ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗಿಡದ ಮುದ್ದೇನಹಳ್ಳಿಯಲ್ಲಿ ಟಾಟಾ ಎಸಿ ವಾಹನದಲ್ಲಿ ‘ಜೈಭೀಮ್’ ಹಾಡು ಹಾಕಿದ್ದರೆಂಬ ಕಾರಣಕ್ಕೆ ದಲಿತ ಯುವಕರ ಮೇಲೆ ಹಲ್ಲೆ ಮಾಡಿದ ರೈಲ್ವೆ ಪೊಲೀಸ್ ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಬಂಧಿಸಬೇಕು ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘ, ಮಕ್ಕಳ ಹೋರಾಟ ಸಮಿತಿ ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದವು.
ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದ ಸಂಘಟನಾಕಾರರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, ಇದೇ ವೇಳೆ ದುರಗಮ್ಮ ಮಾತನಾಡಿ, “ವಾಹನದಲ್ಲಿ ಅಂಬೇಡ್ಕರ್ ಅವರ ಹಾಡು ಹಾಕಿದ್ದಕ್ಕೆ ಮನಸೋ ಇಚ್ಛೆ ಹೊಡೆಯುವ ಹಕ್ಕು ಕೊಟ್ಟವರಾರು? ಅದರಿಂದ ಸಾರ್ವಜನಿವಾಗಿ ತೊಂದರೆಯಾಗಿದ್ದರೆ ತಿಳಿಹೇಳಬೆಕಿತ್ತು. ಅವರ ಮೇಲೆ ಕೈ ಮಾಡುವುದು ಮತ್ತು ದಲಿತರ ಯುವಕರ ಜಾತಿ ನಿಂದನೆ ಮಾಡುವುದು, ದೌರ್ಜನ್ಯ ಮಾಡುವುದು ಜಾತಿತಾರತಮ್ಯ ಹಾಗೂ ಅಸ್ಪೃಶ್ಯಾಚರಣೆ ಅಸಹನೆಯ ಪರಾಕಾಷ್ಠೆಯಾಗಿದೆ” ಎಂದು ದೂರಿದರು.
ಪೊಲೀಸ್ ಚಂದ್ರಶೇಖರ್ ಕೇವಲ ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಲ್ಲ. ಬದಲಿಗೆ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದಾನೆ. ಆದ್ದರಿಂದ ಆತನ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಅದೇ ರೀತಿ, ತೀವ್ರ ಹಲ್ಲೆಗೊಳಗಾಗಿರುವ ಯುವಕರ ಶುಶ್ರೂಷೆಯ ವೆಚ್ಚ ಸೇರಿದಂತೆ ಪರಿಹಾರವನ್ನೂ ಕೂಡಲೇ ಒದಗಿಸಬೇಕು” ಎಂದು ಆಗ್ರಹಿಸಿದರು.
ಕೆಪಿಆರ್ಎಸ್ ಸಂಘದ ಖಂದರ್ ಬಾಷ, ಶಿವಶಂಕರ್, ಜಿ ಪಂಪಗೌಡ ಸೇರಿದಂತೆ ಇತರರು ಇದ್ದರು.


