ವಿಚಾರವಾದಿ ಹಾಗೂ ಎಡಪಂಥೀಯ ನಾಯಕ ಗೋವಿಂದ್ ಪನ್ಸಾರೆ ಅವರ ಹತ್ಯೆ ಪ್ರಕರಣದ ಕುರಿತಂತೆ ಬಾಂಬೆ ಹೈಕೋರ್ಟ್ ವಿಚಾರಣೆಗೆ ಮುನ್ನ ಅವರ ಕುಟುಂಬವು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ದ ಪುಣೆ ವಿಭಾಗದ ಎಸ್ಪಿ ಜಯಂತ್ ಮೀನಾ ಅವರಿಗೆ 68 ಪುಟಗಳ ಪತ್ರ ಬರೆದಿದ್ದು, ಪನ್ಸಾರೆ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಸ್ಥಾಪಕ ಡಾ. ಜಯಂತ್ ಅಠಾವಳೆ ಅವರ ಪಾತ್ರವನ್ನು ಪರಿಶೀಲಿಸಬೇಕು ಎಂದು ಕೋರಿದ್ದಾರೆ ಎಂದು deccanherald.com ವರದಿ ಮಾಡಿದೆ.
ಪನ್ಸಾರೆ ಕುಟುಂಬದ ಸದಸ್ಯರಾದ ಡಾ. ಮೇಘಾ ಪನ್ಸಾರೆ, ಸ್ಮಿತಾ ಪನ್ಸಾರೆ ಹಾಗೂ ವಕೀಲ ಕಬೀರ್ ಪನ್ಸಾರೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬುದ್ಧಿಜೀವಿಗಳನ್ನು ಹತ್ಯೆಗೈಯ್ಯುವ ಸಂಚನ್ನು ಸನಾತನ ಸಂಸ್ಥೆ ಕಾರ್ಯಗತಗೊಳಿಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
“ಕಾಮ್ರೇಡ್ ಪನ್ಸಾರೆ ಅವರ ಸಿದ್ಧಾಂತ, ಜಾತ್ಯತೀತತೆ, ವೈಚಾರಿಕತೆ, ಸಮಾನತೆ ಮತ್ತು ‘ಶಿವಾಜಿ ಕೋನ್?’ ನಂತಹ ಪುಸ್ತಕಗಳನ್ನು ರಚಿಸಲು ಜೀವನ ಪರ್ಯಂತ ಕೆಲಸ ಮಾಡಿದಕ್ಕಾಗಿ ಬಲಪಂಥೀಯ ಹಿಂದುತ್ವ ಸಂಘಟನೆಗಳಾದ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಇತ್ಯಾದಿಗಳು ಅವರನ್ನು ಕಟುವಾಗಿ ವಿರೋಧಿಸಿದ್ದವು” ಎಂದು ಪತ್ರದಲ್ಲಿ ಬರೆಯಲಾಗಿದೆ.
ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಡಾ.ಜಯಂತ್ ಅಠಾವಳೆ, ಮುಖಂಡ ವೀರೇಂದ್ರ ಮರಾಠೆ ಮತ್ತು ಇತರರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳಬೇಕು ಎಂದು ಕುಟುಂಬ ಒತ್ತಾಯಿಸಿದೆ.
ಕಾಮ್ರೇಡ್ ಪನ್ಸಾರೆ, ಡಾ. ನರೇಂದ್ರ ದಾಭೋಲ್ಕರ್, ಪ್ರೊ.ಎಂ.ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆಗಳ ನಡುವಿನ ಸಂಬಂಧದ ಸಾಮಿಪ್ಯತೆಯನ್ನು ಪತ್ರವು ಒತ್ತಿ ಹೇಳಿದೆ. “ಕಾಮ್ರೇಡ್ ಪನ್ಸಾರೆ ಪ್ರಕರಣದಲ್ಲಿ ಸಲ್ಲಿಸಲಾದ ಐದು ಆರೋಪ ಪಟ್ಟಿಗಳ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾವು ಬಯಸುತ್ತೇವೆ” ಎಂದಿದೆ.
“ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಹನ್ನೆರಡು ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಈ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಲಾಗಿದೆ. ಎಲ್ಲಾ ಆರೋಪಿಗಳು ಸನಾತನ ಸಂಸ್ಥೆ ಮತ್ತು/ಅಥವಾ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರಾಗಿದ್ದಾರೆ. ಕೆಲವು ಆರೋಪಿಗಳು ಡಾ.ನರೇಂದ್ರ ದಾಭೋಲ್ಕರ್, ಪ್ರೊ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಲ್ಲಿ ಹಾಗೂ ನಲಸೋಪರ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪ್ರಕರಣ ಮತ್ತು ಇತರ ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಇದು ಎಲ್ಲಾ ಪ್ರಕರಣಗಳ ನಡುವೆ ಒಂದು ಸಾಮಾನ್ಯ ಲಿಂಕ್ ಇರುವುದನ್ನು ಸೂಚಿಸುತ್ತದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
“ನಾಲ್ಕು ಕೊಲೆಗಳು ಮತ್ತು ಇತರ ಘೋರ ಅಪರಾಧಗಳಲ್ಲಿ ಸನಾತನ ಸಂಸ್ಥೆ ಮತ್ತು ಅದರ ಸದಸ್ಯರ ಪಾತ್ರದ ಬಗ್ಗೆ ಎಟಿಎಸ್, ಸಿಬಿಐ, ಮಹಾರಾಷ್ಟ್ರ ಪೊಲೀಸ್, ಕರ್ನಾಟಕ ಪೊಲೀಸ್ ಮತ್ತು ಗೋವಾ ಪೊಲೀಸರಂತಹ ಇತರ ಏಜೆನ್ಸಿಗಳಿಗೆ ತಿಳಿದಿದೆ” ಎಂದು ಕುಟುಂಬವು ಹೇಳಿಕೊಂಡಿದೆ.
“ಜಯಂತ್ ಅಠಾವಳೆ ಮತ್ತು ವೀರೇಂದ್ರ ಮರಾಠೆ ಅವರ ಮಾರ್ಗದರ್ಶನ ಮತ್ತು ನಿರ್ದೇಶನಗಳ ಅಡಿಯಲ್ಲಿ ಅಪರಾಧಿಗಳ ಸಂಘಟಿತ ಭಯೋತ್ಪಾದಕ ಜಾಲವಾಗಿ ಕಾರ್ಯನಿರ್ವಹಿಸುತ್ತಿರುವ ಸನಾತನ ಸಂಸ್ಥೆ ಮತ್ತು ಅದನ್ನು ಮುನ್ನಡೆಸುತ್ತಿರುವ ಜನರ ಪಾತ್ರವನ್ನು ಪರಿಶೀಲಿಸುವುದು ಅವಶ್ಯಕ. ನಲಸೋಪಾರ ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ, ಮಹಾರಾಷ್ಟ್ರ ಎಟಿಎಸ್ 2018 ರಲ್ಲಿ ಹೆಚ್ಚಿನ ಸಂಖ್ಯೆಯ ಪಿಸ್ತೂಲ್ಗಳು, ಬಾಂಬ್ಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ ಮತ್ತು ಸನಾತನ ಸಂಸ್ಥೆ ಮತ್ತು/ಅಥವಾ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರಾಗಿರುವ ಹನ್ನೆರಡು ಜನರ ವಿರುದ್ಧ ಫೆಬ್ರವರಿ 18, 2019 ರಂದು ಚಾರ್ಜ್ಶೀಟ್ ಸಲ್ಲಿಸಿದೆ” ಎಂದು ಪತ್ರ ಹೇಳಿದೆ.
“ನಲಸೋಪರ ಪ್ರಕರಣದಲ್ಲಿ ಎಟಿಎಸ್ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪರಿಶೀಲಿಸಿದಾಗ, ಸನಾತನ ಸಂಸ್ಥೆ ಮತ್ತು ಅದರ ಸದಸ್ಯರ ಉದ್ದೇಶವು ಸಮಾಜವನ್ನು ದೊಡ್ಡ ಪ್ರಮಾಣದಲ್ಲಿ ಭಯಭೀತಗೊಳಿಸುವುದು ಮತ್ತು ಕ್ಷಾತ್ರಧರ್ಮ ಸಾಧನದಿಂದ ಪ್ರೇರೇಪಿಸಲ್ಪಟ್ಟ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದು ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ” ಎಂದು ಪತ್ರದಲ್ಲಿ ಬರೆಯಲಾಗಿದೆ
ಪನ್ಸಾರೆ ಹತ್ಯೆ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ಸನಾತನ ಸಂಸ್ಥೆಯ ಪದಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕಿತ್ತು. ಏಕೆಂದರೆ ಅವರು ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ತಳ್ಳಿ ಹಾಕಲಾಗುವುದಿಲ್ಲ. ಸಂಸ್ಥೆಯು ಒಪ್ಪಿಗೆಯಿಲ್ಲದೆ ತಮ್ಮದೇ ಸದಸ್ಯರ ಮೇಲೆ ಮನೋವೈದ್ಯಕೀಯ ಔಷಧಗಳನ್ನು ಬಳಸುವುದರಿಂದ ಹಿಡಿದು ಕೊಲೆ, ಬಾಂಬ್ ಸ್ಫೋಟಗಳಂತಹ ಕೃತ್ಯಗಳನ್ನು ಯೋಜಿಸಿ ಕಾರ್ಯಗತಗೊಳಿಸುವರೆಗೆ ಅದರ ಪಿತೂರಿಯಿದೆ. ಈ ಪಿತೂರಿಗಳು ಕೇವಲ ಸನಾತನ ಸಂಸ್ಥೆಯ ಸದಸ್ಯರನ್ನು ಒಳಗೊಂಡಂತೆ ಸಾಧ್ಯ ಎಂದು ಹೇಳಲಾಗುವುದಿಲ್ಲ” ಎಂದು ಪತ್ರದಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಅಪಘಾತಕ್ಕೆ ಬಲಿಯಾದ ಜಾನುವಾರುಗಳು: ಬಸ್ ಚಾಲಕನಿಗೆ ಮಾರಣಾಂತಿಕವಾಗಿ ಥಳಿಸಿದ ಸ್ವಯಂಘೋಷಿತ ಗೋರಕ್ಷಕರು


