Homeಕರ್ನಾಟಕ'ಕಾಂಗ್ರೆಸ್ ನಾಯಕರದ್ದು ಸಂಕುಚಿತ ಮನೋಭಾವ..'; ಕೇಸರಿ ಶಾಲು ಧರಿಸಿದ್ದನ್ನು ಸಮರ್ಥಿಸಿಕೊಂಡ ಎಚ್‌ಡಿಕೆ

‘ಕಾಂಗ್ರೆಸ್ ನಾಯಕರದ್ದು ಸಂಕುಚಿತ ಮನೋಭಾವ..’; ಕೇಸರಿ ಶಾಲು ಧರಿಸಿದ್ದನ್ನು ಸಮರ್ಥಿಸಿಕೊಂಡ ಎಚ್‌ಡಿಕೆ

- Advertisement -
- Advertisement -

ಕೆರಗೋಡು ಹನುಮಧ್ವಜ ಹೋರಾಟದಲ್ಲಿ ಸೋಮವಾರ ಪಾಲ್ಗೊಂಡಿದ್ದ ಜಾತ್ಯತೀತ ಜನತಾದಳ (ಜೆಡಿಎಸ್) ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ತಾವು ಕೇಸರಿ ಶಾಲು ಧರಿಸಿದ್ದನ್ನು ಸಮರ್ಥಿಸಿಕೊಂಡಿರುವ ‘ಜಾತ್ಯತೀತ’ ಪಕ್ಷದ ನಾಯಕ, ‘ಕಾಂಗ್ರೆಸ್ ನಾಯಕರದ್ದು ಸಂಕುಚಿತ ಮನೋಭಾವ..’ ಎಂದು ಟೀಕಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಪಕ್ಷದ ನಾಯಕರ, ಕಾರ್ಯಕರ್ತರ ದುಡಿಮೆಯನ್ನು ನಾನು ಕೇಸರಿ ಶಾಲು ಹಾಕಿಕೊಂಡು ಬಿಜೆಪಿಗೆ ಒಪ್ಪಿಸಿಬಿಟ್ಟಿದ್ದೇನೆ ಎಂದು ಸಚಿವರು ಟೀಕೆ ಮಾಡಿದ್ದಾರೆ. ಕೇಸರಿ ಶಾಲು ಅಷ್ಟೇ ಅಲ್ಲ, ದಲಿತ ಸಮಾವೇಶಗಳಿಗೆ ಹೋದಾಗ ನೀಲಿ ಶಾಲನ್ನು ಹಾಕಿಕೊಂಡಿದ್ದೇನೆ. ರೈತರ ಸಮಾವೇಶಕ್ಕೆ ಹೋದಾಗ ಹಸಿರು ಶಾಲು ಹಾಕಿದ್ದೇನೆ. ನಾನು ಮಂಡ್ಯದಲ್ಲಿ ಕೇಸರಿ ಶಾಲು ಹಾಕಿದ್ದೆ ಸರಿ, ನನ್ನ ಉಡುಪು ಬಿಳಿ, ನಮ್ಮ ಪಕ್ಷದ ಬಣ್ಣ ಹಸಿರು. ಆದರೆ, ಕೇಸರಿ ಬಗ್ಗೆ ಮಾತ್ರ ಕಾಂಗ್ರೆಸ್ ನಾಯಕರಿಗೆ ಸಂಕುಚಿತ ಮನೋಭಾವ ಇದೆ’ ಎಂದು ಟೀಕಾಪ್ರಹಾರ ನಡೆಸಿದರು.

‘ಕಾಂಗ್ರೆಸ್‌ನವರು ತಿರಂಗದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ತಿರಂಗದಲ್ಲಿ ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳಿವೆ. ಕೇಸರಿ ಇಲ್ಲದೆ ತಿರಂಗವನ್ನು ನಾವು ಊಹೆ ಮಾಡಿಕೊಳ್ಳಲು ಆಗುತ್ತದೆಯೇ? ಕಾಂಗ್ರೆಸ್ ಕೇಸರಿ ನೆಪದಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು ಬಂದು ಮಂಡ್ಯದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ ಎಂದು ಹೇಳಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು; ‘ಅತಿ ವಿನಯಂ ದೂರ್ತ ಲಕ್ಷಣಂ’ ಎಂಬ ಮನೋಭಾವನೆಯ ವ್ಯಕ್ತಿ ಅವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ. ಸರ್ಕಾರ ಮಾಡಿರುವ ತಪ್ಪುಗಳನ್ನು ಜನರಿಗೆ ತಿಳಿಸಲು ಹೋಗಿದ್ದೆ. ಗಣರಾಜ್ಯದ ದಿನ ಕೆರಗೋಡುನಲ್ಲಿ ಜನವರಿ 26ರಂದು ಗ್ರಾಮಸ್ಥರು ತ್ರಿವರ್ಣ ದ್ವಜ ಹಾರಿಸಿ ಸಂಜೆ ಅದನ್ನು ಇಳಿಸಿದ್ದಾರೆ. ಆ ಗ್ರಾಮದ ಸರ್ಕಾರಿ ಕಾರ್ಯಕ್ರಮಕ್ಕೆ ಸ್ಥಳಿಯ ಶಾಸಕರನ್ನು ಆಹ್ವಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ಇದೆಲ್ಲಾ ಶುರು ಮಾಡಿಕೊಂಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಸಚಿವರು ಮಾತನಾಡಿದ್ದನ್ನು ನೋಡಿದೆ. ಅವರ ನಯ ವಿನಯ ನಾಜೂಕುತನವನ್ನು ಗಮನಿಸಿದೆ. ‘ಅತಿ ವಿನಯಂ ದೂರ್ತ ಲಕ್ಷಣಂ’ ಎಂಬಂತೆ ಇತ್ತು ಅವರ ಹಾವಭಾವ’ ಎಂದು ಲೇವಡಿ ಮಾಡಿದರು.

‘ನಮ್ಮ ಹಳೆಯ ಸ್ನೇಹಿತರು ಕೆಲವು ಸಲಹೆಗಳನ್ನು ಕೊಟ್ಡಿದ್ದಾರೆ. ಮಂಡ್ಯ ಜಿಲ್ಲೆ ಹಾಳು ಮಾಡಲು ನಾನು ಮಂಡ್ಯಕ್ಕೆ ಹೊಗಿದ್ದೆ ಅಂದಿದ್ದಾರೆ. ಮಂಡ್ಯದ ಘಟನೆಗೂ ನನಗೂ ಏನು ಸಂಬಂಧ ಇದೆ ಎನ್ನುವುದು ಆ ಜಿಲ್ಲೆಯ ಜನರಿಗೆ ಗೊತ್ತಿದೆ. ನಿಮ್ಮ ಆಡಳಿತ ವೈಫಲ್ಯ, ನಡವಳಿಕೆ ಕೆರಗೋಡು ಘಟನೆಗೆ ಕಾರಣ. ಆದರೆ, ತಮ್ಮ ಹಾಗೂ ಸರ್ಕಾರದ ಹುಳುಕು ಮುಚ್ಚಿಟ್ಟಿಕೊಳ್ಳಲು ನನ್ನ ಮೇಲೆ ಅರೋಪ ಮಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭ ಇಳಿಸಿದ ಘಟನೆಯ ಹಿಂದೆ ಏನೆಲ್ಲಾ ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ಸರ್ಕಾರವೇ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಈ ಘಟನೆಯನ್ನು ಖಂಡಿಸಿವೆ. ಒಟ್ಟಿಗೆ ಪ್ರತಿಭಟನೆ ಮಾಡಿವೆ. ಬಿಜೆಪಿ ನಾಯಕರ ಜತೆ ನಾನೂ ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಅಲ್ಲಿ ನಾನು ಏನು ಹೇಳಿದೆ ಎನ್ನುವುದು ಈ ವ್ಯಕ್ತಿಗೆ ಗೊತ್ತಿಲ್ಲವೇ? ನಾನು ತಪ್ಪು ಮಾಡಿದ್ದರೆ ನೇಣಿಗೆ ಹಾಕಿ’ ಎಂದು ಸವಾಲು ಹಾಕಿದರು.

ಸಮಾಜದಲ್ಲಿ ಶಾಂತಿಯ ವಾತಾವರಣ ತರುವುದನ್ನು ನಿಮ್ಮಿಂದ ನಾನು ಕಲಿಯಬೇಕಾಗಿಲ್ಲ ಎಂದು ಹೆಸರು ಹೇಳದೆಯೇ ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಮಂಡ್ಯ ಸಕ್ಕರೆ ಕಾರ್ಖಾನೆ ಆರಂಭಿಸಬಹುದಿತ್ತು ಎಂದಿದ್ದಾರೆ ಅವರು, ನನ್ನ ಸರ್ಕಾರದ ಬಜೆಟ್ ಪುಸ್ತಕ ತೆಗೆದು ನೋಡಲಿ. ನಾನು ಏನು ಕೊಟ್ಟಿದ್ದೇನೆ, ಏನೆಲ್ಲಾ ಘೋಷಣೆ ಮಾಡಿದ್ದೇನೆ ಎನ್ನುವುದು ಗೊತ್ತಾಗುತ್ತದೆ’ ಎಂದು ಅವರು ಕಿಡಿಕಾರಿದರು.

‘ಮಂಡ್ಯದಲ್ಲಿ ನಾನು ಮಾತನಾಡುವಾಗಲೂ ಬಹಳ ಸೂಕ್ಷ್ಮವಾಗಿ ಕೆಲವು ವಿಚಾರಗಳನ್ನು ಹೇಳಿದ್ದೇನೆ. ಕೆರಗೋಡು ಜನರ ಭಾವನೆಗಳ ಬಗ್ಗೆ ಮಾತನಾಡಿದ್ದೇನೆ. ಸರ್ಕಾರದ ವೈಫಲ್ಯಗಳ ಬಗ್ಗೆ ಮಾತಾಡಿದ್ದೇನೆ. ನಿಮ್ಮ ಸ್ಥಳೀಯ ಶಾಸಕರಿಗೆ ಹೇಗೆ ಮಾತನಾಡಬೇಕು ಅಂತ ಹೇಳಿಕೊಡಿ’ ಎಂದು ಸಚಿವರಿಗೆ ಟಾಂಗ್ ನೀಡಿದರು.

ನಕಲಿ ದಾಖಲೆ ಸೃಷ್ಟಿ

‘ಕೆರಗೋಡಿನ ವಿಚಾರ ಹೇಗೆ ಆರಂಭವಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ಮೊದಲು ಒಂದು ಪಂಚಾಯಿತಿ ನಿರ್ಣಯದಲ್ಲಿ ದ್ವಜಸ್ತಂಭ ಸ್ಥಾಪಿಸಲು ಅನುಮತಿ ಕೇಳಿರುವ ಬಗ್ಗೆ ಉಲ್ಲೇಖ ಇದೆ. ಗೌರಿಶಂಕರ ಸೇವಾ ಟ್ರಸ್ಟ್ 27 ನವೆಂಬರ್ ನಲ್ಲಿ ಅರ್ಜಿ ಕೊಟ್ಟಿದೆ. ಆಗ ಧ್ವಜಸ್ತಂಭಕ್ಕೆ ಡಿಸೆಂಬರ್ 29ರಂದು ಅನುಮತಿ ಕೊಟ್ಟಿದ್ದಾರೆ. ಇಲ್ಲಿ ತಿದ್ದುವ ಕೈಚಳಕ ನಡೆದಿದೆ. ಡಿಸೆಂಬರ್‌ನಲ್ಲಿ ಕೊಟ್ಟಿರುವ ಅನುಮತಿಯಲ್ಲಿ ತ್ರಿವರ್ಣ ದ್ವಜ ಮತ್ತು ಕನ್ನಡ ಭಾವುಟಕ್ಕೆ ಅನುಮತಿ ಅಂತ ಇದೆ’ ಎಂದರು.

‘ಅಷ್ಟೇ ಅಲ್ಲ… ಕೆರಗೋಡು ಗ್ರಾಮದಲ್ಲಿ ದ್ವಜಸ್ತಂಭದ ಸ್ಥಳದಲ್ಲಿ ನಾನಾ ಪ್ರತಿಮೆಗಳನ್ನು ನಿರ್ಮಾಣ ಮಾಡಲು, ಬೇರೆ ಬೇರೆ ಸಮಯದಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಅರ್ಜಿಗಳನ್ನು ಕೊಡಿಸಲಾಗಿದೆ. ಇದೆಲ್ಲವೂ ಪೂರ್ವಯೋಜಿತವಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಮಾಡಲಾಗಿದೆ’ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

‘ಸೋಮವಾರ ಸಂಜೆ ಆರು ಗಂಟೆಗೆ ಪಿಡಿಓ ನ ಸಸ್ಪೆಂಡ್ ಮಾಡಲು ಆದೇಶ ಮಾಡಲಾಗಿದೆ. ಆದರೆ, ಶಾಸಕ ಸಸ್ಪೆಂಡ್ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟ ಮೇಲೆ ನಿಮ್ಮ ಸರ್ಕಾರದ ಆದೇಶ ಬಂದಿದೆ. ಇದೆಲ್ಲಾ ಏನು ಸೂಚಿಸುತ್ತದೆ’ ಎಂದು ಅವರು ಪ್ರಶ್ನಿಸಿದರು.

‘ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ರಾಮಮಂದಿರ ಕಟ್ಟಿದ್ದು ಜನರ ದೇಣಿಗೆಯ ಹಣದಿಂದ. ಸಿದ್ದರಾಮಯ್ಯ ಅವರ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದು ಜನರ ತೆರಿಗೆ ಹಣದಿಂದ’ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಅಯೋಧ್ಯೆ ವಿಚಾರದಲ್ಲಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಇವರು ಗ್ಯಾರಂಟಿಗಳ ವಿಷಯದಲ್ಲಿ ಮಾಡಿದ್ದೇನು? ರಾಜಕೀಯವನ್ನೇ ಮಾಡಿದರು, ಅಲ್ಲವೇ? ನಾನು ಕೂಡ ಹಿಂದೆ ಮಂದಿರಕ್ಕೆ ಹಣ ಸಂಗ್ರಹ ಮಾಡಿರುವ ಬಗ್ಗೆ ಲೆಕ್ಕ ಕೇಳಿದ್ದೇನೆ. ರಾಮನ ಬಗ್ಗೆ ನಂಬಿಕೆ ಇರಿಸಿರಿಕೊಂಡಿರುವ ಕುಟುಂಬಗಳು ದೇಣಿಗೆ ಕೊಟ್ಟಿದ್ದಾರೆ. ಇವರು ರಾಜ್ಯದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಬೇಕಾದರೆ, ಅವುಗಳನ್ನು ಜಾರಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ,ರಾಹುಲ್ ಗಾಂಧಿ ಅವರನ್ನು ಕರೆಸಿ ಕಾರ್ಯಕ್ರಮ ಮಾಡಬಹುದಾ? ಅವರಿಗೂ ರಾಜ್ಯಕ್ಕೂ ಏನು ಸಂಬಂಧ? ಗ್ಯಾರಂಟಿಗಳ ಹಣ ಕಾಂಗ್ರೆಸ್ ಪಕ್ಷದ ಖಜಾನೆಯದ್ದಾ? ಅದು ಜನರ ತೆರಿಗೆ ಹಣ. ಜನರ ದುಡ್ಡಿನಲ್ಲಿ ಇವರು ರಾಜಕೀಯ ಮಾಡಬಹುದಾದರೆ, ಮೋದಿ ಅವರು ಮಾಡಬಾರದ’ ಎಂದು ನರೇಂದ್ರ ಮೋದಿ ನಡೆಯನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ; ಮಹಾತ್ಮ ಗಾಂಧಿ 76ನೇ ಹುತಾತ್ಮ ದಿನಾಚರಣೆ; ರಾಜ್ಯದಾದ್ಯಂತ ಸೌಹಾರ್ದತೆಗಾಗಿ ಮಾನವ ಸರಪಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...