕ್ಷಣೆ, ಮಣ್ಣಿನ ಆರೋಗ್ಯ, ಕೋಯ್ಲಿನೋತ್ತರ ಸಂಸ್ಕರಣೆ ಇಂತಹ ವಿವಿಧ ತಾಂತ್ರಿಕತೆಯನ್ನು ರೂಪಿಸಿದ್ದು ಕೃಷಿ ವಿವಿಗಳು.

ಎಂ.ಎಸ್ ಸ್ವಾಮಿನಾಥನ್

ಡಾ. ಲಕ್ಷ್ಮಣ್ಣಯ್ಯನವರು ರಾಗಿಯಲ್ಲಿ ಸಂಪರ್ಕ ಪರಾಗ ಸ್ಪರ್ಶಕ್ರಿಯ ನಡೆಸಿ ಇಂಡಾಫ್ ಸರಣಿ ತಳಿಗಳನ್ನು ಅಭಿವೃದ್ಧಿ ಪಡಿಸಿ ರಾಗಿಯಲ್ಲಿ ಹೊಸ ಕ್ರಾಂತಿಯನ್ನೆ ಮಾಡಿದರು. ರಾಗಿ ಬೆಳೆಯಲ್ಲಿ ಹೈಬ್ರಿಡ್ ತಳಿ ಅಭಿವೃದ್ಧಿಗೊಳಿಸುವುದು ಅಸಾಧ್ಯವೆಂದು ಪ್ರಪಂಚದ ಅನೇಕರು ನಂಬಿದ್ದಾಗ ಈ ವಿಜ್ಞಾನಿ ಚಮತ್ಕಾರವನ್ನೆ ಮಾಡಿದ್ದರು. ಈ ತಳಿಗಳನ್ನು ಇಡೀ ದಕ್ಷಿಣ ಭಾರತದಲ್ಲಿ ಇಂದಿಗೂ ರೈತರು ಬೆಳೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ಹಾಸನ, ಚಾವiರಾಜನಗರ ಮುಂತಾದ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಈ ವಿಜ್ಞಾನಿಯನ್ನು ರಾಗಿ ತಳಿಬ್ರಹ್ಮ ಎಂದೇ ರೈತರು ಪ್ರಶಂಸಿದ್ದಾರೆ.

ರಾಗಿ ಲಕ್ಷ್ಮಣಯ್ಯ

ಪಿ.ಲಂಕೇಶ್‍ರವರು ಲಕ್ಷ್ಮಣಯ್ಯರವರ ಕೊಡುಗೆ ಮೆಚ್ಚಿ ಅವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ಅಂದಿನ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.
ಅನೇಕ ಕೀಟಗಳ ಬಾಧೆಗೆ ಒಳಗಾಗಿದ್ದ ಹತ್ತಿಯಲ್ಲಿ ಬಿಟಿ ಹತ್ತಿ ಅಭಿವೃದ್ಧಿ ಮಾಡಿ ರೈತರಿಗೆ ಕೋಟ್ಯಾಂತರ ರೂಗಳ ಆದಾಯ ತಂದಿದ್ದು ಧಾರವಾಡ ಭಾಗದ ಕೃಷಿ ವಿಜ್ಞಾನಿಗಳು. ಸೂರ್ಯಕಾಂತಿಯಲ್ಲಿ ಡಾ. ಸೀತಾರಾಮ್‍ರವರು ಕೆ.ಬಿ.ಎಸ್.ಹೆಚ್ ಸರಣಿ ತಳಿಗಳನ್ನು ಬಿಡುಗಡೆಗೊಳಿಸಿದ್ದರು. ಕೃಷಿ ತಾಂತ್ರಿಕತೆಯನ್ನು ರೈತರ ಮನೆ ಬಾಗಿಲಿಗೆ ಕೊಂಡೊಯ್ದ ಶ್ರೇಯ ಡಾ.ಆರ್.ದ್ವಾರಕೀನಾಥ್ ಎಂಬ ಮತ್ತೋರ್ವ ವಿಜ್ಞಾನಿಯದ್ದು. ಬತ್ತದಲ್ಲಿ ವಿವಿಧ ಮಣ್ಣಿನ ಗುಣಕ್ಕೆ ತಕ್ಕಂತೆ ತಳಿಗಳನ್ನು ಅಭಿವೃದ್ಧಿಗೊಳಿಸಿರುವುದಲ್ಲದೆ ಅಲ್ಪ ನೀರಿನಲ್ಲಿ ಬೆಳೆಯಬಹುದಾದ Aerobic ಬತ್ತದ ತಳಿಗಳನ್ನು ಕಾಣಬಹುದಾಗಿದೆ.

ಕಬ್ಬು ಬೆಳೆಯಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿಗೊಳಿಸಿ ಹೆಚ್ಚೆಚ್ಚು ಸಕ್ಕರೆ ಉತ್ಪಾದನೆಗೆ ನಾಂದಿಯಾಗಿದೆ. ಕಾಳುಗಳಲ್ಲಿಯೂ ಹೊಸ ಕ್ರಾಂತಿಯೇ ಮೊಳಗಿದೆ. ತೆಂಗು, ಅಡಿಕೆ, ಬಾಳೆ, ಮಾವು, ಹಲಸು ಇತರೆ ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿಯೂ ಅತ್ಯುತ್ತಮ ತಳಿಗಳನ್ನು ಕೃಷಿ ವಿವಿಗಳು ಬಿಡುಗಡೆ ಮಾಡಿವೆ. ವಾರಕ್ಕೆ ಎರಡು ಬಾರಿ ಹವಾಮಾನ ಆಧಾರಿತ ಕೃಷಿ ಮಾಹಿತಿಯನ್ನು ಟಿ.ವಿ, ರೇಡಿಯೋ, ಎಸ್.ಎಂ.ಎಸ್, ದಿನಪತ್ರಿಕೆಗಳ ಮೂಲಕ ರೈತರಿಗೆ ಒದಗಿಸಿ ಹವಾಮಾನಕ್ಕನುಗುಣವಾದ ಕೃಷಿ ಕ್ರಮಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿವೆ.

ಮೂಡಿಗೆರೆಯ ಸಸ್ಯ ಕಾಶಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ತಾಣಕ್ಕೆ ಹೊಂದಿಕೊಂಡಂತಿದ್ದ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಅಲ್ಲಿ ನಡೆಯುತ್ತಿದ್ದ ಕೃಷಿ ಸಂಶೋಧನೆಗೆ ಸದಾ ತಮ್ಮ ಕಿವಿ ಕಣ್ಣು ತೆರೆದು ಸ್ವಾಗತಿಸುತ್ತಿದ್ದರು. ಡಾ. ಬೆಳವಾಡಿ, ಡಾ.ಚಂದ್ರಶೇಖರ್, ಡಾ.ಚಕ್ರವರ್ತಿ ಮುಂತಾದ ಕೃಷಿ ವಿಜ್ಞಾನಿಗಳಿಗೆ ತೇಜಸ್ವಿವೇ ಗುರುಗಳು. ಒಬ್ಬ ಕೀಟಶಾಸ್ತ್ರಜ್ಞನ ಮೇಲೆಯೆ ಕರ್ವಾಲೋ ಕೃತಿ ರಚಿಸಿದ್ದು, ಹಾರುವ ಓತಿಯನ್ನು ನಾಡಿಗೆ ಪರಿಚಯಿಸಿದ್ದು ತೇಜಸ್ವಿ ಎಂಬ ಚಿಂತಕನಿಗೆ ಕೃಷಿ ವಿಜ್ಞಾನಿ ಮೇಲಿದ್ದ ಗೌರವವೇ ಸರಿ.

ಅಂದು ಹಸಿರುಕ್ರಾಂತಿ ನಡೆದ ಕಾಲದಲ್ಲಿ ಶ್ರೀ ಬಾಬು ಜಗಜೀವನರಾಮ ಕೃಷಿ ಸಚಿವರಾಗಿ ಉದಾತ್ತ ಕೊಡುಗೆ ನೀಡಿ ಕೃಷಿ ವಿವಿಗಳ ಸ್ಥಾಪನೆ ಮತ್ತು ಕೃಷಿ ನೀತಿಗಳಿಗೆ ಉತ್ತೇಜನ ನೀಡಿದ್ದರು. ಆದರೆ ಇಂದು ಅಂತಹ ಸಹಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕಾಣುತ್ತಿಲ್ಲ. ಇಂದಿರಾ ಗಾಂಧಿ, ಚರಣ್ ಸಿಂಗ್, ಲಾಲ್ ಬಹದೂರ್ ಶಾಸ್ತ್ರಿ ಮುಂತಾದ ರಾಜಕಾರಣಿಗಳಿಗಿದ್ದ ಕೃಷಿ ಬಗೆಗಿನ ಆಸಕ್ತಿ ಮತ್ತು ಬದ್ಧತೆ ಇಂದಿನ ತಲೆಮಾರಿನ ರಾಜಕಾರಣಿಗಳಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ.

ರಾಜ್ಯದಲ್ಲಿ ಉತ್ತರ ಮತ್ತು ದಕ್ಷಿಣಕ್ಕೆ ಸೀಮಿತ ಎಂಬಂತೆ ಧಾರವಾಡ ಮತ್ತು ಬೆಂಗಳೂರು ಕೃಷಿ ವಿವಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು, ಆದರೆ 2004ರಿಂದೀಚೆಗೆ 6 ವಿವಿಗಳು ತಲೆ ಎತ್ತಿವೆ. ಕೃಷಿಯಿಂದ, ಪಶು ಮತ್ತು ತೋಟಗಾರಿಕಾ ವಿಜ್ಞಾನಗಳನ್ನು ಬೇರ್ಪಡಿಸಿ ಪ್ರತ್ಯೇಕ ವಿವಿಗಳನ್ನು ಮಾಡುವ ಜರೂರೇನಿತ್ತು? ದೂರದ ಊರಿನಿಂದ ಬರುವ ರೈತ ತನ್ನ ಬೆಳೆ ಸಮಸ್ಯೆ ನಿವಾರಿಸಿಕೊಳ್ಳಲು ಕೃಷಿ ವಿವಿಗೆ ಭೇಟಿ ನೀಡಿ ನಂತರ ತನ್ನ ತೋಟದ ಸಮಸ್ಯೆಗೆ ತೋಟಗಾರಿಕೆ ವಿವಿ ಹಾಗೂ ಜಾನುವಾರುಗಳ ಬಗೆಗೆ ಪಶು ವಿಜ್ಞಾನ ವಿವಿಗೆ ಅಲೆದಾಡುವ ಸ್ಥಿತಿ ತಂದಿದ್ದು ಇದೇ ಸರ್ಕಾರಗಳಲ್ಲದೆ ಮತ್ತ್ಯಾರೂ? ವಿವಿಗಳು ಹೆಚ್ಚಾದಂತೆ ತನ್ನ ನಿಷ್ಠಾವಂತ ಪ್ರಾಧ್ಯಾಪಕರನ್ನು ಹೊಸ ವಿವಿಯ ಕುಲಪತಿ ಅಥವಾ ಕುಲಸಚಿವರು ಅಥವಾ ಡೀನ್‍ಗಳನ್ನಾಗಿ ನೇಮಿಸಬಹುದೆಂಬ ಜನಪ್ರತಿನಿಧಿಗಳ ಒಳಮರ್ಮ ಎಲ್ಲರಿಗೂ ತಿಳಿದಿದೆ.

ಇಂದು ಕೃಷಿ ಇಲಾಖೆಗಳಲ್ಲಿ ಕೃಷಿ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆಗಳು ಕೇವಲ ಬೀಜ ಮತ್ತು ಗೊಬ್ಬರಗಳನ್ನು ವಿತರಿಸುವ ಕೇಂದ್ರಗಳಾಗಿವೆ. ಅಲ್ಲಿ ಸರಿಯಾಗಿ ನೇಮಕಾತಿ ಸಾಧ್ಯವಾಗದೆ, ಸಿಬ್ಬಂದಿ ಕೊರತೆಯಿಂದ ಹೊಲ ಗದ್ದೆಗಳಿಗೆ ಹೋಗಿ ರೈತರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿಲ್ಲ.

ಕೇಂದ್ರ ಸರ್ಕಾರದ ಉದ್ದೇಶಿತ ಭೂ ಮಸೂದೆ 2014 ಕಾಯ್ದೆಯಾಗಿ ಜಾರಿಯಾದರೆ ರೈತರ ಆತ್ಮಹತ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗೇ ಬಿ.ಟಿ. ತರಕಾರಿ ಮತ್ತಿತರ ಬೆಳೆಗಳಿಗೆ ಸಂಶೋಧನೆಗೆ ಕೋಟ್ಯಾಂತರ ದುಡ್ಡು ಖರ್ಚು ಮಾಡುವ ಸರ್ಕಾರವು ಅವುಗಳನ್ನು ಬಿಡುಗಡೆಗೊಳಿಸುವಾಗ ಮೀನಾಮೇಷ ಏಣಿಸಿ ಸುಮ್ಮನೆ ಕೂರುತ್ತದೆ. ಆದರೂ ಸಂಶೋಧನೆಗೆ ಹಣ ಬಿಡುಗಡೆ ಮಾಡುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟವಲ್ಲವೆ? ಹಿಂದೆ ಕೃಷಿ ವಿವಿಗಳಲ್ಲಿ ಸಹಾಯಕ ಸಂಶೋಧಕ, ವಿಸ್ತರಣ ಮಾರ್ಗದರ್ಶಕ, ಗ್ರಾಮ ಸೇವಕ, ಕ್ಷೇತ ರಕ್ಷಕಗಳೆಂಬ ಖಾಯಂ ಅಥವಾ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು. ಇವರ ಮುಖ್ಯ ಕೆಲಸವೆಂದರೆ ಕೃಷಿ ವಿವಿ ಮತ್ತು ರೈತ ಸಮುದಾಯದವರ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದರು, ಇದರಿಂದ ಪ್ರಯೋಗಾಲಯದಲ್ಲಿ ನಡೆಯುವ ಸಂಶೋಧನೆಗಳೂ ತ್ವರಿತವಾಗಿ ರೈತರ ಹೊಲಗಳಿಗೆ ತಲುಪುತಿದ್ದವು. ದಶಕಗಳ ಹಿಂದೆಯೆ ಈ ಹುದ್ದೆಗಳನ್ನು ಸರ್ಕಾರವು ಅನೂರ್ಜಿತಗೊಳಿಸಿಬಿಟ್ಟಿತ್ತು. ಇದರಿಂದ ಸಂಪರ್ಕದ ಕೊಂಡಿಯೇ ಕಳಚಿ ಬಿದ್ದಿತು.

ಕೃಷಿ ವಿವಿಗಳು ರೈತರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಬೋಧನೆ, ವಿಸ್ತರಣೆ, ಸಂಶೋಧನೆಗಳ ಮೂಲಕ ಕೃಷಿ ಬಿಕ್ಕಟ್ಟುಗಳನ್ನು ಬಗೆಹರಿಸುವ ದಾರಿಯಲ್ಲಿ ನಡೆಯುತ್ತಿವೆ. ಕೃಷಿ ಸಂಶೋಧನ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರಗಳು ಜಿಲ್ಲೆಗೊಂದು ತೆರೆದು ಸ್ಥಳೀಯ ರೈತರ ಸಬಲೀಕರಣದಲ್ಲಿ ತೊಡಗಿವೆ. ದಿನ ನಿತ್ಯ ನೂರಾರು ರೈತರು ಈ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನು ವಿಜ್ಞಾನಿಗಳ ಬಳಿ ಹಂಚಿಕೊಳ್ಳುತ್ತಿದ್ದಾರೆ. ವರ್ಷಕ್ಕೊಮ್ಮೆ ಕೃಷಿ ಮೇಳಗಳ ಮೂಲಕ ಲಕ್ಷಾಂತರ ರೈತರಿಗೆ ಹೊಸ ಕೃಷಿ ತಾಂತ್ರಿಕತೆಗಳನ್ನು ಪರಿಚಯಿಸಲಾಗುತ್ತಿದೆ. ರೈತರ ಸಂವಾದ, ಸಮ್ಮೇಳನಗಳು ಆಯೋಜನೆಯಲ್ಲಿ ಕೃಷಿ ಬಿಕ್ಕಟ್ಟುಗಳಿಗೆ ಉತ್ತರ ಹುಡುಕುವ ಸೇವೆಯಲ್ಲಿದೆ ಕೃಷಿ ವಿವಿಗಳು. ಕೃಷಿ ವಿವಿಗಳು, ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನಿಗಳು ರೈತರ ಏಳಿಗೆಗೆ ದುಡಿಯುತ್ತಿವೆ.

ಪ್ರಸ್ತುತ ಕೃಷಿ ವಿವಿಗಳ ಮುಂದೆ ಅನೇಕ ಸವಾಲುಗಳಿವೆ. ಇವುಗಳನ್ನು ಮೆಟ್ಟಿ ನಿಲ್ಲಲು ರೈತ ಸಂಘಟನೆಗಳು ನಮ್ಮ ಜೊತೆ ನಿಲ್ಲಬೇಕಿದೆ. ಕೃಷಿ ವಿವಿಗಳ ಜೊತೆ ಎಲ್ಲರೂ ಕೈ ಜೋಡಿಸಿ ಸರ್ಕಾರದಿಂದ ಮತ್ತಷ್ಟು ಸಹಕಾರವನ್ನು ಕೃಷಿ ವಿವಿಗಳಿಗೆ ದೊರಕಿಸಿಕೊಟ್ಟರೆ ರೈತರ ಬದುಕು ಹಸನಾಗಿಸುವ ವಿಜ್ಞಾನಿಗಳ ಧ್ಯೇಯ ಈಡೇರಿಕೆಯಾಗುವುದು.

  • ಡಾ.ಕೆ.ಟಿ. ವಿಜಯಕುಮಾರ್
    ಸಹಾಯಕ ಪ್ರಾಧ್ಯಾಪಕರು
    ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...