‘ಮತೀಯವಾದಿಗಳು ಕುವೆಂಪು ಅವರನ್ನು ಪ್ರಶ್ನಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಅವರಲ್ಲಿ ಮಾತಿಗೆ ಅವಕಾಶವಿಲ್ಲದಷ್ಟು ಪಾಂಡಿತ್ಯ, ಓದು, ವಿವೇಕ ಇತ್ತು; ಸಾಕಷ್ಟು ಇಂಗ್ಲಿಷ್ ಸಾಹಿತ್ಯವನ್ನೂ ಓದಿಕೊಂಡಿದ್ದರು. ಹಾಗಾಗಿಯೇ ಅವರು ಮತ-ಮೌಢ್ಯಗಳನ್ನು ವಿರೋಧಿಸಿದ್ದರು’ ಎಂದು ಬಿ.ಟಿ. ಲಲಿತಾ ನಾಯಕ್ ಹೇಳಿದರು.
ವಿಶ್ವಮಾನವ, ರಾಷ್ಟ್ರಕವಿ ಕುವೆಂಪು ಅವರ ʼವಿಚಾರ ಕ್ರಾಂತಿಗೆ ಆಹ್ವಾನʼ ಮತ್ತು ʼಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿʼ ಎಂಬ ಎರಡೂ ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷಗಳು ತುಂಬಿದ್ದು, ಈ ನೆನಪಿನಲ್ಲಿ ‘ಜಾಗೃತ ಕರ್ನಾಟಕ’ ಸಂಘಟನೆ ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಕ್ರಾಂತಿ ಕಹಳೆ–50’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಾಕವಿ ಕುವೆಂಪು ಅವರ ಸಂದೇಶಗಳನ್ನು ಓದಿ, ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಅಸಮಾನತೆ, ಅಸಹಿಷ್ಣುತೆ, ಮೂಡನಂಬಿಕೆ, ಅನಾಚಾರದಂತಹ ಮಾನವ ವಿರೋಧಿ ಅನಿಷ್ಟ ಮತ್ತು ಮೌಢ್ಯಗಳಿಂದ ಹೊರಬರಲು ಸಾಧ್ಯ’ ಎಂದು ಅವರು ಪ್ರತಿಪಾದಿಸಿದರು.
‘ನಮ್ಮ ದೇಶದಲ್ಲಿರುವ ಅಷ್ಟೂ ಜನರು ಕುವೆಂಪು ಅವರ ಒಂದೊಂದು ಸಾಲು ಓದಿದರೂ ಇನ್ನೂ ಉಳಿಯಬಹುದಾದಷ್ಟು ಸಾಕಷ್ಟು ವಿಚಾರ ಕುವೆಂಪುರವರ ಬರಹದಲ್ಲಿವೆ. 50 ವರ್ಷಗಳ ಹಿಂದೆ ನಮ್ಮ ಮುಂದಿಟ್ಟ ಕ್ರಾಂತಿಕಾರಿ ಚಿಂತನೆಗಳು ಈಗಲೂ ಪ್ರಸ್ತುತ’ ಎಂದು ಲಲಿತಾ ನಾಯಕ್ ಹೇಳಿದರು.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಹಾರಿಸಿ ಆತಂಕ ಸೃಷ್ಟಿಸಿದ ಘಟನೆಯನ್ನು ಖಂಡಿಸಿದ ಅವರು, ‘ಇದರಲ್ಲಿ ಭಾಗಿಯಾದವರು ನಮ್ಮ ಶೂದ್ರ ಯುವಜನರು. ಆ ಯುವಕರು ಕುವೆಂಪು, ಅಂಬೇಡ್ಕರ್, ಲೋಹಿಯಾರವರನ್ನು ಓದಿಕೊಂಡಿದ್ದರೆ ಆ ರೀತಿ ಮಾಡುತ್ತಿರಲಿಲ್ಲ. ಕುವೆಂಪುರವರನ್ನು ಆಸ್ತಿಯನ್ನಾಗಿ, ಸಂಪತ್ತಾಗಿ ಮಾಡಕೊಳ್ಳದಿದ್ದರೆ ನಾವು ಹಿಮ್ಮುಖವಾಗಿ ಚಲಿಸುತ್ತೇವೆ. ಮೌಢ್ಯ ಅಳಿಯಬೇಕು ಎಂದಾದರೆ ಕುವೆಂಪು ಅವರ ಸಂದೇಶಗಳನ್ನು ಪಾಲಿಸೋಣ’ ಎಂದು ಕರೆಕೊಟ್ಟರು.
‘ಕುವೆಂಪು ಕ್ರಾಂತಿ ಕಹಳೆ–50, ಕವಿವಾಣಿಯಿಂದ ಕರ್ನಾಟಕ ಮಾದರಿಯಕೆಗೆ’ ಎಂಬ ಆಶಯದೊಂದಿಗೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಕೆ.ವಿ. ನಾರಾಯಣ ವಹಿಸಿದ್ದರು. ಚಿಂತಕರಾದ ಎಲ್. ಎನ್. ಮುಕುಂದರಾಜ್, ಡಾಲಿ ಧನಂಜಯ್ ಯುವ ಪ್ರತಿನಿಧಿಗಳಾದ ಕೊಡಗಿನ ಡಾ. ಕಾವೇರಿ, ಬೆಂಗಳೂರಿನ ಕಾವ್ಯಶ್ರೀ, ಔರಾದ್ʼನ ಬಾಲಾಜಿ ಕುಂಬಾರ್, ಮಡಿಕೇರಿಯ ಡಾ.ಮುಸ್ತಫಾ ಕೆ.ಎಚ್., ಮಹೇಶ ಸಿ., ಮೈಸೂರು ವಿ.ವಿ ಸಂಶೋಧಕರಾದ ಧನಲಕ್ಷ್ಮಿ, ಅಹಿಂದ ಜವರಪ್ಪ, ಪ್ರಸನ್ನ ಗೌಡ ಮತ್ತು ಜಾಗೃತ ಕರ್ನಾಟಕದ ಸಂಚಾಲಕ ಬಿ.ಸಿ. ಬಸವರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಲಿತ ವಿದ್ಯಾರ್ಥಿ ಒಕ್ಕೂಟ, ಮಾನಸ ಗಂಗೋತ್ರಿ; ಮೈಸೂರು ವಿವಿ ಸಂಶೋಧಕರ ಸಂಘ, ಸಮಾಜ ಪರಿವರ್ತನ ಜನಾಂದೋಲನ, ಮೈಸೂರು; ಕರುನಾಡ ರಕ್ಷಣಾ ವೇದಿಕೆ, ಮೈಸೂರು; ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ (ರಿ), ಕರ್ನಾಟಕ ಕಾವಲು ಪಡೆ (ರಿ), ಆಕೃತಿ ಪುಸ್ತಕ, ಬೆಂಗಳೂರು ಮತ್ತು ಜಂಗಮ ಕಲೆಕ್ಟಿವ್, ಬೆಂಗಳೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆದಿದೆ.
ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಚಮರಂ ಸ್ವಾಗತಿಸಿದರು. ರಮೇಶ್ ಗೌಡ ನಾಗಮಂಗಲ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಯಶಂಕರ ಹಲಗೂರು ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭಕ್ಕೂ ಮೊದಲು ಚಿಂತನ್ ವಿಕಾಸ್ ಮೈಸೂರು ಮತ್ತು ಗೋವಿಂದರಾಜು ಚಾಮನಕೊಪ್ಪಲು ತಂಡಗಳು ಕುವೆಂಪು ಹಾಡುಗಳನ್ನು ಪ್ರಸ್ತುತಪಡಿಸಿದರು.
ಇದನ್ನೂ ಓದಿ; ಕೇರಳದಲ್ಲಿ ‘ಪೌರತ್ವ ತಿದ್ದುಪಡಿ ಕಾಯ್ದೆ’ ಜಾರಿಗೊಳಿಸುವುದಿಲ್ಲ: ಪಿಣರಾಯ್ ವಿಜಯನ್