Homeಕರ್ನಾಟಕಆನೆ ವಿಜ್ಞಾನದ ವಿಸ್ಮಯಗಳು

ಆನೆ ವಿಜ್ಞಾನದ ವಿಸ್ಮಯಗಳು

- Advertisement -
- Advertisement -

ಆಗಸ್ಟ್ 12, 2024ರಂದು ವಿಶ್ವ ಆನೆ ದಿನವನ್ನು ಆಚರಿಸಲಾಯಿತು. ಕಳೆದ ಹನ್ನೆರಡು ವರ್ಷಗಳಿಂದ ಈ ದಿನವನ್ನು ಆನೆಗಳ ಸ್ಥಿತಿಗತಿ, ಸಂರಕ್ಷಣೆ, ಆವಾಸಸ್ಥಾನದ ರಕ್ಷಣೆ ಹಾಗೂ ಆನೆ-ಮಾನವ ಸಂಘರ್ಷವನ್ನು ತಡೆದು ಆನೆಗಳು ನೆಮ್ಮದಿಯಿಂದ ಬದುಕು ಸಾಗಿಸುವ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಜನರು ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಮೈಸೂರು ಆನೆ ಮೀಸಲು ಪ್ರದೇಶ ಮತ್ತು ದಾಂಡೇಲಿ ಆನೆ ಮೀಸಲು ಪ್ರದೇಶ ಎಂಬ ಎರಡು ಆನೆ ಮೀಸಲು ಪ್ರದೇಶಗಳು ರಾಜ್ಯದಲ್ಲಿವೆ. ನಮ್ಮ ದೇಶದಲ್ಲಿ 2017ರ ಆನೆಗಣತಿಯ ಪ್ರಕಾರ ಸುಮಾರು 30 ಸಾವಿರ ಆನೆಗಳಿದ್ದು, ರಾಜ್ಯದಲ್ಲಿ 6,395 ಆನೆಗಳಿವೆ. ಹವಾಮಾನ ಬದಲಾವಣೆ ಕಾರಣದ ಜೊತೆಗೆ ನೀರು ಮತ್ತು ಆಹಾರ ಅರಸಿ ಅರಣ್ಯೇತರ ಪ್ರದೇಶಗಳತ್ತ ಆನೆಗಳು ಬರುತ್ತಿರುವುದರಿಂದ ಆನೆ-ಮಾನವ ಸಂಘರ್ಷಗಳಾಗುತ್ತಿವೆ.

ಸಾರ್ವಜನಿಕರಲ್ಲಿ ವಿಸ್ಮಯವನ್ನುಂಟುಮಾಡುವ ಆನೆ ವಿಜ್ಞಾನದ ಅಂಶಗಳಿವೆ. ಆನೆಗಳ ವರ್ತನೆಯನ್ನು ಸಾರ್ವಜನಿಕರು ಅರಿತು ನಡೆದರೆ ಅವುಗಳೊಂದಿಗಿನ ಸಂಘರ್ಷವನ್ನು ತಕ್ಕಮಟ್ಟಿಗೆ ತಡೆಯಬಹುದಾಗಿದೆ. ಮೈಸೂರಿನ ದಸರಾದಲ್ಲೂ ಆನೆಗಳ ಆಕರ್ಷಣೆಯಿರುತ್ತದೆ. ಈಗಾಗಲೇ ಕಾಡಿನಿಂದ ಆನೆಗಳನ್ನು ಮೈಸೂರಿಗೆ ಕರೆತರಲಾಗಿದೆ.

ಆನೆ ಗಾತ್ರ, ಆನೆ ಬುದ್ಧಿ, ಆನೆ ನೆನಪು, ಆನೆ ಬಲ, ಆನೆ ಆಹಾರ, ಆನೆ ಆಯಸ್ಸು, ಆನೆಗಳ ಕೂಡು ಕುಟುಂಬ, ಆನೆ ಕುಟುಂಬದ ರಕ್ಷಣೆ, ಆನೆಗಳಲ್ಲಿ ಸಂತಾನೋತ್ಪತ್ತಿ, ಆನೆಗಳ ಪಂಚೇಂದ್ರಿಯಗಳ ಶಕ್ತಿ- ಹೀಗೆ ಹತ್ತಾರು ಆಸಕ್ತಿದಾಯಕ ಅಂಶಗಳು ನಿಜಕ್ಕೂ ವಿಸ್ಮಯಕಾರಿಯಾಗಿವೆ.

ಆನೆಗಳ ಒಟ್ಟು ದೇಹರಚನೆಯು ಒಂದು ದೊಡ್ಡ ಕಮಾನನ್ನು ಹೋಲುತ್ತದೆ. ಏಶಿಯಾದ ಆನೆಗಳ ವೈಜ್ಞಾನಿಕ ಹೆಸರು ಎಲೆಫಸ್ ಮ್ಯಾಕ್ಸಿಮಸ್. ಎಲೆಫಸ್ ಪದದ ಅರ್ಥ ’ಕಮಾನು’. ಆನೆಗಳ ಆಕಾರವು ದೊಡ್ಡ ಕಮಾನಿನಂತಿರುತ್ತದೆ. ಆಫ್ರಿಕಾದ ಆನೆಗಳ ವೈಜ್ಞಾನಿಕ ಹೆಸರು ಲೋಕ್ಸಾಡಾಂಟಾ ಆಫ್ರಿಕಾನಾ. ’ಓರೆಯಾದ ದಂತ’ ಎಂಬುದು ಲೋಕ್ಸಾಡಾಂಟಾ ಪದದ ಅರ್ಥವಾಗಿದೆ (ಡಾಂಟಾ ಮತ್ತು ದಂತ ಪದಗಳ ಉಚ್ಚಾರಣೆ ಹಾಗೂ ಕಾಗುಣಿತದ ನೆಂಟಸ್ತಿಕೆ ಗುರುತಿಸಿ). ಆಫ್ರಿಕಾದ ಹೆಣ್ಣು ಮತ್ತು ಗಂಡಾನೆ ಎರಡರಲ್ಲೂ ಬಾಗಿದ ಅಥವಾ ಓರೆಯಾದ ದಂತಗಳಿರುತ್ತವೆ. ಆದ್ದರಿಂದಲೇ ಲೋಕ್ಸಾಡಾಂಟಾ ಎಂಬ ಹೆಸರು. ಆದರೆ ಏಶಿಯಾದ ಗಂಡಾನೆಗಳಲ್ಲಿ ಮಾತ್ರ ದಂತವಿರುತ್ತದೆ. ದಂತವಿಲ್ಲದ ಗಂಡಾನೆಯನ್ನು ’ಮಖ್ನಾ’ ಎಂದು ಕರೆಯಲಾಗಿದೆ. ಆನೆ ದಂತವು ವರ್ಷಕ್ಕೆ ಅರ್ಧ ಅಡಿಯಷ್ಟು ಬೆಳೆಯುತ್ತದೆ. ಏಶಿಯಾದ ಆನೆಗಳ ದೇಹತೂಕ 4000ದಿಂದ 5200 ಕಿಲೋಗ್ರಾಂಗಳು.

ಅವು ಬಾಯಿಯ ಮೂಲಕ ಉಸಿರಾಡುತ್ತವೆ. ಉಸಿರಾಡಲು ಮೂಗಿಲ್ಲವಲ್ಲ. ಮೂಗೇ ಸೊಂಡಿಲಾಗಿ ಮಾರ್ಪಟ್ಟಿದೆ. ಆನೆಗಳು ಅತಿ ಬುದ್ಧಿವಂತ ಪ್ರಾಣಿಗಳು. ಅಗಾಧವಾದ ನೆನಪಿನ ಶಕ್ತಿಯಿರುತ್ತದೆ. ಅವುಗಳಿಗೆ ನೆನಪು ಮಾಸುವುದಿಲ್ಲ. ಆಹಾರ, ನೀರು ಸಿಗುವ ಜಾಗ, ನಡೆದ ಹಾದಿ ಮುಂತಾದ ಅಂಶಗಳನ್ನು ದಶಕಗಳಗಟ್ಟಲೆ ನೆನಪಿನಲ್ಲಿಟ್ಟುಕೊಳ್ಳುತ್ತವೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ನಿದ್ದೆ ಮಾಡುತ್ತವೆ. ಬಲಬದಿ, ಎಡಬದಿ ಮಲಗಿ, ಇಲ್ಲವೆ ನಿಂತೇ ನಿದ್ದೆ ಮಾಡುತ್ತವೆ. ಮರಕ್ಕೆ ಒರಗಿನಿಂತು ಮಾಡುತ್ತವೆ. ಆನೆಗಳ ಸರಾಸರಿ ಆಯಸ್ಸು 70 ವರ್ಷಗಳು. ಹೆಚ್ಚೂಕಡಿಮೆ ಮಾನವನಷ್ಟು ಆಯಸ್ಸು.

ಆನೆಗಳಲ್ಲಿ ಸಂತಾನೋತ್ಪತ್ತಿ

ಆನೆಗಳ ವೃಷಣಗಳು ಹೊಟ್ಟೆಯ ಒಳಗೆ ಮೂತ್ರಕೋಶದ ಪಕ್ಕದಲ್ಲಿರುತ್ತವೆ. ಹತ್ತಿರದ ರಕ್ತ ಸಂಬಂಧದೊಳಗೆ ಸಂತಾನೋತ್ಪತ್ತಿಯಾಗುವುದನ್ನು ಆನೆಗಳು ಇಚ್ಛಿಸುವುದಿಲ್ಲ. ಮದಗಜವು ಹಲವು ದಿನಗಳಿಂದ ಹಲವು ತಿಂಗಳವರೆಗೆ ತೀವ್ರ ಕಾಮಾವಸ್ಥೆಯಲ್ಲಿರುತ್ತದೆ. ಕಣ್ಣು ಮತ್ತು ಕಿವಿಯ ಮಧ್ಯದಲ್ಲಿರುವ ತಾತ್ಕಾಲಿಕ ಗ್ರಂಥಿ (ಟೆಂಪೊರಲ್ ಗ್ಲಾಂಡ್)ಯು ಇನ್ನಷ್ಟು ದಪ್ಪವಾಗಿ ದ್ರವ ಸ್ರವಿಸಲಾರಂಭಿಸುತ್ತದೆ. ಗಂಡು ಚೋದಕವಾದ ಟೆಸ್ಟೊಸ್ಟೀರಾನಿನ ಪ್ರಮಾಣವು ರಕ್ತದಲ್ಲಿ 20 ಪಟ್ಟು ಹೆಚ್ಚಾಗುತ್ತದೆ. ಮದಗಜವು ರೋಷಾವೇಶದಿಂದ ವರ್ತಿಸುತ್ತದೆ. ಹೆಣ್ಣಾನೆಯನ್ನು ಹುಡುಕಿಕೊಂಡು ಎಲ್ಲೆಡೆ ಅಲೆಯುತ್ತದೆ. ಆಗ ಮಾನವ ವಸತಿ ಪ್ರದೇಶಗಳತ್ತ ಬಂದಾಗ ಆನೆ-ಮಾನವ ಸಂಘರ್ಷ ಏರ್ಪಡಬಹುದು.

ಸುಮಾರು 10 ರಿಂದ 12 ವರ್ಷ ವಯಸ್ಸಿಗೆ ಹೆಣ್ಣಾನೆಗಳು ಪ್ರೌಢಾವಸ್ಥೆಗೆ ಬರುತ್ತವೆ. ಋತುಚಕ್ರದಲ್ಲಿ ಎರಡು ಸಾರಿ ಲ್ಯುಟಿನೈಸಿಂಗ್ ಹಾರ್ಮೋನು ಉಲ್ಬಣಾವಸ್ಥೆಗೆ ಏರುವುದೊಂದು ಅಪರೂಪದ ವಿಶೇಷ. ಎರಡನೇ ಉಲ್ಬಣಾವಸ್ಥೆಯಲ್ಲಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಹೆಣ್ಣಾನೆಗಳು ಮೂರು ವಾರಗಳ ಕಾಲ ಲೈಂಗಿಕ ಬಯಕೆಯನ್ನು ಹೊಂದಿರುತ್ತವೆ.

ಯಾವುದಾದರೂ ಕೆಲಸವನ್ನು ಪೂರೈಸುವುದು ತಡವಾದರೆ ’ಗಜಗರ್ಭ’ದಂತೆ ಕೆಲಸ ನಿಧಾನವಾಗುತ್ತಿದೆ ಎಂಬ ರೂಪಕವನ್ನು ಬಳಸುತ್ತೇವೆ. ಆನೆಗಳ ಗರ್ಭಾವಸ್ಥೆಯ ಅವಧಿ 660 ದಿನಗಳು. ಅಬ್ಬಾ! ಗರಿಷ್ಟ 22 ತಿಂಗಳು. ಆ ಗಜಗರ್ಭ ಬೃಹತ್ತಾಗಿ ಬೆಳೆಯಲು ಅಧಿಕ ಸಮಯ ಬೇಕಾಗುತ್ತದೆ ಎಂದು ಆಲೋಚಿಸಬಹುದಾಗಿದೆ. ಏಶಿಯಾದ ಆನೆ ಕರುವಿನ ಹುಟ್ಟುತೂಕ 90 ಕಿಲೋಗ್ರಾಂ.

ಮರಿಹಾಕಿದ ನಂತರ ಹಾಲು ಕೊಡುವ ಅವಧಿ ನಾಲ್ಕರಿಂದ ಎಂಟು ವರ್ಷಗಳು. ಆನೆ ಹಾಲಿನಲ್ಲಿ ಶೇ.11.6ರಷ್ಟು ಜಿಡ್ಡಿನ ಅಂಶವಿರುತ್ತದೆ. ಇದು ಎಮ್ಮೆ ಹಾಲಿನಲ್ಲಿರುವ ಶೇ.8ರಷ್ಟು ಜಿಡ್ಡಿನ ಅಂಶಕ್ಕಿಂತ ಅಧಿಕ.

ಆನೆಯು ಗಂಟೆಗೆ 6ರಿಂದ 30 ಕಿಲೋಮೀಟರಿನಷ್ಟು ವೇಗವಾಗಿ ನಡೆಯುತ್ತದೆ. ಅವುಗಳ ಹಿಂಡಿನಲ್ಲಿ ಎರಡರಿಂದ 20ರವರೆಗೆ ಆನೆಗಳಿರುತ್ತವೆ. ಹೆಚ್ಚು ಅನುಭವವುಳ್ಳ ಹಾಗೂ ಅತಿ ವಯಸ್ಸಾದ ಹೆಣ್ಣಾನೆಯು ಆನೆಗಳ ಕುಟುಂಬದ ಮುಖ್ಯಸ್ಥೆ. ಅಂತಹ ಹೆಣ್ಣಾನೆಯು ಕುಟುಂಬದ ಒಳಿತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಕುಟುಂಬದ ಸದಸ್ಯರನ್ನು ಕಾಪಾಡುತ್ತದೆ. ಹುಲಿ, ಸಿಂಹ, ಹೈನಾ ಮತ್ತು ಮೊಸಳೆಗಳು ಮರಿಯಾನೆ, ರೋಗಪೀಡಿತ ಮತ್ತು ಮುದಿ ಆನೆಗಳನ್ನು ಬೇಟೆಯಾಡುತ್ತವೆ. ಗಂಡಾನೆಗಳು 12ರಿಂದ 14 ವರ್ಷ ವಯಸ್ಸಿಗೆ ಬರುತ್ತಿದ್ದಂತೆ ಕುಟುಂಬದಿಂದ ಹೊರನಡೆಯುತ್ತವೆ. ಯಾಕೆಂದರೆ, ಅವು ರಕ್ತ ಸಂಬಂಧದ ಹೆಣ್ಣಾನೆಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದಿಲ್ಲ. ಸಾಮಾನ್ಯವಾಗಿ ಒಂಟಿಯಾಗಿ ಇರುತ್ತವೆ. ಅದೇ ಕಾರಣಕ್ಕೆ ’ಒಂಟಿ ಸಲಗ’ ಎಂಬ ಹೆಸರು ಹುಟ್ಟಿಕೊಂಡಿದೆ.

ಆನೆಗಳ ಆಹಾರಾಭ್ಯಾಸ

ಪ್ರತಿ ಆನೆಗೆ ದಿನವೊಂದಕ್ಕೆ 150ರಿಂದ 200 ಕಿಲೋಗ್ರಾಂ ಆಹಾರ ಬೇಕು. ಸುಮಾರು 400 ಜಾತಿಯ ಮರಗಿಡಗಳ ಎಲೆಗಳನ್ನು ಆನೆಗಳು ತಿನ್ನುತ್ತವೆ. ಮರದ ತೊಗಟೆಯು ಆನೆಗಳಿಗೆ ಬೇಕಾದ ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ. ಲವಣಗಳ ಕೊರತೆಯಾದರೆ ಆನೆಗಳು ಮಣ್ಣು ತಿನ್ನುತ್ತವೆ. ಇದನ್ನು ’ಜಿಯೋಫೇಜಿಯಾ’ ಎಂದು ಕರೆಯಲಾಗಿದೆ. ದಿನದ 16ರಿಂದ 20 ಗಂಟೆಗಳ ಕಾಲ ಆಹಾರ ಸೇವಿಸುವುದರಲ್ಲೇ ಕಳೆಯುತ್ತವೆ. ದಿನಕ್ಕೆ 70ರಿಂದ 200 ಲೀಟರಿನಷ್ಟು ನೀರು ಕುಡಿಯುತ್ತವೆ. ಕೇವಲ ಐದು ನಿಮಿಷದಲ್ಲೇ 200 ಲೀಟರ್ ನೀರನ್ನು ಗಂಡಾನೆಯೊಂದು ಹೀರಿಬಿಡುತ್ತದೆ. ಸೊಂಡಿಲಿನಲ್ಲಿ 8ರಿಂದ 10 ಲೀಟರ್ ನೀರು ಹಿಡಿಸುತ್ತದೆ.

ಆನೆಗಳಲ್ಲಿ ಸಂವಹನ

ಆನೆಗಳಲ್ಲಿ ಶ್ರವಣ ಮತ್ತು ಆಘ್ರಾಣ ಶಕ್ತಿ ಅತ್ಯಂತ ಪ್ರಬಲ. ಆನೆಯೊಂದರ ಪಕ್ಕದಲ್ಲೇ ಮನುಷ್ಯನೊಬ್ಬ ನಿಂತಿದ್ದರೂ ಆತನಿಗೆ ಕೇಳಿಸದ ಆನೆಯ ಇನ್‌ಫ್ರಾಸೋನಿಕ್ ಶಬ್ದ (ಅವಶ್ರವ್ಯ ಧ್ವನಿ) ಸುಮಾರು ಎಂಟು ಕಿಲೋಮೀಟರುಗಳ ಆಚೆಗೆ ನಿಂತಿರುವ ಮತ್ತೊಂದು ಆನೆಗೆ ಕೇಳಿಸುತ್ತದೆ. ಹೀಗೆ ಪ್ರಬಲವಾದ ಶ್ರವಣಶಕ್ತಿ ಆನೆಗಳ ಕಿವಿಗಳಲ್ಲಿದೆ. ಸೊಂಡಿಲ ಮೂಲಕ ಆನೆಗಳು ವಾಸನೆಯನ್ನು ಆಘ್ರಾಣಿಸುತ್ತವೆ. ವಾಸನೆಯ ಗ್ರಹಿಕಾಶಕ್ತಿ ತುಂಬಾ ಪ್ರಬಲವಾಗಿರುತ್ತದೆ. ಹೇಗೆಂದರೆ, ಮದಗಜವು ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಎಲ್ಲೋ ದೂರದಲ್ಲಿ ಬೆದೆಯಲ್ಲಿರುವ ಹೆಣ್ಣಾನೆಯನ್ನು ಹುಡುಕಿಕೊಳ್ಳುತ್ತದೆ. ಹಾಗೆಯೇ, ಬೇಸಿಗೆ ಕಾಲದಲ್ಲಿ ಕಾಡಿನಲ್ಲಿ ಕುಡಿಯಲು ನೀರು ಸಿಗದಿದ್ದಾಗ ತನ್ನ ಸೊಂಡಿಲನ್ನು ಗಾಳಿಯಲ್ಲಿ ತೇಲಾಡಿಸಿ ಸುಮಾರು 50 ಕಿಲೋಮೀಟರುಗಳಷ್ಟು ದೂರದಲ್ಲಿ ನೀರಿನ ಲಭ್ಯತೆಯನ್ನು ಕಂಡುಕೊಳ್ಳುತ್ತದೆ. ಆಹಾರವನ್ನು ಹುಡುಕಿಕೊಳ್ಳುತ್ತವೆ. ಈ ಕಾರಣದಿಂದಲೇ ಆನೆಗಳು ಹೊಲಗದ್ದೆ ಕೆರೆಗಳ ಕಡೆಗೆ ಬರುತ್ತವೆ. ಆಗ ಆನೆ-ಮಾನವ ಸಂಘರ್ಷ ಏರ್ಪಡುತ್ತದೆ. ಆನೆಗಳ ಓಡಾಟದ ಸರಹದ್ದು ಬಲು ದೊಡ್ಡದು. ಆನೆ ನಡೆದದ್ದೇ ಹಾದಿ ಎನ್ನುವಂತೆ.

ಆನೆಗಳು ಮಣ್ಣನ್ನು ಮೈಮೇಲೆ ಎರಚಿಕೊಳ್ಳುತ್ತವೆ. ಚರ್ಮವನ್ನು ಹೊಳೆಯುವಂತೆ ಇಟ್ಟುಕೊಳ್ಳಲು ಇದು ಸಹಕಾರಿ. ಇದರಿಂದ ಕೀಟಗಳ ನಿವಾರಣೆಯೂ ಸಾಧ್ಯ. ನೀರಿನಲ್ಲಿ ಮುಳುಗಿ ಶೆಖೆಯನ್ನು ನಿವಾರಿಸಿಕೊಳ್ಳುತ್ತವೆ. ತಾಪಮಾನ ಹೆಚ್ಚಾದಾಗ ಕಿವಿಗಳನ್ನು ಅಲ್ಲಾಡಿಸಿ ಗಾಳಿ ಬೀಸಿಕೊಂಡು ತಂಪಾಗುತ್ತವೆ.

ಇವಿಷ್ಟು ಆನೆ ವಿಜ್ಞಾನದ ವಿಸ್ಮಯಕಾರಿ ಅಂಶಗಳು. ಜನಸಾಮಾನ್ಯರಿಗೆ ಈ ವಿಷಯಗಳ ಅರಿವಿರಲಿ. ಆನೆಗಳ ಪಾಡಿಗೆ ಆನೆಗಳಿರಲಿ. ಆನೆಗಳ ಜೀವನ ಕ್ರಮದ ಬಗ್ಗೆ ಕೊಂಚ ಅರಿವಿರಲಿ. ಆನೆಗಳೊಂದಿಗೆ ಮಾನವನ ಸಂಘರ್ಷ ಬೇಡ. ಅವುಗಳ ಉಪಟಳದ ಸಂದರ್ಭ ಎದುರಾದಾಗ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ. ಸಂಪರ್ಕದ ಟೋಲ್ ಫ್ರೀ ದೂರವಾಣಿ ಸಂಖ್ಯೆ 18004251314.

ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ
ಹಿರಿಯ ಪ್ರಾಧ್ಯಾಪಕರು ಪಶುವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ: ಪ್ರತ್ಯೇಕ ಘಟನೆಗಳಲ್ಲಿ ಈವರೆಗೆ ಆರು ಭಾರತೀಯರ ಸಾವು, ಒಬ್ಬರು ಕಾಣೆ; ವಿದೇಶಾಂಗ ಸಚಿವಾಲಯ ಮಾಹಿತಿ

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಗಲ್ಫ್ ಪ್ರದೇಶದಾದ್ಯಂತ ನಡೆದ ಪ್ರತ್ಯೇಕ ಘಟನೆಗಳಲ್ಲಿ ಆರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಶುಕ್ರವಾರ ತಿಳಿಸಿದೆ.  ಭಾರತೀಯ ಕಾರ್ಯಾಚರಣೆಗಳು...

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಮತ್ತೊಬ್ಬ ನಾಯಕ, ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿ ಸಾವು

ಟೆಹ್ರಾನ್: ಇಸ್ರೇಲಿ-ಅಮೆರಿಕನ್ ಕ್ಷಿಪಣಿ ದಾಳಿಯಲ್ಲಿ ಇರಾನ್ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ ದೃಢಪಡಿಸಿದೆ. ಸರ್ಕಾರಿ ಸ್ವಾಮ್ಯದ ತಸ್ನಿಮ್ ಸುದ್ದಿ ಸಂಸ್ಥೆ...

ಶಿವಮೊಗ್ಗ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ; 26 ವರ್ಷದ ಪಶುವೈದ್ಯೆ ಸಾವು

ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ಮೃಗಾಲಯದಲ್ಲಿ ಗುರುವಾರ ತಡರಾತ್ರಿ ನೀರಾನೆ ದಾಳಿಗೆ ಒಳಗಾಗಿದ್ದ 26 ವರ್ಷದ ತರಬೇತಿ ವನ್ಯಜೀವಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದವರಾದ ಸಮೀಕ್ಷಾ,...

ಸಾಮೂಹಿಕ ಮತಾಂತರಕ್ಕೆ ಕಾರಣವಾದವರಿಗೆ ಜೀವಾವಧಿ ಶಿಕ್ಷೆ; ಮಸೂದೆ ಅಂಗೀಕರಿಸಿದ ಛತ್ತೀಸ್‌ಗಢ ವಿಧಾನಸಭೆ

ಬಲವಂತ, ಪ್ರಚೋದನೆ, ವಂಚನೆ ಅಥವಾ ತಪ್ಪು ನಿರೂಪಣೆಯ ಮೂಲಕ ನಡೆಸಲಾಗುವ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಛತ್ತೀಸ್‌ಗಢ ವಿಧಾನಸಭೆಯು ಗುರುವಾರ ಅಂಗೀಕರಿಸಿದೆ. ಸಾಮೂಹಿಕ ಮತಾಂತರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ...

6 ವರ್ಷಗಳ ಜೈಲುವಾಸದ ನಂತರ ಮಧ್ಯಂತರ ಜಾಮೀನು; ಜೈಲಿನಿಂದ ಹೊರಬಂದ ಶಾರ್ಜೀಲ್ ಇಮಾಮ್‌

ಸಹೋದರನ ಮದುವೆಯಲ್ಲಿ ಭಾಗವಹಿಸಲು ಮತ್ತು ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ದೆಹಲಿ ನ್ಯಾಯಾಲಯವು 10 ದಿನಗಳ ಮಧ್ಯಂತರ ಜಾಮೀನು ನೀಡಿದ ನಂತರ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಶುಕ್ರವಾರ ಸುಮಾರು ಆರು ವರ್ಷಗಳ...

ಉತ್ತಮ್ ನಗರದಲ್ಲಿ ಗೌರವಯುತ-ಶಾಂತಿಯುತ ಈದ್ ಆಚರಿಸುವಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಎಂದು ದೆಹಲಿ ಹೈಕೋರ್ಟ್ ನಿರ್ದೇಶನ

ರಾಷ್ಟ್ರ ರಾಜಧಾನಿಯ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆ, ಸಮುದಾಯಗಳ ನಡುವೆ ಶಾಂತಿ ಕಾಪಾಡಿಕೊಳ್ಳುವ ಜೊತೆಗೆ ಶಾಂತಿಯುತ ಮತ್ತು ಘನತೆಯ ಈದ್ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಅನುಮತಿಸಬಹುದಾದ ಎಲ್ಲಾ...

ಕಥುವಾ ಪ್ರಕರಣ: ವೈಯಕ್ತಿಕ ಭದ್ರತೆ ಕಡಿತ; ‘ಮಗಳು ಶಾಲೆಗೆ ಹೋಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ ವಕೀಲೆ ದೀಪಿಕಾ ಪುಷ್ಕರ್ ನಾಥ್ 

2018 ರ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಂಟು ವರ್ಷದ ಬಾಲಕಿಯ ಕುಟುಂಬವನ್ನು ಪ್ರತಿನಿಧಿಸಿದ್ದ ಜಮ್ಮುವಿನ ಪ್ರಮುಖ ವಕೀಲೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ದೀಪಿಕಾ ಪುಷ್ಕರ್ ನಾಥ್, ತಮ್ಮ ವೈಯಕ್ತಿಕ...

ಒಡಿಶಾ| ದಲಿತ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಸಾಮಾಜಿಕ ಬಹಿಷ್ಕಾರದ ಆತಂಕಕಾರಿ ಪ್ರಕರಣವೊಂದು ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯ ಕಬಿಸೂರ್ಯನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ಅರ್ಜುನಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ್ದಕ್ಕಾಗಿ...

‘ಕೇವಲ ಗಾಳಿಯಲ್ಲಿ ಕ್ರಾಂತಿ ಸಾಧ್ಯವಿಲ್ಲ, ನೆಲದ ಘಟಕವೂ ಬೇಕು’; ಇರಾನ್ ಮೇಲಿನ ಯುದ್ಧದಲ್ಲಿ ‘ಭೂ-ದಾಳಿ’ಯ ಸುಳಿವು ನೀಡಿದ ನೆತನ್ಯಾಹು

‘ನೀವು ಗಾಳಿಯಿಂದ ಕ್ರಾಂತಿಗಳನ್ನು ಮಾಡಲು ಸಾಧ್ಯವಿಲ್ಲ’ ಈ ಹೇಳಿಕೆಯ ಮೂಲಕ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧಕ್ಕೆ 'ನೆಲದ ಅಂಶ'ದ ಸಾಧ್ಯತೆಯ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸುಳಿವು ನೀಡಿದ್ದಾರೆ ಎನ್ನುವ ಸುದ್ದಿ...

ನಕಲಿ ಆಪಲ್ ಪರಿಕರಗಳ ದಂಧೆ ಭೇದಿಸಿದ ಮುಂಬೈ ಪೊಲೀಸರು; ₹16.33 ಲಕ್ಷ ಮೌಲ್ಯದ ಸರಕುಗಳ ವಶ; ಆರು ಜನರ ವಿರುದ್ಧ ಪ್ರಕರಣ 

ಮುಂಬೈ: ನಕಲಿ ಬ್ರಾಂಡ್ ಸರಕುಗಳ ಮಾರಾಟದ ಮೇಲೆ ಪ್ರಮುಖ ದಾಳಿ ನಡೆಸಿರುವ ಮುಂಬೈ ಪೊಲೀಸರು, ಘಾಟ್ಕೋಪರ್ ಪೂರ್ವದಲ್ಲಿ ನಕಲಿ ಆಪಲ್ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಸಂಘಟಿತ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ 16.33...