ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದವನ್ನು ವಿರೋಧಿಸುವವರನ್ನು ಟೀಕಿಸಿರುವ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ, ಯುದ್ಧವು ರೋಮ್ಯಾಂಟಿಕ್ ವಿಚಾರವಲ್ಲ, ಅದು ಬಾಲಿವುಡ್ ಸಿನಿಮಾವೂ ಅಲ್ಲ ಎಂದು ಹೇಳಿದ್ದಾರೆ. ಪುಣೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನರಲ್ ನರವಾಣೆ, ಅವಿವೇಕಿಗಳು ಯುದ್ಧಕ್ಕಾಗಿ ಪ್ರೇರೇಪಿಸಿದರೂ ನಾವು ಅದನ್ನು ಬೆಂಬಲಿಸಬಾರದು. ಒಬ್ಬ ಸೈನಿಕನಾಗಿ ಸರ್ಕಾರ ಆದೇಶಿಸಿದರೆ ಯುದ್ಧಕ್ಕೆ ಹೋಗುತ್ತೇನೆ, ಆದರೆ ರಾಜತಾಂತ್ರಿಕತೆ ನನ್ನ ಮೊದಲ ಆಯ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಅವಿವೇಕಿಗಳು ಯುದ್ಧಕ್ಕಾಗಿ
ಆಪರೇಷನ್ ಸಿಂಧೂರ್, ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳ ದಾಳಿ ಮತ್ತು ನಂತರ ನಾಲ್ಕು ದಿನಗಳ ತೀವ್ರ ಸಂಘರ್ಷ ಆರಂಭವಾದ ಈ ವಾರವು ಪ್ರಕ್ಷುಬ್ಧ ವಾರವಾಗಿದೆ ಎಂದು ನರವಾಣೆ ಹೇಳಿದ್ದಾರೆ.
“ಈ ಸಂಘರ್ಷ ಅಂತಿಮವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಘೋಷಣೆಯಲ್ಲಿ ಕೊನೆಗೊಂಡಿತು. ಇದು ಕೇವಲ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯಾಗಿದೆ, ಕದನ ವಿರಾಮವಲ್ಲ ಎಂಬುವುದನ್ನು ನಾನು ಪುನರಾವರ್ತಿಸಲು ಬಯಸುತ್ತೇನೆ. ಮುಂಬರುವ ದಿನಗಳು ಮತ್ತು ವಾರಗಳಲ್ಲಿ ಏನಾಗುತ್ತದೆ ಎಂಬುವುದು ವೀಕ್ಷಿಸಿ” ಎಂದು ಅವರು ಹೇಳಿದ್ದಾರೆ.
ಮಿಲಿಟರಿ ಯುದ್ಧವನ್ನು ಸ್ಥಗಿತಗೊಳಿಸುವುದರ ವಿರುದ್ಧ ಹಲವಾರು ಜನರು ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಹೇಳಿದ ಅವರು, “ಅಂಕಿಅಂಶಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಯುದ್ಧದ ವೆಚ್ಚವನ್ನು ಪರಿಗಣಿಸಿದರೆ, ನಷ್ಟಗಳು ತುಂಬಾ ದೊಡ್ಡದಾಗುತ್ತದೆ ಅಥವಾ ದುಸ್ತರವಾಗುತ್ತದೆ. ಅದಕ್ಕೂ ಮೊದಲು ಬುದ್ಧಿವಂತ ವ್ಯಕ್ತಿ ಯುದ್ಧ ನಿಲ್ಲುಸುವ ಕರೆಯನ್ನು ನೀಡುತ್ತಾರೆ ಎಂದು ಅರಿತುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
“ಭಯೋತ್ಪಾದಕರ ಮೂಲಸೌಕರ್ಯಗಳ ಮೇಲೆ ಮಾತ್ರವಲ್ಲದೆ ಅವರ ಪ್ರದೇಶದೊಳಗಿನ ಅವರ ವಾಯುನೆಲೆಗಳ ಮೇಲೂ ನಾವು ನಡೆಸಿದ ದಾಳಿಗಳ ಮೂಲಕ, ಈ ಹಾದಿಯಲ್ಲಿ ಮುಂದುವರಿದರೆ ಅದರ ಬೆಲೆ ತುಂಬಾ ಹೆಚ್ಚಾಗಿರುತ್ತದೆ ಎಂದು ನಾವು ಪಾಕಿಸ್ತಾನಕ್ಕೆ ಸಾಬೀತುಪಡಿಸಿದ್ದೇವೆ ಎಂದು ನಾನು ನಂಬುತ್ತೇನೆ. ಹಾಗಾಗಿಯೆ ಅಂತಿಮವಾಗಿ ಅವರ ಡಿಜಿಎಂಒ ಕದನ ವಿರಾಮದ ಸಾಧ್ಯತೆಯ ಬಗ್ಗೆ ಚರ್ಚಿಸಲು ನಮ್ಮದನ್ನು ಕರೆಯುವಂತೆ ಮಾಡಿತು” ಎಂದು ಅವರು ಹೇಳಿದ್ದಾರೆ.
“ನಾನು ಶಕ್ತಿ ಮತ್ತು ವಿನಾಶವನ್ನು ಉಲ್ಲೇಖಿಸಿದೆ, ಆದರೆ ಸಾಮಾಜಿಕವಾಗಿ ಕಳೆದುಹೋದ ಜೀವಗಳ ಬಗ್ಗೆ ಕೂಡಾ ಹೇಳಬೇಕಿದೆ. ದಾಳಿಯಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಳ್ಳುವ ಅಥವಾ ಗಡಿ ಪ್ರದೇಶಗಳಲ್ಲಿ ಶೆಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಮಕ್ಕಳ ಬಗ್ಗೆ ಮಾತಾಡಬೇಕಿದೆ. ಆದರೆ, ಈ ರೀತಿಯ ವಿನಾಶವನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ. ಆದರೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಈ ಆಘಾತವು ತಲೆಮಾರುಗಳವರೆಗೆ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.
“ಪಿಟಿಎಸ್ಡಿ (ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಎಂಬುದೂ ಇದೆ. ಭಯಾನಕ ದೃಶ್ಯಗಳನ್ನು ನೋಡಿದ ಜನರು 20 ವರ್ಷಗಳ ನಂತರವೂ ಚಳಿಯಲ್ಲೂ ಬೆವರುತ್ತಾರೆ, ಅಂತಹ ಜನರಿಗೆ ಮನೋವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ” ಎಂದು ಅವರು ಹೇಳಿದ್ದಾರೆ.
“ಯುದ್ಧವು ರೋಮ್ಯಾಂಟಿಕ್ ವಿಚಾರವಲ್ಲ. ಇದು ನಿಮ್ಮ ಬಾಲಿವುಡ್ ಸಿನಿಮಾ ಅಲ್ಲ. ಇದು ತುಂಬಾ ಗಂಭೀರವಾದ ವ್ಯವಹಾರ. ಯುದ್ಧ ಅಥವಾ ಹಿಂಸೆಯನ್ನು ನಾವು ಕೊನೆಯ ಅಸ್ತ್ರವಗಿ ಬಳಸಬೇಕು. ಅದಕ್ಕಾಗಿಯೇ ನಮ್ಮ ಪ್ರಧಾನಿ ಇದು ಯುದ್ಧದ ಯುಗವಲ್ಲ ಎಂದು ಹೇಳಿದ್ದಾರೆ. ಅವಿವೇಕಿ ಜನರು ಯುದ್ಧ ಮಾಡಲು ನಮ್ಮನ್ನು ಬಲವಂತಪಡಿಸಿದರೂ, ನಾವು ಅದಕ್ಕಾಗಿ ಬೆಂಬಲ ವ್ಯಕ್ತಪಡಿಸಬಾರದು” ಎಂದು ಅವರು ಹೇಳಿದ್ದಾರೆ.
“ಆದರೂ, ಪೂರ್ಣ ಪ್ರಮಾಣದ ಯುದ್ಧಕ್ಕೆ ನಾವು ಏಕೆ ಹೋಗಿಲ್ಲ ಎಂದು ಜನರು ಕೇಳುತ್ತಿದ್ದಾರೆ. ಒಬ್ಬ ಮಿಲಿಟರಿ ವ್ಯಕ್ತಿಯಾಗಿ, ಸರ್ಕಾರ ಆದೇಶಿಸಿದರೆ, ನಾನು ಯುದ್ಧಕ್ಕೆ ಹೋಗುತ್ತೇನೆ. ಆದರೆ ಅದು ನನ್ನ ಮೊದಲ ಆಯ್ಕೆಯಾಗಿರುವುದಿಲ್ಲ” ಎಂದು ಮಾಜಿ ಭಾರತೀಯ ಸೇನಾ ಮುಖ್ಯಸ್ಥರೂ ಆಗಿರುವ ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ತಾನು ರಾಜತಾಂತ್ರಿಕತೆಯನ್ನು ಆರಿಸಿಕೊಳ್ಳುವುದಾಗಿ ಅವರು ಹೇಳಿದ್ದು, ಸಂವಾದದ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿದರೆ ಸಶಸ್ತ್ರ ಸಂಘರ್ಷದ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.
“ರಾಷ್ಟ್ರೀಯ ಭದ್ರತೆಯಲ್ಲಿ ನಾವೆಲ್ಲರೂ ಸಮಾನ ಪಾಲುದಾರರು. ದೇಶಗಳ ನಡುವೆ ಮಾತ್ರವಲ್ಲದೆ, ಕುಟುಂಬಗಳಲ್ಲಿ ಅಥವಾ ರಾಜ್ಯಗಳು, ಪ್ರದೇಶಗಳು ಮತ್ತು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಾವು ಪ್ರಯತ್ನಿಸಬೇಕು. ಯಾವುದಕ್ಕೂ ಹಿಂಸಾಚಾರ ಉತ್ತರವಲ್ಲ” ಎಂದು ಅವರು ಹೇಳಿದ್ದಾರೆ. ಅವಿವೇಕಿಗಳು ಯುದ್ಧಕ್ಕಾಗಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ನನ್ನ ಸಿಂಧೂರ ವಾಪಸ್ ಕೊಡಿ’: ಪಾಕಿಸ್ತಾನ ಸೆರೆಹಿಡಿದ ಬಿಎಸ್ಎಫ್ ಯೋಧನ ಪತ್ನಿ ಕಣ್ಣೀರು
‘ನನ್ನ ಸಿಂಧೂರ ವಾಪಸ್ ಕೊಡಿ’: ಪಾಕಿಸ್ತಾನ ಸೆರೆಹಿಡಿದ ಬಿಎಸ್ಎಫ್ ಯೋಧನ ಪತ್ನಿ ಕಣ್ಣೀರು

