ಪ್ರಶ್ನೆ ಕೇಳಲು ಹಣ ಪಡೆದ ಆರೋಪ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲು ಶಿಫಾರಸು ಮಾಡಿದ ವರದಿಯನ್ನು ಗುರುವಾರ ಅಂಗೀಕಾರಿಸಿದೆ. ಈ ನೀತಿ ಸಮಿತಿಯ ವರದಿಯ ವಿರುದ್ಧ ವಿರೋಧ ಪಕ್ಷದ ಸಂಸದರು ಭಿನ್ನ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಸಭೆಯ ನೈತಿಕ ಸಮಿತಿ, ಮಹುವಾ ಲೋಕಸಭೆ ಸದಸ್ಯತ್ವ ರದ್ದು ಮಾಡುವಂತೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಮಿತಿಯು ಸಭೆ ಸೇರಿ, ತನ್ನ ವರದಿಯನ್ನು ಅಂಗೀಕರಿಸಿ ಮಹುವಾರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡಿದೆ ಎಂದು ವರದಿಗಳು ತಿಳಿಸಿವೆ.
ಮೊಯಿತ್ರಾ ನಡೆ ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ, ದೋಷಪೂರಿತ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಮುಂದಿನ ಕ್ರಮಕ್ಕಾಗಿ ವರದಿಯನ್ನು ಈಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನೈತಿಕ ಸಮಿತಿಯ ಒಟ್ಟು 10 ಮಂದಿಯಲ್ಲಿ ಆರು ಸದಸ್ಯರು ವರದಿಯನ್ನು ಅಂಗೀಕರಿಸುವುದನ್ನು ಬೆಂಬಲಿಸಿದ್ದಾರೆ ಮತ್ತು ಉಳಿದ ನಾಲ್ವರು ಅದನ್ನು ವಿರೋಧಿಸಿದ್ದಾರೆ.
ಈ ಸಭೆಯ ನಂತರ ನಾಲ್ವರು ವಿರೋಧ ಪಕ್ಷದ ಸದಸ್ಯರು ಸಮಿತಿಯ ಶಿಫಾರಸು ‘ಪೂರ್ವಾಗ್ರಹ ಪೀಡಿತ’ ಮತ್ತು ‘ತಪ್ಪು’ ಎಂದು ಹೇಳಿದ್ದಾರೆ. ಸಮಿತಿ ನಿರ್ಧಾರದಲ್ಲಿ ಯಾವುದೇ ನೀತಿ ಇಲ್ಲ. ಎಲ್ಲವೂ ಸೇಡಿನ ರಾಜಕೀಯವಾಗಿದೆ ಎಂದೂ ಅವರು ಹೇಳಿದ್ದಾರೆ.
”ತನಿಖಾ ಪ್ರಕ್ರಿಯೆಯು ಕೇವಲ ಒಂದು ಪ್ರಹಸನ. ಇದು ಕಾಂಗರೂ ನ್ಯಾಯಾಲಯ” ಎಂದು ವಿರೋಧ ಪಕ್ಷಗಳ ಸಂಸದರು ತಮ್ಮಭಿನ್ನಾಭಿಪ್ರಾಯ ಟಿಪ್ಪಣಿಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
”ಸಂಸದರ ವಿರುದ್ಧ ದ್ವೇಷದಿಂದ ಇಬ್ಬರು ವ್ಯಕ್ತಿಗಳು ಸಲ್ಲಿಸಿದ ದೂರಿಗೆ ಯಾವುದೇ ಕಿಮ್ಮತ್ತು ಇಲ್ಲ, ಅದು ಆಧಾರರಹಿತ. ಮಹಿಳಾ ಸಂಸದೆಯ ಮಾನಹಾನಿ ಮಾಡಲು ಇದನ್ನು ಬಳಸಲಾಗುತ್ತಿದೆ” ಎಂದು ಸಂಸದರು ಹೇಳಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ಸಂಸದರಾದ ಪಿ.ಆರ್. ನಟರಾಜನ್ (ಸಿಪಿಐಎಂ), ಡ್ಯಾನಿಶ್ ಅಲಿ(ಬಿಎಸ್ಪಿ), ವಿ ವೈತಿಲಿಂಗಂ (ಕಾಂಗ್ರೆಸ್) ಮತ್ತು ಗಿರ್ಧಾರಿ ಯಾದವ್(ಜೆಡಿಯು) ತಮ್ಮ ಭಿನ್ನಾಭಿಪ್ರಾಯವನ್ನು ವೈಯಕ್ತಿಕವಾಗಿ ಸಲ್ಲಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆಲಂಗಾಣದಲ್ಲಿ ಇದ್ದುದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗದ ರೆಡ್ಡಿ ಅವರು ತಮ್ಮ ಅಸಮ್ಮತಿ ಪತ್ರವನ್ನು ಇಮೇಲ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಪಕ್ಷದ ಸಂಸದರ ಟಿಪ್ಪಣಿಗಳಲ್ಲಿ ತಮ್ಮ ಬಲವಾದ ಭಿನ್ನಾಭಿಪ್ರಾಯವನ್ನು ವರದಿ ಮಾತ್ರವಲ್ಲದೆ ಸಮಿತಿಯ ಸಂಪೂರ್ಣ ಕಾನೂನುಬಾಹಿರ ನಡವಳಿಕೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ತಿಳಿಸಿದ್ದಾರೆ.
ಪ್ರತಿಪಕ್ಷದ ಸದಸ್ಯರಲ್ಲಿ ಒಬ್ಬರು, ಸಮಿತಿಯ ನಿರ್ಣಯಗಳು ಆತುರ ಮತ್ತು ಕಾನೂನು ಬಾಹಿರವಾಗಿದೆ ಎಂದಿದ್ದಾರೆ.
”ನೀತಿ ಸಮಿತಿಗೆ ನೀಡಿದ ದೂರು ಸುಳ್ಳು, ಕ್ಷುಲ್ಲಕ, ವಿಷಾದಕರವಾಗಿರಬಾರದು. ಇದು ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಬೇರೆ ಎಲ್ಲ ರೀತಿಯ ಕಿರುಕುಳಕ್ಕೆ ಸಂಸದರನ್ನು ಉಚ್ಚಾಟಿಸಲು ಕೋರಲಾಗುತ್ತದೆ” ಎಂದು ಸಂಸದರ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನೈತಿಕ ಸಮಿತಿಯ ಕರಡು ಗೌಪ್ಯ ವರದಿ NDTVಯಿಂದ ಸೋರಿಕೆ: ಸ್ಪೀಕರ್ಗೆ ಮೊಯಿತ್ರಾ ಪತ್ರ