ರಕ್ತಕ್ರಾಂತಿಗೆ ಸಮ್ಮತಿಸದ ವಿಶ್ವಮಾನವ, ರಾಷ್ಟ್ರಕವಿ ಕುವೆಂಪು ಅವರು ಉಗ್ರ ರಾಷ್ಟ್ರೀಯವಾದವನ್ನೂ ವಿರೋಧಿಸಿದ್ದರು ಎಂದು ಹಿರಿಯ ಸಾಹಿತಿ ಕೆ.ವಿ. ನಾರಾಯಣ ತಿಳಿಸಿದರು.
ಅವರು ವಿಶ್ವಮಾನವ, ರಾಷ್ಟ್ರಕವಿ ಕುವೆಂಪು ಅವರ ʼವಿಚಾರ ಕ್ರಾಂತಿಗೆ ಆಹ್ವಾನʼ ಮತ್ತು ʼಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿʼ ಎಂಬ ಎರಡೂ ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷಗಳು ತುಂಬುತ್ತಿರುವ ನೆನಪಿನಲ್ಲಿ ಜಾಗೃತ ಕರ್ನಾಟಕ ಸಂಘಟನೆಯು ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಕ್ರಾಂತಿ ಕಹಳೆ – 50′ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ʼವೈಚಾರಿಕ ದೃಷ್ಟಿʼ ಮತ್ತು ʼವಿಜ್ಞಾನ ಬುದ್ದಿʼ ಎಂಬ ಎರಡು ಪದಗಳನ್ನು ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಅತಿಯಾಗಿ ಬಳಸಿದ್ದರು. ಹಲವು ಬಾರಿ ಇದನ್ನ ಸಂಸ್ಕೃತಿ ಕ್ರಾಂತಿ, ವಿಚಾರ ಕ್ರಾಂತಿ ಎಂದೂ ಹೇಳಿದ್ದಿದೆ. ಆದರೆ ರಾಜಕೀಯ ಅಥವಾ ಆರ್ಥಿಕ ಕ್ರಾಂತಿ ಎಂಬ ಪದಗಳನ್ನು ಕುವೆಂಪು ಅವರು ಬಳಸಿಲ್ಲ. ಸಾಂಸ್ಕೃತಿಕ ಮತ್ತು ವೈಚಾರಿಕ ಕ್ರಾಂತಿಯಿಂದಲೇ ಸಮಾಜದಲ್ಲಿ ದೊಡ್ಡ ಬದಲಾವಣೆ ಸಾಧ್ಯ ಎಂದು ಕುವೆಂಪು ಅವರು ನಂಬಿದ್ದರು. ನಾನು ಬದಲಾದರೆ ಸಮಾಜ ಬದಲಿಸಬಹುದು ಎಂಬುದು ಕುವೆಂಪು ಅವರ ಒಟ್ಟು ಸಂದೇಶದ ಸಾರ. ಮೌಢ್ಯ ಮತ್ತು ಪುರೋಹಿತಶಾಹಿ ಇವೆರಡು ಸಮಾಜದ ಸಮಸ್ಯೆಗಳಿಗೆ ಮೂಲ ಕಾರಣ ಎಂಬುದನ್ನು ಕುವೆಂಪು ಅವರು ಗ್ರಹಿಸಿದ್ದರು’ ಎಂದು ಕೆ.ವಿ. ನಾರಾಯಣ ಹೇಳಿದರು.
ಕುಮಾರಸ್ವಾಮಿ ಯುವಜನರ ದಾರಿ ತಪ್ಪಿಸುತ್ತಿದ್ದಾರೆ: ಎಲ್. ಎನ್. ಮುಕುಂದರಾಜ್
‘ಕವಿವಾಣಿಯಿಂದ ಕರ್ನಾಟಕ ಮಾದರಿಯಕೆಗೆ’ ಎಂಬ ಆಶಯದೊಂದಿಗೆ ನಡೆದ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಚಿಂತಕರಾದ ಎಲ್. ಎನ್. ಮುಕುಂದರಾಜ್ ಅವರು, ‘ಕುವೆಂಪು ಅವರು 50 ವರ್ಷಗಳ ಹಿಂದೆ ಇದೇ ಸಭಾಂಗಣದಲ್ಲಿ ʼಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿʼ ಭಾಷಣ ಮಾಡುವಾಗ ʼಓ ಬನ್ನಿ ಸೋದರರೆ… ಬೇಗ ಬನ್ನಿʼ ಎಂಬ ಪದ್ಯ ಓದಿದ್ದರು. ಇಂದು ನಮಗೆ ವೈಚಾರಿಕ ಮತ್ತು ಸಾಂಸ್ಕೃತಿಕ ಕ್ರಾಂತಿಗಳೆರಡೂ ಮುಖ್ಯವಾಗಿವೆ’ ಎಂದರು.

‘ನಾಲ್ವಡಿಯವರು ಜಾರಿಗೆ ತಂದ ಮೀಸಲಾತಿಯಿಂದ ನಾವು ವಿದ್ಯೆ ಪಡೆದಿದ್ದೇವೆ. ಆದರೂ, ಶೂದ್ರರನ್ನು ತುಳಿಯುವ ಕೆಲಸ ಇಂದೂ ನಡೆಯುತ್ತಿದೆ. ರಕ್ತಪಾತದ ಮೂಲಕ ಬಸವಾದಿ ಶರಣರನ್ನು ಕೊಲ್ಲಲಾಯಿತು. ಶೂದ್ರರ ಪರವಿದ್ದ ಗಾಂಧಿಯವರನ್ನೂ ಕೊಂದರು. ಆದರೆ, ಕುವೆಂಪುರವರು ರಕ್ತಕ್ರಾಂತಿಯ ಬದಲಾಗಿ ವಿಚಾರ ಕ್ರಾಂತಿಗೆ ಮತ್ತು ಸಾಂಸ್ಕೃತಿಕ ಕ್ರಾಂತಿಗೆ ಕರೆ ನೀಡಿದರು’ ಎಂದು ತಿಳಿಸಿದರು.
‘ಮಂಡ್ಯದ ಕರೆಗೋಡಿನಲ್ಲಿ ನಡೆದಿದ್ದು ತಾಯಂದಿರು ತಲೆತಗ್ಗಿಸುವ ಕೆಲಸ. ತಮ್ಮ ಮಕ್ಕಳು ಓದಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಎಲ್ಲ ತಾಯಂದಿರೂ ಬಯಸುತ್ತಾರೆ. ಕೇಸರಿ ಶಾಲು ಹಾಕೊಂಡು ಕೇಸು ಹಾಕಿಸಿಕೊಳ್ಳಲು ಅಲ್ಲ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕಿ ಯುವಜನರ ದಾರಿ ತಪ್ಪಿಸುತ್ತಿದ್ದಾರೆ. ಕನ್ನಡದ ಪರವಿದ್ದ ಪಕ್ಷ ಇಂದು ಕೋಮುವಾದಿಗಳೊಂದಿಗೆ ಸೇರಿ ಹಾಳಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು ಸಂದೇಶದ ಕೆಲವು ಸಾಲುಗಳನ್ನ ಓದುವುದರ ಮೂಲಕ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ʼಯುವ ಸ್ಪಂಧನʼ ಗೋಷ್ಠಿಯಲ್ಲಿ ಭಾಗವಹಿಸಿದ್ದ ನಟ ಡಾಲಿ ಧನಂಜಯ್ ಕುವೆಂಪು ಅವರ ಭಾಷಣದ ಕೆಲವು ಸಾಲುಗಳನ್ನು ಓದಿದರು. ಕೊಡಗಿನ ಡಾ. ಕಾವೇರಿ, ಬೆಂಗಳೂರಿನ ಕಾವ್ಯಶ್ರೀ, ಔರಾದ್ʼನ ಬಾಲಾಜಿ ಕುಂಬಾರ್, ಮಡಿಕೇರಿಯ ಡಾ. ಮುಸ್ತಫಾ ಕೆ.ಎಚ್., ಮಹೇಶ ಸಿ. ಮತ್ತು ಮೈಸೂರು ವಿ.ವಿ ಸಂಶೋಧಕರಾದ ಧನಲಕ್ಷ್ಮಿ ಯುವಸ್ಪಂಧನ ಗೋಷ್ಠಿಯಲ್ಲಿ ಮಾತನಾಡಿದರು.

ಕೃಷ್ಣಮೂರ್ತಿ ಚಮರಂ ಸ್ವಾಗತಿಸಿದರು. ರಮೇಶ್ ಗೌಡ ನಾಗಮಂಗಲ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಯಶಂಕರ ಹಲಗೂರು ಕಾರ್ಯಕ್ರಮ ನಿರ್ವಹಿಸಿದರು. ಚಿಂತನ್ ವಿಕಾಸ್ ಮೈಸೂರು ಮತ್ತು ಗೋವಿಂದರಾಜು ಚಾಮನಕೊಪ್ಪಲು ತಂಡಗಳು ಕುವೆಂಪು ಹಾಡುಗಳನ್ನು ಪ್ರಸ್ತುತಪಡಿಸಿದರು.
ಇದನ್ನೂ ಓದಿ; ಮತೀಯವಾದಿಗಳಿಗೆ ಕುವೆಂಪು ಅವರನ್ನು ಪ್ರಶ್ನಿಸಲು ಸಾಧ್ಯವಾಗುತ್ತಿರಲಿಲ್ಲ: ಬಿ.ಟಿ. ಲಲಿತಾ ನಾಯಕ್


