ಚುನಾವಣಾ ಬಾಂಡ್ಗಳ ವಿಚಾರದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು,ಚುನಾವಣಾ ಬಾಂಡ್ ಮೂಲಕ ಆಡಳಿತ ಪಕ್ಷವು ದೇಣಿಗೆ ತೆಗೆದುಕೊಂಡಿಲ್ಲ, ಸುಲಿಗೆ ಮಾಡಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಪಿಯು ಸಿಬಿಐ, ಇಡಿ, ಆದಾಯ ತೆರಿಗೆ ಮತ್ತು ಇತರ ಸಂಸ್ಥೆಗಳನ್ನು ದೇಣಿಗೆ ತೆಗೆದುಕೊಳ್ಳದೆ ಸುಲಿಗೆ ಮಾಡಲು ಹೇಗೆ ಬಳಸಿಕೊಂಡಿದೆ ಎಂಬುವುದು ಈಗ ಜನರಿಗೆ ತಿಳಿದಿದೆ. ಚುನಾವಣಾ ಬಾಂಡ್ಗಳು ಬಿಜೆಪಿ ಹೆಸರನ್ನು ಕೆಡಿಸಿದೆ ಎಂದು ಹೇಳಿದ್ದಾರೆ.
ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಒತ್ತಡ ಹೇರಿದಾಗ ಬಿಜೆಪಿ ಖಾತೆಗೆ ಹಣ ಹೋಗಿರುವುದು ಹಲವು ಪ್ರಕರಣಗಳಲ್ಲಿ ಗಮನಕ್ಕೆ ಬಂದಿದೆ. ಅಧಿಕಾರದಲ್ಲಿರುವವರು ದೇಣಿಗೆ ತೆಗೆದುಕೊಳ್ಳದೆ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮದು ರಾಷ್ಟ್ರೀಯವಾದಿ ಪಕ್ಷ ಎಂದು ಹೇಳಿಕೊಂಡವರ ವಿರುದ್ಧವೇ ಚುನಾವಣಾ ಬಾಂಡ್ ಕುರಿತು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಗಮನ ಬೇರೆಡೆ ಸೆಳೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ವಿರೋಧ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ಅವರಿಗೆ ಮಾ.28ರವರೆಗೆ ಇಡಿ ಕಸ್ಟಡಿಯನ್ನು ನೀಡಲಾಗಿದೆ.
ಸುಪ್ರೀಂಕೋರ್ಟ್ ಆದೇಶದ ಬಳಿಕ ಎಸ್ಬಿಐ ಇತ್ತೀಚೆಗೆ ಚುನಾವಣಾ ಬಾಂಡ್ ಕುರಿತ ಮಾಹಿತಿಯನ್ನು ಬಹಿರಂಗಗೊಳಿಸಿತ್ತು. ಬಿಜೆಪಿ ಒಟ್ಟು ಚುನಾವಣಾ ಬಾಂಡ್ ದೇಣಿಗೆಯಲ್ಲಿ 50%ಕ್ಕಿಂತ ಹೆಚ್ಚು ಪಡೆದಿರುವುದು ಅಂಕಿ-ಅಂಶಗಳಲ್ಲಿ ಬಹಿರಂಗವಾಗಿತ್ತು. ಕೆಲವೊಂದು ಕಂಪೆನಿಗಳು ಇಡಿ, ಐಟಿ ದಾಳಿ ಬಳಿಕ ಚುನಾವಣಾ ಬಾಂಡ್ ಖರೀದಿಸಿದ್ದವು. ದೆಹಲಿ ಮಧ್ಯನೀತಿ ಹಗರಣದ ಪ್ರಮುಖ ಸಾಕ್ಷಿ ಶರತ್ ಚಂದ್ರ ರೆಡ್ಡಿಯಿಂದ ಕೂಡ ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿ 60 ಕೋಟಿ ರೂ. ಹಣವನ್ನು ಪಡೆದಿದೆ ಎಂದು ಎಎಪಿ ದಾಖಲೆ ಬಿಡುಗಡೆ ಮಾಡಿತ್ತು.
ಇದನ್ನು ಓದಿ: ಮೂರು ದಶಕಗಳ ಬಳಿಕ ಜೆಎನ್ಯು ವಿದ್ಯಾರ್ಥಿ ಸಂಘಟನೆಗೆ ದಲಿತ ಅಧ್ಯಕ್ಷರ ಆಯ್ಕೆ