ನಿಜವಾದ ವಿದ್ಯಾದೇವತೆ ಸರಸ್ವತಿ ಅಲ್ಲ. ಸಾವಿತ್ರಿಭಾಯಿ ಫುಲೆ ಎಂದು ವಾದಿಸಿದ ರಾಜಸ್ಥಾನದ ಸರ್ಕಾರಿ ಶಾಲೆಯ ದಲಿತ ಶಿಕ್ಷಕಿಯೊಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆ ವೇಳೆ ರಾಜಸ್ಥಾನದ ನಹರ್ಗಢದ ಲಕ್ಡಾಯಿ ಸರ್ಕಾರಿ ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡುವಂತೆ ಗುಂಪೊಂದು ಆಗ್ರಹಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಶಿಕ್ಷಕಿ ಹೇಮಲತಾ ಬಿರ್ವಾ, “ಮಕ್ಕಳ ವಿದ್ಯಾದೇವಿ ಸಾವಿತ್ರಿಭಾಯಿ ಫುಲೆಯೇ ಹೊರತು ಸರಸ್ವತಿ ಅಲ್ಲ” ಎಂದಿದ್ದರು. ಇದನ್ನು ವಿರೋಧಿಸಿದ ಗುಂಪನ್ನು ಧೈರ್ಯವಾಗಿ ಎದುರಿಸಿದ ಶಿಕ್ಷಕಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದರು.
एक सावित्री चली गई, करोड़ो सावित्री बाई बना गई।🔥pic.twitter.com/FLTGlBAhkH
— Tribal Army (@TribalArmy) January 27, 2024
ಶಿಕ್ಷಕಿ ಹೇಮಲತಾ ಅವರ ವಿಡಿಯೋ ವೈರಲ್ ಅಗಿ ಹಲವು ದಲಿತ ಮತ್ತು ಹಿಂದುಳಿದ ಸಮುದಾಯಗಳ ಸಂಘಟನೆಗಳು ಅಕೆಗೆ ಬೆಂಬಲ ವ್ಯಕ್ತಪಡಿಸಿದ್ದವು. ಬಲಪಂಥೀಯ ಸಂಘಟನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕಿಯ ನಡೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಪಾದಿಸಿದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ, ಶಾಲೆಯಲ್ಲಿ ಗಣರಾಜ್ಯೋತ್ಸವದಂದು ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿಯ ಪೋಟೋಗಳನ್ನು ವೇದಿಕೆಯಲ್ಲಿ ಇರಿಸಲಾಗಿತ್ತು. ಇದರ ಜೊತೆ ಸರಸ್ವತಿ ಫೋಟೋ ಕೂಡ ಇಡುವಂತೆ ಇಬ್ಬರು ಶಿಕ್ಷಕರು ಬಲವಂತಪಡಿಸಿದ್ದರು. ಆದರೆ, ಇದಕ್ಕೆ ಹೇಮಲತಾ ನಿರಾಕರಿಸಿದ್ದರು. ಕೆಲ ಗ್ರಾಮಸ್ಥರನ್ನು ಗುಂಪು ಸೇರಿಸಿದ ಆ ಶಿಕ್ಷಕರು ಹೇಮಲತಾ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದರು ಎನ್ನಲಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗಿತ್ತು.
ಶಿಕ್ಷಕಿಯ ನಡೆಯಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸ್ಥಳೀಯ ಬಲಪಂಥೀಯ ಗುಂಪು ದೂರು ದಾಖಲಿಸಿದೆ. ಈ ದೂರು ಆಧರಿಸಿ ಶಿಕ್ಷಕಿ ಹೇಮಲತಾ ಮೇಲೆ ಎಫ್ಐಆರ್ ದಾಖಲಾಗಿದೆ. ಇತ್ತ ಶಿಕ್ಷಕಿ ಕೂಡ ಪ್ರತಿದೂರು ನೀಡಿದ್ದು, ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ನನಗೆ ಗ್ರಾಮಸ್ಥರು ಕಿರುಕುಳ ನೀಡಿದ್ದಾರೆ. ಜಾತಿ ಆಧಾರಿತ ತಾರತಮ್ಯ ಮಾಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಜಾತಿ ಸೂಚಕಗಳನ್ನು ಬಳಸಿ ನಿಂದಿಸಿ ನನ್ನ ಉದ್ಯೋಗ ಭದ್ರತೆಗೆ ಬೆದರಿಕೆ ಹಾಕಿದ್ದಾರೆ. ಶಿಕ್ಷಕರ ಮೂಲಭೂತ ಹಕ್ಕಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಯಾವುದೇ ಶಿಕ್ಷೆಯಾಗಿಲ್ಲ, ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶರ್ಜೀಲ್ ಇಮಾಂ


