ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸ್ವಕ್ಷೇತ್ರವಾದ ಕನಕಪುರ ತಾಲೂಕಿನ ಮಾಳಗಾಳು ಗ್ರಾಮದಲ್ಲಿ ಪ್ರಬಲ (ಒಕ್ಕಲಿಗ) ಜಾತಿ ಯುವಕರ ಗುಂಪೊಂದು, ಭಾನುವಾರ ತಡರಾತ್ರಿ ಪರಿಶಿಷ್ಟ ಸಮುದಾಯದ ಯುವಕ ಅನೀಶ್ ಮೇಲೆ ಹಲ್ಲೆ ನಡೆಸಿ ಮುಂಗೈ ಕತ್ತರಿಸಿದ್ದಾರೆ. ಸಂತ್ರಸ್ತನ ಕುಟುಂಬದ ಏಳು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದ ಗ್ರಾಮ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಎಸ್. ರವಿಯವರ ಸ್ವಗ್ರಾಮವಾಗಿದೆ.
ಗಾಯಾಳು ಅನೀಶ್ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕನಕಪುರದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಅನೀಶ್ ಎಡಗೈ ತುಂಡಾಗಿದ್ದು, ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕುಟುಂಬದ ಇತರೆ ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದು, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳು ಅನೀಶ್ ಮಾವ ಪಿ.ಎಲ್.ಡಿ. ಬ್ಯಾಂಕ್ ಉದ್ಯೋಗಿಯಾಗಿರುವ ಲಕ್ಷ್ಮಣ, ಸಂಬಂಧಿ ಗೋವಿಂದರಾಜು ಅವರ ಮೇಲೆ ಕೂಡ ಗುಂಪು ಹಲ್ಲೆ ಮಾಡಿದೆ. ಜೊತೆಗೆ, ಮನೆಯಲ್ಲಿದ್ದ ಮಹಿಳೆಯರು ಸೇರಿದಂತೆ 7 ಜನರ ಮೇಲೆ ಈ ಗುಂಪು ಹಲ್ಲೆ ನಡೆಸಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಎರಡು ಆಟೋಗಳನ್ನು ಜಖಂಗೊಳಿಸಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಸೇರಿದ ಹರ್ಷ, ಕರುಣೇಶ್, ರಾಹುಲ್, ಶಿವ, ಶಶಾಂಕ, ದರ್ಶನ್ ಸೇರಿದಂತೆ ಇತರರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಕೊಲೆ ಯತ್ನ ಆರೋಪದಡಿ ಕನಕಪುರ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನೆ ನಂತರ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಾರ್ತಿಕ್ ರೆಡ್ಡಿ ಗ್ರಾಮಕ್ಕೆ ನೀಡಿ ಮಾಹಿತಿ ಪಡೆದಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕೈ ಕತ್ತರಿಸಿದ ಗುಂಪು:
ಆರೋಪಿ ಹರ್ಷ ಮತ್ತು ಸಂಗಡಿಗರು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದು, 7 ಗಂಟೆಗೆ ನಡೆದ ಸಣ್ಣ ಗಲಾಟೆಗೆ ಪ್ರತೀಕಾರವಾಗಿ, ರಾತ್ರಿ ಒಂಬತ್ತು ಗಂಟೆಗೆ ಮಾರಕಾಸ್ತ್ರಗಳೊಂದಿಗೆ ಬಂದು ಹಲ್ಲೆ ನಡೆಸಿದ್ದಾರೆ.
ಭಾನುವಾರ ಸಂಜೆ ದಲಿತ ಸಮುದಾಯದ ಯುವಕರಿಬ್ಬರು ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದರು. ಅದೇ ರಸ್ತೆಯಲ್ಲಿ ಹೊರಟಿದ್ದ ಒಕ್ಕಲಿಗ ಸಮುದಾಯದ ಯುವಕರ ಗುಂಪೊಂದು ರಸ್ತೆಯಲ್ಲಿ ಏಕೆ ನಿಂತಿದ್ದೀರಿ ಎಂದು ಜಗಳ ತೆಗೆದಿದ್ದಾರೆ. ನಂತರ, ರಾತ್ರಿ ದಲಿತರ ಎನ್.ಕೆ. ಕಾಲೊನಿಗೆ ನುಗ್ಗಿದ ಒಕ್ಕಲಿಗ ಸಮುದಾಯದ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಪ್ರಮುಖ ಆರೋಪಿ ಹರ್ಷ ರೌಡಿಶೀಟರ್ ಆಗಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಿಂದ ಆತನನ್ನು ತುಮಕೂರಿಗೆ ಗಡಿಪಾರು ಮಾಡಲಾಗಿತ್ತು. ಈಗಲೂ ಆತನ ಮೇಲೆ ಗಡೀಡಿಪಾರು ಆದೇಶ ಚಾಲ್ತಿಯಲ್ಲಿದೆ ಎನ್ನಲಾಗಿದ್ದು, ಆಗಾಗ ಊರಿಗೆ ಬಂದು ಹೋಗುತ್ತಿದ್ದ. ಆತನೇ ತನ್ನ ಸಹಚರರೊಂದಿಗೆ ಈ ಕೃತ್ಯ ಎಸಗಿದ್ದಾನೆ ಎಂದು ಹಲ್ಲೆಗೊಳಗಾದ ಲಕ್ಷ್ಮಣ್ ದೂರಿನಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟರೆ ಇವರ ಟಾರ್ಗೆಟ್: ಬಿಎಸ್ಪಿ ಮುಖಂಡ
ಪ್ರಕರಣ ಸಂಬಂಧ ಸಂತ್ರಸ್ತರ ಬೆಂಬಲಕ್ಕೆ ನಿಂತಿರುವ ಜಿಲ್ಲಾ ಬಿಎಸ್ಪಿ ಮುಖಂಡರಾದ ಮಲ್ಲಿಕಾರ್ಜುನ್ ಮಾತನಾಡಿ, “ಘಟನೆ ಹಿಂದೆ ಅತಿ ದೊಡ್ಡ ಜಾತಿ ವೈಷಮ್ಯ ಇದೆ; ಈಗ ಗಾಯಗೊಂಡಿರುವ ಕುಟುಂಬದ ಮೇಲೆ ಮಾತ್ರ ಹಲ್ಲೆ ನಡೆದಿಲ್ಲ. ಅಪರಾಧ ಎಸಗಿರುವ ಹರ್ಷ ಅಲಿಯಾಸ್ ಕೈಮ, ಕನ್ನು, ಪಿಂಗಿ ಮತ್ತು ಇತರೆ ಆರೋಪಿಗಳು ಪರಿಶಿಷ್ಟರನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ರಾಜಕೀಯವಾಗಿ ಮುಂಚೂಣಿಯಲ್ಲಿರುವ ಸುಮಾರು ಹತ್ತಕ್ಕೂ ಹೆಚ್ಚು ಕುಟುಂಬಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದಾರೆ” ಎಂದರು.
“ಹರ್ಷನನ್ನು ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ; ಅಲ್ಲಿ ಆತ ಜಿಲ್ಲಾ ಎನ್ಡಿಪಿಎಸ್ ಮುಂದೆ ಪ್ರತಿದಿನ ಹಾಜರಾಗಿ, ಬೆಳಗ್ಗೆ-ಸಂಜೆ ಸಹಿ ಮಾಡಬೇಕು. ಅದನ್ನೆಲ್ಲಾ ಆತ ಧಿಕ್ಕರಿಸಿ ಜಿಲ್ಲೆಗೆ ಬಂದು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾನೆ. ಆತನ ಮೇಲೆ ಈಗಲೂ ಗಡಿಪಾರು ಆದೇಶ ಚಾಲ್ತಿಯಲ್ಲಿದ್ದು, ಸ್ಥಳೀಯ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಗಡಿಪಾರಾಗಿರುವ ಆರೋಪಿಯೊಬ್ಬ ಮೂರು ಜಿಲ್ಲೆಗಳನ್ನು ದಾಟಿಕೊಂಡು ಬಂದು ಅಪರಾಧ ಎಸಗುತ್ತಾನೆ ಎಂದರೆ ಇದರ ಅರ್ಥ ಏನು” ಎಂದು ಪ್ರಶ್ನಿಸಿದರು.
“ಹರ್ಷ ಮತ್ತು ಸಂಗಡಿಗರು ಇದೇ ಕಾಲೋನಿಯ ಹಲವು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇವರು ಇಡೀ ಜಿಲ್ಲೆಯ ಪೊಲೀಸ್ ಇಲಾಖೆಗೆ ತೊಡಕಾಗಿದ್ದಾರೆ; ಅವರಿಗೆ ಯಾವುದೇ ಭಯವಿಲ್ಲ. ಇವೆಲ್ಲದರ ಮಧ್ಯೆ ಜೀವ ಹೋಗುತ್ತಿರುವುದು ಪರಿಶಿಷ್ಟರದ್ದು, ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಇದೆ” ಎಂದು ಹೇಳಿದರು.
ಇದನ್ನೂ ಓದಿ; ನೀಟ್ ಪರೀಕ್ಷೆ ವಿವಾದ: ಡಿಲಿಮಿಟೇಶನ್ ವಿರುದ್ಧದ ನಿರ್ಣಯಕ್ಕೆ ಒಪ್ಪಿಗೆ ಕೊಟ್ಟ ಕ್ಯಾಬಿನೆಟ್


