ನಮ್ಮ 80 ಜನ ಶಾಸಕರಿದ್ದು ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ರಲ್ಲ ಎಂದು ನಮ್ಮ ಕಾರ್ಯಕರ್ತರೊಬ್ಬರು ಕೇಳಿದ್ದರು. ಅದಕ್ಕೆ ಲೋಕಸಭಾ ಚುನಾವಣೆ ಆಗುವವರೆಗೂ ತಾಳ್ಮೆಯಿಂದಿರಿ, ಚುನಾವಣೆಯ ನಂತರ ಕೂತು ಮಾತನಾಡೋಣ ಎಂದಿದ್ದೆ. ನಾನು ಸರ್ಕಾರ ಬೀಳಿಸುತ್ತೇನೆ ಎಂದು ಹೇಳಿಲ್ಲ, ಆ ಪ್ರಯತ್ನವನ್ನೂ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ಬಂದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂಬ ಕಾರಣಕ್ಕೆ ಆಡಿಯೋ ಲೀಕ್ ಮಾಡಿದ್ದಾರೆ. ಹಿರಿಯ ನಾಯಕರಷ್ಟೇ ಇರುವ ಬಿಜೆಪಿಯ ಕೋರ್ ಕಮಿಟಿಯಲ್ಲೇ ಯಡಿಯೂರಪ್ಪ ಅವರಿಗೆ ಆಗದವರು ಇದ್ದಾರೆ ಅಲ್ಲವೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ನಿಂದ ಬೇರೇನು ನಿರೀಕ್ಷೆ ಮಾಡಲು ಸಾಧ್ಯ? ಇನ್ನಷ್ಟು ಜೆಡಿಎಸ್ ಶಾಸಕರು ಬಿಜೆಪಿ ಸೇರಬಹುದೆಂಬ ಭಯಕ್ಕೆ ಅವರು ಹಾಗೆ ಮಾತನಾಡಿರಲೂಬಹುದು. ಇದು ನಿರೀಕ್ಷಿತ ರಾಜಕೀಯ ಬೆಳವಣಿಗೆಯಾಗಿದೆ ಎಂದಿದ್ದಾರೆ.
ನೋಟು ರದ್ದತಿ, ಅವೈಜ್ಞಾನಿಕ ಹಾಗೂ ಅಸಮರ್ಪಕ ಜಿಎಸ್ಟಿ ಜಾರಿ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯ ದೇಶದ ಆರ್ಥಿಕ ಹಿಂಜರಿತಕ್ಕೆ ಬಹುಮುಖ್ಯ ಕಾರಣಗಳು. ಹಸಿವಿನ ಪ್ರಮಾಣ ಹೆಚ್ಚಿರುವ 118 ದೇಶಗಳ ಪಟ್ಟಿಯಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಇದು ದೇಶದ ಪಾಲಿನ ಕರಾಳ ದಿನಗಳು. ‘ಭಾರತ್ ಮೇ ಸಬ್ ಅಚ್ಚಾ ಹೇ’ ಎಂದರೆ ಇದಾ? ಎಂದು ಸಿದ್ದು ಪ್ರಶ್ನಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯನವರು ಸರಣಿ ಟ್ವೀಟ್ಗಳನ್ನು ಪ್ರಕಟಿಸಿದ್ದಾರೆ.