Homeಮುಖಪುಟಮಹಾರಾಷ್ಟ್ರದ ಜಂಗೀ ಕುಸ್ತಿ : ‘ಮೋಶಾ' ಜೋಡಿಯ ಚಿತ್ತು ಮಾಡಿದ ಪವಾರ್

ಮಹಾರಾಷ್ಟ್ರದ ಜಂಗೀ ಕುಸ್ತಿ : ‘ಮೋಶಾ’ ಜೋಡಿಯ ಚಿತ್ತು ಮಾಡಿದ ಪವಾರ್

ಅಧಿಕಾರಕ್ಕಾಗಿ ನಡೆದ ಈ ನಿರ್ಲಜ್ಜ ಕುಣಿತದಲ್ಲಿ ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಬೆತ್ತಲಾಗಿವೆ.

- Advertisement -
- Advertisement -

ನಾಟಕೀಯ ರಾಜಕಾರಣದಲ್ಲಿ ಕರ್ನಾಟಕವನ್ನು ಮೀರಿಸುವ ಮತ್ತೊಂದು ರಾಜ್ಯವಿಲ್ಲ ಎಂದು ರಾಜಧಾನಿ ದೆಹಲಿಯ ರಾಜಕೀಯ ಮತ್ತು ಮಾಧ್ಯಮ ವಲಯಗಳು ಲೇವಡಿ ಮಾಡುತ್ತಿದ್ದುದು ಉಂಟು. ಆದರೆ ನೆರೆಯ ರಾಜ್ಯ ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಕರ್ನಾಟಕದ ‘ನಾಟಕದ ಕೀರ್ತಿ’ಯನ್ನು ಕಸಿಯಲು ಪೈಪೋಟಿ ನಡೆಸಿದಂತಿವೆ.

ಅಡ್ಡದಾರಿಯನ್ನಾದರೂ ಹಿಡಿದು ಅಧಿಕಾರ ಕೈವಶ ಮಾಡಿಕೊಳ್ಳುವ ಮೋದಿ-ಅಮಿತ್ ಶಾ ಅವರ ತಂತ್ರಗಾರಿಕೆಯ ರಾಜಕಾರಣ ಮಹಾರಾಷ್ಟ್ರದಲ್ಲಿ ಹಿಮ್ಮೆಟ್ಟಿರುವುದು ಗಮನಾರ್ಹ ಬೆಳವಣಿಗೆ. ಎಂಬತ್ತರ ಇಳಿವಯಸ್ಸಿನಲ್ಲಿಯೂ ಏಟಿಗೆ ಎದುರೇಟು ನೀಡಿದ್ದಾರೆ ಶರದ್ ಪವಾರ್. ಅಧಿಕಾರ ರಾಜಕಾರಣದ ಏಳುಬೀಳುಗಳು, ಪಟ್ಟು ಪ್ರತಿಪಟ್ಟುಗಳಲ್ಲಿ ಸಣ್ಣವಯಸ್ಸಿನಿಂದಲೇ ಪಳಗಿರುವ ಪವಾರ್ ಸಾಮಥ್ರ್ಯವನ್ನು ಕಡೆಗಣಿಸಿದ ‘ಮೋಶಾ’ ಜೋಡಿ ಅನಿರೀಕ್ಷಿತ ಎದುರೇಟಿಗೆ ತತ್ತರಿಸಿ ತಡವರಿಸಿದೆ. ತತ್ವರಹಿತ ರಾಜಕಾರಣಕ್ಕೆ ‘ಚಾಣಕ್ಯತಂತ್ರ’ವೆಂದು ವೈಭವೀಕರಿಸುವ ಪ್ರವೃತ್ತಿ ಮುಖಭಂಗ ಎದುರಿಸಿದೆ.

ಆದರೆ ಕರ್ನಾಟಕದ ಉದಾಹರಣೆಯನ್ನು ನೋಡಿದರೆ ಈ ಹಿನ್ನಡೆ ತಾತ್ಕಾಲಿಕವೇ ಇದ್ದೀತು. 2018ರ ಚುನಾವಣೆಗಳು ರಾಜ್ಯದಲ್ಲಿ ತ್ರಿಶಂಕು ವಿಧಾನಸಭೆಯನ್ನು ಚಿಮ್ಮಿಸಿದಾಗ ಮುಖ್ಯಮಂತ್ರಿ ಹುದ್ದೆಯನ್ನು ಜಾತ್ಯತೀತ ಜನತಾದಳಕ್ಕೆ ಬಿಟ್ಟುಕೊಟ್ಟು ಸರ್ಕಾರ ರಚನೆಗೆ ಮುಂದಾಗಿತ್ತು ಕಾಂಗ್ರೆಸ್ ಪಕ್ಷ. ಬಹುಮತ ಸಿಗದಿದ್ದರೂ ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿದ್ದ ಬಿಜೆಪಿಯನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನಿಸಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ನವರು ವಿಶ್ವಾಸಮತ ಸಾಬೀತುಮಾಡುವ ಮುನ್ನವೇ ಸೋಲೊಪ್ಪಿ ರಾಜೀನಾಮೆ ನೀಡಿದ್ದರು.

ದಳ ಮತ್ತು ಕಾಂಗ್ರೆಸ್ ಪಕ್ಷ ರಚಿಸಿದ್ದ ಸರ್ಕಾರ ‘ನಾಯಿ ತಲೆಮೇಲಿನ ಬುತ್ತಿ’ಯಾಗಿತ್ತು. ಹಲವು ವಿಫಲ ಯತ್ನಗಳ ನಂತರ ಮೋಶಾ ಮಾರ್ಗದರ್ಶನ ದಲ್ಲಿ ದಳ-ಕಾಂಗ್ರೆಸ್ ಸರ್ಕಾರವನ್ನು ವರ್ಷದೊಪ್ಪತ್ತಿನಲ್ಲಿ ಉರುಳಿಸಲಾಯಿತು. ಕಾಂಗ್ರೆಸ್- ದಳದ ಶಾಸಕರನ್ನು ಖರೀದಿಸಿ ಅವರಿಂದ ರಾಜೀನಾಮೆ ಕೊಡಿಸಿ ಬಹುಮತದ ಸಂಖ್ಯೆಯನ್ನು 103ಕ್ಕೆ ಇಳಿಸಿ ಗೆದ್ದಿತ್ತು ಬಿಜೆಪಿ. ಇದೀಗ ಈ ಶಾಸಕರನ್ನು ಉಪಚುನಾವಣೆಗಳಲ್ಲಿ ಗೆಲ್ಲಿಸಿ ತರಲು ಬಿಜೆಪಿ ಆಕಾಶ ಭೂಮಿ ಒಂದು ಮಾಡಿದೆ.

ಕರ್ನಾಟಕದ ಈ ಪ್ರಯೋಗ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ ಎಂದು ಯಾರೂ ಎದೆತಟ್ಟಿ ಹೇಳಲಾರರು. ಮೊನ್ನೆಮೊನ್ನೆಯ ತನಕ ಕಟ್ಟರ್ ಹಿಂದೂವಾದಿ ಸಿದ್ಧಾಂತದ ಪ್ರತಿಪಾದಕ ಪಕ್ಷವಾಗಿದ್ದ ಶಿವಸೇನೆ ಮತ್ತು ಈ ನೀತಿಯನ್ನು ವಿರೋಧಿಸುತ್ತ ಬಂದಿರುವ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಗಳು ಸರ್ಕಾರ ರಚನೆಗಾಗಿ ಕೈಕಲೆಸಿವೆ. ತಮ್ಮದೇ ಆದ ನಾನಾಕಾರಣಗಳಿಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಈ ಪಕ್ಷಗಳು ಒಟ್ಟಾಗಿರುವುದು ಅವಕಾಶವಾದಿ ಮೈತ್ರಿಯಲ್ಲದೆ ಮತ್ತೇನೂ ಅಲ್ಲ.

ಈ ಅಂತರ್‌ ವಿರೋಧಕ್ಕೆ ಬೆಂಕಿ ಇಟ್ಟು ಗಾಳಿ ಊದುವ ಸಣ್ಣ ಅವಕಾಶವನ್ನೂ ಬಿಜೆಪಿ ಬಳಸಿಕೊಳ್ಳದೆ ಬಿಡುವುದಿಲ್ಲ. ಹಿಂದುತ್ವವನ್ನು ಸೋನಿಯಾಗಾಂಧಿ ಪದತಲದಲ್ಲಿ ಶರಣಾಗಿಸಿದೆ ಎಂದು ಶಿವಸೇನೆಯನ್ನು ದೂರಿದೆ ಬಿಜೆಪಿ. ಆದರೆ ಜಮ್ಮು-ಕಾಶ್ಮೀರದಲ್ಲಿ ಅಧಿಕಾರ ಹಿಡಿಯಲು ಪ್ರತ್ಯೇಕತಾವಾದಿಗಳ ಕುರಿತು ಸಹಾನುಭೂತಿ ಹೊಂದಿದ್ದ ಮುಫ್ತಿ ಕುಟುಂಬದ ಪಿ.ಡಿ.ಪಿ ಜೊತೆ ತಾನು ಕೈ ಜೋಡಿಸಿದ್ದನ್ನು ಅದು ಬಹಳ ಬೇಗ ಮರೆತಂತಿದೆ.

ಅಧಿಕಾರಕ್ಕಾಗಿ ಮಹಾರಾಷ್ಟ್ರದಲ್ಲಿ ನಡೆದ ನಿರ್ಲಜ್ಜ ನಗ್ನ ಕುಣಿತದಲ್ಲಿ ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಬೆತ್ತಲಾಗಿವೆ. ಸಂಸದೀಯ ಜನತಾಂತ್ರಿಕ ವ್ಯವಸ್ಥೆಯ ಬಲವನ್ನು ಇನ್ನಷ್ಟು ಕುಂದಿಸಿವೆ. ಈ ಕೃತ್ಯದಲ್ಲಿ ಬಿಜೆಪಿಯದು ಸಿಂಹಪಾಲು. ಅದು ಅರಿತೋ ಅರಿಯದೆಯೋ ಅತ್ಯಂತ ಅಪಾಯಕಾರಿ ಪೂರ್ವನಿದರ್ಶನಗಳನ್ನು ಸ್ಥಾಪಿಸಿಬಿಟ್ಟಿದೆ.

ಗೋವಾ, ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿರಲಿಲ್ಲ. ಆದರೂ ಪ್ರತಿಪಕ್ಷಗಳನ್ನು ಒಡೆದು ಸರ್ಕಾರ ರಚಿಸಿದ ಬಿಜೆಪಿ, ಮಹಾರಾಷ್ಟ್ರದಲ್ಲಿ ಜನಾದೇಶ ತನ್ನ ಪರವಾಗಿತ್ತೆಂದು ಹೇಳಿಕೊಳ್ಳುವ ನೈತಿಕ ದನಿಯನ್ನು ಕಳೆದುಕೊಂಡಿದೆ.

ಶಿವಸೇನೆ, ಎನ್.ಸಿ.ಪಿ., ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆಗೆ ಮುಂದಾದದ್ದು ಜನಾದೇಶದ ಅಣಕವಾಗಿದ್ದರೆ, ಭ್ರಷ್ಟಾಚಾರದ ಕೇಸುಗಳ ಬೆದರಿಕೆ ಮತ್ತು ಅವುಗಳನ್ನು ವಾಪಸು ಪಡೆಯುವ ಆಮಿಷ ಇರಿಸಿ ಕತ್ತಲ ರಾತ್ರಿಯ ಕಾರ್ಯಾಚರಣೆಯಲ್ಲಿ ಅಜಿತ್ ಪವಾರ್ ಮೂಲಕ ಎನ್.ಸಿ.ಪಿ ‘ಕುದುರೆ ಲಾಯ’ದ ವ್ಯಾಪಾರ ಕುದುರಿಸಲು ಹೊರಟ ಕೌಟಿಲ್ಯ ತಂತ್ರಕ್ಕೆ ಏನು ಹೆಸರಿಡಬೇಕು?

ದೇವೇಂದ್ರ ಫಡ್ನವೀಸ್ ಅವರ 2014ರ ವಿಧಾನಸಭಾ ಚುನಾವಣಾ ಬಹಿರಂಗ ಭಾಷಣದ ಪ್ರಕಾರ ಬಿಜೆಪಿ ಅಧಿಕಾರಕ್ಕೆ ಬಂದರೆ ಅಜಿತ್ ಪವಾರ್ ಮುಂಬಯಿಯ ಆರ್ಥರ್ ರೋಡ್ ಜೈಲಿನ ಕಂಬಿ ಎಣಿಸಬೇಕಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಿತು. ಅಜಿತ್ ಪವಾರ್ ಜೈಲು ಪಾಲಾಗಲಿಲ್ಲ. ತಿಂಗಳ ಹಿಂದೆ ವಿಧಾನಸಭೆಗೆ ಮತ್ತೊಂದು ಚುನಾವಣೆ ಜರುಗಿತು. ಮಿತ್ರಪಕ್ಷ ಶಿವಸೇನೆ ಕೈ ಕೊಟ್ಟಿತೆಂದು ಬಿಜೆಪಿಯ ಮಹಾರಥಿಗಳು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಅಧಿಕಾರ ರಚನೆಯ ಎಲ್ಲ ಬಾಗಿಲುಗಳು ಮುಚ್ಚಿದಾಗ ಹಗರಣಗಳು ಕೊರಳು ಸುತ್ತಿದ್ದ ಎನ್.ಸಿ.ಪಿ.ಯ ಅಜಿತ್ ಪವಾರ್ ಎಂಬ ಕೀಲಿ ಕೈಯನ್ನು ಕಂಡು ಹಿಡಿಯಿತು. ಮತ್ತು ತಾವು ಜೈಲಿಗೆ ಕಳಿಸುವುದಾಗಿ ಸಾರ್ವಜನಿಕವಾಗಿ ಸಾರಿ ಹೇಳಿದ್ದ ಅದೇ ಅಜಿತ್ ಪವಾರ್ ಅವರನ್ನು ದೇವೇಂದ್ರ ಫಡ್ನವೀಸ್ ಆಲಂಗಿಸಿಬಿಟ್ಟಿದ್ದರು. ಶನಿವಾರ ಮುಂಜಾನೆ ಮಹಾರಾಷ್ಟ್ರದ ಜನ ಹಾಸಿಗೆಯಿಂದೆದ್ದು ಕಣ್ಣುಜ್ಜಿಕೊಳ್ಳುವ ಹೊತ್ತಿಗಾಗಲೆ ತಮ್ಮ ಜೊತೆಗೆ ಉಪಮುಖ್ಯಮಂತ್ರಿಯಾಗಿ ಅವರಿಗೆ ಪ್ರಮಾಣವಚನ ಕೊಡಿಸಿದ್ದರು. ಬಿಜೆಪಿಯ ಮಹಾಶಕ್ತಿ ‘ಮೋಶಾ’ ಬೆಂಬಲವಿಲ್ಲದೆ ಈ ಪವಾಡ ನಡೆಯುವುದು ಸಾಧ್ಯವೇ ಇರಲಿಲ್ಲ.

ಮಹಾರಾಷ್ಟ್ರದ ಮೇಲೆ ಹೇರಿದ್ದ ರಾಷ್ಟ್ರಪತಿ ಆಡಳಿತದ ಅಧ್ಯಾದೇಶವನ್ನು ರಾತ್ರೋರಾತ್ರಿ ವಾಪಸು ಪಡೆಯಲಾಯಿತು. ವಿಶೇಷಾಧಿಕಾರವನ್ನು ಬಳಸಿದ ಪ್ರಧಾನಿಯವರು ರಾಷ್ಟ್ರಪತಿ ಆಡಳಿತವನ್ನು ವಾಪಸು ಪಡೆಯುವ ಸಚಿವಸಂಪುಟ ಸಭೆಯ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡರು. ರಾಷ್ಟ್ರಪತಿಯವರನ್ನು ನಿದ್ದೆಯಿಂದ ಎಬ್ಬಿಸಿ ಅವರ ಅಂಕಿತ ಪಡೆಯಲಾಯಿತು. ರಾಜ್ಯಪಾಲರೂ ನಿದ್ದೆಗೆಟ್ಟು ಬೆಳಗಿನ ಜಾವ ಐದೂ ಮುಕ್ಕಾಲಿಗೆ ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡ ಆದೇಶ ಪ್ರಕಟಿಸಿದರು. ಬೆಳ್ಳಂಬೆಳಿಗ್ಗೆ ಪ್ರಮಾಣವಚನ ಬೋಧಿಸಿದ್ದರು. ತುರ್ತುಪರಿಸ್ಥಿತಿಯಲ್ಲಿ ಇಂದಿರಾಗಾಂಧಿಯವರು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ರಬ್ಬರ್ ಮೊಹರಿನಂತೆ ಬಳಸುತ್ತಿದ್ದರು. ಸುಗ್ರೀವಾಜ್ಞೆಗಳನ್ನು ಯಾವಾಗೆಂದರೆ ಆವಾಗ ಅವರ ಅಂಕಿತಕ್ಕಾಗಿ ಕಳಿಸುತ್ತಿದ್ದರು. ಈ ಕುರಿತು ಅಬು ಅಬ್ರಹಾಂ ರಚಿಸಿದ್ದ ವ್ಯಂಗ್ಯಚಿತ್ರ ಐತಿಹಾಸಿಕ. ಬಾತ್ ಟಬ್ಬಿನಲ್ಲೇ ಎದ್ದು ನಿಂತು ಮೈಯಿಂದ ನೀರು ತೊಟ್ಟಿಕ್ಕುತ್ತಿರುವಂತೆ ಸುಗ್ರೀವಾಜ್ಞೆಗೆ ಸಹಿ ಹಾಕುತ್ತಿರುವ ರಾಷ್ಟ್ರಪತಿ ಅಹ್ಮದ್ ಅವರು ಹೇಳುತ್ತಾರೆ- ‘ಇನ್ನೂ ಸುಗ್ರೀವಾಜ್ಞೆಗಳಿದ್ದರೆ ಕಾಯಲು ಹೇಳಿ’ ಎಂದಿತ್ತು.

ತುರ್ತುಪರಿಸ್ಥಿತಿ ಮತ್ತು ರಾಷ್ಟ್ರಪತಿ- ರಾಜ್ಯಪಾಲರ ಹುದ್ದೆಗಳ ದುರುಪಯೋಗ ಕುರಿತು ಪುಸ್ತಕಗಳನ್ನು ಬರೆದು ದೂರಿರುವ, ವಿಡಂಬನೆ ಮಾಡಿರುವ ಅದೇ ಬಿಜೆಪಿ ಇಂದು ಮಾಡುತ್ತಿರುವುದೇನು? ಸಂವಿಧಾನ ದಿನಾಚರಣೆ ಕದ ಬಡಿದಿದ್ದ ಹೊತ್ತಿನಲ್ಲಿ ಅದರ ಆಶಯಗಳನ್ನು ಬುಡಮೇಲು ಮಾಡಿ ವ್ಯವಹರಿಸಿದ ಈ ವೈಖರಿ ಇತಿಹಾಸದಲ್ಲಿ ದಾಖಲಾಗದೆ ಇದ್ದೀತೇ?

ಅಧಿಕಾರ ಹಿಡಿಯಲು, ಎದುರಾಳಿಗಳನ್ನು ಮಟ್ಟ ಹಾಕಲು ಯಾವ ಅಡ್ಡದಾರಿಯನ್ನು ಹಿಡಿಯಲೂ ತಯಾರು, ಎಷ್ಟು ಕೆಳಗೆ ಬೇಕಾದರೂ ಕುಸಿಯಲು ತಯಾರೆಂದು ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ರುಜುವಾತು ಮಾಡಿತೋರಿಸಿದೆ. ತಾನು ಪ್ರತಿಪಾದಿಸುವುದಾಗಿ ಹೇಳಿದ್ದ ಮೌಲ್ಯಗಳನ್ನು ಗಾಳಿಗೆ ತೂರಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಅಸ್ತ್ರಗಳನ್ನು ಝಳಪಿಸಿ ವಿರೋಧಿಗಳನ್ನು ಕುಣಿಸುತ್ತಿದೆ. ಇವು ಮೂರೂ ಕೆಲಸ ಮಾಡದೆ ಹೋದರೆ ಭಾರೀ ಹಣದ ಥೈಲಿಗಳ ಆಮಿಷ ಒಡ್ಡುತ್ತಿದೆ. ಚುನಾವಣೆಗಳನ್ನು ಗೆಲ್ಲಲು ಭ್ರಷ್ಟರು, ಕೊಲೆ ಆಪಾದಿತರನ್ನು, ಹಸಿಹಸಿ ಕೋಮುವಾದಿಗಳನ್ನು ಸೇರಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಿಲ್ಲ.

ಮಹಾರಾಷ್ಟ್ರದೊಂದಿಗೆ ಚುನಾವಣೆ ಎದುರಿಸಿದ ಹರಿಯಾಣದಲ್ಲಿ ಬಹುಮತ ಸಿಗದೆ, ರಾಜಕೀಯ ಎದುರಾಳಿಯಾಗಿದ್ದ ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಾರ್ಟಿಯ ಜೊತೆ ಕೈಕಲೆಸಿತು. ದುಷ್ಯಂತ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ, ಭ್ರಷ್ಟಾಚಾರ ಹಗರಣದಲ್ಲಿ ಜೈಲಿನಲ್ಲಿದ್ದ ಆತನ ತಂದೆ ಅಜಯ್ ಚೌಟಾಲಾ ಅವರನ್ನು 14 ದಿನಗಳ ‘ಫರ್ಲೋ’ ಮೇರೆಗೆ ಬಿಡುಗಡೆ ಮಾಡಿಸಲಾಯಿತು. ಅಕ್ಟೋಬರ್ ಮಾಸಾಂತ್ಯದಲ್ಲಿ ಬಿಡುಗಡೆಯಾಗಿದ್ದ ಅಜಯ್ ಚೌಟಾಲಾ ವಾಪಸು ಜೈಲಿಗೆ ಮರಳಿರುವ ವರದಿಗಳಿಲ್ಲ.

ಇನ್ನು 70ರಿಂದ 90 ಸಾವಿರ ಕೋಟಿ ರುಪಾಯಿಗಳ ಹಗರಣವನ್ನು ಮಹಾರಾಷ್ಟ್ರದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಅಂದಿನ ನೀರಾವರಿ ಮಂತ್ರಿ ಅಜಿತ್ ಪವಾರ್ ತಲೆಗೆ ಕಟ್ಟಿತ್ತು ಬಿಜೆಪಿ. ಅಧಿಕಾರ ಹಿಡಿಯಲೆಂದು ಅದೇ ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಮಾಡಿ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದಾದರೂ ಹೇಗೆ? ಗೋವಾ, ಮಣಿಪುರ ‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದು ಬರೆದುಕೊಂಡಿರುವುದನ್ನು ಪಾರ್ಟಿ ವಿತೌಟ್ ಎ ಡಿಫರೆನ್ಸ್ ಎಂದು ತುರ್ತಾಗಿ ತಿದ್ದುಪಡಿ ಮಾಡಿಕೊಳ್ಳುವುದು ಒಳ್ಳೆಯದು.

ಮಹಾರಾಷ್ಟ್ರದ ಈ ಮಹಾನಾಟಕದ ಈ ಅಂಕಕ್ಕೆ ಸದ್ಯಕ್ಕಾದರೂ ತೆರೆ ಬೀಳುವುದೇ ಇಲ್ಲವೇ ವಿಧಾನಸಭೆ ವಿಸರ್ಜನೆಯ ಗೋಪ್ಯ ಅಸ್ತ್ರ ಮೋಶಾ ಬತ್ತಳಿಕೆಯಿಂದ ಹೊರಬೀಳುವುದೇ? ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...