Homeಕರ್ನಾಟಕಆನೆ ವಿಜ್ಞಾನದ ವಿಸ್ಮಯಗಳು

ಆನೆ ವಿಜ್ಞಾನದ ವಿಸ್ಮಯಗಳು

- Advertisement -
- Advertisement -

ಆಗಸ್ಟ್ 12, 2024ರಂದು ವಿಶ್ವ ಆನೆ ದಿನವನ್ನು ಆಚರಿಸಲಾಯಿತು. ಕಳೆದ ಹನ್ನೆರಡು ವರ್ಷಗಳಿಂದ ಈ ದಿನವನ್ನು ಆನೆಗಳ ಸ್ಥಿತಿಗತಿ, ಸಂರಕ್ಷಣೆ, ಆವಾಸಸ್ಥಾನದ ರಕ್ಷಣೆ ಹಾಗೂ ಆನೆ-ಮಾನವ ಸಂಘರ್ಷವನ್ನು ತಡೆದು ಆನೆಗಳು ನೆಮ್ಮದಿಯಿಂದ ಬದುಕು ಸಾಗಿಸುವ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಜನರು ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಮೈಸೂರು ಆನೆ ಮೀಸಲು ಪ್ರದೇಶ ಮತ್ತು ದಾಂಡೇಲಿ ಆನೆ ಮೀಸಲು ಪ್ರದೇಶ ಎಂಬ ಎರಡು ಆನೆ ಮೀಸಲು ಪ್ರದೇಶಗಳು ರಾಜ್ಯದಲ್ಲಿವೆ. ನಮ್ಮ ದೇಶದಲ್ಲಿ 2017ರ ಆನೆಗಣತಿಯ ಪ್ರಕಾರ ಸುಮಾರು 30 ಸಾವಿರ ಆನೆಗಳಿದ್ದು, ರಾಜ್ಯದಲ್ಲಿ 6,395 ಆನೆಗಳಿವೆ. ಹವಾಮಾನ ಬದಲಾವಣೆ ಕಾರಣದ ಜೊತೆಗೆ ನೀರು ಮತ್ತು ಆಹಾರ ಅರಸಿ ಅರಣ್ಯೇತರ ಪ್ರದೇಶಗಳತ್ತ ಆನೆಗಳು ಬರುತ್ತಿರುವುದರಿಂದ ಆನೆ-ಮಾನವ ಸಂಘರ್ಷಗಳಾಗುತ್ತಿವೆ.

ಸಾರ್ವಜನಿಕರಲ್ಲಿ ವಿಸ್ಮಯವನ್ನುಂಟುಮಾಡುವ ಆನೆ ವಿಜ್ಞಾನದ ಅಂಶಗಳಿವೆ. ಆನೆಗಳ ವರ್ತನೆಯನ್ನು ಸಾರ್ವಜನಿಕರು ಅರಿತು ನಡೆದರೆ ಅವುಗಳೊಂದಿಗಿನ ಸಂಘರ್ಷವನ್ನು ತಕ್ಕಮಟ್ಟಿಗೆ ತಡೆಯಬಹುದಾಗಿದೆ. ಮೈಸೂರಿನ ದಸರಾದಲ್ಲೂ ಆನೆಗಳ ಆಕರ್ಷಣೆಯಿರುತ್ತದೆ. ಈಗಾಗಲೇ ಕಾಡಿನಿಂದ ಆನೆಗಳನ್ನು ಮೈಸೂರಿಗೆ ಕರೆತರಲಾಗಿದೆ.

ಆನೆ ಗಾತ್ರ, ಆನೆ ಬುದ್ಧಿ, ಆನೆ ನೆನಪು, ಆನೆ ಬಲ, ಆನೆ ಆಹಾರ, ಆನೆ ಆಯಸ್ಸು, ಆನೆಗಳ ಕೂಡು ಕುಟುಂಬ, ಆನೆ ಕುಟುಂಬದ ರಕ್ಷಣೆ, ಆನೆಗಳಲ್ಲಿ ಸಂತಾನೋತ್ಪತ್ತಿ, ಆನೆಗಳ ಪಂಚೇಂದ್ರಿಯಗಳ ಶಕ್ತಿ- ಹೀಗೆ ಹತ್ತಾರು ಆಸಕ್ತಿದಾಯಕ ಅಂಶಗಳು ನಿಜಕ್ಕೂ ವಿಸ್ಮಯಕಾರಿಯಾಗಿವೆ.

ಆನೆಗಳ ಒಟ್ಟು ದೇಹರಚನೆಯು ಒಂದು ದೊಡ್ಡ ಕಮಾನನ್ನು ಹೋಲುತ್ತದೆ. ಏಶಿಯಾದ ಆನೆಗಳ ವೈಜ್ಞಾನಿಕ ಹೆಸರು ಎಲೆಫಸ್ ಮ್ಯಾಕ್ಸಿಮಸ್. ಎಲೆಫಸ್ ಪದದ ಅರ್ಥ ’ಕಮಾನು’. ಆನೆಗಳ ಆಕಾರವು ದೊಡ್ಡ ಕಮಾನಿನಂತಿರುತ್ತದೆ. ಆಫ್ರಿಕಾದ ಆನೆಗಳ ವೈಜ್ಞಾನಿಕ ಹೆಸರು ಲೋಕ್ಸಾಡಾಂಟಾ ಆಫ್ರಿಕಾನಾ. ’ಓರೆಯಾದ ದಂತ’ ಎಂಬುದು ಲೋಕ್ಸಾಡಾಂಟಾ ಪದದ ಅರ್ಥವಾಗಿದೆ (ಡಾಂಟಾ ಮತ್ತು ದಂತ ಪದಗಳ ಉಚ್ಚಾರಣೆ ಹಾಗೂ ಕಾಗುಣಿತದ ನೆಂಟಸ್ತಿಕೆ ಗುರುತಿಸಿ). ಆಫ್ರಿಕಾದ ಹೆಣ್ಣು ಮತ್ತು ಗಂಡಾನೆ ಎರಡರಲ್ಲೂ ಬಾಗಿದ ಅಥವಾ ಓರೆಯಾದ ದಂತಗಳಿರುತ್ತವೆ. ಆದ್ದರಿಂದಲೇ ಲೋಕ್ಸಾಡಾಂಟಾ ಎಂಬ ಹೆಸರು. ಆದರೆ ಏಶಿಯಾದ ಗಂಡಾನೆಗಳಲ್ಲಿ ಮಾತ್ರ ದಂತವಿರುತ್ತದೆ. ದಂತವಿಲ್ಲದ ಗಂಡಾನೆಯನ್ನು ’ಮಖ್ನಾ’ ಎಂದು ಕರೆಯಲಾಗಿದೆ. ಆನೆ ದಂತವು ವರ್ಷಕ್ಕೆ ಅರ್ಧ ಅಡಿಯಷ್ಟು ಬೆಳೆಯುತ್ತದೆ. ಏಶಿಯಾದ ಆನೆಗಳ ದೇಹತೂಕ 4000ದಿಂದ 5200 ಕಿಲೋಗ್ರಾಂಗಳು.

ಅವು ಬಾಯಿಯ ಮೂಲಕ ಉಸಿರಾಡುತ್ತವೆ. ಉಸಿರಾಡಲು ಮೂಗಿಲ್ಲವಲ್ಲ. ಮೂಗೇ ಸೊಂಡಿಲಾಗಿ ಮಾರ್ಪಟ್ಟಿದೆ. ಆನೆಗಳು ಅತಿ ಬುದ್ಧಿವಂತ ಪ್ರಾಣಿಗಳು. ಅಗಾಧವಾದ ನೆನಪಿನ ಶಕ್ತಿಯಿರುತ್ತದೆ. ಅವುಗಳಿಗೆ ನೆನಪು ಮಾಸುವುದಿಲ್ಲ. ಆಹಾರ, ನೀರು ಸಿಗುವ ಜಾಗ, ನಡೆದ ಹಾದಿ ಮುಂತಾದ ಅಂಶಗಳನ್ನು ದಶಕಗಳಗಟ್ಟಲೆ ನೆನಪಿನಲ್ಲಿಟ್ಟುಕೊಳ್ಳುತ್ತವೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ನಿದ್ದೆ ಮಾಡುತ್ತವೆ. ಬಲಬದಿ, ಎಡಬದಿ ಮಲಗಿ, ಇಲ್ಲವೆ ನಿಂತೇ ನಿದ್ದೆ ಮಾಡುತ್ತವೆ. ಮರಕ್ಕೆ ಒರಗಿನಿಂತು ಮಾಡುತ್ತವೆ. ಆನೆಗಳ ಸರಾಸರಿ ಆಯಸ್ಸು 70 ವರ್ಷಗಳು. ಹೆಚ್ಚೂಕಡಿಮೆ ಮಾನವನಷ್ಟು ಆಯಸ್ಸು.

ಆನೆಗಳಲ್ಲಿ ಸಂತಾನೋತ್ಪತ್ತಿ

ಆನೆಗಳ ವೃಷಣಗಳು ಹೊಟ್ಟೆಯ ಒಳಗೆ ಮೂತ್ರಕೋಶದ ಪಕ್ಕದಲ್ಲಿರುತ್ತವೆ. ಹತ್ತಿರದ ರಕ್ತ ಸಂಬಂಧದೊಳಗೆ ಸಂತಾನೋತ್ಪತ್ತಿಯಾಗುವುದನ್ನು ಆನೆಗಳು ಇಚ್ಛಿಸುವುದಿಲ್ಲ. ಮದಗಜವು ಹಲವು ದಿನಗಳಿಂದ ಹಲವು ತಿಂಗಳವರೆಗೆ ತೀವ್ರ ಕಾಮಾವಸ್ಥೆಯಲ್ಲಿರುತ್ತದೆ. ಕಣ್ಣು ಮತ್ತು ಕಿವಿಯ ಮಧ್ಯದಲ್ಲಿರುವ ತಾತ್ಕಾಲಿಕ ಗ್ರಂಥಿ (ಟೆಂಪೊರಲ್ ಗ್ಲಾಂಡ್)ಯು ಇನ್ನಷ್ಟು ದಪ್ಪವಾಗಿ ದ್ರವ ಸ್ರವಿಸಲಾರಂಭಿಸುತ್ತದೆ. ಗಂಡು ಚೋದಕವಾದ ಟೆಸ್ಟೊಸ್ಟೀರಾನಿನ ಪ್ರಮಾಣವು ರಕ್ತದಲ್ಲಿ 20 ಪಟ್ಟು ಹೆಚ್ಚಾಗುತ್ತದೆ. ಮದಗಜವು ರೋಷಾವೇಶದಿಂದ ವರ್ತಿಸುತ್ತದೆ. ಹೆಣ್ಣಾನೆಯನ್ನು ಹುಡುಕಿಕೊಂಡು ಎಲ್ಲೆಡೆ ಅಲೆಯುತ್ತದೆ. ಆಗ ಮಾನವ ವಸತಿ ಪ್ರದೇಶಗಳತ್ತ ಬಂದಾಗ ಆನೆ-ಮಾನವ ಸಂಘರ್ಷ ಏರ್ಪಡಬಹುದು.

ಸುಮಾರು 10 ರಿಂದ 12 ವರ್ಷ ವಯಸ್ಸಿಗೆ ಹೆಣ್ಣಾನೆಗಳು ಪ್ರೌಢಾವಸ್ಥೆಗೆ ಬರುತ್ತವೆ. ಋತುಚಕ್ರದಲ್ಲಿ ಎರಡು ಸಾರಿ ಲ್ಯುಟಿನೈಸಿಂಗ್ ಹಾರ್ಮೋನು ಉಲ್ಬಣಾವಸ್ಥೆಗೆ ಏರುವುದೊಂದು ಅಪರೂಪದ ವಿಶೇಷ. ಎರಡನೇ ಉಲ್ಬಣಾವಸ್ಥೆಯಲ್ಲಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಹೆಣ್ಣಾನೆಗಳು ಮೂರು ವಾರಗಳ ಕಾಲ ಲೈಂಗಿಕ ಬಯಕೆಯನ್ನು ಹೊಂದಿರುತ್ತವೆ.

ಯಾವುದಾದರೂ ಕೆಲಸವನ್ನು ಪೂರೈಸುವುದು ತಡವಾದರೆ ’ಗಜಗರ್ಭ’ದಂತೆ ಕೆಲಸ ನಿಧಾನವಾಗುತ್ತಿದೆ ಎಂಬ ರೂಪಕವನ್ನು ಬಳಸುತ್ತೇವೆ. ಆನೆಗಳ ಗರ್ಭಾವಸ್ಥೆಯ ಅವಧಿ 660 ದಿನಗಳು. ಅಬ್ಬಾ! ಗರಿಷ್ಟ 22 ತಿಂಗಳು. ಆ ಗಜಗರ್ಭ ಬೃಹತ್ತಾಗಿ ಬೆಳೆಯಲು ಅಧಿಕ ಸಮಯ ಬೇಕಾಗುತ್ತದೆ ಎಂದು ಆಲೋಚಿಸಬಹುದಾಗಿದೆ. ಏಶಿಯಾದ ಆನೆ ಕರುವಿನ ಹುಟ್ಟುತೂಕ 90 ಕಿಲೋಗ್ರಾಂ.

ಮರಿಹಾಕಿದ ನಂತರ ಹಾಲು ಕೊಡುವ ಅವಧಿ ನಾಲ್ಕರಿಂದ ಎಂಟು ವರ್ಷಗಳು. ಆನೆ ಹಾಲಿನಲ್ಲಿ ಶೇ.11.6ರಷ್ಟು ಜಿಡ್ಡಿನ ಅಂಶವಿರುತ್ತದೆ. ಇದು ಎಮ್ಮೆ ಹಾಲಿನಲ್ಲಿರುವ ಶೇ.8ರಷ್ಟು ಜಿಡ್ಡಿನ ಅಂಶಕ್ಕಿಂತ ಅಧಿಕ.

ಆನೆಯು ಗಂಟೆಗೆ 6ರಿಂದ 30 ಕಿಲೋಮೀಟರಿನಷ್ಟು ವೇಗವಾಗಿ ನಡೆಯುತ್ತದೆ. ಅವುಗಳ ಹಿಂಡಿನಲ್ಲಿ ಎರಡರಿಂದ 20ರವರೆಗೆ ಆನೆಗಳಿರುತ್ತವೆ. ಹೆಚ್ಚು ಅನುಭವವುಳ್ಳ ಹಾಗೂ ಅತಿ ವಯಸ್ಸಾದ ಹೆಣ್ಣಾನೆಯು ಆನೆಗಳ ಕುಟುಂಬದ ಮುಖ್ಯಸ್ಥೆ. ಅಂತಹ ಹೆಣ್ಣಾನೆಯು ಕುಟುಂಬದ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಕುಟುಂಬದ ಸದಸ್ಯರನ್ನು ಕಾಪಾಡುತ್ತದೆ. ಹುಲಿ, ಸಿಂಹ, ಹೈನಾ ಮತ್ತು ಮೊಸಳೆಗಳು ಮರಿಯಾನೆ, ರೋಗಪೀಡಿತ ಮತ್ತು ಮುದಿ ಆನೆಗಳನ್ನು ಬೇಟೆಯಾಡುತ್ತವೆ. ಗಂಡಾನೆಗಳು 12ರಿಂದ 14 ವರ್ಷ ವಯಸ್ಸಿಗೆ ಬರುತ್ತಿದ್ದಂತೆ ಕುಟುಂಬದಿಂದ ಹೊರನಡೆಯುತ್ತವೆ. ಯಾಕೆಂದರೆ, ಅವು ರಕ್ತ ಸಂಬಂಧದ ಹೆಣ್ಣಾನೆಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದಿಲ್ಲ. ಸಾಮಾನ್ಯವಾಗಿ ಒಂಟಿಯಾಗಿ ಇರುತ್ತವೆ. ಅದೇ ಕಾರಣಕ್ಕೆ ’ಒಂಟಿ ಸಲಗ’ ಎಂಬ ಹೆಸರು ಹುಟ್ಟಿಕೊಂಡಿದೆ.

ಆನೆಗಳ ಆಹಾರಾಭ್ಯಾಸ

ಪ್ರತಿ ಆನೆಗೆ ದಿನವೊಂದಕ್ಕೆ 150ರಿಂದ 200 ಕಿಲೋಗ್ರಾಂ ಆಹಾರ ಬೇಕು. ಸುಮಾರು 400 ಜಾತಿಯ ಮರಗಿಡಗಳ ಎಲೆಗಳನ್ನು ಆನೆಗಳು ತಿನ್ನುತ್ತವೆ. ಮರದ ತೊಗಟೆಯು ಆನೆಗಳಿಗೆ ಬೇಕಾದ ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ. ಲವಣಗಳ ಕೊರತೆಯಾದರೆ ಆನೆಗಳು ಮಣ್ಣು ತಿನ್ನುತ್ತವೆ. ಇದನ್ನು ’ಜಿಯೋಫೇಜಿಯಾ’ ಎಂದು ಕರೆಯಲಾಗಿದೆ. ದಿನದ 16ರಿಂದ 20 ಗಂಟೆಗಳ ಕಾಲ ಆಹಾರ ಸೇವಿಸುವುದರಲ್ಲೇ ಕಳೆಯುತ್ತವೆ. ದಿನಕ್ಕೆ 70ರಿಂದ 200 ಲೀಟರಿನಷ್ಟು ನೀರು ಕುಡಿಯುತ್ತವೆ. ಕೇವಲ ಐದು ನಿಮಿಷದಲ್ಲೇ 200 ಲೀಟರ್ ನೀರನ್ನು ಗಂಡಾನೆಯೊಂದು ಹೀರಿಬಿಡುತ್ತದೆ. ಸೊಂಡಿಲಿನಲ್ಲಿ 8ರಿಂದ 10 ಲೀಟರ್ ನೀರು ಹಿಡಿಸುತ್ತದೆ.

ಆನೆಗಳಲ್ಲಿ ಸಂವಹನ

ಆನೆಗಳಲ್ಲಿ ಶ್ರವಣ ಮತ್ತು ಆಘ್ರಾಣ ಶಕ್ತಿ ಅತ್ಯಂತ ಪ್ರಬಲ. ಆನೆಯೊಂದರ ಪಕ್ಕದಲ್ಲೇ ಮನುಷ್ಯನೊಬ್ಬ ನಿಂತಿದ್ದರೂ ಆತನಿಗೆ ಕೇಳಿಸದ ಆನೆಯ ಇನ್‌ಫ್ರಾಸೋನಿಕ್ ಶಬ್ದ (ಅವಶ್ರವ್ಯ ಧ್ವನಿ) ಸುಮಾರು ಎಂಟು ಕಿಲೋಮೀಟರುಗಳ ಆಚೆಗೆ ನಿಂತಿರುವ ಮತ್ತೊಂದು ಆನೆಗೆ ಕೇಳಿಸುತ್ತದೆ. ಹೀಗೆ ಪ್ರಬಲವಾದ ಶ್ರವಣಶಕ್ತಿ ಆನೆಗಳ ಕಿವಿಗಳಲ್ಲಿದೆ. ಸೊಂಡಿಲ ಮೂಲಕ ಆನೆಗಳು ವಾಸನೆಯನ್ನು ಆಘ್ರಾಣಿಸುತ್ತವೆ. ವಾಸನೆಯ ಗ್ರಹಿಕಾಶಕ್ತಿ ತುಂಬಾ ಪ್ರಬಲವಾಗಿರುತ್ತದೆ. ಹೇಗೆಂದರೆ, ಮದಗಜವು ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಎಲ್ಲೋ ದೂರದಲ್ಲಿ ಬೆದೆಯಲ್ಲಿರುವ ಹೆಣ್ಣಾನೆಯನ್ನು ಹುಡುಕಿಕೊಳ್ಳುತ್ತದೆ. ಹಾಗೆಯೇ, ಬೇಸಿಗೆ ಕಾಲದಲ್ಲಿ ಕಾಡಿನಲ್ಲಿ ಕುಡಿಯಲು ನೀರು ಸಿಗದಿದ್ದಾಗ ತನ್ನ ಸೊಂಡಿಲನ್ನು ಗಾಳಿಯಲ್ಲಿ ತೇಲಾಡಿಸಿ ಸುಮಾರು 50 ಕಿಲೋಮೀಟರುಗಳಷ್ಟು ದೂರದಲ್ಲಿ ನೀರಿನ ಲಭ್ಯತೆಯನ್ನು ಕಂಡುಕೊಳ್ಳುತ್ತದೆ. ಆಹಾರವನ್ನು ಹುಡುಕಿಕೊಳ್ಳುತ್ತವೆ. ಈ ಕಾರಣದಿಂದಲೇ ಆನೆಗಳು ಹೊಲಗದ್ದೆ ಕೆರೆಗಳ ಕಡೆಗೆ ಬರುತ್ತವೆ. ಆಗ ಆನೆ-ಮಾನವ ಸಂಘರ್ಷ ಏರ್ಪಡುತ್ತದೆ. ಆನೆಗಳ ಓಡಾಟದ ಸರಹದ್ದು ಬಲು ದೊಡ್ಡದು. ಆನೆ ನಡೆದದ್ದೇ ಹಾದಿ ಎನ್ನುವಂತೆ.

ಆನೆಗಳು ಮಣ್ಣನ್ನು ಮೈಮೇಲೆ ಎರಚಿಕೊಳ್ಳುತ್ತವೆ. ಚರ್ಮವನ್ನು ಹೊಳೆಯುವಂತೆ ಇಟ್ಟುಕೊಳ್ಳಲು ಇದು ಸಹಕಾರಿ. ಇದರಿಂದ ಕೀಟಗಳ ನಿವಾರಣೆಯೂ ಸಾಧ್ಯ. ನೀರಿನಲ್ಲಿ ಮುಳುಗಿ ಶೆಖೆಯನ್ನು ನಿವಾರಿಸಿಕೊಳ್ಳುತ್ತವೆ. ತಾಪಮಾನ ಹೆಚ್ಚಾದಾಗ ಕಿವಿಗಳನ್ನು ಅಲ್ಲಾಡಿಸಿ ಗಾಳಿ ಬೀಸಿಕೊಂಡು ತಂಪಾಗುತ್ತವೆ.

ಇವಿಷ್ಟು ಆನೆ ವಿಜ್ಞಾನದ ವಿಸ್ಮಯಕಾರಿ ಅಂಶಗಳು. ಜನಸಾಮಾನ್ಯರಿಗೆ ಈ ವಿಷಯಗಳ ಅರಿವಿರಲಿ. ಆನೆಗಳ ಪಾಡಿಗೆ ಆನೆಗಳಿರಲಿ. ಆನೆಗಳ ಜೀವನ ಕ್ರಮದ ಬಗ್ಗೆ ಕೊಂಚ ಅರಿವಿರಲಿ. ಆನೆಗಳೊಂದಿಗೆ ಮಾನವನ ಸಂಘರ್ಷ ಬೇಡ. ಅವುಗಳ ಉಪಟಳದ ಸಂದರ್ಭ ಎದುರಾದಾಗ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ. ಸಂಪರ್ಕದ ಟೋಲ್ ಫ್ರೀ ದೂರವಾಣಿ ಸಂಖ್ಯೆ 18004251314.

ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ
ಹಿರಿಯ ಪ್ರಾಧ್ಯಾಪಕರು ಪಶುವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...