ರಾತ್ರಿ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ, ಅದನ್ನು ವಿಡಿಯೊ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಎಂಬಲ್ಲಿ ನಡೆದಿದ್ದು, ದುಷ್ಕರ್ಮಿಗಳ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕರಾವಳಿಯಲ್ಲಿ ಚಾಲ್ತಿಯಲ್ಲಿರುವ ‘ಅನೈತಿಕ ಪೊಲೀಸ್ಗಿರಿ’ ಭಾಗವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೆ ಎಂಬ ಕಾರಣಕ್ಕೆ ಕಂಬಕ್ಕೆ ಕಟ್ಟಿ ಹಾಕಿ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿದೆ. ಮಂಗಳೂರಿನ ಬೆಂಗರೆ ನಿವಾಸಿ ಮಹಮ್ಮದ್ ಮುಸ್ತಫಾ ಹಲ್ಲೆಗೊಳಗಾದ ಯುವಕ. ಈತ ಸಜಿಪನಡುವಿನ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ.
ರಾತ್ರಿ ವೇಳೆ ತನ್ನ ಪ್ರೇಯಸಿಯನ್ನು ಭೇಟಿಯಾಗಲು ತೆರಳಿದ್ದ ಸಂದರ್ಭ ಮುಸ್ತಾಫಾನನ್ನು ಹಿಡಿದು, ಆತನ ಅಂಗಿ ಕಳಚಿ ಹಲ್ಲೆ ನಡೆಸಲಾಗಿದೆ. ದುಷ್ಕರ್ಮಿಗಳು ತಾವು ಹಲ್ಲೆ ಮಾಡಿದ್ದನ್ನೂ ಕೂಡ ವಿಡಿಯೋ ಮಾಡಿಕೊಂಡಿದ್ದಾರೆ.
ಹಲ್ಲೆಗೊಳಗಾದ ಯುವಕನಿಂದ ಇದೀಗ ಪೋಲೀಸರಿಗೆ ದೂರು ಸಲ್ಲಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ; ಅತ್ಯಾಚಾರ ಪ್ರಕರಣ: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್


