ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಇಂದು (ಡಿ.19) ಬೆಳಿಗ್ಗೆ ಸಂಸತ್ ಭವನದ ಬಳಿ ನಡೆದ ಪ್ರತಿಭಟನೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಗಂಭೀರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
“ಸಂಸತ್ತಿನ ಮಕರ ದ್ವಾರದ ಬಳಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ. ಈ ಹಲ್ಲೆಯ ಕುರಿತು ತನಿಖೆ ನಡೆಸಬೇಕು” ಎಂದು ಆಗ್ರಹಿಸಿ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಸ್ಪೀಕರ್ಗೆ ಪತ್ರ ಬರೆದಿದ್ದಾರೆ.
“ರಾಜ್ಯಸಭೆಯಲ್ಲಿ ಡಿ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಇಂದು (ಡಿ.19) ಬೆಳಿಗ್ಗೆ ಸಂಸತ್ತಿನ ‘ಅಂಬೇಡ್ಕರ್ ಪ್ರೇರಣಾ ಸ್ಥಳ’ದಿಂದ ಮಕರ ದ್ವಾರದವರೆಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಸದರು ಪ್ರತಿಭಟನೆ ಹಮ್ಮಿಕೊಂಡಿದ್ದರು” ಎಂದು ಖರ್ಗೆ ಅವರು ಸ್ಪೀಕರ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
My letter to the Hon’ble @loksabhaspeaker urging to order an inquiry into the incident which is an assault not just on me personally, but on the Leader of the Opposition, Rajya Sabha and the Congress President. pic.twitter.com/gmILQdIDYW
— Mallikarjun Kharge (@kharge) December 19, 2024
“ನಾನು ಇಂಡಿಯಾ ಮೈತ್ರಿಕೂಟದ ಸಂಸದರ ಜೊತೆ ಮಕರ ದ್ವಾರದ ಬಳಿಗೆ ತಲುಪಿದಾಗ, ನನ್ನನ್ನು ಬಿಜೆಪಿ ಸಂಸದರು ತಳ್ಳಿದರು. ಇದರಿಂದ ಆಯತಪ್ಪಿ ನೆಲಕ್ಕೆ ಬಿದ್ದೆ. ಈ ವೇಳೆ ಈಗಾಗಲೇ ಸರ್ಜರಿ ಆಗಿರುವ ನನ್ನ ಮೊಣಕಾಲಿಗೆ ಗಾಯಗಳಾಗಿವೆ. ತಕ್ಷಣ ಕಾಂಗ್ರೆಸ್ ಸಂಸದರು ಕುರ್ಚಿ ತಂದರು. ನನ್ನ ಸಹೋದ್ಯೋಗಿಗಳ ಸಹಾಯದಿಂದ ತುಂಬಾ ಕಷ್ಟಪಟ್ಟು ನಾನು ಅದರ ಮೇಲೆ ಕುಳಿತೆ. ನಂತರ ಕುಂಟುತ್ತಾ 11 ಗಂಟೆಯ ಸುಮಾರಿಗೆ ನಾನು ಸಂಸತ್ಗೆ ತೆರಳಿದೆ ” ಎಂದು ಖರ್ಗೆ ಪತ್ರದಲ್ಲಿ ವಿವರಿಸಿದ್ದಾರೆ.
“ನನ್ನ ಮೇಲೆ ನಡೆದಿರುವುದು ಸಾಮಾನ್ಯ ಹಲ್ಲೆಯಲ್ಲ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷರ ಮೇಲೆ ನಡೆದ ಹಲ್ಲೆಯಾಗಿದೆ. ಹಾಗಾಗಿ, ಈ ಘಟನೆಯ ಕುರಿತು ತನಿಖೆ ನಡೆಸುವಂತೆ ನಾನು ನಿಮ್ಮಲ್ಲಿ ಆಗ್ರಹಿಸುತ್ತಿದ್ದೇನೆ” ಎಂದು ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ : ಅಮಿತ್ ಶಾ ಹೇಳಿಕೆ ವಿರೋಧಿಸಿ ಪ್ರತಿಭಟನೆ; ಅಂಬೇಡ್ಕರ್ ಚಿತ್ರಗಳಿಂದ ಕಂಗೊಳಿಸಿದ ಸುವರ್ಣ ವಿಧಾನಸೌಧ


