Homeಕರ್ನಾಟಕಆನೆ ವಿಜ್ಞಾನದ ವಿಸ್ಮಯಗಳು

ಆನೆ ವಿಜ್ಞಾನದ ವಿಸ್ಮಯಗಳು

- Advertisement -
- Advertisement -

ಆಗಸ್ಟ್ 12, 2024ರಂದು ವಿಶ್ವ ಆನೆ ದಿನವನ್ನು ಆಚರಿಸಲಾಯಿತು. ಕಳೆದ ಹನ್ನೆರಡು ವರ್ಷಗಳಿಂದ ಈ ದಿನವನ್ನು ಆನೆಗಳ ಸ್ಥಿತಿಗತಿ, ಸಂರಕ್ಷಣೆ, ಆವಾಸಸ್ಥಾನದ ರಕ್ಷಣೆ ಹಾಗೂ ಆನೆ-ಮಾನವ ಸಂಘರ್ಷವನ್ನು ತಡೆದು ಆನೆಗಳು ನೆಮ್ಮದಿಯಿಂದ ಬದುಕು ಸಾಗಿಸುವ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಜನರು ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಮೈಸೂರು ಆನೆ ಮೀಸಲು ಪ್ರದೇಶ ಮತ್ತು ದಾಂಡೇಲಿ ಆನೆ ಮೀಸಲು ಪ್ರದೇಶ ಎಂಬ ಎರಡು ಆನೆ ಮೀಸಲು ಪ್ರದೇಶಗಳು ರಾಜ್ಯದಲ್ಲಿವೆ. ನಮ್ಮ ದೇಶದಲ್ಲಿ 2017ರ ಆನೆಗಣತಿಯ ಪ್ರಕಾರ ಸುಮಾರು 30 ಸಾವಿರ ಆನೆಗಳಿದ್ದು, ರಾಜ್ಯದಲ್ಲಿ 6,395 ಆನೆಗಳಿವೆ. ಹವಾಮಾನ ಬದಲಾವಣೆ ಕಾರಣದ ಜೊತೆಗೆ ನೀರು ಮತ್ತು ಆಹಾರ ಅರಸಿ ಅರಣ್ಯೇತರ ಪ್ರದೇಶಗಳತ್ತ ಆನೆಗಳು ಬರುತ್ತಿರುವುದರಿಂದ ಆನೆ-ಮಾನವ ಸಂಘರ್ಷಗಳಾಗುತ್ತಿವೆ.

ಸಾರ್ವಜನಿಕರಲ್ಲಿ ವಿಸ್ಮಯವನ್ನುಂಟುಮಾಡುವ ಆನೆ ವಿಜ್ಞಾನದ ಅಂಶಗಳಿವೆ. ಆನೆಗಳ ವರ್ತನೆಯನ್ನು ಸಾರ್ವಜನಿಕರು ಅರಿತು ನಡೆದರೆ ಅವುಗಳೊಂದಿಗಿನ ಸಂಘರ್ಷವನ್ನು ತಕ್ಕಮಟ್ಟಿಗೆ ತಡೆಯಬಹುದಾಗಿದೆ. ಮೈಸೂರಿನ ದಸರಾದಲ್ಲೂ ಆನೆಗಳ ಆಕರ್ಷಣೆಯಿರುತ್ತದೆ. ಈಗಾಗಲೇ ಕಾಡಿನಿಂದ ಆನೆಗಳನ್ನು ಮೈಸೂರಿಗೆ ಕರೆತರಲಾಗಿದೆ.

ಆನೆ ಗಾತ್ರ, ಆನೆ ಬುದ್ಧಿ, ಆನೆ ನೆನಪು, ಆನೆ ಬಲ, ಆನೆ ಆಹಾರ, ಆನೆ ಆಯಸ್ಸು, ಆನೆಗಳ ಕೂಡು ಕುಟುಂಬ, ಆನೆ ಕುಟುಂಬದ ರಕ್ಷಣೆ, ಆನೆಗಳಲ್ಲಿ ಸಂತಾನೋತ್ಪತ್ತಿ, ಆನೆಗಳ ಪಂಚೇಂದ್ರಿಯಗಳ ಶಕ್ತಿ- ಹೀಗೆ ಹತ್ತಾರು ಆಸಕ್ತಿದಾಯಕ ಅಂಶಗಳು ನಿಜಕ್ಕೂ ವಿಸ್ಮಯಕಾರಿಯಾಗಿವೆ.

ಆನೆಗಳ ಒಟ್ಟು ದೇಹರಚನೆಯು ಒಂದು ದೊಡ್ಡ ಕಮಾನನ್ನು ಹೋಲುತ್ತದೆ. ಏಶಿಯಾದ ಆನೆಗಳ ವೈಜ್ಞಾನಿಕ ಹೆಸರು ಎಲೆಫಸ್ ಮ್ಯಾಕ್ಸಿಮಸ್. ಎಲೆಫಸ್ ಪದದ ಅರ್ಥ ’ಕಮಾನು’. ಆನೆಗಳ ಆಕಾರವು ದೊಡ್ಡ ಕಮಾನಿನಂತಿರುತ್ತದೆ. ಆಫ್ರಿಕಾದ ಆನೆಗಳ ವೈಜ್ಞಾನಿಕ ಹೆಸರು ಲೋಕ್ಸಾಡಾಂಟಾ ಆಫ್ರಿಕಾನಾ. ’ಓರೆಯಾದ ದಂತ’ ಎಂಬುದು ಲೋಕ್ಸಾಡಾಂಟಾ ಪದದ ಅರ್ಥವಾಗಿದೆ (ಡಾಂಟಾ ಮತ್ತು ದಂತ ಪದಗಳ ಉಚ್ಚಾರಣೆ ಹಾಗೂ ಕಾಗುಣಿತದ ನೆಂಟಸ್ತಿಕೆ ಗುರುತಿಸಿ). ಆಫ್ರಿಕಾದ ಹೆಣ್ಣು ಮತ್ತು ಗಂಡಾನೆ ಎರಡರಲ್ಲೂ ಬಾಗಿದ ಅಥವಾ ಓರೆಯಾದ ದಂತಗಳಿರುತ್ತವೆ. ಆದ್ದರಿಂದಲೇ ಲೋಕ್ಸಾಡಾಂಟಾ ಎಂಬ ಹೆಸರು. ಆದರೆ ಏಶಿಯಾದ ಗಂಡಾನೆಗಳಲ್ಲಿ ಮಾತ್ರ ದಂತವಿರುತ್ತದೆ. ದಂತವಿಲ್ಲದ ಗಂಡಾನೆಯನ್ನು ’ಮಖ್ನಾ’ ಎಂದು ಕರೆಯಲಾಗಿದೆ. ಆನೆ ದಂತವು ವರ್ಷಕ್ಕೆ ಅರ್ಧ ಅಡಿಯಷ್ಟು ಬೆಳೆಯುತ್ತದೆ. ಏಶಿಯಾದ ಆನೆಗಳ ದೇಹತೂಕ 4000ದಿಂದ 5200 ಕಿಲೋಗ್ರಾಂಗಳು.

ಅವು ಬಾಯಿಯ ಮೂಲಕ ಉಸಿರಾಡುತ್ತವೆ. ಉಸಿರಾಡಲು ಮೂಗಿಲ್ಲವಲ್ಲ. ಮೂಗೇ ಸೊಂಡಿಲಾಗಿ ಮಾರ್ಪಟ್ಟಿದೆ. ಆನೆಗಳು ಅತಿ ಬುದ್ಧಿವಂತ ಪ್ರಾಣಿಗಳು. ಅಗಾಧವಾದ ನೆನಪಿನ ಶಕ್ತಿಯಿರುತ್ತದೆ. ಅವುಗಳಿಗೆ ನೆನಪು ಮಾಸುವುದಿಲ್ಲ. ಆಹಾರ, ನೀರು ಸಿಗುವ ಜಾಗ, ನಡೆದ ಹಾದಿ ಮುಂತಾದ ಅಂಶಗಳನ್ನು ದಶಕಗಳಗಟ್ಟಲೆ ನೆನಪಿನಲ್ಲಿಟ್ಟುಕೊಳ್ಳುತ್ತವೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ನಿದ್ದೆ ಮಾಡುತ್ತವೆ. ಬಲಬದಿ, ಎಡಬದಿ ಮಲಗಿ, ಇಲ್ಲವೆ ನಿಂತೇ ನಿದ್ದೆ ಮಾಡುತ್ತವೆ. ಮರಕ್ಕೆ ಒರಗಿನಿಂತು ಮಾಡುತ್ತವೆ. ಆನೆಗಳ ಸರಾಸರಿ ಆಯಸ್ಸು 70 ವರ್ಷಗಳು. ಹೆಚ್ಚೂಕಡಿಮೆ ಮಾನವನಷ್ಟು ಆಯಸ್ಸು.

ಆನೆಗಳಲ್ಲಿ ಸಂತಾನೋತ್ಪತ್ತಿ

ಆನೆಗಳ ವೃಷಣಗಳು ಹೊಟ್ಟೆಯ ಒಳಗೆ ಮೂತ್ರಕೋಶದ ಪಕ್ಕದಲ್ಲಿರುತ್ತವೆ. ಹತ್ತಿರದ ರಕ್ತ ಸಂಬಂಧದೊಳಗೆ ಸಂತಾನೋತ್ಪತ್ತಿಯಾಗುವುದನ್ನು ಆನೆಗಳು ಇಚ್ಛಿಸುವುದಿಲ್ಲ. ಮದಗಜವು ಹಲವು ದಿನಗಳಿಂದ ಹಲವು ತಿಂಗಳವರೆಗೆ ತೀವ್ರ ಕಾಮಾವಸ್ಥೆಯಲ್ಲಿರುತ್ತದೆ. ಕಣ್ಣು ಮತ್ತು ಕಿವಿಯ ಮಧ್ಯದಲ್ಲಿರುವ ತಾತ್ಕಾಲಿಕ ಗ್ರಂಥಿ (ಟೆಂಪೊರಲ್ ಗ್ಲಾಂಡ್)ಯು ಇನ್ನಷ್ಟು ದಪ್ಪವಾಗಿ ದ್ರವ ಸ್ರವಿಸಲಾರಂಭಿಸುತ್ತದೆ. ಗಂಡು ಚೋದಕವಾದ ಟೆಸ್ಟೊಸ್ಟೀರಾನಿನ ಪ್ರಮಾಣವು ರಕ್ತದಲ್ಲಿ 20 ಪಟ್ಟು ಹೆಚ್ಚಾಗುತ್ತದೆ. ಮದಗಜವು ರೋಷಾವೇಶದಿಂದ ವರ್ತಿಸುತ್ತದೆ. ಹೆಣ್ಣಾನೆಯನ್ನು ಹುಡುಕಿಕೊಂಡು ಎಲ್ಲೆಡೆ ಅಲೆಯುತ್ತದೆ. ಆಗ ಮಾನವ ವಸತಿ ಪ್ರದೇಶಗಳತ್ತ ಬಂದಾಗ ಆನೆ-ಮಾನವ ಸಂಘರ್ಷ ಏರ್ಪಡಬಹುದು.

ಸುಮಾರು 10 ರಿಂದ 12 ವರ್ಷ ವಯಸ್ಸಿಗೆ ಹೆಣ್ಣಾನೆಗಳು ಪ್ರೌಢಾವಸ್ಥೆಗೆ ಬರುತ್ತವೆ. ಋತುಚಕ್ರದಲ್ಲಿ ಎರಡು ಸಾರಿ ಲ್ಯುಟಿನೈಸಿಂಗ್ ಹಾರ್ಮೋನು ಉಲ್ಬಣಾವಸ್ಥೆಗೆ ಏರುವುದೊಂದು ಅಪರೂಪದ ವಿಶೇಷ. ಎರಡನೇ ಉಲ್ಬಣಾವಸ್ಥೆಯಲ್ಲಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಹೆಣ್ಣಾನೆಗಳು ಮೂರು ವಾರಗಳ ಕಾಲ ಲೈಂಗಿಕ ಬಯಕೆಯನ್ನು ಹೊಂದಿರುತ್ತವೆ.

ಯಾವುದಾದರೂ ಕೆಲಸವನ್ನು ಪೂರೈಸುವುದು ತಡವಾದರೆ ’ಗಜಗರ್ಭ’ದಂತೆ ಕೆಲಸ ನಿಧಾನವಾಗುತ್ತಿದೆ ಎಂಬ ರೂಪಕವನ್ನು ಬಳಸುತ್ತೇವೆ. ಆನೆಗಳ ಗರ್ಭಾವಸ್ಥೆಯ ಅವಧಿ 660 ದಿನಗಳು. ಅಬ್ಬಾ! ಗರಿಷ್ಟ 22 ತಿಂಗಳು. ಆ ಗಜಗರ್ಭ ಬೃಹತ್ತಾಗಿ ಬೆಳೆಯಲು ಅಧಿಕ ಸಮಯ ಬೇಕಾಗುತ್ತದೆ ಎಂದು ಆಲೋಚಿಸಬಹುದಾಗಿದೆ. ಏಶಿಯಾದ ಆನೆ ಕರುವಿನ ಹುಟ್ಟುತೂಕ 90 ಕಿಲೋಗ್ರಾಂ.

ಮರಿಹಾಕಿದ ನಂತರ ಹಾಲು ಕೊಡುವ ಅವಧಿ ನಾಲ್ಕರಿಂದ ಎಂಟು ವರ್ಷಗಳು. ಆನೆ ಹಾಲಿನಲ್ಲಿ ಶೇ.11.6ರಷ್ಟು ಜಿಡ್ಡಿನ ಅಂಶವಿರುತ್ತದೆ. ಇದು ಎಮ್ಮೆ ಹಾಲಿನಲ್ಲಿರುವ ಶೇ.8ರಷ್ಟು ಜಿಡ್ಡಿನ ಅಂಶಕ್ಕಿಂತ ಅಧಿಕ.

ಆನೆಯು ಗಂಟೆಗೆ 6ರಿಂದ 30 ಕಿಲೋಮೀಟರಿನಷ್ಟು ವೇಗವಾಗಿ ನಡೆಯುತ್ತದೆ. ಅವುಗಳ ಹಿಂಡಿನಲ್ಲಿ ಎರಡರಿಂದ 20ರವರೆಗೆ ಆನೆಗಳಿರುತ್ತವೆ. ಹೆಚ್ಚು ಅನುಭವವುಳ್ಳ ಹಾಗೂ ಅತಿ ವಯಸ್ಸಾದ ಹೆಣ್ಣಾನೆಯು ಆನೆಗಳ ಕುಟುಂಬದ ಮುಖ್ಯಸ್ಥೆ. ಅಂತಹ ಹೆಣ್ಣಾನೆಯು ಕುಟುಂಬದ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಕುಟುಂಬದ ಸದಸ್ಯರನ್ನು ಕಾಪಾಡುತ್ತದೆ. ಹುಲಿ, ಸಿಂಹ, ಹೈನಾ ಮತ್ತು ಮೊಸಳೆಗಳು ಮರಿಯಾನೆ, ರೋಗಪೀಡಿತ ಮತ್ತು ಮುದಿ ಆನೆಗಳನ್ನು ಬೇಟೆಯಾಡುತ್ತವೆ. ಗಂಡಾನೆಗಳು 12ರಿಂದ 14 ವರ್ಷ ವಯಸ್ಸಿಗೆ ಬರುತ್ತಿದ್ದಂತೆ ಕುಟುಂಬದಿಂದ ಹೊರನಡೆಯುತ್ತವೆ. ಯಾಕೆಂದರೆ, ಅವು ರಕ್ತ ಸಂಬಂಧದ ಹೆಣ್ಣಾನೆಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದಿಲ್ಲ. ಸಾಮಾನ್ಯವಾಗಿ ಒಂಟಿಯಾಗಿ ಇರುತ್ತವೆ. ಅದೇ ಕಾರಣಕ್ಕೆ ’ಒಂಟಿ ಸಲಗ’ ಎಂಬ ಹೆಸರು ಹುಟ್ಟಿಕೊಂಡಿದೆ.

ಆನೆಗಳ ಆಹಾರಾಭ್ಯಾಸ

ಪ್ರತಿ ಆನೆಗೆ ದಿನವೊಂದಕ್ಕೆ 150ರಿಂದ 200 ಕಿಲೋಗ್ರಾಂ ಆಹಾರ ಬೇಕು. ಸುಮಾರು 400 ಜಾತಿಯ ಮರಗಿಡಗಳ ಎಲೆಗಳನ್ನು ಆನೆಗಳು ತಿನ್ನುತ್ತವೆ. ಮರದ ತೊಗಟೆಯು ಆನೆಗಳಿಗೆ ಬೇಕಾದ ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ. ಲವಣಗಳ ಕೊರತೆಯಾದರೆ ಆನೆಗಳು ಮಣ್ಣು ತಿನ್ನುತ್ತವೆ. ಇದನ್ನು ’ಜಿಯೋಫೇಜಿಯಾ’ ಎಂದು ಕರೆಯಲಾಗಿದೆ. ದಿನದ 16ರಿಂದ 20 ಗಂಟೆಗಳ ಕಾಲ ಆಹಾರ ಸೇವಿಸುವುದರಲ್ಲೇ ಕಳೆಯುತ್ತವೆ. ದಿನಕ್ಕೆ 70ರಿಂದ 200 ಲೀಟರಿನಷ್ಟು ನೀರು ಕುಡಿಯುತ್ತವೆ. ಕೇವಲ ಐದು ನಿಮಿಷದಲ್ಲೇ 200 ಲೀಟರ್ ನೀರನ್ನು ಗಂಡಾನೆಯೊಂದು ಹೀರಿಬಿಡುತ್ತದೆ. ಸೊಂಡಿಲಿನಲ್ಲಿ 8ರಿಂದ 10 ಲೀಟರ್ ನೀರು ಹಿಡಿಸುತ್ತದೆ.

ಆನೆಗಳಲ್ಲಿ ಸಂವಹನ

ಆನೆಗಳಲ್ಲಿ ಶ್ರವಣ ಮತ್ತು ಆಘ್ರಾಣ ಶಕ್ತಿ ಅತ್ಯಂತ ಪ್ರಬಲ. ಆನೆಯೊಂದರ ಪಕ್ಕದಲ್ಲೇ ಮನುಷ್ಯನೊಬ್ಬ ನಿಂತಿದ್ದರೂ ಆತನಿಗೆ ಕೇಳಿಸದ ಆನೆಯ ಇನ್‌ಫ್ರಾಸೋನಿಕ್ ಶಬ್ದ (ಅವಶ್ರವ್ಯ ಧ್ವನಿ) ಸುಮಾರು ಎಂಟು ಕಿಲೋಮೀಟರುಗಳ ಆಚೆಗೆ ನಿಂತಿರುವ ಮತ್ತೊಂದು ಆನೆಗೆ ಕೇಳಿಸುತ್ತದೆ. ಹೀಗೆ ಪ್ರಬಲವಾದ ಶ್ರವಣಶಕ್ತಿ ಆನೆಗಳ ಕಿವಿಗಳಲ್ಲಿದೆ. ಸೊಂಡಿಲ ಮೂಲಕ ಆನೆಗಳು ವಾಸನೆಯನ್ನು ಆಘ್ರಾಣಿಸುತ್ತವೆ. ವಾಸನೆಯ ಗ್ರಹಿಕಾಶಕ್ತಿ ತುಂಬಾ ಪ್ರಬಲವಾಗಿರುತ್ತದೆ. ಹೇಗೆಂದರೆ, ಮದಗಜವು ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಎಲ್ಲೋ ದೂರದಲ್ಲಿ ಬೆದೆಯಲ್ಲಿರುವ ಹೆಣ್ಣಾನೆಯನ್ನು ಹುಡುಕಿಕೊಳ್ಳುತ್ತದೆ. ಹಾಗೆಯೇ, ಬೇಸಿಗೆ ಕಾಲದಲ್ಲಿ ಕಾಡಿನಲ್ಲಿ ಕುಡಿಯಲು ನೀರು ಸಿಗದಿದ್ದಾಗ ತನ್ನ ಸೊಂಡಿಲನ್ನು ಗಾಳಿಯಲ್ಲಿ ತೇಲಾಡಿಸಿ ಸುಮಾರು 50 ಕಿಲೋಮೀಟರುಗಳಷ್ಟು ದೂರದಲ್ಲಿ ನೀರಿನ ಲಭ್ಯತೆಯನ್ನು ಕಂಡುಕೊಳ್ಳುತ್ತದೆ. ಆಹಾರವನ್ನು ಹುಡುಕಿಕೊಳ್ಳುತ್ತವೆ. ಈ ಕಾರಣದಿಂದಲೇ ಆನೆಗಳು ಹೊಲಗದ್ದೆ ಕೆರೆಗಳ ಕಡೆಗೆ ಬರುತ್ತವೆ. ಆಗ ಆನೆ-ಮಾನವ ಸಂಘರ್ಷ ಏರ್ಪಡುತ್ತದೆ. ಆನೆಗಳ ಓಡಾಟದ ಸರಹದ್ದು ಬಲು ದೊಡ್ಡದು. ಆನೆ ನಡೆದದ್ದೇ ಹಾದಿ ಎನ್ನುವಂತೆ.

ಆನೆಗಳು ಮಣ್ಣನ್ನು ಮೈಮೇಲೆ ಎರಚಿಕೊಳ್ಳುತ್ತವೆ. ಚರ್ಮವನ್ನು ಹೊಳೆಯುವಂತೆ ಇಟ್ಟುಕೊಳ್ಳಲು ಇದು ಸಹಕಾರಿ. ಇದರಿಂದ ಕೀಟಗಳ ನಿವಾರಣೆಯೂ ಸಾಧ್ಯ. ನೀರಿನಲ್ಲಿ ಮುಳುಗಿ ಶೆಖೆಯನ್ನು ನಿವಾರಿಸಿಕೊಳ್ಳುತ್ತವೆ. ತಾಪಮಾನ ಹೆಚ್ಚಾದಾಗ ಕಿವಿಗಳನ್ನು ಅಲ್ಲಾಡಿಸಿ ಗಾಳಿ ಬೀಸಿಕೊಂಡು ತಂಪಾಗುತ್ತವೆ.

ಇವಿಷ್ಟು ಆನೆ ವಿಜ್ಞಾನದ ವಿಸ್ಮಯಕಾರಿ ಅಂಶಗಳು. ಜನಸಾಮಾನ್ಯರಿಗೆ ಈ ವಿಷಯಗಳ ಅರಿವಿರಲಿ. ಆನೆಗಳ ಪಾಡಿಗೆ ಆನೆಗಳಿರಲಿ. ಆನೆಗಳ ಜೀವನ ಕ್ರಮದ ಬಗ್ಗೆ ಕೊಂಚ ಅರಿವಿರಲಿ. ಆನೆಗಳೊಂದಿಗೆ ಮಾನವನ ಸಂಘರ್ಷ ಬೇಡ. ಅವುಗಳ ಉಪಟಳದ ಸಂದರ್ಭ ಎದುರಾದಾಗ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ. ಸಂಪರ್ಕದ ಟೋಲ್ ಫ್ರೀ ದೂರವಾಣಿ ಸಂಖ್ಯೆ 18004251314.

ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ
ಹಿರಿಯ ಪ್ರಾಧ್ಯಾಪಕರು ಪಶುವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...