ಮುಂಬೈ ಮೆಟ್ರೋಗೆ ಕಾರ್ ಶೆಡ್ ನಿರ್ಮಿಸುವ ಸಲುವಾಗಿ ತೀವ್ರ ವಿರೋಧದ ನಡುವೆಯೂ ಸಾವಿರಾರು ಮರಗಳು ಧರೆಗುರಿಳಿದ್ದು ಮಾಸುವ ಮುನ್ನವೇ ಮಹಾರಾಷ್ಟ್ರ ಸರ್ಕಾರ ಮತ್ತೆ ಮರಗಳ ಮಾರಣಹೋಮಕ್ಕೆ ಸಿದ್ದವಾಗಿದೆ. ಆರೇ ಅರಣ್ಯದಲ್ಲಿ ಈ ಬಾರಿ ಮೃಗಾಲಯ ಕಟ್ಟಲು ಮುಂದಾಗಿರುವ ಸರ್ಕಾರ ಅದಕ್ಕೆ ಮತ್ತಷ್ಟು ಮರಗಳನ್ನು ಕಡಿಯಲು ನಿರ್ಧರಿಸಿದೆ.
ಅರಣ್ಯ ಇಲಾಖೆಯ ಅಕ್ಟೋಬರ್ 9ರ ಸರ್ಕಾರದ ನಿರ್ಣಯದಲ್ಲಿ ಮೃಗಾಲಯದ ಸಂರಕ್ಷಣಾ ಗೋಡೆಗೆ 60 ಲಕ್ಷ ರೂ. ಬಿಡುಗಡೆ ಮಾಡಿದ್ದು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ.
ಗೋರೆಗಾಂವ್ನ ಆರೇ ಮಿಲ್ಕ್ ಕಾಲೋನಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮೃಗಾಲಯವನ್ನು ಸ್ಥಾಪಿಸಲು ರಾಜ್ಯವು ಜುಲೈನಲ್ಲಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
2009 ರಿಂದ ಚರ್ಚೆಯಲ್ಲಿರುವ ಈ ಯೋಜನೆಗೆ ಸರ್ಕಾರವು ನಗರದ ಹಸಿರು ಶ್ವಾಸಕೋಶ ಎಂದು ಕರೆಯುವ ಆರೇಯಲ್ಲಿ 190 ಎಕರೆ ಭೂಮಿಯನ್ನು ಹಸ್ತಾಂತರಿಸಿದೆ. ಯೋಜನೆಯ ಒಟ್ಟು ವೆಚ್ಚ 500 ಕೋಟಿ ರೂ ಎಂದು ಅಂದಾಜಿಸಲಾಗಿದೆ ಮತ್ತು ಇದು ನಾಲ್ಕರಿಂದ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಹಿಂದೆಯೇ ಸ್ಥಳೀಯರು, ಆದಿವಾಸಿಗಳು, ಮೃಗಾಲಯಕ್ಕಾಗಿ ಆರೇಯಲ್ಲಿ ಜಮೀನನ್ನು ಮಂಜೂರು ಮಾಡುವ ರಾಜ್ಯ ಸರ್ಕಾರದ ಕ್ರಮವನ್ನು ಆಕ್ಷೇಪಿಸಿ ಪ್ರತಿಭಟಿಸಿದ್ದರು. ಮೃಗಾಲಯವನ್ನು ನಿರ್ಮಿಸುವ ಬದಲು ಇಡೀ ಆರೇ ಕಾಲೋನಿಯನ್ನು ಮೀಸಲು ಅರಣ್ಯವೆಂದು ಘೋಷಿಸಬೇಕು ಮತ್ತು ನೆರೆಯ ಎಸ್ಜಿಎನ್ಪಿ ಯೊಂದಿಗೆ ವಿಲೀನಗೊಳಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದರು.
ಈ ಮೊದಲು ಮೆಟ್ರೋಗಾಗಿ ಆರೇ ಪ್ರದೇಶದ ಮರಗಳನ್ನು ಕಡಿಯಬಾರದೆಂದು ಪರಿಸರಪ್ರೇಮಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಹಾರಾಷ್ಟ್ರ ಹೈಕೋರ್ಟ್ ತಿರಸ್ಕರಿಸಿತ್ತು. ಕೂಡಲೇ ಮಹಾರಾಷ್ಟ್ರ ಸರ್ಕಾರ ಮರಗಳ ಮಾರಣಹೋಮ ನಡೆಸಿತ್ತು. ಸುಪ್ರೀಂ ಕೋರ್ಟ್ ಅಕ್ಟೋಬರ್ 16ರವರೆಗೂ ಮರಗಳನ್ನು ಕಡಿಯಬಾರದೆಂದು ಆದೇಶ ನೀಡುವಷ್ಟರಲ್ಲಿ ಬಹುಪಾಲು ಮರಗಳು ಅಸುನೀಗಿದ್ದವು.
ಸುಪ್ರೀಂ ನೀಡಿದ್ದ ಗಡುವು ಇಂದು ಮುಗಿದ ಕೂಡಲೇ ಮಹಾರಾಷ್ಟ್ರ ಸರ್ಕಾರ ಮತ್ತೆ ಮರಗಳನ್ನು ಉರುಳಿಸಲು ಸಜ್ಜಾಗಿದೆ. ಆರೇ ಅರಣ್ಯದಲ್ಲಿಯೇ ZOO ಕಟ್ಟಲು ಮುಂದಾಗಿದೆ. ಇದಕ್ಕೆ ಬಹಳಷ್ಟು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
Eco-Activists had repeatedly warned that #AareyForest issue was not just about 2700 trees
It was always a plan to hijack the entire forest for “Vikas” of real estate mafia!
Now Govt has approved a Zoo there. More trees will be cut in Aarey. https://t.co/yGbGvSFfRP
— Dhruv Rathee (@dhruv_rathee) October 15, 2019
ಖ್ಯಾತ ಯೂಟ್ಯೂಬರ್ ಧೃವ್ರಾಠೀ “ಮೆಟ್ರೋ ನೆಟ್ಟಿದ್ದ 1800 ಗಿಡಗಳಲ್ಲಿ 800 ಗಿಡಗಳು ಈಗಾಗಲೇ ಸತ್ತುಹೋಗಿವೆ. ಇಂತಹ ಸಂದರ್ಭದಲ್ಲಿ ಮಹರಾಷ್ಟ್ರ ಸರ್ಕಾರ ZOO ಕಟ್ಟಲು ಮುಂದಾದರೆ ಮತ್ತಷ್ಟು ಮರಗಳು ಕೊನೆಯುಸಿರೆಳೆಯುತ್ತವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಆರೇ ಉಳಿಸುವ ಹೋರಾಟ ಕೇವಲ 2700 ಮರಗಳನ್ನು ಉಳಿಸಲು ಮಾತ್ರವಲ್ಲ ಎಂದು ಪರಿಸರ ಕಾರ್ಯಕರ್ತರು ಪದೇ ಪದೇ ಎಚ್ಚರಿಸಿದ್ದರು. ಅದು ರಿಯಲ್ ಎಸ್ಟೇಟ್ ಮಾಫಿಯಾದ “ವಿಕಾಸ”ಕ್ಕಾಗಿ ಇಡೀ ಅರಣ್ಯವನ್ನು ಅಪಹರಿಸುವ ಯೋಜನೆಯಾಗಿತ್ತು! ಎಂದು ಅವರು ಟ್ವಿಟ್ಟರ್ ಮತ್ತು ಫೇಸ್ಬುಕ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.