ಅದಾನಿ ಗ್ರೀನ್ ಎನರ್ಜಿ, ಅದರ ಮುಖ್ಯಸ್ಥ ಗೌತಮ್ ಅದಾನಿ ಹಾಗೂ ಮತ್ತಿರರ ವಿರುದ್ದ ಲಂಚ, ವಂಚನೆ ಆರೋಪ ಕೇಳಿ ಬಂದಿರುವ ಹಿನ್ನೆಲೆ, ಅದಾನಿ ಸಂಸ್ಥೆ ಜೊತೆಗಿನ ವಿದ್ಯುತ್ ಒಪ್ಪಂದ ರದ್ದುಗೊಳಿಸಲು ಆಂಧ್ರ ಪ್ರದೇಶ ಸರ್ಕಾರ ಚಿಂತಿಸುತ್ತಿದೆ ಎಂದು ವರದಿಯಾಗಿದೆ.
ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರರ ವಿರುದ್ದ ಯುಎಸ್ ಫೆಡರಲ್ ನ್ಯಾಯಾಲಯ ಗುರುವಾರ (ನ.21) ಬಂಧನ ವಾರೆಂಟ್ ಜಾರಿಗೊಳಿಸಿದೆ.
ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಆರೋಪಿಗಳು 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಲಾಭವನ್ನು ನಿರೀಕ್ಷಿಸುವ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಂದ ಮಾಡಿಕೊಂಡಿರುವ ಗಂಭೀರ ಆರೋಪವಿದೆ.
ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಯುಎಸ್ಇಸಿ) ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಫೆಡರಲ್ ಪ್ಯಾಸಿಕ್ಯೂಟರ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.
ಯುಎಸ್ಇಸಿ ನೀಡಿದ್ದ ದೂರಿನಲ್ಲಿ, ಗೌತಮ್ ಅದಾನಿ ವೈಎಸ್ಆರ್ಸಿಪಿ ಮುಖ್ಯಸ್ಥ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ 2021ರ ಆಗಸ್ಟ್ನಲ್ಲಿ ಅಂದಾಜು ರೂ.1,750 ಕೋಟಿ (ಸುಮಾರು $228 ಮಿಲಿಯನ್) ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾಗಿ ವರದಿಯಾಗಿದೆ.
ಯುಎಸ್ ಅಟಾರ್ನಿ ಕಚೇರಿಯ ಪ್ರಕಾರ, 2021 ಮತ್ತು 2022ರಲ್ಲಿ ಗೌತಮ್ ಅದಾನಿಯವರು ಆಂಧ್ರ ಪ್ರದೇಶದ ಸಿಎಂ ಮತ್ತು ಸರ್ಕಾರಿ ಅಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರು. ಈ ವೇಳೆ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಇಸಿಐ) ಯೊಂದಿಗೆ ವಿದ್ಯುತ್ ಮಾರಾಟ ಒಪ್ಪಂದಗಳಿಗೆ ಸಹಿ ಹಾಕಲು ಲಂಚ ನೀಡಿದ್ದರು.
“ಅಗತ್ಯ ಸೌಲಭ್ಯದ ಕೊರತೆ ಹಿನ್ನೆಲೆ ಆಂಧ್ರ ಪ್ರದೇಶ ಸರ್ಕಾರ ಎಸ್ಇಸಿಐನಿಂದ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಂಡಿರಲಿಲ್ಲ. ಹಾಗಾಗಿ, ಆಗಸ್ಟ್ 2021ರಲ್ಲಿ, ಗೌತಮ್ ಅದಾನಿ ಜಗನ್ ಮೋಹನ್ ರೆಡ್ಡಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದರು” ಎಂದು ಯುಎಸ್ಇಸಿ ತನ್ನ ದೂರಿನಲ್ಲಿ (Case 1:24-cv-08080) ಆರೋಪಿಸಿದೆ ಮತ್ತು ಆರೋಪಿಗಳಾದ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ವಿಚಾರಣೆಗೆ ಒತ್ತಾಯಿಸಿದೆ.
“ಜಗನ್ ಮೋಹನ್ ರೆಡ್ಡಿಯವರನ್ನು ಗೌತಮ್ ಅದಾನಿ ಭೇಟಿಯಾದಾಗ 7,000 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಖರೀದಿಗೆ ಸಂಬಂಧಿಸಿ ಎಸ್ಇಸಿಐನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಂಧ್ರ ಪ್ರದೇಶದ ಸರ್ಕಾರಿ ಅಧಿಕಾರಿಗಳಿಗೆ ಲಂಚ ಪಾವತಿಸಿದ್ದಾರೆ ಅಥವಾ ಭರವಸೆ ನೀಡಿದ್ದಾರೆ” ಎಂದು ಯುಎಸ್ಇಸಿ ದೂರಿನಲ್ಲಿ ತಿಳಿಸಿದೆ.
ಅದಾನಿ ವಿರುದ್ದದ ದೋಷಾರೋಪ ಪಟ್ಟಿಯ ಪ್ರಕಾರ, ಆಂಧ್ರ ಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಛತ್ತೀಸ್ಗಢ ರಾಜ್ಯ ಸರ್ಕಾರಗಳಿಗೆ ನೀಡಲಾದ ಒಟ್ಟು ಲಂಚ ಸರಿಸುಮಾರು ರೂ.2029 ಕೋಟಿಗಳು (ಸುಮಾರು $265 ಮಿಲಿಯನ್), ಅದರಲ್ಲಿ ಸುಮಾರು 85 ಪ್ರತಿಶತ, ಅಂದರೆ ರೂ.1,750 ಕೋಟಿಗಳು ($228 ಮಿಲಿಯನ್) ಆಂಧ್ರ ಪ್ರದೇಶಕ್ಕೆ ಪಾವತಿಸಲಾಗಿದೆ ಅಥವಾ ಪಾವತಿಸುವ ಭರವಸೆ ನೀಡಲಾಗಿದೆ.
ಅದಾನಿ ಅವರು ಜಗನ್ ಮೋಹನ್ ರೆಡ್ಡಿಯನ್ನು ಭೇಟಿಯಾದ ಒಂದು ವಾರದ ನಂತರ, “ಕಳೆದ ತಿಂಗಳು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದ್ಯುತ್ ಖರೀದಿಸುವ ಎಸ್ಇಸಿಐ ಪ್ರಸ್ತಾಪವನ್ನು ಒಪ್ಪಿಕೊಂಡು ಮೊದಲ ಹಂತದಲ್ಲಿ 7,000 ಮೆ.ವ್ಯಾ ವಿದ್ಯುತ್ ಖರೀದಿಸಲು ತೀರ್ಮಾನಿಸಲಾಗಿದೆ” ಎಂದು ಸರ್ಕಾರ ಸಾರ್ವಜನಿಕವಾಗಿ ಹೇಳಿತ್ತು. “ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಪಾವತಿಸಿದ ಅಥವಾ ಭರವಸೆ ನೀಡಿದ ಲಂಚವು ಕೆಲಸ ಮಾಡಿದೆ ಎಂದರ್ಥ” ಎಂದು ಯುಎಸ್ಎಸ್ಇಸಿ ದೂರಿನಲ್ಲಿ ಹೇಳಿದೆ.
ಆಂಧ್ರ ಪ್ರದೇಶದ ಈಗಿನ ರಾಜ್ಯ ಸರ್ಕಾರ ಹಿಂದಿನ ಆಡಳಿತದ ‘ಎಲ್ಲಾ ಆಂತರಿಕ ಫೈಲ್ಗಳನ್ನು ಪರಿಶೀಲನೆ ನಡೆಸುತ್ತಿದೆ. ಅದರ ಪ್ರಕಾರ, ಆಪಾದಿತ ಅವ್ಯವಹಾರ ನಡೆದಿದೆ ಎಂದು ರಾಜ್ಯ ಹಣಕಾಸು ಸಚಿವ ಪಯ್ಯಾವುಲಾ ಕೇಶವ್ ಸೋಮವಾರ ತಿಳಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.
“ಒಪ್ಪಂದವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ನಾವು ಮುಂದೆ ಏನು ಮಾಡಬಹುದು ಎಂಬುವುದನ್ನು ನಾವು ಪರಿಶೀಲಿಸುತ್ತೇವೆ. ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ” ಎಂದು ಕೇಶವ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ವಿದ್ಯುತ್ ಖರೀದಿ ಹಗರಣ | ಜಗನ್ ಮೋಹನ್ ರೆಡ್ಡಿಗೆ ₹1,750 ಕೋಟಿ ಲಂಚದ ಭರವಸೆ ನೀಡಿದ್ದ ಗೌತಮ್ ಅದಾನಿ : ಆರೋಪ


